Kodagu: ಈ ಊರಿಗೆ ರಸ್ತೆಯೇ ಇಲ್ಲ: ನಂಜರಾಯಪಟ್ಟಣದಲ್ಲಿ ಆನೆ, ಚಿರತೆಗಳ ಆತಂಕ

By Govindaraj SFirst Published Jan 29, 2023, 7:39 PM IST
Highlights

ರಸ್ತೆ ಸರಿಯಿಲ್ಲ ಎನ್ನುವುದು ಹೊಸ ವಿಷಯವೇನು ಅಲ್ಲ ಬಿಡಿ, ಆದರೆ ಇಲ್ಲಿ ರಸ್ತೆಯೇ ಇಲ್ಲ. ತಲತಲಾಂತರಗಳಿಂದ ಬದುಕುತ್ತಿರುವ ಹತ್ತಾರು ಕುಟುಂಬಗಳು ಕಾಡಿನ ಬದಿಯಲ್ಲಿಯೇ ನಡೆದು ಮನೆಗಳಿಗೆ ತಲುಪಬೇಕು. 21ನೇ ಶತಮಾನದ ಆಧುನಿಕ ಯುಗದಲ್ಲೂ ಇಂತಹದ್ದೊಂದು ಸ್ಥಿತಿ ಇದೆ ಎಂದರೆ ನೀವು ನಂಬುತ್ತೀರಾ.

ವರದಿ: ರವಿ.ಎಸ್,ಹಳ್ಳಿ, ಏಷ್ಯಾನೆಟ್ ಸುವರ್ಣನ್ಯೂಸ್, ಕೊಡಗು

ಕೊಡಗು (ಜ.29): ರಸ್ತೆ ಸರಿಯಿಲ್ಲ ಎನ್ನುವುದು ಹೊಸ ವಿಷಯವೇನು ಅಲ್ಲ ಬಿಡಿ, ಆದರೆ ಇಲ್ಲಿ ರಸ್ತೆಯೇ ಇಲ್ಲ. ತಲತಲಾಂತರಗಳಿಂದ ಬದುಕುತ್ತಿರುವ ಹತ್ತಾರು ಕುಟುಂಬಗಳು ಕಾಡಿನ ಬದಿಯಲ್ಲಿಯೇ ನಡೆದು ಮನೆಗಳಿಗೆ ತಲುಪಬೇಕು. 21ನೇ ಶತಮಾನದ ಆಧುನಿಕ ಯುಗದಲ್ಲೂ ಇಂತಹದ್ದೊಂದು ಸ್ಥಿತಿ ಇದೆ ಎಂದರೆ ನೀವು ನಂಬುತ್ತೀರಾ. ಆದರೆ ನಂಬಲೇಬೇಕಾದ ಪರಿಸ್ಥಿತಿ ಇದು. ಯಾವುದಾದರೂ ಕಾಡು ಪ್ರಾಣಿ ಬಂದುಬಿಟ್ಟಾವು ಎಂಬ ಆತಂಕದಲ್ಲಿಯೇ ತಮ್ಮ ಮಕ್ಕಳನ್ನು ಕೈಯಲ್ಲಿ ಹಿಡಿದು ಕಾಡಿನ ಬದಿಯಲ್ಲಿಯೇ ಸಾಗುತ್ತಿರುವ ಜನರು. ಕಲ್ಲು, ಗುಂಡಿಗಳನ್ನು ಎಡವಿ ಬಿದ್ದಾರು ಎಂದು ವೃದ್ಧರ ಕೈಹಿಡಿದು ಆಸ್ಪತ್ರೆಗಳಿಗೆ ಕರೆದೊಯ್ಯತ್ತಿರುವ ಮನೆಯವರು. 

ಹೆಗಲಿಗೆ ಶಾಲೆ ಪಾಟಿ ಚೀಲ ಹಾಕಿ ನಡೆಯುತ್ತಿರುವ ವಿದ್ಯಾರ್ಥಿಗಳು. ಇದು ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಂಗಸಮುದ್ರ ಮತ್ತು ಕಬ್ಬಿನಗದ್ದೆ ಹಾಡಿಯ ಜನರ ಬದುಕಿನ ಬವಣೆ. ಇದು ಇಂದು ನಿನ್ನೆ ಮೊನ್ನೆಯದ್ದು ಅಥವಾ ಹತ್ತಾರು ವರ್ಷಗಳದ್ದಲ್ಲ. ಊರುಟ್ಟಿ ತಲತಲಾಂತರಗಳು ಕಳೆದರು, ಊರಿಗೆ ರಸ್ತೆಯನ್ನೇ ಮಾಡಿಲ್ಲ ಎನ್ನುವುದು ಅಚ್ಚರಿಯ ಸಂಗತಿ. ಆದರೆ ಬೇರೆ ಗತಿಯೇ ಇಲ್ಲದೆ 1995 ಸಂದರ್ಭದಲ್ಲಿ ಚಿಕ್ಲಿಹೊಳೆ ಜಲಾಶಯದಿಂದ ರೈತರ ಜಮೀನುಗಳಿಗೆ ನೀರು ಹರಿಸಲು ಮಾಡಿದ್ದ ಚಿಕ್ಕ ಕಾಲುವೆಗಳ ಏರಿಯ ಮೇಲೆ ಓಡಾಡಬೇಕಾಗಿದೆ. 

ರಾತ್ರಿ ಓಡಾಡುವವರೇ ಹುಷಾರ್: ಗಾಡಿ ಡಿಕ್ಕಿ ಹೊಡೆದಂತೆ ಮಾಡಿ ರಾಬರಿ ಮಾಡ್ತಾರೆ!

ಆದರೆ ಅದು ಕೂಡ ಎಲ್ಲೆಡೆ ಗುಂಡಿಮಯವಾಗಿದ್ದು, ಜೊತೆಗೆ ಗಿಡಗಂಟಿಗಳು ಬೆಳೆದು ನಡೆಯುವುದಕ್ಕೂ ದುಸ್ಥರ ಎನ್ನುವಂತಾಗಿದೆ. ಕಾಲುವೆಗಳು ಸಂಪೂರ್ಣ ಹೂಳು ತುಂಬಿದ್ದು, ಪಕ್ಕದಲ್ಲಿರುವ ಕಾಡಿನಿಂದ ಆನೆ, ಚಿರತೆಗಳು ಬರುತ್ತವೆ. ಇವುಗಳ ಭಯದಲ್ಲಿಯೇ ಜನರು, ವಿದ್ಯಾರ್ಥಿಗಳು ಓಡಾಡಬೇಕಾಗಿದೆ. ವಿದ್ಯಾರ್ಥಿಗಳು ಶಾಲೆಗಳಿಗೆ ಹೋಗಬೇಕಾದರೆ ಪೋಷಕರು ಮೂರು ಕಿಲೋಮೀಟರ್ ವಿದ್ಯಾರ್ಥಿಗಳ ಜೊತೆಗೆ ಹೋಗಿ ಬಸ್ಸು ಹತ್ತಿಸಿ ಬರಬೇಕು. ಶಾಲೆಯಿಂದ ವಾಪಸ್ ಬರಬೇಕಾದರೂ ಪೋಷಕರು ಬಾಳುಗೋಡಿಗೆ ಹೋಗಿ ಅಲ್ಲಿಂದ ಮಕ್ಕಳನ್ನು ಕರೆದುಕೊಂಡು ಬರಬೇಕು ಎಂದು ವಿದ್ಯಾರ್ಥಿನಿ ಸಾದ್ವಿನಿ ಬೇಸರ ವ್ಯಕ್ತಪಡಿಸಿದ್ದಾಳೆ. 

ಯಾರಿಗಾದರೂ ಆರೋಗ್ಯ ಸರಿಯಿಲ್ಲದಿದ್ದರೆ ಆಸ್ಪತ್ರೆಗೆ ಕರೆದೊಯ್ಯಬೇಕೆಂದರೆ ಊರಿನ ಪಡುವ ಕಷ್ಟ ಅಷ್ಟಿಷ್ಟಲ್ಲ. ಕಳೆದ 20 ವರ್ಷಗಳಿಂದ ರಸ್ತೆ ಮಾಡಿಕೊಡುವಂತೆ ಒತ್ತಾಯಿಸುತ್ತಿದ್ದರೂ ಶಾಸಕರು, ಅಧಿಕಾರಿಗಳು ಯಾವುದೇ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರಾದ ಶಿವಪ್ಪ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಸ್ತೆ ಮಾಡಿಕೊಡುವಂತೆ ಕಳೆದ 20 ವರ್ಷಗಳಿಂದ ಒತ್ತಾಯಿಸುತ್ತಲೇ ಇದ್ದೇವೆ. ಜಿಲ್ಲಾಧಿಕಾರಿಗೆ, ಜಿಲ್ಲಾ ಪಂಚಾಯಿತಿ ಮುಖ್ಯಾಧಿಕಾರಿಯವರಿಗೆ ಹಾಗೂ ಶಾಸಕರಿಗೆ ಹಲವಾರು ಬಾರಿ ಮನವಿ ಮಾಡಿದ್ದೇವೆ. ಆದರೆ ಇದುವರೆಗೆ ಯಾವುದೇ ಸ್ಪಂದನೆ ದೊರೆತ್ತಿಲ್ಲ ಎನ್ನುವುದು ಸ್ಥಳೀಯರ ಅಸಮಾಧಾನ. 

ಬಾಳಗೋಡು ಗ್ರಾಮದಿಂದ ರಂಗಸಮುದ್ರ, ಕಬ್ಬಿನಗದ್ದೆ ಗ್ರಾಮದ ರಸ್ತೆಯನ್ನು ಒಂದು ಕಿಲೋಮೀಟರ್ ದೂರದವರೆಗೆ ಸಣ್ಣ ನೀರಾವರಿ ಇಲಾಖೆಯಿಂದ ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ 2 ಲಕ್ಷ ರೂಪಾಯಿ ವ್ಯಯಿಸಿ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿದೆ. ಆದರೆ ಕಳಪೆ ಕಾಮಗಾರಿಯಿಂದಾಗಿ ರಸ್ತೆ ನಿರ್ಮಿಸಿದ ಎರಡೇ ತಿಂಗಳಲ್ಲಿ ಅದು ಕುಸಿದು ಬಿದ್ದಿದೆ. ಇದರಿಂದಾಗಿ ರಸ್ತೆ ನಿರ್ಮಿಸಿದ್ದರೂ ಪ್ರಯೋಜನಕ್ಕೆ ಬಾರದಂತೆ ಆಗಿದೆ. ಕುಸಿದಿರುವ ರಸ್ತೆಯಲ್ಲಿ, ಬೈಕ್, ಆಟೋಗಳಷ್ಟೇ ಓಡಾಡುವ ಸ್ಥಿತಿ ಇದೆ. ಮತ್ತೊಂದೆಡೆ ಗ್ರಾಮಕ್ಕೆ ಇನ್ನೂ ಒಂದು ಕಿಲೋಮೀಟರ್ ದೂರ ಕನಿಷ್ಠ ಮಣ್ಣಿನ ರಸ್ತೆಯನ್ನೂ ಮಾಡಿಲ್ಲ. 

ಹಾಸನದಲ್ಲಿ ಜೆಡಿಎಸ್ ಟಿಕೆಟ್‍ಗಾಗಿ ವಾರ್: ಶೃಂಗೇರಿ ಶಾರದಾಂಬೆ ಮೊರೆ ಹೋದ್ರಾ ರೇವಣ್ಣ ದಂಪತಿ

ಈ ಒಂದು ಕಿಲೋಮೀಟರ್ ರಸ್ತೆ ನಿರ್ಮಿಸುವುದಕ್ಕೆ ಕಳೆದ ಒಂದು ವರ್ಷದ ಹಿಂದೆ ಶಾಸಕ ಅಪ್ಪಚ್ಚು ರಂಜನ್ ಅವರು ಗುದ್ದಲಿ ಪೂಜೆ ಮಾಡಿದ್ದಷ್ಟೇ ಬಾಕಿ. ಆದರೆ ವರ್ಷ ಕಳೆಯುತ್ತಿದ್ದರೂ ಕಾಮಗಾರಿ ಮಾಡಿಲ್ಲ ಎಂದು ಗ್ರಾಮಸ್ಥರಾದ ಭವ್ಯ ಆಕ್ರೋಶ ಹೊರಹಾಕುತ್ತಿದ್ದಾರೆ. ಒಟ್ಟಿನಲ್ಲಿ ತಲಾತಂತರಗಳಿಂದ ಗ್ರಾಮಕ್ಕೆ ರಸ್ತೆ ಸಂಪರ್ಕವಿಲ್ಲದೆ ಜನರು ಪಡಬಾರದ ಕಷ್ಟಪಡುತ್ತಿದ್ದಾರೆ. ಅದರಲ್ಲೂ ಮಳೆ ಬಂದರಂತು ರಸ್ತೆ ಸಂಪೂರ್ಣ ಕೆಸರುಮಯವಾಗುತ್ತಿದ್ದು ವಿದ್ಯಾರ್ಥಿಗಳು, ಜನರು ಕಣ್ಣೀರಿನಲ್ಲಿ ಕೈತೊಳೆಯುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಆದಷ್ಟು ಬೇಗ ರಸ್ತೆ ನಿರ್ಮಿಸಿ ನಮ್ಮ ಸಮಸ್ಯೆಗೆ ಪರಿಹಾರ ನೀಡಿ ಎಂದು ಒತ್ತಾಯಿಸುತ್ತಿದ್ದಾರೆ.

click me!