ಕೊರೋನಾ ಕಾಲದಲ್ಲಿ ಸರ್ಕಾರಿ ನೌಕ​ರರ ಸೇವೆ ಶ್ಲಾಘ​ನೀಯ: ಡಿ.ಕೆ.ಶಿವಕುಮಾರ್‌

By Govindaraj SFirst Published Jan 15, 2023, 7:24 PM IST
Highlights

ಕೋವಿಡ್‌ ಸಂಕಷ್ಟ​ದಲ್ಲಿ ಸರ್ಕಾರಿ ನೌಕರರ ಅವಿರತ ಶ್ರಮದ ಫಲವಾಗಿ ತಾಲೂಕಿನ ಜನತೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಯಿತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿ​ದರು. 

ಕನಕಪುರ (ಜ.15): ಕೋವಿಡ್‌ ಸಂಕಷ್ಟ​ದಲ್ಲಿ ಸರ್ಕಾರಿ ನೌಕರರ ಅವಿರತ ಶ್ರಮದ ಫಲವಾಗಿ ತಾಲೂಕಿನ ಜನತೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಯಿತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿ​ದರು. ನಗರದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳ ಕಾಲ ಇಡೀ ದೇಶವನ್ನು ಕಾಡಿದ ಕೊರೋನಾ ಸಾಂಕ್ರಾಮಿಕದಿಂದ ಜನಜೀವನ ಅಸ್ತವ್ಯಸ್ಥವಾ​ಗಿತ್ತು. ಆರ್ಥಿಕವಾಗಿಯೂ ಕಷ್ಟಅನುಭವಿಸಿದ್ದಲ್ಲದೆ ಕೆಲವು ಜನ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ಆದರೆ ತಾಲೂಕಿನಲ್ಲಿ ತಾವು ಹಗಲಿರುಳು ಶ್ರಮಿಸಿ ಜ​ನ​ರನ್ನು ರಕ್ಷಣೆ ಮಾಡಿರುವುದು ಶ್ಲಾಘನೀಯ ಎಂದರು.

ನಾನು ಸಾಕಷ್ಟುಜನ​ರಿಗೆ ಉದ್ಯೋಗ ಹಾಗೂ ಪೋಸ್ಟಿಂಗ್‌ ಕೊಡಿ​ಸಿ​ರ​ಬ​ಹುದು. ಆದರೆ, ಯಾರಾ​ದರೂ ನನಗೆ ಮತ್ತು ಡಿ.ಕೆ.​ಸು​ರೇಶ್‌ಗೆ ಲಂಚ ನೀಡಿ​ದ್ದೇನೆ ಎಂದು ಹೇಳಿ​ದರೆ ಇದೇ ವೇದಿ​ಕೆ​ಯಲ್ಲಿ ರಾಜ​ಕೀಯ ನಿವೃತ್ತಿ ಘೋಷಿ​ಸು​ತ್ತೇನೆ. ಬಿಜೆ​ಪಿ​ಯ​ವರು ನಾನು ಲಂಚ ತಿಂದಿ​ದ್ದೇನೆಂದು ನನ್ನ ವಿರುದ್ಧ ಕೇಸ್‌ ಹಾಕಿ ಕಿರು​ಕುಳ ನೀಡು​ತ್ತಿ​ದ್ದಾರೆ. ನೀವು ನೋಡಿ​ದಂತೆ ನಾನು ಎಂದಾ​ದರೂ ಅಧಿಕಾರ ದುರು​ಪ​ಯೋಗ ಮಾಡಿ​ಕೊಂಡಿ​ದ್ದೇನಾ? ಯಾರಿಂದ​ಲಾ​ದರು ಒಂದು ರು. ಲಂಚ ಕೇಳಿ​ದ್ದೀನಾ ಎಂದು ಪ್ರಶ್ನಿ​ಸಿ​ದರು.

ಪ್ರಕ​ರ​ಣ​ಗ​ಳಿಗೆ ಹೆದ​ರದೆ ಹೋರಾಟ ಮುಂದು​ವ​ರೆ​ಸಿ​ದ್ದೇವೆ: ಡಿ.ಕೆ.​ಶಿ​ವ​ಕು​ಮಾರ್‌

ಕೊರೋನಾ ಸಂದ​ರ್ಭ​ದಲ್ಲಿ ನರೇಗಾ ಕಾಮಗಾರಿಯನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಪ್ರತಿಯೊಂದು ಪಂಚಾಯಿತಿಯಲ್ಲೂ 3 ರಿಂದ 4 ಕೋಟಿ ರು.ಕಾಮಗಾರಿಗಳನ್ನು ಮಾಡುವ ಮೂಲಕ ಜನರ ಕಷ್ಟಕ್ಕೆ ನೆರ​ವಾಗಿ ದೇಶದಲ್ಲೇ ಮೊದಲ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದು ಮೆಚ್ಚುಗೆಯ ವಿಷಯ. ಆದರೆ, ಇದರಲ್ಲಿ ಏನು ಅವ್ಯವಹಾರ ನಡೆದಿದೆ ಎಂದು ಕೆಲ ವ್ಯಕ್ತಿಗಳು ನೀಡಿದ ದೂರುಗಳ ಅನ್ವಯ ಕೇಂದ್ರ ಸರ್ಕಾರದ ತನಿಖಾ ತಂಡ ಬಂದು ಪರೀಶೀಲನೆ ನಡೆಸಿ ಖುದ್ದು ವೀಕ್ಷಣೆಮಾಡಿ ಪ್ರಶಂಶಿಸಿರುವುದರಲ್ಲಿ ನೌಕರರ ಪಾತ್ರ ದೊಡ್ಡದಾಗಿದೆ. ಈ ನಿಟ್ಟಿನಲ್ಲಿ ಪೌರ ಕಾರ್ಮಿಕರಿಂದ ಹಿಡಿದು ತಾಲೂಕಿನ ಉನ್ನತ ಮಟ್ಟದ ಅ​ಧಿಕಾರಿಗಳನ್ನು ಸನ್ಮಾನಿಸಿ ಗೌರವಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ತಿಳಿ​ಸಿ​ದರು.

ಜಿಲ್ಲೆಯಿಂದ ಕೆಂಗಲ ಹನುಮಂತಯ್ಯ, ರಾಮಕೃಷ್ಣ ಹೆಗಡೆ, ದೇವೇಗೌಡ, ಕುಮಾರಸ್ವಾಮಿ ಅವರನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲು ಶಕ್ತಿ ನೀಡಿದ ಜನರು ಮುಂದೆ ನನಗೂ ಒಂದು ಅವಕಾಶ ನೀಡ​ಬೇ​ಕು.ನಿಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುವುದರ ಜೊತೆಗೆ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡುವಂತೆ ಶಿವ​ಕು​ಮಾರ್‌ ಮನವಿ ಮಾಡಿದರು.

ಸಂಸದ ಡಿ.ಕೆ.ಸುರೇಶ್‌ ಮಾತನಾಡಿ, ಕನ​ಕ​ಪುರ ತಾಲೂ​ಕು ಡಾ.ನಂಜುಂಡಪ್ಪ ವರದಿಯಲ್ಲಿ 174ನೇ ಸ್ಥಾನ ಪಡೆದಿತ್ತು. ತಾಲೂಕನ್ನು ಅಭಿವೃದ್ಧಿ ಕಡೆಗೆ ಕೊಂಡೊಯ್ಯುವ ದೃಷ್ಟಿಯಿಂದ ಅಧಿಕಾರಿಗಳ ಮೇಲೆ ಕೆಲ ಬಾರಿ ಒತ್ತಡವನ್ನು ಹಾಕಿ ಕೆಲಸ ಮಾಡಿಸಿದ್ದೇವೆ. ಇಂದು ಕನ​ಕ​ಪುರ ಅಭಿವೃದ್ಧಿ ಹೊಂದಿದ ತಾಲೂಕುಗಳ ಸಾಲಿನಲ್ಲಿ ನಿಲ್ಲಲು ನಿಮ್ಮೆಲ್ಲರ ಸಹಕಾರ ಹಾಗೂ ಪರಿಶ್ರಮ ಸಾಕಷ್ಟಿದೆ. ನಿಮಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.

ಸಂಸದೆ ಸುಮಲತಾ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ: ಸಿ.ಪಿ.ಯೋಗೇಶ್ವರ್‌

ಕಾರ‍್ಯಕ್ರಮದಲ್ಲಿ ಉಪನ್ಯಾಸಕ ಚಿಕ್ಕಸ್ವಾಮಿ ಮಾತನಾಡಿದರು. ಇದೇ ವೇಳೆ ತಾಲೂ​ಕು ನೌಕರರ ಸಂಘದ ಪರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಸಂಸದ ಡಿ.ಕೆ.ಸುರೇಶ್‌ ಗೌರವಿಸಲಾಯಿತು. ವಿಧಾನ ಪರಿಷತ್‌ ಸದಸ್ಯರಾದ ಅ.ದೇವೇಗೌಡ, ಎಸ್‌.ರವಿ, ಸಮಾಜ ಸೇವಕ ​ಶ್ರೀಕಂಠು, ಮುಖಂಡರಾದ ವಿಶ್ವನಾಥ್‌, ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಸತೀಶ್‌, ತಾಲೂಕು ಅಧ್ಯಕ್ಷ ಶಿವಲಿಂಗೇಗೌಡ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಹುಚ್ಚಪ್ಪ ಮತ್ತಿ​ತ​ರರು ಉಪಸ್ಥಿತರಿದ್ದರು.

click me!