Kodagu: ಕ್ರೈಸ್ತ್ರ ಧರ್ಮಕ್ಕೆ ಹಾಡಿ ಜನರ ಮತಾಂತರ ಯತ್ನ: ಮತಾಂತರವನ್ನು ತಡೆದ ಭಜರಂಗ ದಳ

By Sathish Kumar KHFirst Published Jan 15, 2023, 6:17 PM IST
Highlights

ಕೊಡಗಿನ ರೇಷ್ಮೆ ಹಡ್ಲು ಹಾಡಿಯಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿದ್ದ ಆರೋಪ
ಹಾಡಿಯಲ್ಲಿನ ನೂರಾರು ಜನರಿಗೆ ಬೈಬಲ್‌ ಕೃತಿ ಕೊಟ್ಟು ಕ್ರೈಸ್ತ ಧರ್ಮ ಬೋಧನೆ 
ಹಿಂದೂಪರ ಸಂಘಟನೆಗಳಿಂದ ದಾಳಿ, ನಾಲ್ವರನ್ನು ಪೊಲೀಸರಿಗೆ ಒಪ್ಪಿಸಿದ ಕಾರ್ಯಕರ್ತರು

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಜ.15):  ಮನೆಯೊಂದರಲ್ಲಿ ಯಾರಿಗೂ ತಿಳಿಯದಂತೆ ಗೌಪ್ಯವಾಗಿ ಹತ್ತಾರು ಹಿಂದೂ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿದ್ದ ನಾಲ್ವರನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿರುವ ಘಟನೆ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಹೆಬ್ಬಾಲೆ ಸಮೀಪದ ರೇಷ್ಮೆ ಹಡ್ಲು ಹಾಡಿಯಲ್ಲಿ ನಡೆದಿದೆ. 

Latest Videos

ಹಾಡಿಯಲ್ಲಿ ಆದಿವಾಸಿಗಳನ್ನು ಮತಾಂತರ ಮಾಡುತ್ತಿದ್ದ ಆರೋಪದಲ್ಲಿ ನಾಲ್ವರು ಯುವಕರನ್ನು ವಿಶ್ವ ಹಿಂದೂ ಪರಿಷತ್, ದುರ್ಗಾವಾಹಿನಿ ಮತ್ತು ಭಜರಂಗದ ದಳದ ಮುಖಂಡರು ಹಿಡಿದು ಪೊನ್ನಂಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಕುಟ್ಟ, ಕುಶಾಲನಗರ ಭಾಗಗಳಿಂದ ಬಂದಿದ್ದ ನಾಲ್ವರು ಯುವಕರು ಹಾಡಿಯ ಜನರಿಗೆ ಆಮಿಷವೊಡ್ಡಿ ಮನೆಯೊಂದರಲ್ಲಿ ಬೈಬಲ್ ಬೋಧಿಸುತ್ತಾ ಮತಾಂತರ ಮಾಡುತ್ತಿದ್ದರು ಎನ್ನಲಾಗಿದೆ. ಭಜರಂಗದಳ, ವಿಶ್ವ ಹಿಂದೂ ಪರಿಷತ್ ಮತ್ತು ದುರ್ಗಾವಾಹಿನಿ ನೇತೃತ್ವದಲ್ಲಿ ಹಾಡಿಯ ಜನರಿಗೆ ಸಂಕ್ರಾಂತಿ ಅಂಗವಾಗಿ ಎಳ್ಳುಬೆಲ್ಲ ಹಂಚಲು ಹೋಗಿದ್ದ ಸಂದರ್ಭ ಮನೆಯೊಂದರಲ್ಲಿ ಮತಾಂತರ ಮಾಡುತ್ತಿರುವ ವಿಷಯ ಹಿಂದೂ ಸಂಘಟನೆಗಳ ಮುಖಂಡರ ಗಮನಕ್ಕೆ ಬಂದಿದೆ.

ರಾಖಿ-ಆದಿಲ್​​ ಮದುವೆ ರಹಸ್ಯ ಬಹಿರಂಗ: ಇಸ್ಲಾಂ ಧರ್ಮಕ್ಕೆ ಮತಾಂತರ ಆದ್ರಾ ಕರ್ನಾಟಕದ ಸೊಸೆ?

ಬೈಬಲ್ ಕೊಟ್ಟು ಪ್ರವಚನ: ಕೂಡಲೇ ಮನೆಯೊಳಗೆ ಹೋದ ಹಿಂದೂ ಸಂಘಟನೆಗಳ ಮುಖಂಡರು ಮತಾಂತರ ಮಾಡುತ್ತಿದ್ದನ್ನು ತಡೆದಿದ್ದಾರೆ. ಈ ವೇಳೆ ಹಾಡಿಯ ಜನರಿಗೆ ಬೈಬಲ್ ಕೊಟ್ಟು ಪ್ರವಚನ ಮಾಡಿಸುತ್ತಿದ್ದರೂ ಎನ್ನಲಾಗಿದ್ದು, ಅವರಿಂದ ಬೈಬಲ್‌ ಪುಸ್ತಕಗಳನ್ನು ಕಿತ್ತುಕೊಂಡಿದ್ದಾರೆ. ಮತಾಂತರ ಮಾಡುತ್ತಿದ್ದವರು ಆದಿವಾಸಿ ಜನರಿಗೆ ಕೊಟ್ಟಿದ್ದ ಬೈಬಲ್ ಕೃತಿಗಳನ್ನು ಕಿತ್ತುಕೊಂಡ ಹಿಂದೂ ಸಂಘಟನೆಗಳ ಕಾರ್ಯಕರ್ತರು ಅವುಗಳನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಮತಾಂತರ ಮಾಡುತ್ತಿರುವ ವಿಷಯ ಗಮನಕ್ಕೆ ಬರುತ್ತಿದ್ದಂತೆ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಮತಾಂತರ ಮಾಡುತ್ತಿದ್ದ ನಾಲ್ವರ ವಶ: ಸ್ಥಳಕ್ಕೆ ಬಂದ ಪೊಲೀಸರು ಮತಾಂತರ ಮಾಡುತ್ತಿದ್ದ ನಾಲ್ವರು ಹಾಗೂ ಮತಾಂತರಕ್ಕೆ ಬೆಂಬಲ ನೀಡುತ್ತಿದ್ದ ಹಾಡಿಯ ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ನೂರಾರು ಜನರನ್ನು ಮತಾಂತರ ಮಾಡುತ್ತಿದ್ದನ್ನು ತಡೆದ ಹಿನ್ನೆಲೆಯಲ್ಲಿ ಆದಿವಾಸಿ ಜನರು ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿಗಳು ನಡೆದಿವೆ. ಇದರಿಂದ ಸ್ಥಳದಲ್ಲಿ ಒಂದು ಬಿಗುವಿನ ವಾತಾವರಣವೂ ಸೃಷ್ಟಿಯಾಗಿತ್ತು. ಆದರೆ ಕೂಡಲೇ ಹೆಚ್ಚಿನ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರಿಂದ ಎಲ್ಲವೂ ಶಾಂತವಾಗಿದೆ. 

ಗೋಹತ್ಯೆ, ಮತಾಂತರ ತಡೆಗೆ ಹೋರಾಟ ಅವಶ್ಯಕ: ಪ್ರಮೋದ್‌ ಮುತಾಲಿಕ್‌

ಈ ಸಂದರ್ಭ ಮಾತನಾಡಿರುವ ವಿಶ್ವ ಹಿಂದೂ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಜಿಲ್ಲಾ ಸಹಕಾರ್ಯದರ್ಶಿ ಮಹೇಶ್ ಮಾತನಾಡಿ, ಸಂಕ್ರಾಂತಿ ಅಂಗವಾಗಿ ಹಾಡಿಯ ಜನರಿಗೆ ಎಳ್ಳುಬೆಲ್ಲ ವಿತರಿಸಬೇಕೆಂಬ ದೃಷ್ಟಿಯಿಂದ ಹಾಡಿಗಳಿಗೆ ಭೇಟಿ ನೀಡಿದ್ದೆವು. ಈ ಸಂದರ್ಭನೂರಕ್ಕೂ ಹೆಚ್ಚು ಹಿಂದೂ ಜನರನ್ನು ಆಮಿಷವೊಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿದ್ದ ವಿಷಯ ಗಮನಕ್ಕೆ ಬಂದಿತು. ಆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಅವರನ್ನು ಹಿಡಿದು ಪೊಲೀಸ್ ವಶಕ್ಕೆ ನೀಡಲಾಗಿದೆ. ಮತಾಂತರ ನಿಷೇಧ ಕಾಯ್ದೆ ಇದ್ದರೂ ಹೀಗೆ ಕಾನೂನಿಗೆ ವಿರುದ್ಧವಾಗಿ ಹಿಂದೂ ಜನರನ್ನು ಮತಾಂತರ ಮಾಡುತ್ತಿರುವವರ ವಿರುದ್ಧ ಪೊಲೀಸರು ಸರಿಯಾದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. 

ಆಮಿಷವೊಡ್ಡಿ ಮತಾಂತರ: ಇನ್ನು ಹಿಂದೂ ದುರ್ಗಾವಾಹಿನಿ ಮುಖಂಡ ತೀರ್ಥ ಅವರು ಮಾತನಾಡಿ. ಎಳ್ಳುಬೆಲ್ಲ ಕೊಡಲು ಹೋದ ಸಂದರ್ಭ ಆಮಿಷವೊಡ್ಡಿ ಮತಾಂತರ ಮಾಡುತ್ತಿದ್ದ ವಿಷಯ ಗಮನಕ್ಕೆ ಬಂತು. ಹೀಗಾಗಿ ತಿತಿಮತಿ ಹೊರಠಾಣೆಗೆ ಮಾಹಿತಿ ನೀಡಿದೆವು. ಇದೀಗ ಗೋಣಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. 

click me!