ಚಿಕ್ಕಮಗಳೂರು ಹಬ್ಬದ ಅಂಗವಾಗಿ ಚಿತ್ರಕಲಾ ಶಿಬಿರ, ಕಣ್ಮನ ಸೆಳೆಯುವ ಜಲಪಾತ-ಗಿರಿಶ್ರೇಣಿಗಳು

By Suvarna NewsFirst Published Jan 15, 2023, 6:39 PM IST
Highlights

ಚಿಕ್ಕಮಗಳೂರು ಹಬ್ಬದ ಅಂಗವಾಗಿ ಆಯೋಜನೆ ಮಾಡಿರುವ ಚಿತ್ರಕಲಾಶಿಬಿರದಲ್ಲಿ ರಾಜ್ಯಮಟ್ಟದ ಕಲಾವಿದರು ಜಲಪಾತ, ಗಿರಿಶ್ರೇಣಿಗಳ ಚಿತ್ರವನ್ನು ಕುಂಚದ ಮೂಲಕ ಅನಾವರಣಗೊಳಿಸಿದ್ದಾರೆ. ಕಾಫಿನಾಡಿನ ಪ್ರಾಕೃತಿಕ ಸೌಂದರ್ಯ ಹಾಗೂ ಯಾತ್ರಸ್ಥಳಗಳು ಕಲಾವಿದರ ಕುಂಚದಲ್ಲಿ ಸುಂದರವಾಗಿ ಮೂಡಿಬಂದಿವೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು(ಜ.15): ಚಿಕ್ಕಮಗಳೂರು ಹಬ್ಬದ ಅಂಗವಾಗಿ ಆಯೋಜನೆ ಮಾಡಿರುವ ಚಿತ್ರಕಲಾಶಿಬಿರದಲ್ಲಿ ರಾಜ್ಯಮಟ್ಟದ ಕಲಾವಿದರು ಜಲಪಾತ, ಗಿರಿಶ್ರೇಣಿಗಳ ಚಿತ್ರವನ್ನು ಕುಂಚದ ಮೂಲಕ ಅನಾವರಣಗೊಳಿಸಿದ್ದಾರೆ. ಕಾಫಿನಾಡಿನ ಪ್ರಾಕೃತಿಕ ಸೌಂದರ್ಯ ಹಾಗೂ ಯಾತ್ರಸ್ಥಳಗಳು ಕಲಾವಿದರ ಕುಂಚದಲ್ಲಿ ಸುಂದರವಾಗಿ ಮೂಡಿಬಂದಿವೆ. ವಿವಿಧ ದೇಗುಲಗಳು, ಗಿರಿಶ್ರೇಣಿಗಳು, ಜಲಪಾತಗಳನ್ನು ಜಿಲ್ಲೆ ಹೊಂದಿದ್ದು, ಇವುಗಳನ್ನು ಪ್ರಸಿದ್ಧ ಕಲಾವಿದರುಗಳು ಕುಂಚದ ಮೂಲಕ ಅನಾವರಣಗೊಳಿಸಿದ್ದಾರೆ. 

ಕಣ್ಮನ ಸೆಳೆಯುವ ಜಲಪಾತ-ಗಿರಿಶ್ರೇಣಿಗಳು:
ನೇತಾಜಿ ಸುಭಾಷ್ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜನವರಿ 18 ರಿಂದ 22ರವರೆಗೆ ಚಿಕ್ಕಮಗಳೂರು ಹಬ್ಬ ನಡೆಯುತ್ತಿದ್ದು, ಇದರ ಅಂಗವಾಗಿ ಜಿಲ್ಲಾ ಉತ್ಸವ ಆಚರಣಾ ಸಮಿತಿ ಹಾಗೂ ಸಾಂಸ್ಕೃತಿಕ ಸಮಿತಿ, ಶಾಂತಿನಿಕೇತನ ಆರ್ಟ್ ಪೌಂಡೇಶನ್ ಸಹಯೋಗದಲ್ಲಿ ರಾಜ್ಯಮಟ್ಟದ ಚಿತ್ರಕಲಾ ಪ್ರದರ್ಶನ ಹಮ್ಮಿಕೊಂಡಿದ್ದು, ಈ ಶಿಬಿರದಲ್ಲಿ ಬೇರೆ ಜಿಲ್ಲೆಯ 8 ಕಲಾವಿದರು, ಚಿಕ್ಕಮಗಳೂರಿನ 17 ಕಲಾವಿದರು ಸೇರಿದಂತೆ 25 ಕಲಾವಿದರು ಪಾಲ್ಗೊಂಡಿದ್ದಾರೆ.

ಜಿಲ್ಲೆಯ ಸುಂದರ ಪ್ರವಾಸಿ ತಾಣಗಳು ಕ್ಯಾನ್ವಾಸಿನ ಮೇಲೆ ಪಡಿಯಚ್ಚುನಂತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿವೆ. ಬಾಲಕರು, ವಿದ್ಯಾರ್ಥಿಗಳು,  ಸಾರ್ವಜನಿಕರು ಶಿಬಿರಕ್ಕೆ ಭೇಟಿಕೊಟ್ಟು ಕಲಾವಿದರ ಕುಂಚದಲ್ಲಿ ಮೂಡುತ್ತಿರುವ ಚಿತ್ರಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಇವುಗಳ ಜನವರಿ 18 ರಂದು ಪ್ರರ್ಶನಗೊಳ್ಳುತ್ತಿವೆ.ಜಿಲ್ಲೆಯ ಧಾರ್ಮಿಕ ಸ್ಥಳವಾದ ಶೃಂಗೇರಿ ಶಾರದಾಂಬ ದೇಗುಲ, ಬೆಳವಾಡಿವೀರನಾರಾಯಣ, ಮಲ್ಲೇನಹಳ್ಳಿಯ ದೇವೀರಮ್ಮ, ವೀರಭದ್ರೇಶ್ವರ, ಹಿರೇನಲ್ಲೂರಿನ ಮಲ್ಲಿಕಾರ್ಜುನ ದೇವಾಲಯ, ಗಿರಿಶ್ರೇಣಿಗಳಾದ ಮುಳ್ಳಯ್ಯನಗಿರಿ, ಬಾಬಾಬುಡನ್ಗಿರಿ,  ಜಲಪಾತಗಳಾದ ಸಿರಿಮನೆ, ಹೆಬ್ಬೆ, ಪ್ರವಾಸಿತಾಣಗಳಾದ ಬಲ್ಲಾಳರಾಯನ ದುರ್ಗ, ಎತ್ತಿನಭುಜ,ಮಾಣಿಕ್ಯಧಾರ, ಗಾಳಿಕೆರೆ, ಅಯ್ಯನಕೆರೆ,ಕುದುರೆಮುಖ ಸೇರಿದಂತೆ ಇನ್ನೂ ಮುಂತಾದ ಸ್ಥಳಗಳ ಕಲಾವಿದರ ಕುಂಚದಲ್ಲಿ ಅರಳಿವೆ.

ನೋಡುಗರ ಗಮನ ಸೆಳೆಯುತ್ತಿರುವ ಕುರಂಜಿ ಹೂವು : 
ಮೈಸೂರಿನ ಕಲಾವಿದ ಕೆ.ಸಿ.,ಮಹದೇವಶೆಟ್ಟಿ ಅವರ ಕೈಯಲ್ಲಿ  ಜಿಲ್ಲೆಯ ಪ್ರಮುಖಯಾತ್ರಸ್ಥಳ ಶೃಂಗೇರಿಯ ಶಾರದಾಂಬ ದೇವಾಲಯ ಸುಂದರವಾಗಿ ಮೂಡಿಬಂದು ಕಲರಸಿಕರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ಚಿತ್ರದುರ್ಗದ ಕಣ್ಮೇಶ್ ಅವರ ಕರದಲ್ಲಿ ಮುಳ್ಳಯ್ಯನಗಿರಿ ಹಚ್ಚಹಸುರಿನಿಂದ ಕಂಗೊಳಿಸಿದರೆ, ಬೀದರ್ನ ಬಿ.ಕೆ.ಬಡಿಗೇರ್ ಮೂಡಿಗೆರೆಯ ಬಲ್ಲಾಳರಾಯನ ದುರ್ಗವನ್ನು ಕುಂಚದಲ್ಲಿ ಮೂಡಿಸಿದ್ದಾರೆ. ಬೆಂಗಳೂರಿನ ಸಂಜೀವ ಕುಲಕರ್ಣಿಯವರು 12 ವರ್ಷಕ್ಕೊಮ್ಮೆ ಗಿರಿಶ್ರೇಣಿಯಲ್ಲಿ ಕಾಣಿಸಿಕೊಳ್ಳುವ ಕುರಂಜಿಹೂವು ನೋಡುಗರ ಗಮನ ಸೆಳೆಯುತ್ತಿದೆ.

ಜ.17ರ ಬಳಿಕ ಸಚಿವ ಸಂಪುಟ ವಿಸ್ತರಣೆ ಸರ್ಕಸ್‌ ಚಿತ್ರಣ

ಕಲಾಶಿಬಿರವನ್ನು ಸಂಘಟಿಸಿರುವ ಶಾಂತಿನಿಕೇತನ ಚಿತ್ರಕಲಾಮಹಾವಿದ್ಯಾಲಯದ ಪ್ರಿನ್ಸಿಪಾಲ್ ವಿಶ್ವಕರ್ಮಆಚಾರ್ಯ ಮಾತನಾಡಿ, ಜಿಲ್ಲೆಯ ಪ್ರಾಕೃತಿಕ ಕಲಾವೈಭವ, ನಿಸರ್ಗ ಚಿತ್ರಣವನ್ನು 23 ಕಲಾವಿದರು ತಮ್ಮಕುಂಚಗಳಲ್ಲಿ  ಸೆರೆಹಿಡಿದಿದ್ದು, ಕಲಾವಾತಾವರಣವನ್ನೆ ಸೃಷ್ಟಿಸಿದ್ದಾರೆ. ಆರ್ಕಾಲಿಕ್ ಕ್ಯಾನ್ವಾಸಿನ ಮೇಲೆ ಮೂಡಿರುವ ಕಲಾಕೃತಿಗಳು ಜನವರಿ 18 ರಿಂದ ಪ್ರದರ್ಶನಗೊಳ್ಳಲಿವೆ ಎಂದು ಹೇಳಿದರು.ರಾಜ್ಯಮಟ್ಟದ ಚಿತ್ರಕಲಾ ಪ್ರದರ್ಶನ ನಡೆಯುತ್ತಿದ್ದು, ಇಂತಹ ಪ್ರದರ್ಶನಗಳ ಇತ್ತೀಚೆಗೆ ಬಹಳ ವಿರಳವಾಗುತ್ತಿವೆ.

ರಾಷ್ಟ್ರಮಟ್ಟಕ್ಕೆ ಚಿತ್ರಸಂತೆ ಬೆಳೆಸಲು ಸಹಕಾರ: ಸಿಎಂ ಘೋಷಣೆ

ರಾಜ್ಯದ ಎಲ್ಲಾಕಡೆಗಳಲ್ಲೂ ಇಂತಹ ಚಿತ್ರಕಲಾ ಶಿಬಿರ ಮತ್ತು ಪ್ರದರ್ಶನಗಳು ನಡೆಯಬೇಕು. ಚಿಕ್ಕಮಗಳೂರು ಹಬ್ಬದ ಅಂಗವಾಗಿ ತುಂಬಾ ಚೆನ್ನಾಗಿ ಶಿಬಿರವನ್ನು ಆಯೋಜನೆ ಮಾಡಲಾಗಿದೆ ಎಂದು ಕಲಾವಿದರು ಅಭಿಪ್ರಾಯವನ್ನು ಹೊರಹಾಕಿದರು. ಒಟ್ಟಾರೆ ಚಿಕ್ಕಮಗಳೂರು ಹಬ್ಬದ ಅಂಗವಾಗಿ ಆಯೋಜನೆ ಮಾಡಿರುವ ಚಿತ್ರಕಲಾ ಶಿಬಿರವೂ ಯುವ ಕಲಾವಿದರಿಗೆ ಒಂದು ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ.

click me!