' ರಾಜಕಾರಣದ ತಾಳಕ್ಕೆ ಕುಣಿದು ದಸರಾ ಘನತೆ ಕುಗ್ಗಿಸಿದ ಜಿಲ್ಲಾಡಳಿತ'

By Kannadaprabha NewsFirst Published Oct 7, 2022, 4:42 AM IST
Highlights

ರಾಜಕಾರಣಿಗಳ ತಾಳಕ್ಕೆ ಕುಣಿದ ಜಿಲ್ಲಾಡಳಿತ 2022ರ ದಸರಾ ಮಹೋತ್ಸವದ ಘನತೆಯನ್ನು ಕುಗ್ಗಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಮೈಸೂರು ಮಹಾನಗರಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್‌ ಕಿಡಿಕಾರಿದ್ದಾರೆ.

ಮೈಸೂರು (ಅ.07): ರಾಜಕಾರಣಿಗಳ ತಾಳಕ್ಕೆ ಕುಣಿದ ಜಿಲ್ಲಾಡಳಿತ 2022ರ ದಸರಾ ಮಹೋತ್ಸವದ ಘನತೆಯನ್ನು ಕುಗ್ಗಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಮೈಸೂರು ಮಹಾನಗರಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್‌ ಕಿಡಿಕಾರಿದ್ದಾರೆ.

ಐತಿಹಾಸಿಕ ಹಿನ್ನೆಲೆ ಹೊಂದಿರುವ ದಸರಾ (Dasara) ಮಹೋತ್ಸವ ಈ ಹಿಂದಿನ ವರ್ಷಗಳಲ್ಲಿ ಗರಿಷ್ಠ ಪ್ರಮಾಣದ ಗಂಭೀರತೆ ಪಡೆದುಕೊಂಡಿತ್ತು. ಆದರೆ, ಕಳೆದ ಎರಡು ವರ್ಷಗಳಿಂದ ಕೊರೋನಾ (Corona) ಕಾರಣಕ್ಕಾಗಿ ಸರಳ ದಸರಾ ಮಾಡಲಾಗಿದೆ ಎಂಬ ಹಿನ್ನೆಲೆಯಲ್ಲಿ ಈ ಬಾರಿ ಅದ್ದೂರಿ ದಸರಾ ಎಂಬ ಘೋಷಣೆ ಮಾಡಿದ್ದುದು ಸರಿ. ಆದರೆ, ಈ ಹಿನ್ನೆಲೆಯಲ್ಲಿ ನಡೆದ ಅವಾಂತರದ ಹೊಣೆಯನ್ನು ದಸರಾ ವಿಶೇಷಾಧಿಕಾರಿಯಾದ ಜಿಲ್ಲಾಧಿಕಾರಿ ಹೊರಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಹಿಂದೆ ಪಾಸ್‌ (PasS) ನೀಡುವ ಸಂದರ್ಭದಲ್ಲಿ ಅಳೆದು- ತೂಗಿ ಸೀಮಿತ ಮಂದಿಗಷ್ಟೇ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಕಡಲೆಪುರಿ ಹಂಚಿದಂತೆ ಪಾಸ್‌ಗಳನ್ನು ಹಂಚಿದ ಪರಿಣಾಮ ಜಂಬೂಸವಾರಿ ವೇಳೆ ಇನ್ನಿಲ್ಲದ ಸಮಸ್ಯೆ ಸೃಷ್ಟಿಯಾಗಿತ್ತು. ಇದಕ್ಕೆ ಜಿಲ್ಲಾಧಿಕಾರಿಗಳೇ ನೇರ ಕಾರಣಕರ್ತರು ಎಂದು ದೂರಿದ್ದಾರೆ.

ಅಂಬಾರಿ ಹೊತ್ತ ಆನೆ ಪುಷ್ಪಾರ್ಚನೆ ಜಾಗಕ್ಕೆ ಬರಲು ಪರದಾಡಬೇಕಾದ ಸನ್ನಿವೇಶ ಸೃಷ್ಟಿಯಾಗಿದ್ದುದು ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆಯ ದೊಡ್ಡ ವೈಫಲ್ಯ. ಸಾರ್ವಜನಿಕ ಮಹೋತ್ಸವವಾಗಬೇಕಾದ ಜಂಬೂಸವಾರಿ ಕಾರ್ಯಕ್ರಮ ಕೇವಲ ಪಕ್ಷವೊಂದರ ಕಾರ್ಯಕ್ರಮದಂತೆ ಬಿಂಬಿತವಾಗಿದ್ದು, ಬಿಜೆಪಿ ಕಾರ್ಯಕರ್ತರೇ ಎಲ್ಲೆಡೆ ಆವರಿಸಿಕೊಂಡಿದ್ದುದು ನಾಚಿಕೆಗೇಡಿನ ಸಂಗತಿ ಎಂದು ಅವರು ಕಿಡಿಕಾರಿದ್ದಾರೆ.

ದಸರಾ ಬಂದೋಬಸ್ತ್ ಐದು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಿದ್ದರೂ, ಅಂಬಾರಿ ಸಾಗುವ ಮಾರ್ಗದಲ್ಲಿ ತುಂಬಿದ್ದ ಸಾರ್ವಜನಿಕರನ್ನು ನಿಯಂತ್ರಿಸಲು ಸಾಧ್ಯವಾಗದಿರುವುದು ಅತ್ಯಂತ ನೋವಿನ ವಿಚಾರ. ದಸರಾ ವೇಳೆ ಪಾಸ್‌ ಮುದ್ರಿಸಿ ಹಂಚುವುದು ಸರ್ವೇ ಸಾಮಾನ್ಯ. ಆದರೆ, ಮುದ್ರಿಸಲಾದ ಪಾಸ್‌ಗಳ ಪೈಕಿ ಹತ್ತು ಸಾವಿರ ಪಾಸ್‌ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು ತಮ್ಮ ಸ್ವಕ್ಷೇತ್ರ ಯಶವಂತಪುರಕ್ಕೆ ತೆಗೆದುಕೊಂಡಿದ್ದಾರೆ. ಇದು ಜಿಲ್ಲಾ ಉಸ್ತುವಾರಿ ಸಚಿವರು ಮೈಸೂರು ಜನತೆಗೆ ಮಾಡಿದ ಪರಮದ್ರೋಹದ ಕೆಲಸವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಅಧಿಕಾರಿ ವರ್ಗಕ್ಕೆ ಸರ್ಕಾರ ಹಾಗೂ ಆಡಳಿತಾರೂಢ ಪಕ್ಷದ ಒತ್ತಡ ಇರುವುದು ಸಹಜ. ಆದರೆ, ಅಧಿಕಾರಿಗಳು ತಮ್ಮ ಇತಿಮೀತಿ ಅರಿಯದೆ, ಕಾನೂನು ಪಾಲಿಸದೆ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದುದೇ ಜಂಬೂಸವಾರಿ ವೇಳೆ ಆದಂತಹ ಎಲ್ಲ ದುರಂತಗಳಿಗೆ ಕಾರಣ. ಈ ಎಲ್ಲಾ ಅವಾಂತರಗಳ ನೈತಿಕ ಹೊಣೆ ಹೊತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಹಾಗೂ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ಕೂಡಲೇ ಮೈಸೂರು ಜನತೆ ಮುಂದೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾಯಿಸಿ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಅಭಿಮನ್ಯು ಪರಾಕ್ರಮ :

ಕಾಡಾನೆ ಮತ್ತು ಹುಲಿಗಳ ಕಾರ್ಯಾಚರಣೆಗೂ ಸೈ, ಅಂಬಾರಿ (Ambari) ಹೊರಲು ಜೈ ಎನ್ನುವ ಗಜರಾಜ ಅಭಿಮನ್ಯು (Abhimanyu) ಆನೆಯು ವಿಶ್ವವಿಖ್ಯಾತ ನಾಡಹಬ್ಬ ದಸರಾ (Dasara) ಮಹೋತ್ಸವದ ಜಂಬೂಸವಾರಿಯಲ್ಲಿ (Jambusavari) ಸತತ 2ನೇ ಬಾರಿಗೆ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು (Goldem hwda) ಹೊರುವ ಮೂಲಕ ತನ್ನ ಪರಾಕ್ರಮವನ್ನು ಮತ್ತೊಮ್ಮೆ ಸಾಬೀತುಪಡಿಸಿತು.

ಅರಮನೆ (Palace) ಆವರಣದೊಳಗೆ ಸಾವಿರಾರು ಜನರ ನಡುವೆ ಸುಮಾರು 500 ಮೀಟರ್‌ ಅಂಬಾರಿ ಹೊತ್ತಿರುವ ಅಭಿಮನ್ಯು ಆನೆಯು (Elephant), ಮೈಸೂರಿನ (Mysuru) ರಾಜಮಾರ್ಗದಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಅಂಬಾರಿ ಹೊತ್ತು ಬನ್ನಿಮಂಟಪ ತಲುಪುವ ಕಾರ್ಯಕ್ಕೆ ಎದುರು ನೋಡುತ್ತಿದೆ.

ಕಳೆದ 22 ವರ್ಷಗಳಿಂದ ದಸರೆಯಲ್ಲಿ ಭಾಗವಹಿಸುತ್ತಿರುವ 56 ವರ್ಷದ ಅಭಿಮನ್ಯು ಆನೆಗೆ 2020ನೇ ದಸರಾ ಮಹೋತ್ಸವದಲ್ಲಿ ಮೊದಲ ಬಾರಿಗೆ ಚಿನ್ನದ ಅಂಬಾರಿಯನ್ನು ಹೊರುವ ಅವಕಾಶ ಸಿಕ್ಕಿತ್ತು. ಅದನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಅಭಿಮನ್ಯು ಆನೆಯು 2021ನೇ ದಸರೆಯಲ್ಲಿ ಅಂಬಾರಿ ಹೊರುವಲ್ಲಿ ಯಶಸ್ವಿಯಾಯಿತು.

500 ಮೀಟರ್‌ ಅಂಬಾರಿ ಹೊತ್ತ ಅಭಿಮನ್ಯು ಆನೆಯು ಅರಮನೆಯಿಂದ ಬನ್ನಿಮಂಟಪದವರೆಗೆ 5 ಕಿ.ಮೀ. ಚಿನ್ನದ ಅಂಬಾರಿ ಹೊತ್ತು ಸಾಗುವ ಮೂಲಕ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ಅವಕಾಶಕ್ಕಾಗಿ ಎದುರು ನೋಡುತ್ತಿದ್ದು, ಬಹುಶ ಇದು 2022ನೇ ದಸರೆಯಲ್ಲಿ ಈಡೇರುವ ಸಾಧ್ಯತೆ ಇದೆ.

click me!