ಯುವಪೀಳಿಗೆಯಲ್ಲಿ ಸಾಧಿಸುವ ಛಲ ಕೊನೆಯಾಗಬಾರದು: ಸಚಿವ ಸುಧಾಕರ್‌ ಸಲಹೆ

By Govindaraj SFirst Published Jan 13, 2023, 8:25 PM IST
Highlights

ಯುವಪೀಳಿಗೆಯಲ್ಲಿ ಸಾಧಿಸುವ ಛಲ ಕೊನೆಯಾಗಬಾರದು, ಯಾವುದೇ ಪರಿಸ್ಥಿತಿ ನಿಭಾಯಿಸುವ ಬುದ್ಧಿವಂತಿಕೆ ಅಗತ್ಯವಿದ್ದು, ಕಷ್ಟ ಸುಖಗಳಿಗೆ ವಿಚಲಿತರಾಗದ ಮನಸ್ಥಿತಿ ಬೆಳೆಸಿಕೊಂಡರೆ ಸಾಧನೆಯ ಉತ್ತುಂಗಕ್ಕೆ ಏರಲು ಸಹಕಾರಿಯಾಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು. 

ಚಿಕ್ಕಬಳ್ಳಾಪುರ (ಜ.13): ಯುವಪೀಳಿಗೆಯಲ್ಲಿ ಸಾಧಿಸುವ ಛಲ ಕೊನೆಯಾಗಬಾರದು, ಯಾವುದೇ ಪರಿಸ್ಥಿತಿ ನಿಭಾಯಿಸುವ ಬುದ್ಧಿವಂತಿಕೆ ಅಗತ್ಯವಿದ್ದು, ಕಷ್ಟ ಸುಖಗಳಿಗೆ ವಿಚಲಿತರಾಗದ ಮನಸ್ಥಿತಿ ಬೆಳೆಸಿಕೊಂಡರೆ ಸಾಧನೆಯ ಉತ್ತುಂಗಕ್ಕೆ ಏರಲು ಸಹಕಾರಿಯಾಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು. ನಗರ ಹೊರವಲಯದ ಎಸ್‌ಜೆಸಿಐಟಿ ಆಡಿಟೋರಿಯಂನಲ್ಲಿ ಗುರುವಾರ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಯುವ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪ್ರಯತ್ನ ಎಂಬುದು ನಿತ್ಯ ನಿರಂತರವಾಗಿರಬೇಕು, ಆಗ ಮಾತ್ರ ಜೀವನದಲ್ಲಿ ಎತ್ತರಕ್ಕೆ ತಲುಪಲು ಸಾಧ್ಯ ಎಂದರು.

ವಿವೇಕಾನಂದರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಅವರ ಮಾರ್ಗದಲ್ಲಿ ಸಾಗಿದರೆ ದೇಶದ ಅಭ್ಯುದಯದಲ್ಲಿ ನಮ್ಮ ಪಾಲು ಇರಲಿದೆ ಎಂಬುದನ್ನು ಯುವಕರು ಮರೆಯಬಾರದು ಎಂದರು. ವಿವೇಕಾನಂದರ ಜಯಂತಿ ಎಂದರೆ ಯುವ ಪೀಳಿಗೆಯ ಜನ್ಮದಿನ. ಹಾಗಾಗಿಯೇ ರಾಷ್ಟ್ರೀಯ ಯುವಕರ ದಿನ ಆಚರಿಸಲಾಗುತ್ತಿದೆ. ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ ಎಂಬುದು ಅವರ ಘೋಷವಾಕ್ಯ. ವಿಶ್ವದ ಮನ ಗೆದ್ದವರು ವಿವೇಕಾನಂದರು ಎಂದು ಬಣ್ಣಿಸಿದರು.

Chikkaballapur Utsav: ಚಿಕ್ಕಬಳ್ಳಾಪುರ ಭವಿಷ್ಯದಲ್ಲಿ ದೊಡ್ಡ ನಗರವಾಗಲಿದೆ: ಸಚಿವ ಸುಧಾಕರ್‌

ದೇಶದ ಪ್ರಗತಿ ಯುವಕರಿಂದ ಮಾತ್ರ ಸಾಧ್ಯ. ದೇಶದ ಜನಸಂಖ್ಯೆ 140 ಕೋಟಿ ಮುಟ್ಟುತ್ತಿದೆ. ಜನಸಂಖ್ಯೆ ಎಂಬುದು ಶಾಪವಲ್ಲ, ಮಾನವ ಸಂಪನ್ಮೂಲವೆಂಬ ವರ. ನಮ್ಮಲ್ಲಿರುವ ಮಾನವ ಸಂಪನ್ಮೂಲ ವಿಶ್ವಕ್ಕೇ ಅನೇಕ ವಿಷಯಗಳನ್ನು ಕಾಣಿಕೆಯಾಗಿ ನೀಡುತ್ತಿದೆ. ಐಟಿ, ಬಾಹ್ಯಾಕಾಶ ಯೋಜನೆ, ವೈದ್ಯಕೀಯ, ಶಿಕ್ಷಣ, ತಯಾರಿಕಾ ಉದ್ದಿಮೆಗಳಲ್ಲಿ ವಿಶ್ವದಲ್ಲಿ ಭಾರತ ಹೊಸ ದಾಪುಗಾಲು ಇಡುತ್ತಿದೆ ಎಂದರು.

ಬೆಂಗಳೂರಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಂತಾರಾಷ್ಟ್ರೀಯ ಸಂಶೋಧನಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ, ಅನೇಕ ಕಂಪನಿಗಳು ಬೆಂಗಳೂರಿನಲ್ಲಿವೆ, 500ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸಂಸ್ಥೆಗಳು ಸ್ಥಾಪನೆಯಾಗುತ್ತಿವೆ, 1,500ಕ್ಕೂ ಹೆಚ್ಚು ಸಂಸ್ಥೆಗಳು ವೈದ್ಯಕೀಯ, ಆರೋಗ್ಯ ಕ್ಷೇತ್ರದಲ್ಲಿ ತೊಡಗಿವೆ. ಬೆಂಗಳೂರು ಪುಷ್ಕಳ ಅವಕಾಶಗಳ ರಾಜಧಾನಿಯಾಗಿದೆ. ಇದೆಲ್ಲವೂ ಯುವಕರಿಂದಲೇ ಸಾಧ್ಯವಾಗಿದೆ ಎಂದು ಪ್ರತಿಪಾದಿಸಿದರು. ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಸ್ನೂಕರ್‌ ಆಟಗಾರ್ತಿ ವರ್ಷಾ ಸಂಜೀವ್‌, ಆಯುಷ್‌ ಆಯುಕ್ತ ಮಂಜುನಾಥ್‌, ಜಿಲ್ಲಾಧಿಕಾರಿ ನಾಗರಾಜ, ಜಿಪಂ ಸಿಇಒ ಶಿವಶಂಕರ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಚಿಕ್ಕಬಳ್ಳಾಪುರ ಉತ್ಸವ ಪ್ರತಿ ವರ್ಷ ಅದ್ಧೂರಿಯಾಗಿ ನಡೆಯಲಿ: ಸಚಿವ ಆರ್‌.ಅಶೋಕ್‌

ಯುವಕರಲ್ಲಿ ತಮ್ಮ ಕನಸುಗಳಿಗೆ ಅನುಗುಣವಾಗಿ ತಯಾರಿ ಅಗತ್ಯವಿದೆ, ದೊಡ್ಡ ಕನಸು ಕಟ್ಟಿಕೊಳ್ಳುವ ಮೂಲಕ ದೇಶ ಭಕ್ತಿ ರೂಡಿಸಿಕೊಳ್ಳಬೇಕು, ದೇಶ ಪ್ರೇಮಿಗಳು ಉತ್ತಮ ಮಾನವ ಲಕ್ಷಣಗಳನ್ನು ಹೊಂದಿದವರಾಗಿರುತ್ತಾರೆ. ನಾನು ಎಂಬುದು ಕೊನೆಯಲ್ಲಿ ಇರಲಿ, ದೇಶ ಎಂಬುದು ಮೊದಲಿರಲಿ.
- ಡಾ.ಕೆ.ಸುಧಾಕರ್‌, ಆರೋಗ್ಯ ಸಚಿವ

click me!