ದೇವರಿಗೂ ಕೊರೋನಾ ಕಾಟ: ನೌಕರರ ಸಂಬಳಕ್ಕೆ ಕಾಸಿಲ್ಲ!

By Kannadaprabha NewsFirst Published Jul 22, 2020, 10:33 AM IST
Highlights

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಜರಾಯಿ ಇಲಾಖೆಗೆ ಸೇರಿರುವ 832 ದೇವಾಲಯಗಳಿವೆ. ಇವುಗಳಲ್ಲಿ ಗ್ರೇಡ್‌- 1ರಲ್ಲಿ ದಕ್ಷಿಣ ಕಾಶಿ ಶ್ರೀ ಕಳಸೇಶ್ವರ, ದತ್ತಪೀಠ ಹಾಗೂ ಮಳೆಯ ದೇವರು ಕಿಗ್ಗಾದ ಋುಷ್ಯಶೃಂಗ ದೇವಾಲಯ. ಇವುಗಳು ಅತಿ ಹೆಚ್ಚು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಆರ್‌.ತಾರಾನಾಥ್, ಕನ್ನಡಪ್ರಭ

ಚಿಕ್ಕಮಗಳೂರು(ಜು.22): ಮುಜರಾಯಿ ದೇಗುಲಗಳ ಮೇಲೆ ಕೊರೋನಾ ಕಾರ್ಮೋಡ ಕವಿದಿದೆ. ದೇವಾಲಯಗಳಲ್ಲಿ ಕೆಲಸಕ್ಕೆ ಇದ್ದವರಿಗೆ ಸಂಬಳ ಕೊಡಲು ಕಾಸಿಲ್ಲ. ನಿರ್ವಹಣೆ ಕಷ್ಟವಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಜರಾಯಿ ಇಲಾಖೆಗೆ ಸೇರಿರುವ 832 ದೇವಾಲಯಗಳಿವೆ. ಇವುಗಳಲ್ಲಿ ಗ್ರೇಡ್‌- 1ರಲ್ಲಿ ದಕ್ಷಿಣ ಕಾಶಿ ಶ್ರೀ ಕಳಸೇಶ್ವರ, ದತ್ತಪೀಠ ಹಾಗೂ ಮಳೆಯ ದೇವರು ಕಿಗ್ಗಾದ ಋುಷ್ಯಶೃಂಗ ದೇವಾಲಯ. ಇವುಗಳು ಅತಿ ಹೆಚ್ಚು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ.

ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ದೇವಾಲಯಗಳು ಬಂದ್‌ ಮಾಡಲಾಗಿತ್ತು. 100 ದಿನಗಳ ನಂತರ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ದೇವಾಲಯಗಳನ್ನು ಓಪನ್‌ ಮಾಡಲು ಅವಕಾಶ ನೀಡಲಾಗಿತ್ತು. ದೇವಾಲಯಗಳನ್ನು ಶುಚಿಗೊಳಿಸಿ ಬಾಗಿಲು ತೆರೆಯಲು ಅವಕಾಶ ನೀಡಲಾಗಿತ್ತು. ಆದರೆ, ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ದೇವಾಲಯಗಳಿಗೆ ಬರುವ ಭಕ್ತರ ಸಂಖ್ಯೆ ಇಳಿಮುಖವಾಗಿದೆ.

ಪ್ರವಾಸಿಗರ ಕೇಂದ್ರೀಕೃತ:

ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಶೃಂಗೇರಿಯ ಶಾರದಾಂಬೆ, ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ, ಶ್ರೀ ಕಳಸೇಶ್ವರ, ಕಿಗ್ಗಾದ ಋುಷ್ಯಶೃಂಗ, ಅಜ್ಜಂಪುರದ ಅಮೃತೇಶ್ವರ ದೇವಾಲಯಗಳು ಪ್ರವಾಸಿಗರ ಕೇಂದ್ರೀಕೃತವಾದ ಸ್ಥಳಗಳು. ಜಿಲ್ಲೆಗೆ ಹೊರಜಿಲ್ಲೆ, ರಾಜ್ಯ ಹಾಗೂ ವಿದೇಶಗಳಿಂದ ಪ್ರವಾಸಿಗರು ಬಾರದಂತೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಆದ್ದರಿಂದ ಬೇರೆ ಕಡೆಗಳಿಂದ ಪ್ರವಾಸಿಗರು ದೇವಾಲಯಗಳಿಗೆ ಬರುತ್ತಿಲ್ಲ.

ಶಿವಮೊಗ್ಗ ಜಿಲ್ಲೆಯಲ್ಲಿ ಮಧ್ಯಾಹ್ನ ಲಾಕ್‌ಡೌನ್ ಮುಂದುವರಿಕೆ

ಗ್ರೇಡ್‌-1 ದೇವಾಲಯಗಳ ಅಭಿವೃದ್ಧಿ ಸಮಿತಿಯವರು ದೇಗುಲಗಳಿಗೆ ಆದಾಯ ಬರುವ ಅಂಗಡಿ ಮಳಿಗೆಗಳು, ವಾಹನಗಳ ಪಾರ್ಕಿಂಗ್‌, ಕಾಟೇಜ್‌ಗಳನ್ನು ಮಾಡಿಕೊಂಡಿವೆ. ಇಲ್ಲಿ ಬರುವ ಆದಾಯದಿಂದ ದೇವಾಲಯಗಳ ಕೆಲಸಗಾರರಿಗೆ ಸಂಬಳ ಕೊಟ್ಟು ನಿರ್ವಹಣೆ ಮಾಡಿಕೊಂಡು ಹೋಗುತ್ತಿವೆ. ಆದರೆ, ಈಗ ದೇವಾಲಯಗಳಿಗೆ ಭಕ್ತರು ಬರುತ್ತಿಲ್ಲ. ಇದ್ದರಿಂದ ಕಾಣಿಕೆ, ಹರಕೆ ರೂಪದ ಆದಾಯ ಮೂಲ ನಿಂತುಹೋಗಿವೆ. ಕೆಲಸಗಾರರಿಗೆ ಸಂಬಳ ಕೊಡಲು ಸಹ ದೇವಾಲಯಗಳ ಸಮಿತಿಯವರ ಕೈಯಲ್ಲಿ ಹಣ ಇಲ್ಲ. ದೇವಾಲಯಗಳಲ್ಲಿ ದೇವರ ಕೆಲಸ ಮಾಡಿಕೊಂಡು ನೆಮ್ಮದಿ ಹಾಗೂ ಗೌರವದಿಂದ ಜೀವನ ನಡೆಸುತ್ತಿದ್ದವರು ಅತಂತ್ರಗೊಂಡಿದ್ದಾರೆ.

ಕೆಲವು ಮಂದಿ ದೇವಾಲಯಗಳು ಓಪನ್‌ ಆಗಬಹುದು, ಸಂಬಳ ಸಿಗಬಹುದೆಂಬ ಆಸೆಯಿಂದ ಕೆಲವರ ಬಳಿ ಕೈಸಾಲ ಮಾಡಿಕೊಂಡಿದ್ದಾರೆ ಎಂದು ಹೆಸರು ಹೇಳಲು ಇಚ್ಚಿಸದ ದೇಗುಲದ ನೌಕರರೊಬ್ಬರು ತಿಳಿಸಿದ್ದಾರೆ. ಜಿಲ್ಲೆಗೆ ಪ್ರವಾಸಿಗರು ಬಂದರೆ ದೇವಾಲಯಗಳಿಗೂ ಭೇಟಿ ನೀಡುತ್ತಾರೆ. ಆಗ, ಇಲ್ಲಿನ ಅಂಗಡಿಗಳಿಗೆ ವ್ಯಾಪಾರವಾಗಲಿದೆ ಎಂದು ಹೇಳಿದ್ದಾರೆ.

ಬಾಬಾಬುಡನ್‌ಗಿರಿಯಲ್ಲಿರುವ ಕಾಟೇಜ್‌ಗಳನ್ನು ವಾರ್ಷಿಕ ಟೆಂಡರ್‌ನಲ್ಲಿ ಬಾಡಿಗೆ ಪಡೆಯಲಾಗಿದೆ. ಕಳೆದ ಮಾಚ್‌ರ್‍ನಿಂದ ಲಾಕ್‌ಡೌನ್‌ ವಿಧಿಸಿದ್ದರಿಂದ ಗಿರಿಗೆ ಭಕ್ತರು ಬರುತ್ತಿಲ್ಲ. ಇದರಿಂದ ಕಾಟೇಜ್‌ಗಳು ಖಾಲಿಯಾಗಿವೆ. ಆದರೂ, ನಿರ್ವಹಣೆಯನ್ನು ಮಾಡಲಾಗುತ್ತಿದೆ. ಜನರಿಲ್ಲದೇ ಕಾಟೇಜ್‌ಗಳ ಬಾಡಿಗೆ ಕಟ್ಟುವುದು ಕಷ್ಟವಾಗಲಿದೆ. ಆದ್ದರಿಂದ ಬಾಡಿಗೆ ಮನ್ನಾ ಮಾಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ - ಅಭಿ, ಕಾಟೇಜ್‌ ಗುತ್ತಿಗೆದಾರ
 

click me!