
ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆ ಮತ್ತು ಧಮ್ಕಿ ವಿಚಾರವಾಗಿ ಆರಂಭವಾದ ಖಾಕಿ ಹಾಗೂ ಖಾದಿ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದ್ದು, ಈಗ ಡಿಜಿಟಲ್ ಮೈದಾನದಲ್ಲೂ ದೊಡ್ಡ ಮಟ್ಟದ ಸಮರಕ್ಕೆ ಕಾರಣವಾಗಿದೆ. ಗಣೇಶನ ವಿಸರ್ಜನೆ ಮೆರವಣಿಗೆಯ ಹಾದಿ ಹಾಗೂ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಇನ್ಸ್ಪೆಕ್ಟರ್ ಧನಂಜಯ ವಿರುದ್ಧ ಬಿಜೆಪಿ ನಾಯಕರು ಕಠಿಣ ಹೋರಾಟ ರೂಪಿಸಿದ್ದಾರೆ. ಆದರೆ, ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಸಂಸದನ ಪೋಸ್ಟ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಕೊಟ್ಟಿದೆ.
ಟಿ. ನರಸೀಪುರ ಪೊಲೀಸ್ ಇನ್ಸ್ಪೆಕ್ಟರ್ ಧನಂಜಯ ವಿರುದ್ಧ ಬಿಜೆಪಿ ನಾಯಕರು ಗಂಭೀರ ಸ್ವರೂಪದ ಆರೋಪಗಳನ್ನು ಮಾಡಿದ್ದಾರೆ. ಇನ್ಸ್ಪೆಕ್ಟರ್ ಕ್ಷೇತ್ರದಲ್ಲಿ ಅಕ್ರಮ ಇಸ್ಪೀಟ್ (ಜೂಜು) ದಂಧೆಯ ಕಿಂಗ್ಪಿನ್ ಆಗಿ ಕೆಲಸ ಮಾಡುತ್ತಿದ್ದಾರೆ ಹಾಗೂ ಗಣೇಶೋತ್ಸವದ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರಿಗೆ ಮತ್ತು ಸಾರ್ವಜನಿಕರಿಗೆ ಧಮ್ಕಿ ಹಾಕಿದ್ದಾರೆ ಎಂಬುದು ಅವರ ಪ್ರಮುಖ ಆರೋಪ. ಈ ಹಿನ್ನೆಲೆಯಲ್ಲಿ ಇನ್ಸ್ಪೆಕ್ಟರ್ ಅವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು (Suspension) ಎಂದು ಪಟ್ಟು ಹಿಡಿದು, ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಸ್ಥಳೀಯ ಮುಖಂಡರು ಅಹೋರಾತ್ರಿ ಧರಣಿ ಆರಂಭಿಸಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು ನಡೆಸಿದ ಸಂಧಾನ ಮಾತುಕತೆಯೂ ವಿಫಲವಾಗಿ ಹೋರಾಟ ತೀವ್ರಗೊಂಡಿತ್ತು.
ತಮ್ಮ ಪ್ರತಿಭಟನೆ ಮತ್ತು ಆರೋಪಗಳ ವಿರುದ್ಧ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಯಾಗುತ್ತಿದ್ದಂತೆ, ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಡಿಜಿಟಲ್ ವೇದಿಕೆಯಲ್ಲೇ ತಿರುಗೇಟು ನೀಡಿದ್ದಾರೆ. ಈ ಹಿಂದೆ ಇದೇ ಟಿ. ನರಸೀಪುರ ಠಾಣೆಯಲ್ಲಿ ದಲಿತ ಯುವಕರ ಮೇಲೆ ನಡೆದಿತ್ತು ಎನ್ನಲಾದ ಪೊಲೀಸ್ ದೌರ್ಜನ್ಯದ ವರದಿಗಳನ್ನು ಹಾಗೂ ದಲಿತ ಸಂಘರ್ಷ ಸಮಿತಿ (DSS) ಮಾಡಿದ್ದ ಹೋರಾಟದ ಪತ್ರಿಕಾ ತುಣುಕುಗಳನ್ನು ಪ್ರತಾಪ್ ಸಿಂಹ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.
ಬೀದಿ ಹೋರಾಟ ಒಂದು ಕಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ಅಂತರ್ಜಾಲದಲ್ಲಿ 'ವಿಸ್ಟ್ಯಾಂಡ್ ವಿಥ್ ಧನಂಜಯ್' ಎಂಬ ಅಭಿಯಾನ ಜೋರಾಗಿ ಹರಿದಾಡಲು ಶುರುವಾಯಿತು. ಅನೇಕ ನೆಟ್ಟಿಗರು ಹಾಗೂ ಬೆಂಬಲಿಗರು ಪೊಲೀಸ್ ಇಲಾಖೆಯ ಕರ್ತವ್ಯದ ಪರವಾಗಿ ಹಾಗೂ ಇನ್ಸ್ಪೆಕ್ಟರ್ ಬೆಂಬಲಕ್ಕೆ ನಿಂತು ಪೋಸ್ಟ್ಗಳನ್ನು ಹಾಕಿದರು. ಗಣೇಶನ ಗಲಾಟೆಯ ನಡುವೆಯೇ ಸೋಷಿಯಲ್ ಮೀಡಿಯಾದಲ್ಲಿ ಪೊಲೀಸ್ ಅಧಿಕಾರಿ ದಿಢೀರ್ ಟ್ರೆಂಡ್ ಆಗಿದ್ದು ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿಸಿದೆ.
DSS ಸ್ನೇಹಿತರೇ, ಪ್ರತಾಪ್ ಸಿಂಹನ ವಿರುದ್ಧ ಘೋಷಣೆ ಕೂಗುವ ಅಥವಾ ವಿರೋಧಿಸುವ ಮೊದಲು, ಇದೇ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ನಡೆಸಿದ್ದ ದೌರ್ಜನ್ಯದ ವಿರುದ್ಧ ನೀವೇ ಮಾಡಿದ್ದ ಹೋರಾಟವನ್ನು ಒಮ್ಮೆ ನೆನಪು ಮಾಡಿಕೊಳ್ಳಿ" ಎಂದು ಕರೆ ನೀಡಿದ್ದಾರೆ. ಆ ಮೂಲಕ, ಇನ್ಸ್ಪೆಕ್ಟರ್ ಮೇಲಿರುವ ಆರೋಪಗಳು ಕೇವಲ ಇಂದಿನ ರಾಜಕೀಯ ಅಥವಾ ಗಣೇಶೋತ್ಸವದ ವಿವಾದಕ್ಕೆ ಸೀಮಿತವಲ್ಲ, ಈ ಹಿಂದೆಯೂ ಸಾರ್ವಜನಿಕರ ಮೇಲೆ ಅಮಾನವೀಯ ಹಲ್ಲೆ ನಡೆದಿದೆ ಎಂಬುದನ್ನು ದಲಿತ ಸಂಘಟನೆಗಳಿಗೆ ನೆನಪಿಸುವ ಯತ್ನ ಮಾಡಿದ್ದಾರೆ. ಗಣೇಶನ ಗಲಾಟೆಯಿಂದ ಶುರುವಾದ ವಿವಾದವು ಇಸ್ಪೀಟ್ ದಂಧೆಯ ಆರೋಪ, ಸಸ್ಪೆಂಡ್ಗೆ ಬಿಗಿಪಟ್ಟು, ಸೋಶಿಯಲ್ ಮೀಡಿಯಾ ಟ್ರೆಂಡಿಂಗ್ ಹಾಗೂ ಹಳೆಯ ದಲಿತ ದೌರ್ಜನ್ಯದ ವರದಿಗಳ ಮರುಪ್ರಸಾರದ ಮೂಲಕ ಈಗ ರಾಜಕೀಯ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದೆ.