Bengaluru Rain : 3 ವಾರಗಳ ಬಳಿಕ ಪ್ರಕಾಶಿಸಿದ ಸೂರ್ಯ - ಮತ್ತೆ ಮಳೆ ಎಚ್ಚರಿಕೆ

By Kannadaprabha NewsFirst Published Nov 24, 2021, 7:19 AM IST
Highlights
  • ಸುಮಾರು ಮೂರು ವಾರಗಳ ಬಳಿಕ ರಾಜ್ಯ ರಾಜಧಾನಿಯಲ್ಲಿ ಸೂರ್ಯದೇವ ಇಡೀ ದಿನ ದರ್ಬಾರ್‌ 
  • ಮುಸುಕಿದ್ದ ಮೋಡ ಸರಿದು ಮಂಗಳವಾರ ಬೆಳಗ್ಗೆಯಿಂದಲೇ ಗೋಜರಿಸಿದ ಸೂರ್ಯನ ತೇಜಸ್

 ಬೆಂಗಳೂರು (ನ.24):  ಸುಮಾರು ಮೂರು ವಾರಗಳ ಬಳಿಕ ರಾಜ್ಯ ರಾಜಧಾನಿಯಲ್ಲಿ (Bengaluru) ಸೂರ್ಯ ದೇವ (Sun) ಇಡೀ ದಿನ ದರ್ಬಾರ್‌ ನಡೆಸಿದ. ಮುಸುಕಿದ್ದ ಮೋಡ (Cloud) ಸರಿದು ಮಂಗಳವಾರ ಬೆಳಗ್ಗೆಯಿಂದಲೇ ಗೋಜರಿಸಿದ ಸೂರ್ಯನ ತೇಜಸ್ಸಿಗೆ ಕಳೆದ ಕೆಲ ದಿನಗಳಿಂದ ಅಬ್ಬರಿಸಿದ್ದ ಕಾರ್ಮೋಡಗಳು ಬದಿಗೆ ಸರಿದವು. ಇದರಿಂದ ಬಹಳ ದಿನಗಳ ನಂತರ ಬೆಂಗಳೂರಿಗರಿಗೆ ನೀಲಿ ಬಾನಿನ ದರ್ಶನ ಭಾಗ್ಯವಾಯಿತು. ನಗರದ ನಾಲ್ಕೈದು ಕಡೆ ತುಂತುರು ಮಳೆ (Rain) ಜಿನುಗಿದ್ದು ಬಿಟ್ಟರೆ ಉಳಿದಂತೆ ನಗರದಾದ್ಯಂತ ಶುಭ್ರ ವಾತಾವರಣ ಇತ್ತು. ಇದರಿಂದ ಕಳೆದ ಕೆಲ ದಿನಗಳಿಂದ ಭಾರಿ ಮಳೆಯ ಅಬ್ಬರಕ್ಕೆ ಸಿಲುಕಿದ್ದ ಜನರು ತುಸು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಬೆಂಗಳೂರಿನ ದಕ್ಷಿಣ ಭಾಗದ ಬೊಮ್ಮನಹಳ್ಳಿ (Bommahalli), ಆರ್‌.ಆರ್‌. ನಗರದ (RR Nagar) ಕೆಲ ಭಾಗದಲ್ಲಿ ತುಂತುರು ಮಳೆಯಾಗಿದೆ. ಆದರೆ ಒಟ್ಟಾರೆ ಬೆಂಗಳೂರಿನಲ್ಲಿ ಬೆಚ್ಚನೆ ವಾತಾವರಣವಿತ್ತು. ಇದಕ್ಕೆ ಸಾಕ್ಷಿಯೆಂಬಂತೆ ನಗರದ ಉಷ್ಣತಾ ಮಾಪಕ ಕೇಂದ್ರಗಳಲ್ಲಿ ಕಳೆದ ಕೆಲ ದಿನಗಳಿಂದ 25 ಡಿಗ್ರಿ ಸೆಲ್ಸಿಯಸ್‌ನ ಸನಿಹದಲ್ಲಿದ್ದ ಗರಿಷ್ಠ ಉಷ್ಣತೆ 30 ಡಿಗ್ರಿಯ ಸನಿಹಕ್ಕೆ ಏರಿದೆ.

ಬೆಂಗಳೂರು ನಗರದಲ್ಲಿ ಗರಿಷ್ಠ ಉಷ್ಣತೆ 29.8 ಡಿಗ್ರಿ ಮತ್ತು ಕನಿಷ್ಠ ಉಷ್ಣತೆ 20.5 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (International Aurport) ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಕ್ರಮವಾಗಿ 29.6 ಡಿಗ್ರಿ ಮತ್ತು 20.3 ಡಿಗ್ರಿ ಹಾಗೆಯೇ ಬೆಂಗಳೂರು ಎಚ್‌ಎಎಲ್‌ (HAL) ವಿಮಾನ ನಿಲ್ದಾಣದಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನ 29 ಡಿಗ್ರಿ ಹಾಗೂ 18.5 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ಬುಧವಾರ ನಗರದಲ್ಲಿ ಮೋಡ ಭರಿತ ಆಕಾಶ ಇರಲಿದ್ದು, ಗುಡುಗು ಸಹಿತ ಮಳೆ ನಿರೀಕ್ಷಿಸಬಹುದು. ನಗರದ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಕ್ರಮವಾಗಿ 29 ಡಿಗ್ರಿ ಮತ್ತು 20 ಡಿಗ್ರಿ ಸೆಲ್ಸಿಯಸ್‌ ಇರಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಭಾರೀ ಮಳೆಗೆ ಉಂಟಾದ ಅವಾಂತರ : 

ಬೆಂಗಳೂರಿನಲ್ಲಿ (Bengaluru) ಭಾನುವಾರ ರಾತ್ರಿ ಸುರಿದ ಶತಮಾನದ ಮಳೆಯಿಂದ ಜವಾಹರಲಾಲ್‌ ನೆಹರು (Javahar lal Nehru) ಅಡ್ವಾನ್ಸ್‌ ಸೈಂಟಿಫಿಕ್‌ ರಿಸರ್ಚ್ ಸೆಂಟರ್‌ಗೆ (Jawaharlal Nehru Scientific Research Centre  ) (ಜೆಎನ್‌ಸಿಎಎಸ್‌ಆರ್‌) ನೀರು ನುಗ್ಗಿ ದಶಕಗಳಿಂದ ‘ವೈರಾಣು ಜಗತ್ತಿನ’ ಮೇಲೆ ನಡೆಸಲಾಗುತ್ತಿದ್ದ ಸಂಶೋಧನೆಗಳು, ಸಂಗ್ರಹಿಸಿದ್ದ ಮಾದರಿಗಳು ಹಾಗೂ ಲಕ್ಷಾಂತರ ರುಪಾಯಿ ಮೌಲ್ಯದ ಸೂಕ್ಷ್ಮ ಉಪಕರಣಗಳೆಲ್ಲಾ ನೀರು (water) ಪಾಲಾಗಿವೆ.  ಈ ಕೇಂದ್ರದ ವಿಜ್ಞಾನಿಗಳು ಹಾಗೂ ಸಂಶೋಧನಾರ್ಥಿಗಳು ಹೇಳುತ್ತಿರುವ ಪ್ರಕಾರ, ಎಚ್‌ಐವಿ ವೈರಸ್‌, ಮೂಲ ಕೊರೋನಾ ವೈರಾಣು ಹಾಗೂ ಪ್ರಸ್ತುತ ಜಗತ್ತನ್ನು ಕಾಡುತ್ತಿರುವ ಕೊರೋನಾ ವೈರಾಣು ಸೇರಿದಂತೆ ಕಾಲ ಕಾಲಕ್ಕೆ ರೂಪಾಂತರ ಪಡೆದು ಮನುಷ್ಯ ಹಾಗೂ ಪ್ರಾಣಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುವ ವಿವಿಧ ವೈರಾಣುಗಳ ಮಾದರಿ ಹಾಗೂ ಅವುಗಳ ಅನುವಂಶಿಕ ಮಾದರಿ ಸಂಗ್ರಹಿಸಿ ಅವುಗಳ ರೂಪಾಂತರ ಹೇಗಾಗುತ್ತದೆ, ಹೇಗೆ ಹರಡುತ್ತದೆ ಎಂಬ ಬಗ್ಗೆ ಕಳೆದ 20 ವರ್ಷಗಳಿಂದ ಸಂಶೋಧನೆ ನಡೆಸಲಾಗುತ್ತಿತ್ತು.

ನ್ಯಾನೋ ಟೆಕ್ನಾಲಜಿ, ಬಯೋಟೆಕ್ನಾಲಜಿ (Technology), ನ್ಯೂರೋ ಸೈನ್ಸ್‌ ತಂತ್ರಜ್ಞಾನಗಳನ್ನು ಬಳಸಿ ಈ ಸಂಶೋಧನೆಗಳನ್ನು ನಡೆಸಲಾಗುತ್ತಿತ್ತು. ವೈರಾಣು ಮಾದರಿಗಳನ್ನು ಮೈನಸ್‌ 20 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ ವಿಶೇಷ ಉಪಕರಣಗಳಲ್ಲಿ ಸಂಗ್ರಹಿಸಿಡಲಾಗಿತ್ತು. ಆದರೆ, ಮಳೆ ನೀರು ಆವರಿಸಿದ್ದರಿಂದ ವೈರಾಣುಗಳಿದ್ದ (Virus) ವಿಶೇಷ ಉಪಕರಣಗಳು ಸ್ವಿಚ್‌ಆಫ್‌ ಆಗಿವೆ. ಇದರಿಂದ ಬಹುತೇಕ ಮಾದರಿಗಳೆಲ್ಲಾ ನಾಶವಾಗಿರುವ ಆತಂಕವಿದೆ. ಆದರೆ, ಇದರ ಖಚಿತ ಮಾಹಿತಿ ಮತ್ತೆ ಈ ಉಪಕರಣಗಳನ್ನು ಸ್ವಿಚ್‌ ಆನ್‌ ಮಾಡಿ ಪರಿಶೀಲಿಸಿದ ನಂತರವೇ ಗೊತ್ತಾಗುತ್ತದೆ.

ಅಲ್ಲದೆ, ಈ ಮಹಾ ಮಳೆಯಿಂದ ಸಂಶೋಧನೆಗೆ ಬಳಸುತ್ತಿದ್ದ ಲಕ್ಷಾಂತರ ರು. ಮೌಲ್ಯದ ಸೂಕ್ಷ್ಮ ಉಪಕರಣಗಳೆಲ್ಲವೂ ಹಾಳಾಗಿವೆ. ಇದರಿಂದ ದಶಕಗಳಿಂದ ನಡೆಸಿದ್ದ ನಮ್ಮ ಪರಿಶ್ರಮವೆಲ್ಲಾ ವ್ಯರ್ಥವಾದಂತಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ.

click me!