ಕೈ ಮುಖಂಡರ ಮನೆಗೆ ಸುಮಲತಾ ಭೇಟಿ

By Kannadaprabha NewsFirst Published Apr 19, 2023, 9:15 AM IST
Highlights

ಬಿಜೆಪಿಗೆ ಬೆಂಬಲ ಸೂಚಿಸಿರುವ ಸಂಸದೆ ಸುಮಲತಾ ಸೋಮವಾರ ಸಂಜೆ ಕಾಂಗ್ರೆಸ್‌ ಪ್ರಭಾವಿ ಮುಖಂಡರ ಮನೆಗೆ ಭೇಟಿ ನೀಡಿ ಕಮಲ ಪಾಳಯ ಸೇರುವಂತೆ ಆಹ್ವಾನ ನೀಡಿದರು.

ಮದ್ದೂರು: ಬಿಜೆಪಿಗೆ ಬೆಂಬಲ ಸೂಚಿಸಿರುವ ಸಂಸದೆ ಸುಮಲತಾ ಸೋಮವಾರ ಸಂಜೆ ಕಾಂಗ್ರೆಸ್‌ ಪ್ರಭಾವಿ ಮುಖಂಡರ ಮನೆಗೆ ಭೇಟಿ ನೀಡಿ ಕಮಲ ಪಾಳಯ ಸೇರುವಂತೆ ಆಹ್ವಾನ ನೀಡಿದರು.

ತಾಲೂಕಿನ ಸೋಮನಹಳ್ಳಿಯ ಕಾಂಗ್ರೆಸ್‌ ಮುಖಂಡ, ಉದ್ಯಮಿ ಸಿ.ಟಿ. ಶಂಕರ್‌, ವಳಗೆರೆಹಳ್ಳಿಯ ಎಪಿಎಂಸಿ ಮಾಜಿ ಉಪಾಧ್ಯಕ್ಷೆ ಮಮತಾ ಶಂಕರೇಗೌಡ ಹಾಗೂ ಪುರಸಭಾ ಸದಸ್ಯೆ ಪ್ರಿಯಾಂಕ ಅಪ್ಪುಗೌಡ ನಿವಾಸಗಳಿಗೆ ಬಿಜೆಪಿ ಅಭ್ಯರ್ಥಿ ಎಸ್‌.ಪಿ. ಸ್ವಾಮಿಯೊಂದಿಗೆ ಭೇಟಿ ನೀಡಿ ಪ್ರಸ್ತುತ ವಿದ್ಯಮಾನಗಳ ಕುರಿತಂತೆ ಸುಧೀರ್ಘ ಚರ್ಚೆ ನಡೆಸಿದರು.

Latest Videos

ಚರ್ಚೆ ವೇಳೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳಿವೆ. ವಿಧಾನಸಭೆ ನಂತರ ರಾಜ್ಯದಲ್ಲೂ ಬಿಜೆಪಿ ಮತ್ತೆ ಅಧಿಕಾರ ಹಿಡಿಯಲಿದೆ. ಪಕ್ಷ ಸಂಘಟನೆ ಮತ್ತು ಜಿಲ್ಲೆಯ ಅಭಿವೃದ್ಧಿ ದೃಷ್ಠಿಯಿಂದ ಬಿಜೆಪಿ ಸೇರ್ಪಡೆಯಾಗುವಂತೆ ಸುಮಲತಾ ಮನವೊಲಿಸುವ ಪ್ರಯತ್ನ ನಡೆಸಿದರೆನ್ನಲಾಗಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿ.ಟಿ.ಶಂಕರ್‌, ಮಮತಾ ಶಂಕರೇಗೌಡ ಹಾಗೂ ಪ್ರಿಯಾಂಕ ಅಪ್ಪುಗೌಡ ಅವರು ತಮ್ಮ ಬೆಂಬಲಿಗರೊಂದಿಗೆ ಚರ್ಚೆ ನಡೆಸಿ ಮುಂದಿನ ಎರಡು ದಿನಗಳಲ್ಲಿ ಬಿಜೆಪಿ ಸೇರುವ ಬಗ್ಗೆ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದರು.

ಈ ವೇಳೆ ಬಿಜೆಪಿ ತಾಲೂಕು ಘಟಕದ ನೂತನ ಅಧ್ಯಕ್ಷ ಶಿವದಾಸ್‌ ಸತೀಶ್‌, ಜಿಪಂ ಮಾಜಿ ಸದಸ್ಯ ಬೋರಯ್ಯ, ಮನುಕುಮಾರ್‌ , ಮುಖಂಡರಾದ ಬೇಲೂರು ಸೋಮಶೇಖರ್‌, ಕೋಣಸಾಲೆ ಜಯರಾಮು, ಸಾದೊಳಲು ಮಹೇಶ… ಮತ್ತಿತರರಿದ್ದರು.

ಸ್ಟಾರ್ ವಾರ್ ಆಗುತ್ತಾ

ಮಂಡ್ಯ(ಏ.19): ಲೋಕಸಭಾ ಚುನಾವಣೆ ಬಳಿಕ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಅಂಬರೀಷ್‌ ನಡುವೆ ಮತ್ತೊಂದು ಸುತ್ತಿನ ರೋಚಕ ಹಣಾಹಣಿಗೆ ಮಂಡ್ಯ ಸಾಕ್ಷಿಯಾಗಲಿದೆ ಎಂಬ ಚರ್ಚೆ ಗರಿಗೆದರಿದೆ.

ಚನ್ನಪಟ್ಟಣದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಚ್‌.ಡಿ.ಕುಮಾರಸ್ವಾಮಿ ಮಂಡ್ಯ ವಿಧಾನಸಭಾ ಕ್ಷೇತ್ರದ ಹುರಿಯಾಳಾಗಿ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಏ.20ರಂದು ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಇದಕ್ಕಾಗಿ ಅವರು ಈಗಾಗಲೇ ಮಂಡ್ಯದಲ್ಲಿ ಬ್ಯಾಂಕ್‌ ಖಾತೆ ತೆರೆದಿದ್ದಾರೆ ಎಂಬ ಸುದ್ದಿ ಸಂಚಲನಕ್ಕೆ ಕಾರಣವಾಗಿದೆ. ಇದಕ್ಕೆ ಇಂಬು ನೀಡುವಂತೆ, ಮಂಡ್ಯ ಕ್ಷೇತ್ರಕ್ಕೆ ಜೆಡಿಎಸ್‌ ಅಭ್ಯರ್ಥಿ ಎಂದು ಘೋಷಿಸಲಾಗಿರುವ ಹಾಲಿ ಶಾಸಕ ಎಂ.ಶ್ರೀನಿವಾಸ್‌ ಅವರಿಗೆ ಈವರೆಗೂ ಜೆಡಿಎಸ್‌ ಬಿ ಫಾರಂ ಸಿಕ್ಕಿಲ್ಲ.

ಮಂಡ್ಯದಲ್ಲಿ ಹೆಚ್‌ಡಿಕೆ ಸೋಲಿಸಲು ಮೆಗಾ ಪ್ಲಾನ್: ಸುಮಲತಾ-ರಮ್ಯಾ ಕಣಕ್ಕೆ, ದಳಪತಿಗಳಿಗೆ ವಿರೋಧಿಗಳ ಶಾಕ್!

ಇದರ ಬೆನ್ನಲ್ಲೇ, ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧಿಸಿದರೆ ಅವರಿಗೆ ಟಕ್ಕರ್‌ ನೀಡಲು ಬಿಜೆಪಿ ಸಿದ್ಧತೆ ನಡೆಸಿದೆ. ಸಂಸದೆ ಸುಮಲತಾ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದ್ದು, ಇದಕ್ಕಾಗಿ ಈಗಾಗಲೇ ಸುಮಲತಾ ಅವರು ಅಗತ್ಯ ಸಿದ್ಧತೆ ಪ್ರಾರಂಭಿಸಿದ್ದಾರೆ. ಚುನಾವಣಾ ವೆಚ್ಚ ನಿರ್ವಹಣೆಗೆ ಬ್ಯಾಂಕ್‌ ಖಾತೆ ಕೂಡ ತೆರೆದಿದ್ದಾರೆ ಎಂದು ವರದಿಗಳು ತಿಳಿಸಿವೆ.

ಏತನ್ಮಧ್ಯೆ, ತಾವು ಮಂಡ್ಯದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ಸುಮಲತಾ ಅವರು ಮಂಡ್ಯದಿಂದ ಸ್ಪರ್ಧೆ ಮಾಡಿದರೆ ಸಾಮಾನ್ಯ ಕಾರ್ಯಕರ್ತ ಅಥವಾ ರೈತ ಮಹಿಳೆಯನ್ನು ಕಣಕ್ಕಿಳಿಸಿ ಗೆಲ್ಲಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ. ಚನ್ನಪಟ್ಟಣದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಖಾತೆ ತೆರೆದಿದ್ದು, ಅದರ ಮುಖ್ಯ ಕಚೇರಿ ಮಂಡ್ಯದಲ್ಲಿದೆ ಅಷ್ಟೆಎಂದು ಸ್ಪಷ್ಟಪಡಿಸಿದ್ದಾರೆ.

ಎಚ್‌ಡಿಕೆ ಮಂಡ್ಯ ಸ್ಪರ್ಧೆ ಸಂಚಲನ:

2018ರಲ್ಲಿ ಮಂಡ್ಯ ಜಿಲ್ಲೆಯಲ್ಲಿ 7ಕ್ಕೆ ಏಳೂ ಸ್ಥಾನವನ್ನು ಜೆಡಿಎಸ್‌ ಗೆದ್ದಿತ್ತು. ಮತ್ತೊಮ್ಮೆ ಅದೇ ರೀತಿಯ ಗೆಲುವನ್ನು ಪುನರಾವರ್ತಿಸುವ ಉದ್ದೇಶದಿಂದ ಕುಮಾರಸ್ವಾಮಿ ಈ ಬಾರಿ ಮಂಡ್ಯದಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಬಲವಾಗಿ ಹಬ್ಬಿದೆ. ಚುನಾವಣೆ ವೆಚ್ಚ ನಿರ್ವಹಣೆಗಾಗಿ ಮಂಡ್ಯದ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಖಾತೆಯನ್ನು ತೆರೆದಿದ್ದಾರೆ, ಅಲ್ಲದೆ ಮಂಡ್ಯದ ಖಾಸಗಿ ಹೋಟೆಲ್‌ನಲ್ಲಿ ಬೆಂಬಲಿಗರಿಗೆ ರೂಂ ಕೂಡ ಕಾದಿರಿಸಿದ್ದಾರೆ ಎನ್ನಲಾಗಿದೆ

click me!