ಬೆಳಗಾವಿ: ಕೊಕಟನೂರು ಜಾತ್ರೆಯಲ್ಲಿ ಪ್ರಾಣಿ ಬಲಿ ತಡೆಯಿರಿ, ಪೊಲೀಸರಿಗೆ ಅಧ್ಯಕ್ಷ ದಯಾನಂದ ಶ್ರೀ ಆಗ್ರಹ

By Kannadaprabha NewsFirst Published Jan 6, 2024, 8:18 PM IST
Highlights

ಧಾರ್ಮಿಕ ಹಾಗೂ ದೇವರ ಹೆಸರಿನಲ್ಲಿ ದೇವಸ್ಥಾನಗಳ ಆವರಣಗಳಲ್ಲಿ ವ್ಯವಸ್ಥಿತವಾಗಿ ಪ್ರಾಣಿ ಬಲಿ ಮಾಡಲಾಗುತ್ತಿದೆ. ಈ ಹಿನ್ನೆಯಲ್ಲಿ ಕಳೆದ ಹಲವು ವರ್ಷಗಳಿಂದ ಪ್ರಾಣಿ ಬಲಿ ನಿಷೇಧ ಹಾಗೂ ಜಾಗೃತಿಗಾಗಿ ಶ್ರಮಿಸಲಾಗುತ್ತಿದೆ ಎಂದು ತಿಳಿಸಿದ ದಯಾನಂದ ಸ್ವಾಮೀಜಿ

ಬೆಳಗಾವಿ(ಜ.06):  ಜಾತ್ರೆ, ಸಭೆ, ಸಮಾರಂಭಗಳಲ್ಲಿ ಮಾಡಲಾಗುತ್ತಿರುವ ಪ್ರಾಣಿ ಬಲಿಯನ್ನು ತಡೆಯಲು ಆಯಾ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ವಿಶ್ವಪ್ರಾಣಿ ಕಲ್ಯಾಣ ಮಂಡಳಿ, ಬಸವ ಧರ್ಮ ಜ್ಞಾನಪೀಠ ಮತ್ತು ಪಶು ಪ್ರಾಣಿ ಬಲಿ ನಿರ್ಮೂಲನಾ ಜಾಗೃತಿ ಮಹಾಸಂಘದ ಅಧ್ಯಕ್ಷ ದಯಾನಂದ ಸ್ವಾಮೀಜಿ ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರ್ಮಿಕ ಹಾಗೂ ದೇವರ ಹೆಸರಿನಲ್ಲಿ ದೇವಸ್ಥಾನಗಳ ಆವರಣಗಳಲ್ಲಿ ವ್ಯವಸ್ಥಿತವಾಗಿ ಪ್ರಾಣಿ ಬಲಿ ಮಾಡಲಾಗುತ್ತಿದೆ. ಈ ಹಿನ್ನೆಯಲ್ಲಿ ಕಳೆದ ಹಲವು ವರ್ಷಗಳಿಂದ ಪ್ರಾಣಿ ಬಲಿ ನಿಷೇಧ ಹಾಗೂ ಜಾಗೃತಿಗಾಗಿ ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.

ಬೆಳಗಾವಿ: ಅಂಗನವಾಡಿ ಸಹಾಯಕಿ ಮೂಗು ಕತ್ತರಿಸಿದವ ಸೆರೆ

ಜ.6 ರಿಂದ ಜ.11 ರವರೆಗೆ ಅಥಣಿ ತಾಲೂಕಿನ ಕೊಕಟನೂರು ಎಲ್ಲಮ್ಮದೇವಿ ಜಾತ್ರೆ ನಡೆಯಲಿದೆ. ಈ ಜಾತೆಗೆ ಕರ್ನಾಟಕ, ಮಹಾರಾಷ್ಟ್ರ, ಗೋವಾ ಮುಂತಾದ ಕಡೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ದೇವಿಗೆ ಪೂಜಾ, ಧಾರ್ಮಿಕ ಕೈಂಕರ್ಯಗಳನ್ನು ಸಲ್ಲಿಸಲಿದ್ದಾರೆ. ಈ ಸಮಯದಲ್ಲಿ ಸಾವಿರಾರು ಭಕ್ತರು ದೇವರು ಮತ್ತು ಧರ್ಮದ ಹೆಸರಿನಲ್ಲಿ ಹರಕೆಯ ರೂಪದಲ್ಲಿ ಸಹಸ್ರಾರು ಆಡು, ಕುರಿ, ಕೋಳಿ, ಕೋಣ ಮುಂತಾದ ಪ್ರಾಣಿಗಳನ್ನು ಬಲಿ ನೀಡಲಿದ್ದಾರೆ. ಜಾತ್ರೆ ಹಾಗೂ ಇನ್ನಿತರೆ ದಿನಗಳಲ್ಲಿ ಪಾಣಿ ಬಲಿಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕು ಹಾಗೂ ಪ್ರಾಣಿಗಳನ್ನು ಜಾತ್ರಾ ಪರಿಸರಕ್ಕೆ ಬಾರದಂತೆ ದೂರದಲ್ಲಿಯೇ ತಡೆಯಬೇಕು ಎಂದು ಜಿಲ್ಲಾಡಳಿತ, ಅಥಣಿ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆಗೆ ಒತ್ತಾಯಿಸಿದರು.

1959ರ ಕರ್ನಾಟಕ ಪ್ರಾಣಿ ಬಲಿಗಳ ಪ್ರತಿಬಂಧಕ ಅಧಿನಿಯಮ- ಕಾನೂನಿನ ಪ್ರಕಾರ ಕರ್ನಾಟಕದಲ್ಲಿ ದೇವರು-ಧರ್ಮದ ಹೆಸರಿನಲ್ಲಿ, ಹರಕೆಯ ರೂಪದಲ್ಲಿ ಜಾತ್ರಾ ಪರಿಸರಗಳು, ಧಾರ್ಮಿಕ ಸಮಾವೇಶಗಳು, ಹೊಲ ಗದ್ದೆಗಳು, ಸಾರ್ವಜನಿಕ ಪ್ರದೇಶ, ದೇವಾಲಯದ ಒಳಗೆ-ಹೊರಗೆ, ಪ್ರಾಂಗಣ, ಸುತ್ತ-ಮುತ್ತಲಿನ ಪ್ರದೇಶಗಳು, ರಸ್ತೆಗಳು ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಮತ್ತು ಮೆರವಣಿಗೆಯ ಹಿಂದೆ-ಮುಂದೆ ಎಲ್ಲಿಯೂ ಯಾರೂ ಕುರಿ, ಕೋಳಿ, ಕೋಣ, ಆಡು ಮೊದಲಾದ ಯಾವುದೇ ವಯಸ್ಸಿನ ಯಾವುದೇ ಪ್ರಾಣಿಗಳ ಬಲಿಕೊಡುವುದು, ಹತ್ಯೆಮಾಡುವುದು ನಿಷೇಧಿಸಲ್ಪಟ್ಟಿದೆ. ಇದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯವು ರಾಜ್ಯದಲ್ಲಿ ಎಲ್ಲಿಯೇ ಪ್ರಾಣಿ ಬಲಿ ನಡೆಯುವುದು ಕಂಡು ಬಂದರೇ ಅಥವಾ ಪ್ರಾಣಿ ಬಲಿ ನಡೆಯಲಿದೆ ಎಂಬ ಮಾಹಿತಿ ಬಂದರೇ ಅದನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕು ಹಾಗೂ ಕಾನೂನು ಉಲ್ಲಂಘಿಸಿ ಪ್ರಾಣಿ ಬಲಿ ನೀಡಿದ್ದೇ ಆದಲ್ಲಿ ಅವರ ವಿರುದ್ಧ ಕಾನೂನು ಪ್ರಕಾರ ಶಿಕ್ಷಾ ಕ್ರಮಕೈಗೊಳ್ಳಬೇಕು ಹಾಗೂ ಪ್ರಾಣಿ ಬಲಿ ತಡೆ ಜಾಗೃತಿಗಾಗಿ ವ್ಯಾಪಕ ಪ್ರಚಾರ ಕಾರ್ಯಗಳನ್ನು ಕೈಗೊಳ್ಳಬೇಕು. ಈ ದಿಸೆಯಲ್ಲಿ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮೊದಲಾದ ಸಂಘಟನೆಗಳನ್ನು ಜಾಗೃತಿ ಮೂಡಿಸಲು ಬಳಸಿಕೊಳ್ಳಬೇಕೆಂದು ಆದೇಶವನ್ನು ನೀಡಿದೆ ಎಂದು ವಿವರಿಸಿದರು.

ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ಸಲ್ಲದು: ಪೆದ್ದಿಮಠದ ಜ್ಞಾನಪ್ರಕಾಸ ಶ್ರೀ

ಅಥಣಿ ತಾಲೂಕಿನ ಕೊಕಟನೂರು ಎಲ್ಲಮ್ಮದೇವಿ ಜಾತ್ರೆಯಲ್ಲಿ ಮತ್ತು ಇನ್ನಿತರೆ ದಿನಗಳಲ್ಲಿ ಯಾವುದೇ ಪ್ರಾಣಿಗಳ ಬಲಿ, ಹತ್ಯೆ ನಡೆಯದಂತೆ ಮುಂಜಾಗೃತಾ ಕ್ರಮಕೈಗೊಂಡು, ಸೂಕ್ತ ಬಂದೋಬಸ್ತ್ ಮಾಡಿ ಸಂಪೂರ್ಣವಾಗಿ ಪ್ರಾಣಿ ಬಲಿಯನ್ನು ಕಟ್ಟುನಿಟ್ಟಾಗಿ ತಡೆಯಬೇಕು. ಒಂದು ವೇಳೆ ಪ್ರಾಣಿ ಬಲಿ ತಡೆಯುವಲ್ಲಿ ಜಿಲ್ಲಾಡಳಿತ ಸರ್ಕಾರ ಮತ್ತು ಪೊಲೀಸ್ ಇಲಾಖೆ ಮುಂದಾಗದಿದ್ದಲ್ಲಿ ನ್ಯಾಯಾಂಗ ನಿಂದನೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಭಕ್ತಾದಿಗಳು ಪ್ರಾಣಿ ಬಲಿ, ಜೀವ ಹಿಂಸೆ ತ್ಯಜಿಸಿ, ಸಾತ್ವಿಕ ಅಹಿಂಸಾತಕ ಪೂಜಾ ಕೈಂಕರ್ಯಗಳನ್ನು ಕೈಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಭಕ್ತರ ಮತ್ತು ಜಾತ್ರಾ ಹಾಗೂ ದೇವಾಲಯ ಸಮಿತಿಯವರ ಮನವೊಲಿಸಲು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಪ್ರಾಣಿ ಬಲಿ ನಿರ್ಮೂಲನಾ ಜಾಗೃತಿ ಮಹಾಸಂಘ ಹಾಗೂ ಬಸವ ಧರ್ಮ ಜಾನಪೀಠದ ನೇತೃತ್ವದಲ್ಲಿ ಜಾತ್ರೆ ಮುಗಿಯುವರೆಗೂ ಕೊಕಟನೂರು ಸೇರಿದಂತೆ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ಅಹಿಂಸಾ ಪ್ರಾಣಿದಯಾ-ಅಧ್ಯಾತ್ಮ ಸಂದೇಶ ಯಾತ್ರೆ ಕೈಗೊಂಡು ಭಕ್ತರಲ್ಲಿ ಪ್ರಾಣಿ ಬಲಿ ತಡೆ ಬಗ್ಗೆ ಜಾಗೃತಿ ಮೂಡಿಸಲಿದೆ. ಈ ಯಾತ್ರೆಗೆ ಸೂಕ್ತ ಪೊಲೀಸ್‌ ರಕ್ಷಣೆ ನೀಡಬೇಕು ಎಂದು ವಿಶ್ವಪ್ರಾಣಿ ಕಲ್ಯಾಣ ಮಂಡಳಿ, ಬಸವ ಧರ್ಮ ಜ್ಞಾನಪೀಠ ಮತ್ತು ಪಶು ಪ್ರಾಣಿ ಬಲಿ ನಿರ್ಮೂಲನಾ ಜಾಗೃತಿ ಮಹಾಸಂಘದ ಅಧ್ಯಕ್ಷ ದಯಾನಂದ ಸ್ವಾಮೀಜಿ ತಿಳಿಸಿದ್ದಾರೆ.  

click me!