Hijab Row: ಹಿಜಾಬ್‌-ಕೇಸರಿ ಶಾಲು ಗಲಾಟೆ ಮೂರ್ಖತನದ್ದು: ಹೊರಟ್ಟಿ

By Kannadaprabha NewsFirst Published Feb 11, 2022, 4:09 AM IST
Highlights

*  ಕೂಡಲೇ ಶಾಂತಿ ವಾತಾವರಣ ಸೃಷ್ಟಿಸದೇ ಹೋದಲ್ಲಿ ಹೆಣಗಳು ಬೀಳಬಹುದು
*  ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ವಿಪ ಸಭಾಪತಿ ಬಸವರಾಜ ಹೊರಟ್ಟಿ
*  ಸಮುದ್ರ ತೀರದಲ್ಲಿ ಬಿಕಿನಿ ಹಾಕಿಕೊಂಡರೆ ಯಾರಾದರೂ ಪ್ರಶ್ನಿತ್ತಾರೆಯೇ? 
 

ಧಾರವಾಡ(ಫೆ.11):  ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್‌-ಕೇಸರಿ ಶಾಲು ಗಲಾಟೆಯಿಂದ ಯಾವುದೇ ಪ್ರಯೋಜನವಿಲ್ಲ. ಇದು ಷಡ್ಯಂತ್ರವಲ್ಲ, ಮೂರ್ಖತನ. ಇದರಿಂದ ಹೆಣಗಳು ಬೀಳುತ್ತವೆ, ಬೆಂಕಿ ಹತ್ತುತ್ತದೆ ಅಷ್ಟೇ. ಕೂಡಲೇ ರಾಜ್ಯ ಸರ್ಕಾರ ಪರಿಣಿತರ ಸಭೆ ಕರೆದು ಮನವೊಲಿಸುವ ಮೂಲಕ ಶಾಂತಿಯುತ ವಾತಾವರಣ ಸೃಷ್ಟಿಬೇಕೆಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ(Basavaraj Horatti) ಕಿವಿಮಾತು ಹೇಳಿದ್ದಾರೆ.

ಕರ್ನಾಟಕ ವಿವಿ ನೌಕರರ ಅನಿರ್ದಿಷ್ಟಾವಧಿ ಹೋರಾಟಕ್ಕೆ ಬೆಂಬಲ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳ ಮನಸ್ಸು ಮೃದು ಇರುತ್ತದೆ. ಈಗ ನಡೆಯುತ್ತಿರುವ ಪ್ರಕರಣದಿಂದ ಅವರ ಭವಿಷ್ಯಕ್ಕೆ ಅಪಾಯಕಾರಿಯಾಗಿದೆ. ಈ ಬಗ್ಗೆ ಅವರವರ ಪಾಲಕರು ಯೋಚನೆ ಮಾಡಬೇಕು ಎಂದರು.

Latest Videos

Hijab Controversy: ದೇಶ ಮುಖ್ಯವೋ, ಧರ್ಮ ಮುಖ್ಯವೋ: ಮದ್ರಾಸ್‌ ಹೈಕೋರ್ಟ್‌

ಒಂದು ಕಡೆ ಪಾಕ್‌ ಜಿಂದಾಬಾದ್‌, ಅಲ್ಲಾಹೋ ಅಕ್ಬರ್‌ ಎಂಬ ಘೋಷಣೆ ಕೂಗುತ್ತಾರೆ, ಮತ್ತೊಂದು ಕಡೆಯವರು ಜೈ ಶ್ರೀರಾಮ್‌ ಎಂಬ ಘೋಷಣೆಗಳು ಮೊಳಗುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಹೆಣಗಳು ಬೀಳುವ ಸ್ಥಿತಿ ನಿರ್ಮಾಣವಾಗುತ್ತದೆ. ಈ ವಿಷಯದಲ್ಲಿ ನ್ಯಾಯಾಲಯ(Court) ಏನೇ ತೀರ್ಪು ನೀಡಿದರೂ ಸರ್ಕಾರ ಕೂಡಲೇ ಅದನ್ನು ಜಾರಿ ಮಾಡಿ ಶಾಂತಿ ವಾತಾವರಣ ಸೃಷ್ಟಿಸಬೇಕು. ಜತೆಗೆ ರಾಜ್ಯ ಸರ್ಕಾರ(Government of Karnataka) ಕೂಡಲೇ ರಾಜಕೀಯ ಬಿಟ್ಟು ಪರಿಣಿತರ ಸಭೆ ಕರೆಯಬೇಕು. ಈ ಗಲಾಟೆ ಬರುವ ದಿನಗಳಲ್ಲಿ ರಾಷ್ಟ್ರವ್ಯಾಪಿ ವಿಸ್ತಾರವಾಗುತ್ತದೆ. ಆದ್ದರಿಂದ ವಿಧಾನಸಭೆ ಅಧಿವೇಶನಕ್ಕೂ ಮುಂಚೆ ಇದನ್ನು ನಿಲ್ಲಿಸಬೇಕೆಂದು ಹೊರಟ್ಟಿ ಆಗ್ರಹಿಸಿದರು.

ಬಿಕಿನಿ ಧರಿಸಿದರೂ ತಪ್ಪಲ್ಲ ಎಂದು ಪ್ರಿಯಾಂಕಾ ಗಾಂಧಿ(Priyanka Gandhi) ಟ್ವೀಟ್‌ಗೆ, ಇಂತಹ ಹೇಳಿಕೆಗಳು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೇಳುತ್ತಾರೆ. ಯಾರೇ ಇದ್ದರೂ ಎಂತಹ ಬಟ್ಟೆ ಧರಿಸಬೇಕೆಂದು ಅವರವರ ತಂದೆ-ತಾಯಿ ಕಲಿಸಬೇಕು. ಪ್ರಿಯಾಂಕಾ ಅವರು ತಾಯಿ ಸ್ಥಾನದಲ್ಲಿದ್ದಾರೆ. ಬಿಕಿನಿ ಹಾಕಿಕೊಂಡು ಹೋಗಿ ಎನ್ನುವುದು ತಪ್ಪಾಗುತ್ತದೆ. ಹಕ್ಕಿದೆ ಎಂದ ಮಾತ್ರಕ್ಕೆ ಕಾಲೇಜಿಗೆ ಬಿಕಿನಿ ಹಾಕಿಕೊಂಡು ಹೋಗು ಎನ್ನುವುದಲ್ಲ. ಯಾವ ಸ್ಥಳದಲ್ಲಿ ಏನು ಧರಿಸಬೇಕು ಎನ್ನುವುದು ಮುಖ್ಯವಾಗುತ್ತದೆ. ಸಮುದ್ರ ತೀರದಲ್ಲಿ ಬಿಕಿನಿ ಹಾಕಿಕೊಂಡರೆ ಯಾರಾದರೂ ಪ್ರಶ್ನಿತ್ತಾರೆಯೇ? ಎಂದು ಹೊರಟ್ಟಿ ಪ್ರಶ್ನಿಸಿದರು.

ಸರ್ವಪಕ್ಷ, ಪಾಲಕರ ಸಭೆ ಕರೆಯಿರಿ

ಹುಬ್ಬಳ್ಳಿ: ರಾಜ್ಯದಲ್ಲಿ(Karnataka) ಭುಗಿಲೆದ್ದಿರುವ ಹಿಜಾಬ್‌(Hijab), ಕೇಸರಿ(Saffron) ಶಾಲಿನ ವಿವಾದದ ಕುರಿತಂತೆ ರಾಜ್ಯ ಸರ್ಕಾರ ಕೂಡಲೇ ಸರ್ವ ಪಕ್ಷಗಳ ಹಾಗೂ ಪಾಲಕರ ಸಭೆ ಕರೆಯಬೇಕು. ಈ ಮೂಲಕ ರಾಜ್ಯದ ವಾತಾವರಣ ತಿಳಿಗೊಳಿಸಬೇಕೆಂದು ವಿಪ ಸಭಾಪತಿ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರಿಗೆ ಪತ್ರ ಬರೆದಿರುವ ಅವರು, ಕೂಡಲೇ ಹಿಜಾಬ್‌ ಹಾಗೂ ಕೇಸರಿ ಶಾಲಿನ ವಿವಾದ ಬಗೆಹರಿಸಬೇಕೆಂದು ಮನವಿ ಮಾಡಿದ್ದಾರೆ. ಈ ವಿವಾದದ ಕುರಿತಂತೆ ಹೈಕೋರ್ಟ್‌ಲ್ಲಿ ವಿಚಾರಣಾ ಹಂತದಲ್ಲಿದೆ. ನ್ಯಾಯಾಲಯ ತನ್ನ ತೀರ್ಪು ನೀಡುತ್ತದೆ. ನಾವು ನ್ಯಾಯಾಲಯದ ತೀರ್ಪಿನ ಮೇಲೆ ನಂಬಿಕೆ ಇಡಬೇಕಾಗುತ್ತದೆ. ಆದರೆ ಈ ವಿವಾದದಿಂದ ಮಕ್ಕಳ ಮನಸಿನ ಮೇಲೆ ಉಂಟಾಗುವ ದ್ವೇಷ, ಸಿಟ್ಟು ಮನಸಿನಲ್ಲೇ ಉಳಿಯಬಹುದು. ಅದು ಮುಂದೆ ಒಂದು ದಿನ ಯಾವಾಗ ಸ್ಫೋಟಗೊಳ್ಳಬಹುದು. ಆದಕಾರಣ ಮುಂದಾಲೋಚನೆಯಿಅದ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಂಡು ಶಾಂತಿ ಕಾಪಾಡಬೇಕಿದೆ ಎಂದು ತಿಳಿಸಿದ್ದಾರೆ.

Hijab Controversy ಕೇರಳದ ಮುಸ್ಲಿಂ ಶಿಕ್ಷಣ ಸಂಸ್ಥೆಯ ಎಲ್ಲಾ 150 ಶಾಲಾ ಕಾಲೇಜಿನಲ್ಲಿ ಹಿಬಾಜ್ ಬ್ಯಾನ್!

ತಂದೆ-ತಾಯಿಗಳು ರಾಜಕೀಯ(Politics) ದೂರವಿಟ್ಟು ತಮ್ಮ ಮಕ್ಕಳಿಗೆ ಜವಾಬ್ದಾರಿಯಿಂದ ಇರುವಂತೆ ಮಾರ್ಗದರ್ಶನ ಮಾಡಬೇಕು. ಇಲ್ಲದಿದ್ದರೆ ಶಾಲಾ-ಕಾಲೇಜುಗಳು ರಣರಂಗವಾಗಿ ಮಾರ್ಪಾಡಾಗುವ ಮುನ್ಸೂಚನೆಗಳು ಕಂಡು ಬರುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇದರೊಂದಿಗೆ ಸರ್ಕಾರ ಕೂಡ ಈ ಬಗ್ಗೆ ಕೂಡಲೇ ಸರ್ವಪಕ್ಷಗಳ ಮುಖಂಡರ ಹಾಗೂ ಪಾಲಕರ ಸಭೆ ಕರೆದು ಚರ್ಚಿಸಿ ಸೌಹಾರ್ದಯುತವಾಗಿ ಈ ಸಮಸ್ಯೆ ಬಗೆಹರಿಸಬೇಕು. ಶಾಂತಿಯುತ ಸಮಾಧಾನಕರ ದಾರಿ ಹುಡುಕಿ ರಾಜ್ಯದಲ್ಲಿ ಒಳ್ಳೆಯ ವಾತಾವರಣ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
 

click me!