ರಾಮಮಂದಿರ ನಿರ್ಮಾಣಕ್ಕೆ ಸಿದ್ಧಗಂಗಾ ಮಠದ ಮಣ್ಣು..!

By Kannadaprabha NewsFirst Published Jul 26, 2020, 10:31 AM IST
Highlights

ಆಯೋಧ್ಯೆಯಲ್ಲಿ ಆಗಸ್ಟ್‌ 15 ರಂದು ನಡೆಯಲಿರುವ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ತುಮಕೂರು ಜಿಲ್ಲೆಯ ನಾಲ್ಕು ಸ್ಥಳಗಳಿಂದ ಮಣ್ಣನ್ನು ಕೊಂಡೊಯ್ಯಲಾಗುತ್ತಿದೆ.

ತುಮಕೂರು(ಜು.26): ಆಯೋಧ್ಯೆಯಲ್ಲಿ ಆಗಸ್ಟ್‌ 15 ರಂದು ನಡೆಯಲಿರುವ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ತುಮಕೂರು ಜಿಲ್ಲೆಯ ನಾಲ್ಕು ಸ್ಥಳಗಳಿಂದ ಮಣ್ಣನ್ನು ಕೊಂಡೊಯ್ಯಲಾಗುತ್ತಿದೆ.

ತುಮಕೂರಿನ ಸಿದ್ಧಗಂಗಾ ಮಠ, ಯಡಿಯೂರು ಸಿದ್ಧಲಿಂಗೇಶ್ವರ, ನಾಮದ ಚಿಲುಮೆ(ದೇವರಾಯನದುರ್ಗ) ಹಾಗೂ ಸಿದ್ದರಬೆಟ್ಟದಿಂದ ಮಣ್ಣನ್ನು ಆಯೋಧ್ಯೆಗೆ ಕಳುಹಿಸಲಾಗುತ್ತಿದೆ. ದೇಶಾದ್ಯಂತ ಹಲವಾರು ಪುಣ್ಯ ಕ್ಷೇತ್ರಗಳಿಂದ ಮಣ್ಣನ್ನು ಹಿಂದೂಪರ ಸಂಘಟನೆಗಳು ಸಂಗ್ರಹಿಸುತ್ತಿದ್ದು ಇದರ ಭಾಗವಾಗಿ ತುಮಕೂರಿನ ಈ ನಾಲ್ಕು ಕ್ಷೇತ್ರಗಳಿಂದ ಮಣ್ಣನ್ನು ಕೊಂಡೊಯ್ಯಲಾಗುತ್ತಿದೆ. ಈಗಾಗಲೇ ನಾಲ್ಕು ಕ್ಷೇತ್ರಗಳಿಂದ ಮಣ್ಣನ್ನು ಸಂಗ್ರಹಿಸಲಾಗಿದ್ದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಅವರು ಹಸ್ತಾಂತರಿಸಿದರು.

ಕ್ಷೇತ್ರದ ವಿಶೇಷತೆಗಳು:

ನಡೆದಾಡುವ ದೇವರು ಎಂದೇ ದೇಶಾದ್ಯಂತ ಗಮನಸೆಳೆದಿದ್ದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರು ಓಡಾಡಿದ ಪವಿತ್ರ ಕ್ಷೇತ್ರ ಸಿದ್ಧಗಂಗಾ ಮಠ. ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಮಠಕ್ಕೆ ಭೇಟಿ ನೀಡಿದ್ದರು. ಅಲ್ಲದೇ ಕಳೆದ ಫೆಬ್ರವರಿ ತಿಂಗಳಿನಲ್ಲಿ ತುಮಕೂರಿಗೆ ಆಗಮಿಸಿದ್ದ ಪ್ರಧಾನಿ ಅವರು ಲಿಂಗೈಕ್ಯ ಶ್ರೀಗಳ ಗದ್ದುಗೆ ದರ್ಶನ ಮಾಡಿದ್ದರು. ಸಹಸ್ರಾರು ಮಕ್ಕಳಿಗೆ ತ್ರಿವಿಧ ದಾಸೋಹ ನೀಡುತ್ತಿರುವ ಮಠ ಎಂಬ ಹೆಗ್ಗಳಿಕೆಯನ್ನು ಇದು ಹೊಂದಿದೆ.

ಕೊಪ್ಪಳ: ರಾಮಮಂದಿರ ನಿರ್ಮಾಣ, ಅಂಜನಾದ್ರಿ ಬೆಟ್ಟದಿಂದ ಶಿಲೆ, ಮಣ್ಣು, ಜಲ ಸಂಗ್ರಹ

ಇನ್ನು ನಾಮದ ಚಿಲುಮೆ ಬಗ್ಗೆ ಐತಿಹ್ಯ ಇದೆ. ಹಿಂದೆ ರಾಮ, ಲಕ್ಷ್ಮಣ, ಸೀತೆ ವನವಾಸದಲ್ಲಿದ್ದಾಗ ದೇವರಾಯನದುರ್ಗದಲ್ಲಿರುವ ನಾಮದ ಚಿಲುಮೆಗೆ ಬಂದಿದ್ದರಂತೆ. ಆಗ ರಾಮ ಹಣೆಗೆ ತಿಲಕ ಇಟ್ಟುಕೊಳ್ಳಲು ನೀರಿಗಾಗಿ ಹುಡುಕಾಡಿದನಂತೆ. ನೀರು ಸಿಗದೇ ಇದ್ದಾಗ ಅಲ್ಲೇ ಇದ್ದ ಬಂಡೆಗೆ ಲಕ್ಷ್ಮಣ ಬಾಣ ಹೂಡಿ ನೀರು ಚಿಮ್ಮಿಸಿದನಂತೆ. ಆ ನೀರಿನಿಂದಲೇ ರಾಮ ತಿಲಕ ಇಟ್ಟುಕೊಂಡಿದ್ದಕ್ಕೆ ನಾಮದ ಚಿಲುಮೆ ಎಂಬ ಹೆಸರು ಬಂದಿದೆ.

ರಾಮ ಮಂದಿರ ಶಿಲಾನ್ಯಾಸಕ್ಕೆ ಕಾವೇರಿ ತೀರ್ಥ, ಮಣ್ಣು ರವಾನೆ ..!

ಹೀಗಾಗಿ ಈ ಜಾಗದ ಮಣ್ಣನ್ನು ಕೂಡ ಆಯೋಧ್ಯೆಗೆ ಕಳುಹಿಸಲಾಗುತ್ತಿದೆ. ಇನ್ನು ಔಷಧಿ ಗುಣಗಳುಳ್ಳ ಕೂಡ ಸಿದ್ದರಬೆಟ್ಟಕೂಡ ಪವಿತ್ರ ಸ್ಥಳಗಳಲ್ಲಿ ಒಂದು. ರಾಮಾಯಣ ಕಾಲದಲ್ಲಿ ಆಂಜನೇಯ ಸಂಜೀವಿನ ಪರ್ವತ ಹೊತ್ತುಕೊಂಡು ಹೋಗುವಾಗ ಬಿದ್ದ ಒಂದು ತುಂಡೆ ಸಿದ್ದರಬೆಟ್ಟಎನ್ನುವ ಪ್ರತೀತಿ ಇದೆ. ಸಂಜೀವಿನ ಪರ್ವತದ ತುಂಡೇ ಸಿದ್ದರಬೆಟ್ಟಆಗಿರುವುದರಿಂದ ಈ ಜಾಗಕ್ಕೆ ಔಷಧೀಯ ಗುಣವಿದ್ದು ಈ ಕಾರಣಕ್ಕಾಗಿ ಇಲ್ಲಿಂದ ಮಣ್ಣನ್ನು ತೆಗೆದುಕೊಂಡು ಹೋಗಲಾಗುತ್ತಿದೆ. ಇನ್ನು ಯಡಿಯೂರು ಕೂಡ ಪುಣ್ಯ ಪುರುಷರು ನಡೆದಾಡಿದ ಜಾಗವಾಗಿದ್ದು ಇಲ್ಲಿಂದಲೂ ಕೂಡ ಮಣ್ಣನ್ನು ತೆಗೆದುಕೊಂಡು ಹೋಗಲಾಗುತ್ತಿದೆ.

ಶನಿವಾರ ಸಿದ್ಧಗಂಗಾ ಮಠದ ಆವರಣದಲ್ಲಿ ಈ ನಾಲ್ಕು ಕ್ಷೇತ್ರಗಳಿಂದ ಸಂಗ್ರಹಿಸಿದ್ದ ಮಣ್ಣನ್ನು ಹಿಂದುಪರ ಸಂಘಟನೆಗಳ ಪದಾಧಿಕಾರಿಗಳಿಗೆ ಸಿದ್ಧಲಿಂಗ ಸ್ವಾಮೀಜಿ ಹಸ್ತಾಂತರಿಸಿದರು.

ಮೋದಿಯಿಂದಲೇ ಆ.5ಕ್ಕೆ ಮಂದಿರಕ್ಕೆ ಭೂಮಿಪೂಜೆ ಶುಭಾರಂಭ!

ಈ ವೇಳೆ ವಿಶ್ವ ಹಿಂದೂ ಪರಿಷತ್‌ ಜಿಲ್ಲಾಧ್ಯಕ್ಷ ಜಿ.ಕೆ.ಶ್ರೀನಿವಾಸ್‌, ಮಂಜು ಭಾರ್ಗವ್‌, ಹಿಂದೂ ಜಾಗರಣಾ ವೇದಿಕೆಯ ಜಿ.ಎಸ್‌.ಬಸವರಾಜು, ನಾಗೇಂದ್ರ ಪ್ರಸಾದ್‌, ಕೋರಿ ಮಂಜುನಾಥ್‌, ಬಸವಕುಮಾರ್‌ ಮುಂತಾದವರಿದ್ದರು.

click me!