ಶಿವಮೊಗ್ಗ ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿನಿಯರಿಗೆ ಅಶ್ಲೀಲ ಮೆಸೇಜ್ ಕಳಿಸಿದ ಪ್ರೊಫೆಸರ್; NSUI ಪ್ರತಿಭಟನೆ

Published : Mar 23, 2026, 06:50 PM IST
Shivamogga Sahyadri College

ಸಾರಾಂಶ

ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರೊಫೆಸರ್, ವಿದ್ಯಾರ್ಥಿನಿಯರಿಗೆ ವಾಟ್ಸಪ್‌ನಲ್ಲಿ ಅಶ್ಲೀಲ ಸಂದೇಶ ಕಳುಹಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಕೃತ್ಯವನ್ನು ಖಂಡಿಸಿ NSUI ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

ಶಿವಮೊಗ್ಗ (ಮಾ.23): ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಪ್ರತಿಷ್ಠಿತ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸಿ ಬುದ್ಧಿ ಹೇಳಬೇಕಾದ ಪ್ರೊಫೆಸರ್ ಒಬ್ಬರು, ವಿದ್ಯಾರ್ಥಿನಿಯರಿಗೆ ವಾಟ್ಸಪ್‌ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಈ ಘಟನೆಯನ್ನು ಖಂಡಿಸಿ ಇಂದು ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (NSUI) ಕಾರ್ಯಕರ್ತರು ಕಾಲೇಜಿನ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದರು.

ಘಟನೆಯ ಹಿನ್ನೆಲೆ:

ಸಹ್ಯಾದ್ರಿ ಕಲಾ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಪ್ರೊ. ಮುದುಕಪ್ಪ ಎಂಬುವವರ ವಿರುದ್ಧ ಈ ಗಂಭೀರ ಆರೋಪ ಕೇಳಿಬಂದಿದೆ. ಆರೋಪಿತ ಪ್ರಾಧ್ಯಾಪಕರು ಕಳೆದ ಕೆಲವು ದಿನಗಳಿಂದ ಕಾಲೇಜಿನ ವಿದ್ಯಾರ್ಥಿನಿಯರಿಗೆ ವಾಟ್ಸಪ್ ಮೂಲಕ ಅತ್ಯಂತ ಅಶ್ಲೀಲ ಮತ್ತು ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸುತ್ತಿದ್ದರು ಎನ್ನಲಾಗಿದೆ. ಉಪನ್ಯಾಸಕನಾಗಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಪವಿತ್ರ ಜವಾಬ್ದಾರಿ ಹೊತ್ತಿದ್ದ ಮುದುಕಪ್ಪ, ಅದನ್ನು ಮರೆತು ತನ್ನ ಕಾಮದ ಬಯಕೆಗಳನ್ನು ತೀರಿಸಿಕೊಳ್ಳಲು ವಿದ್ಯಾರ್ಥಿನಿಯರನ್ನು ಬಳಸಿಕೊಳ್ಳಲು ಮುಂದಾಗಿದ್ದರು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಾಂಶುಪಾಲರ ವಿರುದ್ಧವೂ ಆಕ್ರೋಶ:

ನೊಂದ ವಿದ್ಯಾರ್ಥಿನಿಯರು ಈ ಹಿಂದೆಯೇ ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರಿಗೆ ಲಿಖಿತ ದೂರು ನೀಡಿದ್ದರು. ಆದರೆ, ಪ್ರಾಂಶುಪಾಲರು ಪ್ರಾಧ್ಯಾಪಕನ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದೆ, ಕೇವಲ ನೆಪಮಾತ್ರಕ್ಕೆ ತಿಳುವಳಿಕೆ ಪತ್ರ (Warning Letter) ನೀಡಿ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು NSUI ಜಿಲ್ಲಾಧ್ಯಕ್ಷ ವಿಜಯ್ ಆರೋಪಿಸಿದ್ದಾರೆ. ಆಡಳಿತ ಮಂಡಳಿಯ ಈ ಧೋರಣೆ ವಿದ್ಯಾರ್ಥಿನಿಯರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.

NSUI ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ:

ಪ್ರಾಧ್ಯಾಪಕನ ಕೃತ್ಯ ಮತ್ತು ಆಡಳಿತ ಮಂಡಳಿಯ ನಿರ್ಲಕ್ಷ್ಯವನ್ನು ಖಂಡಿಸಿ, NSUI ಜಿಲ್ಲಾಧ್ಯಕ್ಷ ವಿಜಯ್ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಸಹ್ಯಾದ್ರಿ ಕಲಾ ಕಾಲೇಜಿನ ಎದುರು ಜಮಾಯಿಸಿ ಘೋಷಣೆಗಳನ್ನು ಕೂಗಿದರು. ಪ್ರೊ. ಮುದುಕಪ್ಪ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯ ನಂತರ, ಕಾಲೇಜಿನ ಪ್ರಾಂಶುಪಾಲ ಸಿರಾಜ್ ಅಹಮದ್ ಅವರ ಮೂಲಕ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮನವಿಯಲ್ಲಿ ಪ್ರಾಧ್ಯಾಪಕನ ವಿರುದ್ಧ ಇಲಾಖಾ ತನಿಖೆ ನಡೆಸಿ, ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲಾಗಿದೆ.

ಎರಡು ದಿನಗಳ ಗಡುವು - ಬಂದ್ ಎಚ್ಚರಿಕೆ:

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ NSUI ಜಿಲ್ಲಾಧ್ಯಕ್ಷ ವಿಜಯ್, 'ಇನ್ನೊಂದು ಎರಡು ದಿನಗಳಲ್ಲಿ ಆರೋಪಿ ಪ್ರಾಧ್ಯಾಪಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಮೊದಲು ಸಹ್ಯಾದ್ರಿ ಕಾಲೇಜು ಬಂದ್ ಮಾಡಲಾಗುವುದು. ನಂತರ ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲಾ ಕಾಲೇಜುಗಳನ್ನು ಬಂದ್ ಮಾಡಿ ಉಗ್ರ ಹೋರಾಟ ರೂಪಿಸಲಾಗುವುದು. ಅಷ್ಟೇ ಅಲ್ಲದೆ, ಆರೋಪಿ ಪ್ರಾಧ್ಯಾಪಕ ಮುದುಕಪ್ಪ ನವರ ಮುಖಕ್ಕೆ ಮಸಿ ಬಳಿದು, ನಾವೇ ಪೊಲೀಸ್ ಠಾಣೆಗೆ ಕರೆದೊಯ್ಯುತ್ತೇವೆ' ಎಂದು ಎಚ್ಚರಿಕೆ ನೀಡಿದರು.

ಈ ಘಟನೆಯಿಂದಾಗಿ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ತೀವ್ರ ಆತಂಕ ಮನೆಮಾಡಿದೆ. ಶೈಕ್ಷಣಿಕ ದೇಗುಲದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಸಮಾಜ ತಲೆತಗ್ಗಿಸುವಂತಿದೆ. ವಿಶ್ವವಿದ್ಯಾಲಯ ಮತ್ತು ಪೊಲೀಸ್ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ವಿದ್ಯಾರ್ಥಿನಿಯರಿಗೆ ನ್ಯಾಯ ಒದಗಿಸಬೇಕಿದೆ.

PREV
Read more Articles on
click me!

Recommended Stories

ಸರ್ಕಾರ ಮೌನ, ದೇವ್ರೇ ಗತಿ ಎಂದು ನಾಯಿ ಹಾವಳಿಯಿಂದ ಮುಕ್ತಿ ಕೋರಿ ಬೆಂಗಳೂರಿಗರ ವಿಶೇಷ ಪೂಜೆ
ಕೊಲ್ಲಾಪುರ ಜ್ಯೋತಿಬಾ ದೇಗುಲದ ಅರ್ಚಕರಿಂದ ಹಲ್ಲೆ; ದೇವರ ಮುಂದೆ ಒಡೆಯುವ 'ತೆಂಗಿನಕಾಯಿ' ಭಕ್ತರ ತಲೆಗೆ ಹೊಡೆದರು!