ಬೀದರ್‌: ಶಿಕ್ಷಕರು ನಮ್ಮ ಅಂಗಾಂಗ ಮುಟ್ತಾರೆ, ವಿರೋಧಿಸಿದ್ರೆ ಹಾಲ್ ಟಿಕೆಟ್ ಕೊಡಲ್ಲ ಅಂತಾರೆ, ವಿದ್ಯಾರ್ಥಿನಿಯರ ಅಳಲು..!

By Kannadaprabha NewsFirst Published Sep 10, 2024, 9:17 AM IST
Highlights

ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಖುದ್ದಾಗಿ ಭೇಟಿ ಮಾಡಿ ವೈಯಕ್ತಿಕವಾಗಿ ವಿಚಾರಿಸಿದ್ದೇನೆ. ಊಟ, ವಸತಿ, ಶಿಕ್ಷಣದ ಬಗ್ಗೆ ಎಲ್ಲಾ ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಉತ್ತರ ನೀಡಿದ್ದಾರೆ. ಇಲ್ಲಿ ಯಾವುದೇ ತರಹದ ಅವ್ಯವಸ್ಥೆ ಕಂಡು ಬಂದಿಲ್ಲ. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಭೇಟಿ ನೀಡಲು ತಿಳಿಸುತ್ತೇನೆ. ಅಂತಹ ಅವ್ಯವಸ್ಥೆ ಏನಾದರೂ ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸುತ್ತೇನೆ ಎಂದ ಸಚಿವ ಈಶ್ವರ ಖಂಡ್ರೆ 
 

ಬೀದರ್(ಸೆ.10): 'ಶಿಕ್ಷಕರು ಇಲ್ಲಿ ನಮ್ಮನ್ನು ಅಸಹ್ಯವಾಗಿ ನೋಡ್ತಾರೆ, ಅಂಗಾಗಗಳನ್ನು ಮುತ್ತಾರೆ. ವಿರೋಧಿಸಿದ್ರೆ ಹಾಲ್ ಟಿಕೆಟ್‌ ಕೊಡೋಲ್ಲ ಎಂದು ಹೆದರಿಸ್ತಾರೆ. ಹಿಂಗಾಗಿ ಹೆದರಿ ಸುಮ್ಮನಿದ್ದೇವಿ. ಅವರ ಟಾರ್ಚರ್ ನೋಡಿದಾಗ ನಾವು ಸಾಯ್ಕಕು ಅನ್ನಿಸ್ತಿದೆ. ಆದರೆ, ಮಮ್ಮಿ, ಪಾಪಾ ನೆನಪಾಗಿ ಸುಮ್ಮನಾಗ್ತಿವಿ. ಇಲ್ಲಿನ ಸರ್‌ಗಳನ್ನು ತೆಗೆದುಹಾಕಿ ಪುಣ್ಯ ಕಟ್ಟೋಳ್ಳಿ. ಈ ನರಕದಿಂದ ನಮ್ಮನ್ನು ಪಾರು ಮಾಡ್ರಿ'. ಈ ರೀತಿ ಅಂಗಲಾಚಿದ್ದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ತವರು ಕ್ಷೇತ್ರ ಜಿಲ್ಲೆಯ ಭಾಲ್ಕಿ ತಾಲೂಕಿನ ಕೋನಮೇಳ ಕುಂದಾ ಮೊರಾರ್ಜಿ ವಸತಿ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯರು. 

'ಕನ್ನಡಪ್ರಭ' ಸಹೋದರ ಸಂಸ್ಥೆ 'ಸುವರ್ಣ ನ್ಯೂಸ್' ಎದುರು ಈ ಮಕ್ಕಳು ಅಂಗಲಾಚಿದ್ದು, ವರದಿ ಬಿತ್ತರಗೊಳ್ಳುತ್ತಿದ್ದಂತೆ ಸಚಿವರು ಸೋಮವಾರ ಶಾಲೆಗೆ ಭೇಟಿ ನೀಡಿದರು. 'ಇತ್ತೀಚೆಗಷ್ಟೇ ಹುಮನಾಬಾದ್ ತಾಲೂಕಿನ ವಸತಿ ಶಾಲೆಯೊಂದರಲ್ಲಿ ಪೋಕೋ ಕಾಯ್ದೆಯಡಿ ಬಂಧಿತರಾಗಿ ಜಾಮೀನಿನ ಮೇಲೆ ಹೊರ ಬಂದಿರು ವವರೇ ಇಲ್ಲಿನ ಪ್ರಾಂಶುಪಾಲರಾಗಿದ್ದಾರೆ. ವಸತಿ ಶಾಲೆಯ ಪ್ರಿನ್ಸಿಪಾಲ್, ವಾರ್ಡನ್, ಹಿಂದಿ, ಕನ್ನಡ, ಇಂಗ್ಲೀಷ್ ಭಾಷಾ ಶಿಕ್ಷಕರ ದೌರ್ಜನ್ಯ, ಕಿರುಕುಳ ಸಹಿಸಿಕೊಂಡೇ ಅಭ್ಯಾಸ ಮಾಡ್ತಿದ್ದೇವೆ. ಏನಾದ್ರೂ ಪ್ರಶ್ನೆ ಮಾಡಿದರೆ ಹಾಲ್ ಟಿಕೆಟ್ ಕೊಡೋಲ್ಲ ಎಂದು ಧಮ್ಮಿ ಹಾಕ್ತಾರೆ. ಪ್ರಾಂಶುಪಾಲರು ಹಾಗೂ ಶಿಕ್ಷಕರು ಮೈಮುಟ್ಟಿ ಅಸಭ್ಯ ವರ್ತನೆ ತೋರ್ತಾರೆ. ಪಾಠ ಮಾಡೋದಕ್ಕಿಂತ ಮಾತೇ ಹೆಚ್ಚಿರುತ್ತವೆ. ಕೆಳಗಿನಿಂದ ಮೇಲಿನವರೆಗೆ ಅಸಭ್ಯವಾಗಿ ನೋಡ್ತಾರೆ.ಸರಿಯಾಗಿ ಊಟ ನೀಡಲ್ಲ, ಶುದ್ದ ಕುಡಿಯುವ ನೀರು ಕೊಡಲ್ಲ. ಆಶುದ್ಧ ನೀರು ಕುಡಿದು ಚರ್ಮರೋಗಕ್ಕೆ ತುತ್ತಾಗುತ್ತಿದ್ದೇವೆ. ಔಷಧಿ ಕೇಳಿದರೆ ಡೇಟ್ ಮುಗಿದೆ ಔಷಧಿಗಳನ್ನು ಕೊಡುತ್ತಾರೆ' ಎಂದು ಇಲ್ಲಿನ ವಿದ್ಯಾರ್ಥಿನಿಯರು ಮಾಧ್ಯಮದೆದುರು ತೋಡಿಕೊಂಡಿದ್ದಾರೆ. 

Latest Videos

ಹೆಣ್ಣುಮಕ್ಕಳಿಗೆ ರಾಜ್ಯ ಸೇಫಾ? ಹುಬ್ಬಳ್ಳಿಯ ನೇಹಾ, ಅಂಜಲಿ ಕೊಲೆ ಬಳಿಕ ಬೀದರ್‌ನಲ್ಲಿ ಭಾಗ್ಯಶ್ರೀಯ ಭೀಕರ ಮರ್ಡರ್‌!

ವರದಿ ಹಿನ್ನೆಲೆಯಲ್ಲಿ ವಸತಿ ಶಾಲೆಗೆ ಭೇಟಿ ನೀಡಿದ ಸಚಿವರು, ಪರಿಶೀಲನೆ ನಡೆಸಿದರು. ಬಳಿಕ, ಸುದ್ದಿಗಾರರ ಜೊತೆ ಮಾತನಾಡಿ, ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಖುದ್ದಾಗಿ ಭೇಟಿ ಮಾಡಿ ವೈಯಕ್ತಿಕವಾಗಿ ವಿಚಾರಿಸಿದ್ದೇನೆ. ಊಟ, ವಸತಿ, ಶಿಕ್ಷಣದ ಬಗ್ಗೆ ಎಲ್ಲಾ ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಉತ್ತರ ನೀಡಿದ್ದಾರೆ. ಇಲ್ಲಿ ಯಾವುದೇ ತರಹದ ಅವ್ಯವಸ್ಥೆ ಕಂಡು ಬಂದಿಲ್ಲ. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಭೇಟಿ ನೀಡಲು ತಿಳಿಸುತ್ತೇನೆ. ಅಂತಹ ಅವ್ಯವಸ್ಥೆ ಏನಾದರೂ ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸುತ್ತೇನೆ ಎಂದರು.

click me!