ಪತ್ರಕರ್ತ ನೀಲೂರೆ ಆತ್ಮ*ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಡೆತ್ ನೋಟ್‌ನಲ್ಲಿ ಪತ್ರಕರ್ತರು ಸೇರಿ ಹಲವರ ಹೆಸರು!

Published : Feb 02, 2026, 02:09 PM IST
Prabhuling Nilure

ಸಾರಾಂಶ

ಕಲಬುರಗಿಯ ಹಿರಿಯ ಪತ್ರಕರ್ತ ಪ್ರಭುಲಿಂಗ ನೀಲೂರೆ ಅವರ ಆತ್ಮಹತ್ಯೆ ಪ್ರಕರಣವು ಡೆತ್ ನೋಟ್ ಪತ್ತೆಯಾಗುವುದರೊಂದಿಗೆ ಹೊಸ ತಿರುವು ಪಡೆದಿದೆ. ತಮ್ಮ ಸಾವಿಗೆ 11 ಜನರ ಕಿರುಕುಳವೇ ಕಾರಣ ಎಂದು ಅವರು ಆರೋಪಿಸಿದ್ದು, ಆರ್ಥಿಕ ವ್ಯವಹಾರದಲ್ಲಿ ಮೋಸ ಹೋಗಿರುವುದಾಗಿಯೂ ಉಲ್ಲೇಖಿಸಿದ್ದಾರೆ. 

ಕಲಬುರಗಿ ನಗರದ ಹಿರಿಯ ಪತ್ರಕರ್ತ ಪ್ರಭುಲಿಂಗ ನೀಲೂರೆ ಅವರ ಆತ್ಮ*ಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಎರಡು ದಿನಗಳ ಹಿಂದೆ ಅವರು ತಮ್ಮ ನಿವಾಸದ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದರು. ಈ ಘಟನೆ ರಾಜ್ಯಾದ್ಯಂತ ಆಘಾತ ಮೂಡಿಸಿತ್ತು. ಇದೀಗ ಅವರು ಸಾವಿಗೂ ಮುನ್ನ ಬರೆದಿಟ್ಟಿರುವ ಹಲವು ಪುಟಗಳ ಡೆತ್ ನೋಟ್ ಪತ್ತೆಯಾಗಿದ್ದು, ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.

11 ಜನರ ಕಿರುಕುಳವೇ ನೇರ ಕಾರಣ

ವೈರಲ್ ಆಗಿರುವ ಡೆತ್ ನೋಟ್‌ನಲ್ಲಿ ತಮ್ಮ ಸಾವಿಗೆ 11 ಜನರ ಕಿರುಕುಳವೇ ನೇರ ಕಾರಣ ಎಂದು ಪ್ರಭುಲಿಂಗ ನೀಲೂರೆ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಅಲ್ಲದೆ, ತಮ್ಮ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. ಡೆತ್ ನೋಟ್‌ನಲ್ಲಿ ಕಲಬುರಗಿಯ ಕೆಲ ಸಂಘಟನೆಗಳ ಪ್ರಮುಖರು ಹಾಗೂ ಕೆಲವು ಪತ್ರಕರ್ತರ ಹೆಸರುಗಳನ್ನು ಕೂಡ ಅವರು ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.

ಡೆತ್ ನೋಟ್‌ನಲ್ಲಿ ತಮ್ಮ ಆರ್ಥಿಕ ವ್ಯವಹಾರಗಳ ಕುರಿತು ಸಹ ಪ್ರಭುಲಿಂಗ ನೀಲೂರೆ ವಿವರಿಸಿದ್ದಾರೆ. ಕೆಲವು ಸ್ನೇಹಿತರಿಂದ ಹಣ ಪಡೆದಿದ್ದೇನೆ ಎಂದು ಹೇಳಿರುವ ಅವರು, ಅವರಿಗೆ ಕೆಲವರಿಗೆ ಶೇ.3 ಮತ್ತು ಕೆಲವರಿಗೆ ಶೇ.5 ರಷ್ಟು ಬಡ್ಡಿ ನೀಡಿದ್ದೇನೆ ಎಂದು ಬರೆದಿದ್ದಾರೆ. ಸ್ನೇಹಿತರಿಂದ ಪಡೆದ ಹಣವನ್ನು ಬಿಲ್ಡರ್ ಒಬ್ಬರಿಗೆ ನೀಡಿದ್ದಾಗಿ ಹೇಳಿರುವ ಅವರು, ಆ ಬಿಲ್ಡರ್ ನನ್ನನ್ನು ಮೋಸಗೊಳಿಸಿದ್ದಾನೆ ಎಂದು ಆರೋಪಿಸಿದ್ದಾರೆ.

ನಾನು ಯಾರಿಗೂ ಮೋಸ ಮಾಡಿಲ್ಲ

“ನಾನು ಯಾರಿಗೂ ಮೋಸ ಮಾಡಿಲ್ಲ. ಆದರೂ ನನಗೆ ನಿರಂತರ ಕಿರುಕುಳ ನೀಡಲಾಗುತ್ತಿತ್ತು. ಈ ಕಿರುಕುಳ ಸಹಿಸಲಾಗದೆ ಸಾವಿಗೆ ಮುಂದಾಗುತ್ತಿದ್ದೇನೆ” ಎಂದು ಅವರು ಡೆತ್ ನೋಟ್‌ನಲ್ಲಿ ಮನಕಲಕುವಂತೆ ಬರೆದಿದ್ದಾರೆ. ಈ ಡೆತ್ ನೋಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣದ ಸುತ್ತ ಹಲವು ಅನುಮಾನಗಳು ಎದ್ದುಕಾಣುತ್ತಿವೆ.

ಇದರ ನಡುವೆ ಪ್ರಭುಲಿಂಗ ನೀಲೂರೆ ಅವರ ಸಾವಿನ ಕುರಿತು ಕಲಬುರಗಿ ನಗರ ಪೊಲೀಸ್ ಕಮೀಷನರ್ ಡಾ. ಶರಣಪ್ಪ ಎಸ್.ಡಿ. ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು, “ಪ್ರಭುಲಿಂಗ ನೀಲೂರೆ ಅವರ ಪತ್ನಿ ತಮ್ಮ ಪತಿಯ ಸಾವಿನ ಬಗ್ಗೆ ದೂರು ನೀಡಿದ್ದಾರೆ. ದೂರಿನಲ್ಲಿ ಕೆಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಸಾವಿನ ಮುನ್ನ ಅವರು ಬರೆದಿರುವ ಎರಡು ಪುಟಗಳ ಡೆತ್ ನೋಟ್ ಪತ್ತೆಯಾಗಿದೆ. ಈ ಎಲ್ಲ ಅಂಶಗಳನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ. ತನಿಖೆ ಪೂರ್ಣಗೊಂಡ ನಂತರ ಸತ್ಯಾಂಶ ಹೊರಬರಲಿದೆ” ಎಂದು ತಿಳಿಸಿದ್ದಾರೆ.

ವಿಜಯ ಕರ್ನಾಟಕ ದಿನಪತ್ರಿಕೆ ಕಲಬುರಗಿ ಆವೃತ್ತಿಯ ಉಪ ಸಂಪಾದಕರಾಗಿದ್ದ ಪ್ರಭುಲಿಂಗ ನೀಲೂರೆ ಅವರು ಕಲಬುರಗಿ ತಾಲೂಕಿನ ಅಷ್ಟಗಾ ಗ್ರಾಮದ ಬಳಿ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಶುಕ್ರವಾರ ಸಂಜೆಯವರೆಗೂ ಸ್ನೇಹಿತರ ಜೊತೆ ಸಂಪರ್ಕದಲ್ಲಿದ್ದ ನೀಲೂರೆ, 7 ಗಂಟೆಯ ನಂತರ ಕಾಣೆಯಾಗಿದ್ದರು. ಅವರ ನಿಧನಕ್ಕೆ , ಕೆಯುಡಬ್ಲೂಜೆ ಸಂತಾಪ ಸೂಚಿಸಿದೆ. ನಿಲೂರೆ ಅವರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಉಷಾಕಿರಣ, ವಿಜಯವಾಣಿ ಪತ್ರಿಕೆಯಲ್ಲಿ ಸೇವೆ ಸಲ್ಲಿಸಿದ್ದ ಅವರು ಸದ್ಯ ವಿಜಯಕರ್ನಾಟಕ ಪತ್ರಿಕೆಯಲ್ಲಿದ್ದರು. ಅವರ ಅಕಾಲಿಕ ನಿಧನ ಪತ್ರಿಕಾ ರಂಗಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ ಎಂದು ಕೆಯುಡಬ್ಲೂಜೆ ಹೇಳಿದೆ.

ಪತ್ರಕರ್ತ ಪ್ರಭುಲಿಂಗ ನೀಲೂರೆ ಅವರ ಅಕಾಲಿಕ ಮರಣ ಪ್ರಕರಣವು ಇದೀಗ ಕೇವಲ ಆತ್ಮ*ಹತ್ಯೆಯಲ್ಲದೆ, ಕಿರುಕುಳ, ಆರ್ಥಿಕ ವ್ಯವಹಾರಗಳು ಮತ್ತು ಮೋಸದ ಆರೋಪಗಳ ಹಿನ್ನಲೆಯಲ್ಲಿ ಗಂಭೀರ ತನಿಖೆಯ ಹಂತಕ್ಕೆ ಪ್ರವೇಶಿಸಿದೆ. ತನಿಖೆಯ ಬಳಿಕ ಈ ದುರ್ಘಟನೆಯ ಹಿಂದಿನ ನಿಜವಾದ ಕಾರಣಗಳು ಏನು ಎಂಬುದು ಬಹಿರಂಗವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

PREV
Read more Articles on
click me!

Recommended Stories

ಚಾಮರಾಜನಗರ ಸ್ಪರ್ಧೆ ಚರ್ಚೆಗೆ ತೆರೆ ಎಳೆದ-ನಿಖಿಲ್ ಕುಮಾರಸ್ವಾಮಿ! ಅಪ್ಪ, ಅಜ್ಜನ ಕರ್ಮಭೂಮಿ ಬಿಟ್ಟು ಬೇರೆಡೆ ಹೋಗಲ್ಲ!
ಬೆಂಗಳೂರು ಉದ್ಯಮಿ ಸಿ.ಜೆ. ರಾಯ್ ಆತ್ಮ*ಹತ್ಯೆ ಪ್ರಕರಣ: ಡೆತ್ ನೋಟ್ ಬಗ್ಗೆ ಎಸ್‌ಐಟಿ ಮಹತ್ವದ ಮಾಹಿತಿ