Agriculture: ಭತ್ತ ನಾಟಿಗೆ ಅನ್ನದಾತರಿಂದ ಕೂಲಿ ಕಾರ್ಮಿಕರ ಹುಡುಕಾಟ

By Kannadaprabha NewsFirst Published Jan 7, 2023, 2:58 PM IST
Highlights

ತುಂಗಭದ್ರಾ ಯೋಜನೆಯ ಎಡದಂಡೆ ಮುಖ್ಯ ಕಾಲುವೆ ವ್ಯಾಪ್ತಿಯಲ್ಲಿ ಭತ್ತದ ಸಸಿ ತಯಾರಿಸಿ, ಸಸಿ ನಾಟಿ ಮಾಡಲು ರೈತರಿಗೆ ಕೂಲಿಕಾರ್ಮಿಕರು ಸಿಗದೇ ಪರದಾಡುವಂತಾಗಿದೆ. ಈ ಹಿಂದೆ ಭತ್ತದ ನಾಟಿಗೆ ಪ್ರತಿ ಎಕರೆಗೆ .2400 ರಿಂದ .2600 ವರೆಗೆ ಸಿಗುತ್ತಿದ್ದ ಗುತ್ತಿಗೆ ಇದೀಗ ಪ್ರತಿ ಎಕರೆಗೆ . 3000ಕ್ಕೆ ಏರಿಕೆಯಾಗಿ ರೈತರು ಕಂಗಾಲಾಗಿದ್ದಾರೆ.

ಕುರುಗೋಡು (ಜ.7) : ತುಂಗಭದ್ರಾ ಯೋಜನೆಯ ಎಡದಂಡೆ ಮುಖ್ಯ ಕಾಲುವೆ ವ್ಯಾಪ್ತಿಯಲ್ಲಿ ಭತ್ತದ ಸಸಿ ತಯಾರಿಸಿ, ಸಸಿ ನಾಟಿ ಮಾಡಲು ರೈತರಿಗೆ ಕೂಲಿಕಾರ್ಮಿಕರು ಸಿಗದೇ ಪರದಾಡುವಂತಾಗಿದೆ. ಈ ಹಿಂದೆ ಭತ್ತದ ನಾಟಿಗೆ ಪ್ರತಿ ಎಕರೆಗೆ .2400 ರಿಂದ .2600 ವರೆಗೆ ಸಿಗುತ್ತಿದ್ದ ಗುತ್ತಿಗೆ ಇದೀಗ ಪ್ರತಿ ಎಕರೆಗೆ . 3000ಕ್ಕೆ ಏರಿಕೆಯಾಗಿದೆ. ಇನ್ನು ಮಳೆಯಾಶ್ರಿತ ಪ್ರದೇಶಲ್ಲಿ ಈ ಹಿಂದೆ ಮಧ್ಯಾಹ್ನಕ್ಕೆ .150 ರಿಂದ .200 ಸಿಗುತ್ತಿದ್ದ ಕೂಲಿ ಇದೀಗ .300ಕ್ಕೆ ಏರಿಕೆಯಾಗಿದೆ. ನಿಗದಿತ ಕೂಲಿ ನೀಡಿದರೂ ಸ್ಥಳೀಯವಾಗಿ ಕೂಲಿಕಾರರು ಸಿಗುತ್ತಿಲ್ಲ ಆದ್ದರಿಂದ ಬೇರೆ ಬೇರೆ ಗ್ರಾಮಗಳಿಗೆ ತೆರಳಿ ಕೂಲಿಕಾರರನ್ನು ಕರೆದುಕೊಂಡು ಬಂದು ಕೆಲಸ ನಿರ್ವಹಣೆ ಮಾಡಬೇಕಾಗಿದೆ.

ಪಟ್ಟಣದ ಸೋಮಲಾಪುರ(Somalapur), ವೀರಾಪುರ(Veerapur), ಮುಷ್ಟಗಟ್ಟೆ, ಪಟ್ಟಣಶೇರಗು, ಗೇಣಿಕೆಹಾಳ್‌, ಸಿರಿಗೇರಿ, ಕೊಂಚಿಗೇರಿ, ದಾಸಪುರ, ಶಾನವಾಸಪುರ, ಮುದ್ದಟನೂರು, ಬೈಲೂರು, ಸಿಂದಿಗೇರಿ ಗ್ರಾಮಗಳ ತುಂಗಭದ್ರಾ ಕಾಲುವೆ ವ್ಯಾಪ್ತಿಯ ಕೃಷಿ ಪ್ರದೇಶದಲ್ಲಿ ಭತ್ತ ನಾಟಿ ಕಾರ್ಯ ಭರದಿಂದ ನಡೆಯುತ್ತಿದ್ದು, ಭತ್ತದ ಬೆಳೆ ಫಸಲು ತಡವಾಗಿ ಬಂದರೆ ಇಳುವರಿ ಕುಂಠಿತವಾಗಬಹುದು, ನಾನಾ ರೋಗಕ್ಕೆ ತುತ್ತಾಗಬಹುದು ಎಂಬ ಕಾರಣಕ್ಕೆ ಸಸಿ ನಾಟಿ ಮಾಡಲು ಅನ್ನದಾತರು ಮುಂದಾಗಿದ್ದಾರೆ.

ದೇವಸ್ಥಾನಕ್ಕೆ ಕೃಷಿ ಜಾಗ ದಾನ ಮಾಡಲು ಒತ್ತಾಯ, ನಿರಾಕರಿಸಿದ ರೈತ ಕುಟುಂಬಕ್ಕೆ ಬಹಿಷ್ಕಾರ!

ನವಂಬರ್‌,ಡಿಸೆಂಬರ್‌ನಲ್ಲಿ ಬೆಳೆದ ಭತ್ತ ಕಟಾವು ಮಾಡಿ ಫಸಲು ಕೂಡ ಮಾರಾಟ ಮಾಡಿದ್ದಾರೆ. ಎರಡನೇ ಬೆಳೆಗೆ ಮಡಿಗಳಲ್ಲಿ ಭತ್ತದ ಸಸಿ ಬೆಳೆಸಿದ್ದಾರೆ. ಡಿಸೆಂಬರ್‌ನಲ್ಲಿ ಕೆಲವರು ನಾಟಿ ಮಾಡಿದ್ದು, ಇನ್ನೂ ಕೆಲವಡೆ ಪ್ರಗತಿಯಲ್ಲಿದೆ. ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ನೀರು ಏಪ್ರಿಲ್‌ವರೆಗೆ ಸಿಗುವ ಕಾರಣ ಕಾಲುವೆ ಬಂದ್‌ ಆಗುವುದರ ಒಳಗೆ ಬೆಳೆ ಪಡೆಯುವ ಗುರಿ ಹೊಂದಿದ್ದಾರೆ.

ಸಸಿಗಳ ಬೆಲೆ ಏರಿಕೆ :

ವಾಯು ಭಾರ ಕುಸಿತದಿಂದ ವಾರಗಟ್ಟಲೆ ಬೆಂಬಿಡದೇ ಸುರಿದ ಜಿಟಿಜಿಟಿ ಮಳೆಯಿಂದ ಕೆಲ ರೈತರು ಹಾಕಿದ ಸಸಿ ಮಡಿಗಳಲ್ಲಿ ಚಿಗುರದೆ ಹಾಳಾಗಿದ್ದು, ಇದರಿಂದ ಸಸಿಗಳ ಕೊರತೆ ಉಂಟಾಗಿ ಭತ್ತದ ಸಸಿಗಳ ಬೆಲೆ ಗಗನಕ್ಕೇರಿದೆ. ಪ್ರತಿ ಸೆಂಟ್ಸ್‌ಗೆ .1500 ರಿಂದ .1800 ವರೆಗೆ ಏರಿಕೆಯಾಗಿದೆ. ರೈತರು ದುಬಾರಿ ದರ ನೀಡಿ ಭತ್ತದ ಸಸಿ ಖರೀದಿಸಿ ನಾಟಿ ಮಾಡುವ ಅನಿವಾರ್ಯತೆ ನಿರ್ಮಾಣವಾಗಿದೆ.

ಜಸ್ಟ್ ಕರೆ ಮಾಡಿ: ತೆಂಗು ಕೊಯ್ಯಲು 'ಪಿಂಗಾರ' ತಂಡ ರೆಡಿ!

ನಮ್ಮ ಕಡೆ ಭತ್ತ ಬಿಟ್ಟು ಬೇರೇನೂ ಬೆಳೆಯುವುದಿಲ್ಲ, ಭತ್ತ ಬೆಳೆದರೆ ಮಾಡಿದ ಸಾಲ ತೀರುತ್ತದೆ ಎನ್ನುವ ನಂಬಿಕೆ ಇದೆ, ಅಧಿಕಾರಿಗಳನ್ನು ನಂಬಿ ಕುಳಿತ್ತಿಲ್ಲ, ಆ ದೇವರೆ ಕಣ್ಣು ತೆರೆಯಬೇಕು.

ಬಿ.ದೊಡ್ಡ ಮಾರೆಣ್ಣ, ಸೋಮಲಾಪುರ ರೈತರು

ಕುರುಗೋಡು ಭಾಗದ ಕೆಲ ಗ್ರಾಮಗಳ ರೈತರು ಮಾತ್ರ ಭತ್ತದ ಬೀಜ ತೆಗೆದುಕೊಂಡು ಹೋಗಿದ್ದಾರೆ. ಇನ್ನು ಕೆಲ ರೈತರು ಬೇರೆ ಕಡೆ ಬೀಜ ತೆಗೆದುಕೊಂಡು ಸಸಿ ತಯಾರಿಸಿ ಈಗಾಗಲೇ ನಾಟಿ ಮಾಡುತ್ತಿದ್ದಾರೆ.

ದೇವರಾಜ,ಕೃಷಿ ಅಧಿಕಾರಿ ಕುರುಗೋಡು

click me!