ಮೋದಿ ವಿರುದ್ಧ ಅವಹೇಳನ ನಾಟಕ: 'ಮಕ್ಕಳು ಹಠ ಮಾಡಿ ಡ್ರಾಮಾ ಮಾಡಿವೆ'

By Kannadaprabha NewsFirst Published Feb 17, 2020, 12:55 PM IST
Highlights

ನಮಗೆ ಇಂಥ ಸಮಸ್ಯೆ ಬರುತ್ತೆ ಅಂತಾ ಗೊತ್ತಿರಲಿಲ್ಲ|ನಮಗೆ ಕಾಯ್ದೆ, ಕಾನೂನುಗಳ ಬಗ್ಗೆ ಅರಿವು ಇರಲಿಲ್ಲ| ಜಾಮೀನು ಮಂಜೂರಾಗಿ ಜೈಲಿನಿಂದ ಹೊರಬಂದಿದ್ದಕ್ಕೆ ಖುಷಿಯಾಗಿದೆ| ಕಾರಾಗೃಹದಲ್ಲಿ ಬಂಧನಕ್ಕೊಳಗಾಗಿ ಸಾಕಷ್ಟು ನೋವು ಕಂಡಿದ್ದೇನೆ| 

ಬೀದರ್(ಫೆ.17): ಕಾರಾಗೃಹದಲ್ಲಿ ಬಂಧನಕ್ಕೊಳಗಾಗಿ ಸಾಕಷ್ಟು ನೋವು ಕಂಡಿದ್ದೀನಿ. ಮಗುವಿನಿಂದ ದೂರವಾಗಿ ಕಣ್ಣೀರು ಹಾಕಿದ್ದೀನಿ. ಮಕ್ಕಳು ಹಠ ಮಾಡಿ ನಾಟಕ ಮಾಡಿವೆ. ನಮಗೆ ಇಷ್ಟೊಂದು ದೊಡ್ಡ ತಪ್ಪಾಗುತ್ತೆ ಅಂತಾ ಗೊತ್ತಿರಲಿಲ್ಲ. ನ್ಯಾಯಾಲಯ ಏನು ತೀರ್ಪು ಕೊಡುತ್ತದೆಯೋ ಅದು ನಮಗೆ ಅಂತಿಮ ಎಂದು ನಾಟಕದಲ್ಲಿ ಪ್ರಧಾನಿ ಮೋದಿ ಅವರನ್ನು ಅವಹೇಳನ ಮಾಡಿದ್ದಾರೆಂದು ದೇಶದ್ರೋಹ ಆರೋಪದಡಿ ಜೈಲು ಸೇರಿದ್ದ ಶಾಲಾ ವಿದ್ಯಾರ್ಥಿನಿಯ ತಾಯಿ ಹೇಳಿದ್ದಾರೆ. 

ದೇಶದ್ರೋಹ ಪ್ರಕರಣ: ಬೀದರ್‌ ಜೈಲಲ್ಲಿ ಶಿಕ್ಷಕಿ, ಜತೆ ಸಿದ್ದು ಮಾತುಕತೆ

ಸುಮಾರು 16 ದಿನಗಳ ಕಾಲ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಬಂಧನಕ್ಕೊಳಗಾದ ಬಾಲಕಿಯ ತಾಯಿ ಮಾಧ್ಯಮಗಳೊಂದಿಗೆ ಮಾತನಾಡಿ, ನಮಗೆ ಇಂಥ ಸಮಸ್ಯೆ ಎದುರಾಗುತ್ತೆ ಎಂಬುದು ಗೊತ್ತಿರಲಿಲ್ಲ. ಕಾಯ್ದೆ ಕಾನೂನುಗಳ ಅರಿವು ಇರಲಿಲ್ಲ. ಈಗ ನಮಗೆ ಜಾಮೀನು ಮಂಜೂರಾಗಿ ಜೈಲಿನಿಂದ ಹೊರಬಂದಿದ್ದಕ್ಕೆ ನಮಗೆ ಸಾಕಷ್ಟು ಖುಷಿಯಾಗಿದೆ. ನನ್ನ ಮಗುವಿನಿಂದ ದೂರವಿರುವುದು ಕಷ್ಟದಾಯಕ ಎಂದು ಹೇಳಿದ್ದಾರೆ. 

ನಾಟಕದಲ್ಲಿ ಪಾತ್ರ ಮಾಡಿದ ಬಾಲಕಿ ಕೂಡ ಮಾಧ್ಯಮದವರಿಗೆ ಮಾತನಾಡಿ, ಈ ತರಹದ ಸಂಭಾಷಣೆಯಿರುವ ನಾಟಕ ಮಾಡಲು ನನ್ನ ತಾಯಿ ಆಕ್ಷೇಪಿಸಿ ಅದನ್ನು ವಿರೋಧಿಸಿದ್ದರು. ನನ್ನ ಜಿದ್ದಿನಿಂದಾಗಿ ತಾಯಿ ನನಗೆ ನಾಟಕ ಪ್ರದರ್ಶನ ಮಾಡಲು ಒಪ್ಪಿದಳು. ನಾನೇ ಯುಟ್ಯೂಬ್‌ನಿಂದ ನಾಟಕದ ಸ್ಕ್ರಿಪ್ಟ್ ತೆಗೆದಿದ್ದೇವು. ಅಮ್ಮನಿಗೆ ಜಾಮೀನು ಸಿಕ್ಕು ನನ್ನ ಬಳಿ ಬಂದಿದ್ದಾರೆ. ನನಗೆ ಬಹಳ ಖುಷಿಯಾಗ್ತಿದೆ ಎಂದು ತಿಳಿಸಿದಳು. 

ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ನಾಟಕ: ಶಾಹೀನ್‌ ಶಿಕ್ಷಣ ವಿರುದ್ಧ ಜನಾಕ್ರೋಶ

ಇಲ್ಲಿನ ಶಾಹೀನ್ ಶಾಲೆಯಲ್ಲಿ ನಡೆದ ನಾಟಕ ಪ್ರದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಹೇಳನ ಮಾಡುವ ರೀತಿಯಲ್ಲಿ, ಸಿಎಎ, ಎನ್‌ಪಿಆರ್ ಹಾಗೂ ಎನ್‌ಆರ್‌ಸಿ ಕಾನೂನು ಕುರಿತಾಗಿ ವಿರೋಧಿ ಮಾತುಗಳನ್ನಾಡಲಾಗಿದೆ ಎಂದು ಸದರಿ ಶಾಲೆಯ ಚಿಕ್ಕ ಬಾಲಕಿಗೆ ತಾಯಿಯೇ ಸ್ಕ್ರಿಪ್ಟ್ ಬರೆದು ಕೊಟ್ಟಿದ್ದಾರೆಂಬ ಆರೋಪದ ಮೇಲೆ ದೇಶ್ರೋಹ ಪ್ರಕರಣದ ಅಡಿಯಲ್ಲಿ ಬಂಧನಕ್ಕೊಳಗಾಗಿ ಜೈಲು ಸೇರಿದ್ದ ಅವರು ಹಾಗೂ ಶಾಲಾ ಮುಖ್ಯ ಗುರುವನ್ನು ನ್ಯಾಯಾಲಯ ಶುಕ್ರವಾರ ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಆದೇಶಿಸಿತ್ತು. ಅದರಂತೆ ಶನಿವಾರ ಅವರು ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದರು. ದೇಶದ್ರೋಹ ಆರೋಪ ಹೊರಿಸಲಾದ ಈ ಪ್ರಕರಣ ಕುರಿತಾಗಿ ದೇಶ ವ್ಯಾಪಿಯಾಗಿ ಖಂಡನೆಗಳು, ಆಕ್ರೋಶ ವ್ಯಕ್ತವಾಗುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು. 

ಮೋದಿ ವಿರುದ್ಧ ಅವಹೇಳನಕಾರಿ ನಾಟಕ: ಬೀದರ್‌ಗೆ ಅಸಾದುದ್ದಿನ್ ಓವೈಸಿ ಭೇಟಿ

ಜನವಾದಿ ಮಹಿಳಾ ಸಂಘಟನೆಯ ಪ್ರಮುಖರ ಭೇಟಿ: 

ಬೀದರ್‌ನ ಶಾಹೀನ್ ಶಾಲೆಯಲ್ಲಿ ಪ್ರಧಾನಿ ವಿರುದ್ಧ ಅವಹೇಳನಕಾರಿ ನಾಟಕ ಪ್ರದರ್ಶನ ಆರೋಪದಡಿಯಲ್ಲಿ ಬಂಧನಕ್ಕೊಳಗಾದ ಶಾಲಾ ವಿದ್ಯಾರ್ಥಿನಿಯ ತಾಯಿಯನ್ನು ಜನವಾದಿ ಮಹಿಳಾ ಸಂಘಟನೆಯ ಪ್ರಮುಖರಾದ ಕೆ. ನೀಲಾ, ಲಕ್ಷ್ಮಿ ಬಾವಗೆ, ಮಹೇಶ ಗೋರ ನಾಳಕರ ಮತ್ತಿತರರು ಭೇಟಿಯಾಗಿ ಧೈರ್ಯ ಹೇಳಿದ್ದರು.

News In 100 Seconds: ಪ್ರಮುಖ ಸುದ್ದಿಗಳು

"

click me!