ಆರ್ಟಿಒ ಅಧಿಕಾರಿಗಳು ಭಾರೀ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದು, ಕೋಟಿ ಕೋಟಿ ಲಂಚ ಪಡೆಯಲಾಗುತ್ತಿದೆ ಎಂದು ಜೆಡಿಎಸ್ ಮುಖಂಡ ಎಚ್ ಡಿ ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ.
ಹಾಸನ (ಆ.21): ಆರ್ಟಿಒ ಅಧಿಕಾರಿ ಮತ್ತು ಅದೇ ಇಲಾಖೆಯ ನಿವೃತ್ತ ನೌಕರರು ಸೇರಿ ಇಲಾಖೆಯ ನೌಕರರ ವರ್ಗಾವಣೆ ದಂಧೆ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆರೋಪಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಎಂಬ ಅಧಿಕಾರಿ ಹಾಗೂ ಇತರೆ 6 ಮಂದಿ ಆರ್ಟಿಒ ನಿವೃತ್ತ ನೌಕರರು ಸೇರಿ ಇಲಾಖೆಯ ನೌಕರರ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ. 100 ಆರ್ಟಿಒ ಅಧಿಕಾರಿಗಳ ವರ್ಗಾವಣೆಗೆ 75 ಕೋಟಿ ರು. ನೀಡುವಂತೆ ಒತ್ತಡ ಹೇರಲಾಗಿದೆ. ರಾಜ್ಯದಲ್ಲಿ ಸಾರಿಗೆ ಇಲಾಖೆ ಮೂಲಕ ಚಿಕ್ಪೋಸ್ಟ್ಗಳನ್ನು ನಿರ್ಮಾಣ ಮಾಡಲಾಗಿದ್ದು, 14 ಚೆಕ್ಪೋಸ್ಟ್ಗಳಲ್ಲಿ ಪ್ರತಿದಿನ 10 ರಿಂದ 12 ಕೋಟಿ ರು. ವಸೂಲಿ ಮಾಡಲಾಗುತ್ತಿದೆ ಎಂದು ಹೇಳಿದರು.
ಸರ್ಕಾರದ ಅವೈಜ್ಞಾನಿಕ ನಿರ್ಧಾರದಿಂದ ರಾಜ್ಯದ ಭವಿಷ್ಯಕ್ಕೆ ಕುತ್ತು : ಎಚ್ಡಿಕೆ ಎಚ್ಚರಿಕೆ...
ಜಿಲ್ಲೆಯಲ್ಲಿ 8 ಬ್ರೇಕ್ ಇನ್ಸ್ಪೆಕ್ಟರ್ಗಳ ಹುದ್ದೆ ಖಾಲಿ ಇದ್ದು, ನಿಯೋಜನೆ ಮೇರೆಗೆ ಪದ್ಮನಾಭ ಮತ್ತು ಯಶವಂತ ಎಂಬ ಇಬ್ಬರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಕಲೇಶಪುರ ಆರ್ಟಿಒದಲ್ಲಿ ಎರಡು ಹುದ್ದೆಗಳಿದ್ದು, ಸತೀಶ್ ಒಬ್ಬರೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ರೀತಿ ರಾಜ್ಯದ ಸಾರಿಗೆ ಇಲಾಖೆಯಲ್ಲಿ ಅಧಿಕಾರಿಗಳ ನಿಯೋಜನೆ ಸಮರ್ಪಕವಾಗಿಲ್ಲ ಎಂದು ದೂರಿದರು.
ಬಿಜೆಪಿ ಸೇರಲು ಮನಸ್ಸು ಮಾಡಿದ್ರಾ ಮತ್ತೋರ್ವ ಜೆಡಿಎಸ್ ಶಾಸಕ?
ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಯಾವುದೇ ನಿಯೋಜನೆಗಳನ್ನು ಮಾಡಬಾರದೆಂದು ಸಾರಿಗೆ ಆಯುಕ್ತರಿಗೆ ಸ್ಪಷ್ಟವಾಗಿ ನಿರ್ದೇಶನ ನೀಡಿದ್ದರೂ ಸಹ ಇಲಾಖೆಯಲ್ಲಿ ಕಳೆದ ಹದಿನೈದು ದಿನಗಳಲ್ಲಿ ಸುಮಾರು 50ಕ್ಕಿಂತ ಹೆಚ್ಚು ನಿಯೋಜನೆಗಳು ನಡೆದಿವೆ. ಇದಕ್ಕೆ ಮುಖ್ಯಮಂತ್ರಿಗಳಿಂದ ಅನುಮೋಧನೆ ಪಡೆದಿಲ್ಲ ಎಂದು ಹೇಳಿದರು.
ಇದೇ ವೇಳೆ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಹೆಚ್.ಪಿ. ಸ್ವರೂಪ್ ಉಪಸ್ಥಿತರಿದ್ದರು.