ಕದ್ರಾ ನಿರಾಶ್ರಿತರ ಸಮಸ್ಯೆ ಪರಿಹಾರ; ಇಂಧನ ಸಚಿವ ಸುನೀಲ್ ಕುಮಾರ್

By Kannadaprabha NewsFirst Published Sep 24, 2022, 9:22 AM IST
Highlights
  • ಕದ್ರಾ ನಿರಾಶ್ರಿತರ ಸಮಸ್ಯೆ ಪರಿಹಾರ: ರೂಪಾಲಿ ಮನವಿಗೆ ಇಂಧನ ಸಚಿವರ ಸಮ್ಮತಿ
  • ಅಕ್ಟೋಬರ್‌ 2ನೇ ವಾರ ಕಾರವಾರಕ್ಕೆ ಆಗಮಿಸಿ ಸಮಸ್ಯೆ ಇತ್ಯರ್ಥ: ಸಚಿವ ಸುನೀಲಕುಮಾರ

ಕಾರವಾರ (ಸೆ.24) : ಕದ್ರಾ ನಿರಾಶ್ರಿತರ ಬೇಡಿಕೆ ಈಡೇರಿಸುವಂತೆ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್‌. ನಾಯ್ಕ ಒತ್ತಾಯದ ಹಿನ್ನೆಲೆಯಲ್ಲಿ ಇಂಧನ ಸಚಿವ ಸುನೀಲಕುಮಾರ ಅಕ್ಟೋಬರ್‌ ಎರಡನೇ ವಾರದಲ್ಲಿ ಕಾರವಾರಕ್ಕೆ ಆಗಮಿಸಿ, ನಿರಾಶ್ರಿತರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು. ಬೆಂಗಳೂರಿನ ವಿಧಾನಸೌಧದ ಸಚಿವರ ಕಚೇರಿಯಲ್ಲಿ ಸಚಿವರು ಹಾಗೂ ಕೆಪಿಸಿ ವ್ಯವಸ್ಥಾಪಕ ನಿರ್ದೇಶಕರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಶಾಸಕರು ಕದ್ರಾ ನಿರಾಶ್ರಿತರ ವಿಷಯ ಪ್ರಸ್ತಾಪಿಸಿ, ಕದ್ರಾ ಜಲಾಶಯದ ನಿರ್ಮಾಣದ ಸಂದರ್ಭದಲ್ಲಿ ನಿರಾಶ್ರಿತರಾಗಿ 35 ವರ್ಷಗಳಾದರೂ ಇದುವರೆಗೂ ಪುನರ್ವಸತಿ ಹಾಗೂ ಪರಿಹಾರ ನೀಡದೇ ಉಂಟಾಗಿರುವ ಸಮಸ್ಯೆಯನ್ನು ವಿವರಿಸಿದರು.

ಉತ್ತರ ಕನ್ನಡ: ಕದ್ರಾ ಡ್ಯಾಂ ಪ್ರದೇಶದಲ್ಲಿ ನೆರೆ ಆತಂಕ

ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಸಂದರ್ಭದಲ್ಲಿ ನೀಡಲಾದ ಭರವಸೆಗಳನ್ನು ಇದುವರೆಗೂ ಈಡೇರಿಸಿಲ್ಲ. ಕದ್ರಾ ಪುನರ್ವಸತಿ ಕೇಂದ್ರದಲ್ಲಿ ಮನೆ ನೀಡಲಾಗಿದೆ. ಆದರೆ, ಇದುವರೆಗೂ ವಾಸಿಸುತ್ತಿರುವ ಜಾಗ ನಿರಾಶ್ರಿತರ ಹಕ್ಕಿಗೆ ಒಳಪಟ್ಟಿಲ್ಲ. ಉದ್ಯೋಗದ ಭರವಸೆ ನೀಡಿದರೂ ಈಡೇರಿಲ್ಲ. ಇಂತಹ ಹಲವಾರು ಸಮಸ್ಯೆಗಳನ್ನು ಕೆಪಿಸಿ ನಿರಾಶ್ರಿತರು ಅನುಭವಿಸುತ್ತಿದ್ದಾರೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು. ಇದಕ್ಕೆ ಸ್ಪಂದಿಸಿದ ಸಚಿವರು, ನಿರಾಶ್ರಿತರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.  ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಜನರ ರಕ್ಷಣೆ ಹೇಗೆ? ಎನ್‌ಡಿಆರ್‌ಎಫ್ ಅಣಕು ಕಾರ್ಯಾಚರಣೆ

ಕದ್ರಾ ನಿರಾಶ್ರಿತರ ಸುದೀರ್ಘ ಕಾಲದ ಸಮಸ್ಯೆ ಇತ್ಯರ್ಥಕ್ಕೆ ಕಾಲ ಕೂಡಿಬಂದಿದೆ. ಇಂಧನ ಸಚಿವರು ಆಗಮಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿರುವುದು ಸಮಾಧಾನ ತಂದಿದೆ.

-ರೂಪಾಲಿ ಎಸ್‌. ನಾಯ್ಕ ಶಾಸಕಿ

ಹೊನ್ನಳ್ಳಿ ಕಿಂಡಿ ಅಣೆಕಟ್ಟು ಯೋಜನೆಯಿಂದ ತೊಂದರೆಯಾಗಲ್ಲ: ಡಿಸಿ

ಹೊನ್ನಾಳಿ ಕಿಂಡಿ ಅಣೆಕಟ್ಟು ಯೋಜನೆಯ ಸ್ವರೂಪ ಬದಲಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದ ಹಾಗೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಹೇಳಿದರು. ಅಗಸೂರು ಗ್ರಾಪಂ ವ್ಯಾಪ್ತಿಯ ಹೊನ್ನಾಳಿಯಲ್ಲಿ ಗಂಗಾವಳಿ ನದಿಗೆ ಕಿಂಡಿ ಅಣೆಕಟ್ಟು ನಿರ್ಮಾಣ ಯೋಜನೆ ಕುರಿತ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಯೋಜನೆ ಕಾರ್ಯಗತಗೊಳಿಸುವ ಸಂದರ್ಭದಲ್ಲಿ ಜನರಿಗೆ ತೊಂದರೆ ನೀಡುವ ಉದ್ದೇಶ ಯಾರಿಗೂ ಇರುವುದಿಲ್ಲ. ಆದರೆ ಯೋಜನೆಗಳನ್ನು ವಿರೋಧಿಸುವಾಗ ತಾಂತ್ರಿಕವಾದ ಕಾರಣ ಇರಬೇಕಾಗುತ್ತದೆ ಎಂದರು.

ಈ ವೇಳೆ ಮಾತನಾಡಿದ ಗ್ರಾಮಸ್ಥರು, ಕಿಂಡಿ ಅಣೆಕಟ್ಟು ನಿರ್ಮಾಣದಿಂದ ಸ್ಥಳೀಯರಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಸಾಧಕ ಭಾಧಕಗಳ ಕುರಿತು ಅಧ್ಯಯನ ನಡೆಸಬೇಕು. ಅನಗತ್ಯವಾಗಿ ಯೋಜನೆಯ ಹೇರಿಕೆ ಬೇಡ, ನೀರು ಪೂರೈಕೆಗೆ ಇರುವ ಇತರ ಮಾರ್ಗಗಳ ಕುರಿತು ಪರಿಶೀಲನೆ ನಡೆಸಿ ಯೋಜನೆ ಕಾರ್ಯಗತಗೊಳಿಸುವ ಕುರಿತು ನಿರ್ಧರಿಸಬೇಕು ಎಂದು ಆಗ್ರಹಿಸಿದರು. ಮಳೆಗಾಲದಲ್ಲಿ ನದಿಯಲ್ಲಿ ಹರಿದು ಬರುವ ದೊಡ್ಡ ಮರಗಳು ಕಿಂಡಿಗೆ ಸಿಲುಕಿ ನೀರು ಹರಿಯಲು ಸಾಧ್ಯವಾಗದೇ ಪ್ರವಾಹ ಪರಿಸ್ಥಿತಿಗೆ ಕಾರಣವಾಗಲಿದೆ ಎಂಬ ಮಾತುಗಳು ಗ್ರಾಮಸ್ಥರಿಂದ ಕೇಳಿ ಬಂತು.

ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಶಾಂತಾರಾಮ ನಾಯಕ ಮಾತನಾಡಿ, ಗಂಗಾವಳಿ ನದಿಗೆ ಸೇತುವೆಗಳ ನಿರ್ಮಾಣ ಹೆಚ್ಚಿದಂತೆ ಮೇಲಿನ ಗ್ರಾಮಗಳ ಮುಳುಗಡೆ ಪ್ರಮಾಣ ಹೆಚ್ಚುತ್ತಿದೆ, ಕಿಂಡಿ ಅಣೆಕಟ್ಟು ನಿರ್ಮಾಣದಿಂದ ಕೃತಕ ನೆರೆ ಸೃಷ್ಟಿಗೆ ದಾರಿ ಮಾಡಿದಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಗಸೂರು ಗ್ರಾಪಂ ಅಧ್ಯಕ್ಷ ರಾಮಚಂದ್ರ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಿಂಡಿ ಅಣೆಕಟ್ಟು ಯೋಜನೆಯಿಂದ ಜನಜೀವನದ ಮೇಲೆ ಆಗುವ ಪರಿಣಾಮದ ಕುರಿತು ಅಧ್ಯಯನ ನಡೆಸಿ ಯೋಜನೆ ಕಾರ್ಯರೂಪಕ್ಕೆ ತರುವಂತೆ ತಿಳಿಸಿದರು.

35 ವರ್ಷದ ದಾಯಾದಿ ಕಲಹ ನಿಂತಲ್ಲೇ ಬಗೆಹರಿಸಿದ ತಹಸೀಲ್ದಾರ!

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ, ಜನರೊಂದಿಗೆ ಜಿಲ್ಲಾಡಳಿತವಿದೆ. ಕಿಂಡಿ ಅಣೆಕಟ್ಟಿನಿಂದ ನಿರಾಶ್ರಿತರಾಗುವ ಕುಟುಂಬಕ್ಕೆ ಆದ್ಯತೆಯ ಮೇರೆಗೆ ಉದ್ಯೋಗ ಹಾಗೂ ಬೇಡಿಕೆಗಳು ಇದ್ದರೆ ಅದನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಮುಟ್ಟಿಸಿ ನ್ಯಾಯ ಒದಗಿಸಿಕೊಡಲು ಪ್ರಯತ್ನಿಸುತ್ತೇನೆ. ಸುಮ್ಮನೆ ಅತಾಂತ್ರಿಕವಾಗಿ ಯೋಜನೆಯನ್ನು ವಿರೋಧಿಸುವುದು ಸಮಂಜಸವಲ್ಲ ಎಂದರು. ಜಿಪಂ ಸಿಇಒ ಪ್ರಿಯಾಂಗಾ ಎಂ., ಉಪವಿಭಾಗಾಧಿಕಾರಿ ರಾಘವೇಂದ್ರ, ತಹಸೀಲ್ದಾರ ಉದಯ ಕುಂಬಾರ, ತಾಪಂ ಇಒ ಪಿ.ವೈ. ಸಾವಂತ್‌, ನೀರು ಸರಬರಾಜು ಒಳಚರಂಡಿ ಮಂಡಳಿ ಅಧಿಕಾರಿ ಸದಾನಂದ ಬಾಂದೇಕರ, ಅಧಿಕಾರಿಗಳು ಉಪಸ್ಥಿತರಿದ್ದರು.

click me!