ರಾಣಿಬೆನ್ನೂರು: ಬ್ರಿಡ್ಜ್‌ ಕಂ ಬ್ಯಾರೇಜ್‌ ನಿರೀಕ್ಷೆಯಲ್ಲಿ ನಿವಾಸಿಗಳು

By Kannadaprabha NewsFirst Published Oct 27, 2022, 10:00 AM IST
Highlights

ಆಂಜನೇಯ ಹಿರೆಕೆರೆ ಮಳೆಗಾಲದಲ್ಲಿ ತುಂಬಿ ಹರಿದರೆ ರಾಣಿಬೆನ್ನೂರು ನಗರಕ್ಕೆ ಬರುವುದು ಕಷ್ಟ

ಬಸವರಾಜ ಸರೂರ

ರಾಣಿಬೆನ್ನೂರು(ಅ.27):  ನಗರದ ಗಂಗಾಪುರ ರಸ್ತೆ ಮಾರ್ಗವಾಗಿ ಅಡವಿ ಆಂಜನೇಯ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿರುವ ದೊಡ್ಡ ಕೆರೆ (ಗಂಗಾಜಲ ಕೋಡಿ ಆಂಜನೇಯ ಹಿರೆಕೆರೆ) ಮಳೆಗಾಲದ ಸಮಯದಲ್ಲಿ ತುಂಬಿ ಹರಿದಲ್ಲಿ ಇಲ್ಲಿನ ಅಡವಿ ಆಂಜನೇಯ ಬಡಾವಣೆ ನಿವಾಸಿಗಳು ನಗರ ಪ್ರದೇಶಕ್ಕೆ ಹೋಗಿ ಬರಲು ಪರದಾಡುವ ಪರಿಸ್ಥಿತಿ ಉಂಟಾಗುತ್ತದೆ.

Latest Videos

ದೊಡ್ಡ ಕೆರೆ:

ಗಂಗಾಜಲ ಕೋಡಿ ಆಂಜನೇಯ ಹಿರೆಕೆರೆಯನ್ನು 89 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಇದು ಸಣ್ಣ ನೀರಾವರಿ ಇಲಾಖೆಗೆ ಸೇರಿರುವ ಸರ್ವೆ ನಂ. 606ರಲ್ಲಿ 259 ಎಕರೆ ಪ್ರದೇಶದಲ್ಲಿ ವ್ಯಾಪಿಸಿಕೊಂಡಿದ್ದು ನಗರದ ಏಕಮಾತ್ರ ದೊಡ್ಡ ಕೆರೆಯಾಗಿದೆ.

ಯಪ್ಪಾ ಹೋರಿ ತೂಫಾನ್ ಹೋದಂಗ ಹೋತಲೇ.. ಇದು ಹಾವೇರಿಯ ಮೈ ನವಿರೇಳಿಸೋ ಹೋರಿ ಹಬ್ಬ!

ಬಡವರು ವಾಸಿಸುವ ಪ್ರದೇಶ

ಅಡವಿ ಆಂಜನೇಯ ಬಡಾವಣೆಯಲ್ಲಿ ಸುಮಾರು ಐದು ಸಾವಿರ ಜನರು ವಾಸವಾಗಿದ್ದಾರೆ. ಅದರಲ್ಲಿ ಬಹುಪಾಲು ಜನರು ಕೂಲಿನಾಲಿ ಮಾಡುವವರು, ಬುಡಕಟ್ಟು ಜನಾಂಗದವರು ಜೀವನ ಸಾಗಿಸುತ್ತಿದ್ದಾರೆ. ಈ ಪ್ರದೇಶ ನಗರದಿಂದ ಸುಮಾರು ಮೂರು ಕಿ.ಮೀ. ದೂರದಲ್ಲಿದ್ದು ಇಲ್ಲಿನ ನಿವಾಸಿಗಳು ತಮ್ಮ ಕೆಲಸ ಕಾರ್ಯಗಳಿಗಾಗಿ ನಗರಕ್ಕೆ ಹೋಗಿ ಬರಲು ಕೆರೆಯ ರಸ್ತೆ ಬಳಸುವುದು ಅನಿವಾರ್ಯವಾಗಿದೆ. ಪ್ರತಿ ದಿನ ಕೆಲಸ ಮಾಡಿದರೆ ಮಾತ್ರ ಇವರ ತುತ್ತಿನ ಚೀಲ ಭರ್ತಿಯಾಗುತ್ತದೆ. ಆದರೆ ಕೆರೆ ಭರ್ತಿಯಾದಾಗ ರಸ್ತೆ ಬಂದ್‌ ಆಗುವುದರಿಂದ ಇಲ್ಲಿನ ನಿವಾಸಿಗಳು ಕೆಲಸಕ್ಕೆ ಹೋಗಲಾರದೆ ಮನೆಯಲ್ಲಿಯೇ ಉಪವಾಸ ಅನುಭವಿಸಬೇಕಾದ ಪ್ರಸಂಗ ಎದುರಾಗುತ್ತದೆ.

ಪ್ರಸ್ತಾವನೆ ನನೆಗುದಿಗೆ: 

ಈ ಹಿಂದೆ ಬ್ರಿಡ್ಜ್‌ ಕಂ ಬ್ಯಾರೇಜ್‌ ನಿರ್ಮಾಣ ಕುರಿತು ಮಾಜಿ ಶಾಸಕ ದಿ.ಜಿ. ಶಿವಣ್ಣ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ಆಗ ಕೆರೆ ಸುತ್ತಮುತ್ತಲಿನ ಹೊಲದವರು ಯೋಜನೆಗೆ ಜಾಗೆ ನೀಡಲು ನಿರಾಕರಣೆ ಮಾಡಿದ್ದರಿಂದ ಅದು ನನೆಗುದಿಗೆ ಬಿದ್ದಿತ್ತು. ಇತ್ತೀಚಿಗೆ ಕೆರೆ ಭರ್ತಿಯಾಗಿ ರಸ್ತೆ ಬಂದ್‌ ಆದ ಸಂದರ್ಭದಲ್ಲಿ ಅಲ್ಲಿಗೆ ಭೇಟಿ ನೀಡಿದ್ದ ಶಾಸಕ ಅರುಣಕುಮಾರ ಪೂಜಾರ, ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಹಾವೇರಿ: ಶಿಗ್ಗಾಂವಿ ಜನರ ಋುಣದಲ್ಲಿದ್ದೇನೆ, ಸಿಎಂ ಬೊಮ್ಮಾಯಿ

ಭಕ್ತಾದಿಗಳಿಗೆ ಅನುಕೂಲ

ಇಲ್ಲಿನ ಅಡವಿ ಆಂಜನೇಯ ದೇವಸ್ಥಾನಕ್ಕೆ ಪ್ರತಿ ಶನಿವಾರ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಹೋಗಿ ಬರುತ್ತಾರೆ. ಬ್ರಿಡ್ಜ್‌ ಕಂ ಬ್ಯಾರೇಜ್‌ ನಿರ್ಮಾಣದಿಂದ ಭಕ್ತಾದಿಗಳಿಗೂ ಅನುಕೂಲವಾಗಲಿದೆ.ದೊಡ್ಡ ಕೆರೆಗೆ ಬ್ರಿಡ್ಜ್‌ ಕಂ ಬ್ಯಾರೇಜ್‌ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಇಲ್ಲಿನ ನಿವಾಸಿಗಳ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು ಅಂತ ಶಾಸಕ ಅರುಣಕುಮಾರ ಪೂಜಾರ ತಿಳಿಸಿದ್ದಾರೆ.  

ನಾವು ಪ್ರತಿದಿನ ನಗರಕ್ಕೆ ತೆರಳಿ ಕೆಲಸ ಮಾಡಿದಲ್ಲಿ ಮಾತ್ರ ಜೀವನ ಸಾಗಿಸಬಹುದು. ಆದರೆ ಮಳೆಗಾಲದ ಸಮಯದಲ್ಲಿ ಕೆರೆ ಭರ್ತಿಯಾದಲ್ಲಿ ನಮ್ಮ ಪ್ರದೇಶದಿಂದ ನಗರಕ್ಕೆ ಹೋಗಿ ಬರಲಾಗುವುದಿಲ್ಲ. ಆದ್ದರಿಂದ ಸರ್ಕಾರ ಕೆರೆಗೆ ಬ್ರಿಡ್ಜ್‌ ಕಂ ಬ್ಯಾರೇಜ್‌ ನಿರ್ಮಿಸಿ ನಮ್ಮ ಸಮಸ್ಯೆಗೆ ಪರಿಹಾರ ಒದಗಿಸಬೇಕು ಅಂತ ಅಡವಿ ಆಂಜನೇಯ ಬಡಾವಣೆ ನಿವಾಸಿ ನೀಲಮ್ಮ ಹೇಳಿದ್ದಾರೆ. 
 

click me!