ರಮೇಶ್‌ ಜಾರಕಿಹೊಳಿಯಿಂದ ಡಿಕೆಶಿ ವಿರುದ್ಧ ಇಲ್ಲಸಲ್ಲದ ಆರೋಪ : ಲಕ್ಷ್ಮಣ್

By Kannadaprabha NewsFirst Published Feb 1, 2023, 6:28 AM IST
Highlights

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ತನ್ನ ಅಕ್ರಮ ಮುಚ್ಚಿಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಕಿಡಿಕಾರಿದರು.

ಮೈಸೂರು : ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ತನ್ನ ಅಕ್ರಮ ಮುಚ್ಚಿಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಕಿಡಿಕಾರಿದರು.

ಮೈಸೂರಿನ ಕಾಂಗ್ರೆಸ್‌ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್‌ ವಿರುದ್ಧ ರಮೇಶ್‌ ಜಾರಕಿಹೊಳಿ ಹಲವು ಗಂಭೀರ ಆರೋಪ ಮಾಡಿದ್ದಾರೆ. ದಾಖಲೆ ಬಿಡುಗಡೆ ಮಾಡುವುದಾಗಿಯೂ ತಿಳಿಸಿದ್ದಾರೆ. ಆದರೆ, ಆತನೇ ಓರ್ವ ಮೋಸಗಾರ ಎಂದು ಆರೋಪಿಸಿದರು.

ಡಿ.ಕೆ. ಶಿವಕುಮಾರ್‌ ಹಾಗೂ ರಮೇಶ್‌ ಜಾರಕಿಹೊಳಿ ಬಳಿ ಇರುವ ಬೇನಾಮಿ ಆಸ್ತಿಯ ಕುರಿತು ತನಿಖೆ ಮಾಡಿಸಲಿ. ನಾನು ಡಿ.ಕೆ. ಶಿವಕುಮಾರ್‌ ಅವರನ್ನು ಒಪ್ಪಿಸುತ್ತೇನೆ. ರಮೇಶ್‌ ಜಾರಕಿಹೊಳಿ ಸಿದ್ಧರಿದ್ದಾರೆಯೇ ಎಂದು ಅವರು ಸವಾಲು ಹಾಕಿದರು.

ಸಿದ್ದರಾಮಯ್ಯ ಅವರು ಕೋಲಾರದಲ್ಲಿ ನಿಲ್ಲಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಬಿಜೆಪಿ ಹಾಗೂ ಜೆಡಿಎಸ್‌ ಸಿದ್ದರಾಮಯ್ಯ ದಲಿತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಭಿತ್ತಿಪತ್ರ ಹಂಚಿಸುತ್ತಿದ್ದಾರೆ. ಇವರು ದಲಿತರಿಗೆ ಒಂದೇ ಒಂದು ಕಾರ್ಯಕ್ರಮ ಕೊಟ್ಟಿಲ್ಲ. ಖರ್ಗೆ, ಪರಮೇಶ್ವರ್‌, ಮುನಿಯಪ್ಪ ಅವರನ್ನು ಸೋಲಿಸಿದ್ದು ಬಿಜೆಪಿ ಮತ್ತು ಜೆಡಿಎಸ್‌. ಹಣದ ಹೊಳೆ ಹರಿಸಿ ಈ ನಾಯಕರನ್ನು ಸೋಲಿಸಿ ಸಿದ್ದರಾಮಯ್ಯ ತಲೆಗೆ ಕಟ್ಟುತ್ತಿದ್ದಾರೆ. ಏನೇ ತಂತ್ರ ರೂಪಿಸಿದರು ಕೋಲಾರದಲ್ಲಿ ಸಿದ್ದರಾಮಯ್ಯ ಗೆದ್ದೇ ಗೆಲ್ಲುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ನಗರ ಪ್ರಧಾನ ಕಾರ್ಯದರ್ಶಿ ಎಂ. ಶಿವಣ್ಣ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಮುಖಂಡರಾದ ಕೆ. ಮಹೇಶ್‌, ಗಿರೀಶ್‌ ಇದ್ದರು.

 ಕೊಲೆ ಮಾಡಿಸಿದ್ದರು ರಮೇಶ್ ಜಾರಕಿಹೊಳಿ

ಮೈಸೂರು (ಜ.31): ರಮೇಶ್ ಜಾರಕಿ ಹೊಳಿ ಕಳ್ಳಭಟ್ಟಿ ಮಾರಾಟ ದಂಧೆ ನಡೆಸುತ್ತಿದ್ದನು. ಕಳ್ಳಭಟಟ್ಟಿ ದಂಧೆ ನಡೆಸುತ್ತಿದ್ದ ವೇಳೆ ಅಬಕಾರಿ ಅಧಿಕಾರಿಯಾಗಿದ್ದ ಇಂಗಳೆ ಎಂಬುವರನ್ನು ಇದೇ ರಮೇಶ್ ಜಾರಕಿಹೊಳಿ ಹಾಗು ಸಹಚರರು 1988ರಲ್ಲಿ ಕೊಲೆ ಮಾಡಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ರಾಜಕಾರಣಕ್ಕೂ ಬರುವ ಮೊದಲು ರಾಮಪ್ಪ ಲಕ್ಕಪ್ಪ ಜಾರಕಿಹೊಳಿ (ರಮೇಶ್‌ ಜಾರಕಿಹೊಳಿ) ಕಳ್ಳಭಟ್ಟಿ ದಂಧೆ ನಡೆಸುತ್ತಿದ್ದನು. ಈ ದಂಧೆಯನ್ನು ತಡೆಯಲು ಮುಂದಾಗಿದ್ದ ಅಬಕಾರಿ ಅಧಿಕಾರಿಯನ್ನು ಕೊಲೆ ಮಾಡಿದ್ದಾರೆ. ಇದರ ಪರಿಣಾಮ ಒಂದು ವರ್ಷಕ್ಕೂ ಹೆಚ್ಚು ಸಮಯ ರಮೇಶ್ ಜಾರಕಿಹೊಳಿ ತಲೆ ಮರೆಸಿಕೊಂಡಿದ್ದನು. ರಮೇಶ್ ಜಾರಕಿಹೊಳಿ ಮುನ್ನೂರಕ್ಕೂ ಹೆಚ್ಚು ಜನರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ ಸುಮಾರು 30 ಕೋಟಿ ಮೌಲ್ಯದ ಬೇನಾಮಿ ಆಸ್ತಿಯನ್ನು ಹೊಂದಿದ್ದಾರೆ ಎಂದು ದೂರಿದ್ದಾರೆ.

10 ಸಾವಿರ ಕೋಟಿ ರೂ. ಹಗರಣಕ್ಕೆ ಸಹಕರಿಸದ ಹಿನ್ನೆಲೆ ಸಿಡಿ ಬಿಡುಗಡೆ: ಡಿಕೆಶಿ ವಿರುದ್ಧ ರಮೇಶ್‌ ಜಾರಕಿಹೊಳಿ ಆರೋಪ

ಹೆಸರು ಬದಲಾವಣೆ ಮಾಡಿ ಮೋಸ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಿಟ್ ಅಂಡ್ ರನ್ ಮಾಡಿದ್ದಾರೆ. ರಮೇಶ್ ಜಾರಕಿ ಹೊಳಿಯ ನಿಜವಾದ ಹೆಸರು ರಾಮಪ್ಪ ಲಕ್ಕಪ್ಪ ಜಾರಕಿಹೊಳಿ ಆಗಿದೆ. ಶಾಲಾ ದಾಖಲಾತಿಯ ಪ್ರಕಾರ ರಾಮಪ್ಪ ಲಕ್ಕಪ್ಪ ಜಾರಕಿಹೊಳಿ ಎಂದಿದೆ. ಆದರೆ ಹೆಸರು ಬದಲಾವಣೆ ಬಗ್ಗೆ ರಮೇಶ್ ಜಾರಕಿಹೊಳಿ ಎಲ್ಲಿಯೂ ಉಲ್ಲೇಖಿಸಿಲ್ಲ. ಹೆಸರು ಬದಲಾವಣೆ ಬಗ್ಗೆ ಸೂಕ್ತ ದಾಖಲೆಗಳನ್ನು ನೀಡಿಲ್ಲ. ಇದು ಇವರು ಮಾಡಿರುವ ಬಹುದೊಡ್ಡ ಮೋಸವಾಗಿದೆ ಎಂದು ಆರೋಪಿಸಿದ್ದಾರೆ.

ಒಂದೊಂದು ಕಾಲಿಗೆ ಒಂದು ಚಪ್ಪಲಿ: ನಿನ್ನೆ ರಮೇಶ್‌ ಜಾರಕಿಹೊಳಿ ಅವರು ಮಾತನಾಡುವಾಗ, ಡಿ.ಕೆ. ಶಿವಕುಮಾರ್ ಅವರು ರಾಜಕಾರಣಕ್ಕೆ ಬರುವಾಗ ಕಾಲಿಗೆ ಕಿತ್ತೋದ ಚಪ್ಪಲಿ ಹಾಕಿಕೊಂಡು ಬಂದಿದ್ದನು ಎಂದು ಹೇಳಿದ್ದಾರೆ. ಆದರೆ, ಯಾರು ಒಂದೊಂದು ಕಾಲಿಗೆ ಒಂದೊಂದು ಬಣ್ಣದ ಚಪ್ಪಲಿ ಧರಿಸಿಕೊಂಡಿದ್ದರು ಎಂಬುದರ ಬಗ್ಗೆ ನಮ್ಮ ಬಳಿ ದಾಖಲೆಗಳು ಇದೆ. ಸದ್ಯದಲ್ಲಿಯೇ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.

ಈಶ್ವರಪ್ಪ, ಸಿ ಟಿ ರವಿ ಬಿಗ್ ಜೋಕರ್ಸ್‌: ಮಾಜಿ ಸಿಎಂ ಸಿದ್ದರಾಮಯ್ಯ ಅವರು ನನ್ನ ಹೆಣವೂ ಬಿಜೆಪಿಗೆ ಹೋಗುವುದಿಲ್ಲ ಎಂದು ಹೇಳಿದ್ದ ಮಾತಿಗೆ ಪ್ರತಿಕ್ರಿಯೆ ನೀಡಿದ್ದ ಕೆ.ಎಸ್. ಈಶ್ವರಪ್ಪ ಅವರು ಸಿದ್ದರಾಮಯ್ಯ ಬದುಕಿರುವಾಗಲೂ ಬಿಜೆಪಿಗೆ ಅವರನ್ನು ಸೇರಿಸಿಕೊಳ್ಳುವುದಿಲ್ಲ. ಇನ್ನು ಅವರ ಹೆಣವನ್ನು ನಾಯಿ ಕೂಡ ಮೂಸಿ ನೋಡುವುದಿಲ್ಲ ಎಂದು ಟೀಕಿಸಿದ್ದಾರೆ. ಆದರೆ, ರಾಜ್ಯ ಬಿಜೆಪಿಯಲ್ಲಿ ಈಶ್ವರಪ್ಪ ಹಾಗೂ ಸಿ ಟಿ ರವಿ ಬಿಗ್ ಜೋಕರ್ಸ್‌ ಆಗಿದ್ದಾರೆ. ಈಶ್ವರಪ್ಪ ತೀವ್ರ ಹತಾಶರಾಗಿದ್ದಾರೆ. ಈಶ್ವರಪ್ಪನವರ ಮಂತ್ರಿ ಸ್ಥಾನ ಏಕೆ ಹೋಯಿತು ಎಂದು ತಿಳಿಸಲಿ. ಈಶ್ವರಪ್ಪನವರನ್ನು ಬಿಜೆಪಿಯ ಯಾವುದೇ ಕಾರ್ಯಕ್ರಮಗಳಿಗೂ ಕರೆಯುತ್ತಿಲ್ಲ‌. ಈಶ್ವರಪ್ಪ ಅವರನ್ನು ಮಾರ್ಗದರ್ಶಕ ಮಂಡಳಿಗೆ ಸೇರಿಸಿ ತುಂಬಾ ದಿನಗಳಾಗಿವೆ. ಈಶ್ವರಪ್ಪ ಚಲಾವಣೆಯಲ್ಲಿಲ್ಲದ ನಾಣ್ಯ ಎಂದು ಹೇಳಿದರು.

click me!