Karnataka Politics : ಕಾಂಗ್ರೆಸ್‌ನಿಂದ ಸ್ಥಳೀಯರಿಗೆ ಟಿಕೆಟ್‌ ನೀಡಿ

By Kannadaprabha NewsFirst Published Feb 1, 2023, 5:28 AM IST
Highlights

ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕನಾಯಕಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದಲ್ಲಿ ಸ್ಥಳೀಯರಿಗೆ ಟಿಕೆಟ್‌ ನೀಡಬೇಕೆಂದು ಆಕಾಂಕ್ಷಿಗಳಾದ ವೈ.ಸಿ.ಸಿದ್ದರಾಮಯ್ಯ, ಡಾ.ಪರಮೇಶ್‌ ಹಾಗೂ ರೇಣುಕಯ್ಯ ಅವರು ಪಕ್ಷದ ಹೈಕಮಾಂಡನ್ನು ಒತ್ತಾಯಿಸಿದ್ದಾರೆ.

  ತುಮಕೂರು  :  ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕನಾಯಕಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದಲ್ಲಿ ಸ್ಥಳೀಯರಿಗೆ ಟಿಕೆಟ್‌ ನೀಡಬೇಕೆಂದು ಆಕಾಂಕ್ಷಿಗಳಾದ ವೈ.ಸಿ.ಸಿದ್ದರಾಮಯ್ಯ, ಡಾ.ಪರಮೇಶ್‌ ಹಾಗೂ ರೇಣುಕಯ್ಯ ಅವರು ಪಕ್ಷದ ಹೈಕಮಾಂಡನ್ನು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಲಕ್ಕಪ್ಪ ಅವರ ನಂತರ ಸುಮಾರು 37 ವರ್ಷಗಳಿಂದ ಪಕ್ಷದ ಶಾಸಕರಿಲ್ಲ. ಇದಕ್ಕೆ ಕಾರಣ ಪಕ್ಷ ಸ್ಥಳೀಯರಿಗೆ ಸ್ಪರ್ಧೆಗೆ ಅವಕಾಶ ನೀಡದೆ, ಹೊರಗಿನವರನ್ನು ತರುವುದರಿಂದ ಕಾರ್ಯಕರ್ತರು ಹಾಗೂ ಮತದಾರರು ಕಾಂಗ್ರೆಸ್‌ ಪಕ್ಷದಿಂದ ದೂರ ಸರಿದಿದ್ದಾರೆ. 2008ರಲ್ಲಿ ಹೈಕಮಾಂಡ್‌ ರೇಣುಕಾ ಪ್ರಸಾದ್‌ ಎಂಬ ಹೊರಗಿನ ವ್ಯಕ್ತಿಯನ್ನು ಕಣಕ್ಕೆ ಇಳಿಸಿ, ಕೇವಲ ಮೂರು ಸಾವಿರ ಮತಗಳಷ್ಟೇ ಪಡೆಯಲು ಸಾಧ್ಯವಾಯಿತು. ಹಾಗಾಗಿ ಸ್ಥಳೀಯರಿಗೆ, ಹತ್ತಾರು ವರ್ಷಗಳಿಂದ ಪಕ್ಷ ಕಟ್ಟಿದವರಿಗೆ ಟಿಕೆಟ್‌ ನೀಡುವುದರಿಂದ ಪಕ್ಷದ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.

ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳಲ್ಲಿ ಒಬ್ಬರಾದ ಜಿ.ಪಂ. ಮಾಜಿ ಸದಸ್ಯ ವೈ.ಸಿ.ಸಿದ್ದರಾಮಯ್ಯ ಮಾತನಾಡಿ, ಕಳೆದ 2008ರಿಂದಲೂ ಇದುವರೆಗೂ ನಡೆದ 4 ಚುನಾವಣೆಗಳಲ್ಲಿ ಸ್ಪರ್ಧಿಸಲು ಅರ್ಜಿ ಸಲ್ಲಿಸಿದ್ದರೂ ಟಿಕೆಟ್‌ ನೀಡಿಲ್ಲ. ಆದಾಗ್ಯೂ ಪಕ್ಷದ ಅಭ್ಯರ್ಥಿಗೆ ಹೆಚ್ಚು ಮತ ದೊರೆಯುವಂತೆ ಮಾಡಿದ್ದೇವೆ. 2008ರಲ್ಲಿ ಕೇವಲ ಮೂರು ಸಾವಿರ ಮತ ಪಡೆದಿದ್ದ ಕಾಂಗ್ರೆಸ್‌ 2013ರಲ್ಲಿ 10 ಸಾವಿರ, 2018ರಲ್ಲಿ 49 ಸಾವಿರ ಮತಗಳನ್ನು ಪಡೆಯಿತು. ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷ ಬಲಿಷ್ಠವಾಗಿದ್ದು, ನಾಲ್ಕು ಜನ ಸ್ಥಳೀಯ ಆಕಾಂಕ್ಷಿಗಳಾದ ವೈ.ಸಿ.ಸಿದ್ದರಾಮಯ್ಯ, ಡಾ.ಪರಮೇಶ್‌, ರೇಣುಕಯ್ಯ ಹಾಗೂ ಮಾಜಿ ಶಾಸಕ ಲಕ್ಕಪ್ಪ ಅವರಲ್ಲಿ ಯಾರಿಗೆ ಟಿಕೆಟ್‌ ನೀಡಿದರೂ ಅವರನ್ನು ಗೆಲ್ಲಿಸಿಕೊಂಡು ಬರಲು ನಾವು ಸಿದ್ಧರಿರುವುದಾಗಿ ತಿಳಿಸಿದರು.

ವೈ.ಸಿ.ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಮರ್ಥಿಸಿದ ಇತರೆ ಆಕಾಂಕ್ಷಿಗಳಾದ ಡಾ.ಪರಮೇಶ್‌,ರೇಣುಕಯ್ಯ ಅವರು, ನಮ್ಮನ್ನು ಹೊರತು ಪಡಿಸಿ, ಹೈಕಮಾಂಡ್‌ ಕ್ಷೇತ್ರದ ಜನರಿಗೆ ಪರಿಚಯವೇ ಇಲ್ಲದ ಹೊರಗಿನ ಆಕಾಂಕ್ಷಿಗಳಾದ ಧನಂಜಯ, ಜಗದೀಶ್‌, ವಿನಿತಾ, ವಿಜಯರಾಘವೇಂದ್ರ ಮತ್ತು ನಟರಾಜು ಎಂಬುವವರಿಗೆ ಟಿಕೆಟ್‌ ನೀಡಿದರೆ ಖಂಡಿತವಾಗಿಯೂ ಕಾರ್ಯಕರ್ತರು ಗೋ ಬ್ಯಾಕ್‌ ಚಳುವಳಿ ಹಮ್ಮಿಕೊಳ್ಳುವುದರಲ್ಲಿ ಎರಡು ಮಾತಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಪ್ರಸನ್ನಕುಮಾರ್‌, ಹುಳಿಯಾರು ಪಟ್ಟಣ ಪಂಚಾಯಿತಿ ಸದಸ್ಯರಾದ ಸಿದ್ದಕ್ಕಿ, ಜುಬೇದ್‌, ಮಂಜುನಾಥ್‌, ಸಿದ್ದಲಿಂಗಮೂರ್ತಿ, ದಯಾನಂದ್‌ ಮತ್ತಿತರರು ಉಪಸ್ಥಿತರಿದ್ದರು. 

ಕಾಂಗ್ರೆಸ್ ಶಾಸಕರಿ ತುದಿಗಾಲಲ್ಲಿ

ರಾಣೆಬೆನ್ನೂರು(ಜ.24):  ಕಾಂಗ್ರೆಸ್‌ನ ಅನೇಕರು ಪಕ್ಷ ತೊರೆದು ಬಿಜೆಪಿ ಸೇರಲು ತುದಿಗಾಲ ಮೇಲೆ ನಿಂತಿದ್ದು, ನಾವು ಯಾರನ್ನು ತೆಗೆದುಕೊಳ್ಳಬೇಕು, ಯಾರನ್ನು ಬಿಡಬೇಕು ಎಂದು ಸೆಲೆಕ್ಟ್ ಮಾಡಿ ತೆಗೆದುಕೊಳ್ಳುತ್ತೇವೆ ಎಂದು ಹೇಳುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಡಿ.ಕೆ.ಶಿವಕುಮಾರ ಹೇಳಿಕೆಗೆ ತಿರುಗೇಟು ನೀಡಿದರು.

ಬಿಜೆಪಿಯ ಹಾಲಿ ಶಾಸಕರೇ ಕಾಂಗ್ರೆಸ್‌ ಸೇರಲು ಸಿದ್ಧರಿದ್ದಾರೆ ಎಂಬ ಡಿ.ಕೆ.ಶಿವಕುಮಾರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್‌ ಮುಳುಗುತ್ತಿರುವ ಹಡಗು. ಗುಜರಾತ್‌ನಲ್ಲಿ ಅದರ ಸಾಧನೆ ಏನು? ಉತ್ತರ ಪ್ರದೇಶದಲ್ಲಿ 2 ಸ್ಥಾನ ಗೆದ್ದಿದೆ. ಮುಂದೆ ಕರ್ನಾಟಕದಲ್ಲೂ ಕಾಂಗ್ರೆಸ್‌ನಲ್ಲಿ ಮಹಾಭಾರತ ಶುರುವಾಗುತ್ತದೆ ಎಂದು ಲೇವಡಿ ಮಾಡಿದರು. ಕಾಂಗ್ರೆಸ್‌ನವರು ಮಾಡುತ್ತಿರುವುದು ಪ್ರಜಾಧ್ವನಿ ಕಾರ್ಯಕ್ರಮವಲ್ಲ. ಅದು ಕಾಂಗ್ರೆಸ್‌ ಧ್ವನಿ ಎಂದು ವ್ಯಂಗ್ಯವಾಡಿದರು.

ನ್ಯಾಯ ಕೇಳುವವರಿಗೆ ನೈತಿಕತೆ ಇರಬೇಕು: ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಸಿ.ಟಿ. ರವಿ

ಸಿದ್ದುಗೆ ಸುರಕ್ಷಿತ ಕ್ಷೇತ್ರ ಪಾಕ್‌:

ರಾಣೆಬೆನ್ನೂರು: ಮಾಜಿ ಸಿಎಂ ಸಿದ್ದರಾಮಯ್ಯನವರ ಮನಸ್ಥಿತಿಗೆ ಪಾಕಿಸ್ತಾನವೇ ಸೇಫ್‌ ಎಂದು ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯನವರು ಕೋಲಾರದಿಂದ ಸ್ಪರ್ಧಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ‘ನನ್ನ ಲೆಕ್ಕಾಚಾರದ ಪ್ರಕಾರ ಅವರಿಗೆ ಪಾಕಿಸ್ತಾನವೇ ಸೇಫ್‌. ಅವರ ಮನಸ್ಥಿತಿಗೆ ಸೇಫ್‌ ಆಗಿರುವುದು ಪಾಕಿಸ್ತಾನ ಮಾತ್ರ ಎಂದು ತಿರುಗೇಟು ನೀಡಿದರು. ಪಾಕಿಸ್ತಾನದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಯಡಿಯೂರಪ್ಪ, ಮುಖ್ಯಮಂತ್ರಿ ಬೊಮ್ಮಾಯಿ ಇರಲ್ಲ. ಪಾಕಿಸ್ತಾನಕ್ಕೆ ಹೋದರೆ ಕಾಟ ಕೊಡಲು ಡಿ.ಕೆ. ಶಿವಕುಮಾರ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ ಇರಲ್ಲ. ಹೀಗಾಗಿ ಸಿದ್ದರಾಮಯ್ಯಗೆ ಪಾಕಿಸ್ತಾನವೇ ಸೇಫ್‌ ಎಂದು ವ್ಯಂಗ್ಯವಾಡಿದರು.

click me!