ಜಾನುವಾರುಗಳ ಕೊಂಬಿಗೆ ರೇಡಿಯಂ ಸ್ಟಿಕ್ಕರ್‌!

By Kannadaprabha NewsFirst Published Oct 13, 2020, 8:27 AM IST
Highlights

 ಜಾನುವಾರುಗಳ ಕೊಂಬಿಗೆ ರೇಡಿಯಂ ಪಟ್ಟಿಕಟ್ಟುವ ಕೆಲಸವನ್ನು ಜಿಲ್ಲೆಯ ಪೊಲೀಸರು ಆರಂಭಿಸಿದ್ದಾರೆ.

 ಕಾರವಾರ (ಅ.13):  ರಾತ್ರಿ ವೇಳೆ ಅಪಘಾತದಲ್ಲಿ ಮೂಕ ಜಾನುವಾರುಗಳು ಗಾಯಗೊಳ್ಳುವುದು, ಕೆಲವೊಮ್ಮೆ ಸಾಯುವುದು, ವಾಹನ ಸವಾರರು ಸಹ ತೊಂದರೆಗೀಡಾಗುವುದು, ವಾಹನ ಜಖಂಗೊಳ್ಳುವುದನ್ನು ತಪ್ಪಿಸುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಡಾಡಿ ಜಾನುವಾರುಗಳ ಕೊಂಬಿಗೆ ರೇಡಿಯಂ ಪಟ್ಟಿಕಟ್ಟುವ ಕೆಲಸವನ್ನು ಜಿಲ್ಲೆಯ ಪೊಲೀಸರು ಆರಂಭಿಸಿದ್ದಾರೆ.

ಈ ಮೂಲಕ ರಾತ್ರಿ ವೇಳೆ ವಾಹನ ಸವಾರರಿಗೆ ಕತ್ತಲೆಯಲ್ಲಿದ್ದರು ಜಾನುವಾರುಗಳು ಕಾಣುವಂತೆ ಮಾಡಲಾಗುತ್ತಿದ್ದು, ಕರಾವಳಿ ಭಾಗದಲ್ಲಿ ಅಭಿಯಾನದ ರೀತಿ ಈ ಕಾರ್ಯ ನಡೆಯುತ್ತಿದೆ.ಹೆಚ್ಚಾಗಿ ಬಿಡಾಡಿ ದನಗಳು ರಾತ್ರಿ ವೇಳೆಯಲ್ಲಿ ರಸ್ತೆಗಳ ಮೇಲೆಯೇ ಮಲಗಿರುತ್ತವೆ. ಪಟ್ಟಣ, ನಗರ, ಹೆದ್ದಾರಿ ಸೇರಿದಂತೆ ಎಲ್ಲೆಂದರಲ್ಲಿ ಬಿಡಾಡಿ ಜಾನುವಾರುಗಳ ಹಾವಳಿ ಹೆಚ್ಚಾಗಿದೆ. ಕತ್ತಲೆಯಲ್ಲಿ ಇವು ಗಮನಕ್ಕೆ ಬರದೇ ವೇಗವಾಗಿ ಬರುವ ವಾಹನಗಳು ಡಿಕ್ಕಿ ಹೊಡೆದು ಅಪಘಾತ ಸಂಭವಿಸುತ್ತವೆ. ಶನಿವಾರ ರಾತ್ರಿ ಅಂಕೋಲಾ ತಾಲೂಕಿನ ಹಾರವಾಡ ಬಳಿ ಅಪರಿಚಿತ ವಾಹನ ಬಡಿದು 6 ಜಾನುವಾರು ಮೃತಪಟ್ಟಿವೆ. ಇಂತಹ ಘಟನೆ ಪ್ರತಿ ದಿನವೆಂಬಂತೆ ನಡೆಯುತ್ತಲೇ ಇದೆ. ಇದಕ್ಕೆ ಕಡಿವಾಣ ಹಾಕಲು ಇಲಾಖೆ ಮುಂದಾಗಿದೆ.

ಅನ್ನದಾತರಿಗೆ ಈಗ ಮತ್ತೊಂದು ಸಂಕಷ್ಟ : ನಿದ್ದೆಗೆಡಿಸಿದ ಸೋಂಕು .

ಮೂಕ ಪ್ರಾಣಿಗಳು ಸಾಯುತ್ತವೆ. ಜತೆಗೆ ವಾಹನ ಸವಾರರು ಸಾಕಷ್ಟುನೋವು ಅನುಭವಿಸುತ್ತಾರೆ. ಹೀಗಾಗಿ ರಾತ್ರಿ ವೇಳೆ ರಸ್ತೆಯ ಮೇಲೆ ಜಾನುವಾರು ಇರುವುದು ಗೋಚರಿಸಲೆಂದು ಕೆಂಪು ಬಣ್ಣದ ರೇಡಿಯಂ ಪಟ್ಟಿಅವುಗಳ ಕೊಂಬಿಗೆ ಅಂಟಿಸಲು ಸೂಚಿಸಿದ್ದೇವೆ. ನಮ್ಮ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಈ ಕೆಲಸ ಮಾಡುತ್ತಿದ್ದಾರೆ.

- ಶಿವಪ್ರಕಾಶ ದೇವರಾಜು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

click me!