ಸುವರ್ಣ‌ಸೌಧದಲ್ಲಿ ಗಮನ ಸೆಳೆಯುತ್ತಿರುವ ವಿಜಯಪುರದ ಕಡೇಮನಿ ಬಿಡಿಸಿದ ವಿಶ್ವಗುರು ವರ್ಣಚಿತ್ರ

By Govindaraj SFirst Published Dec 22, 2022, 10:21 AM IST
Highlights

ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ಹೊಸ ಭಾವಚಿತ್ರಗಳನ್ನ ಸಿಎಂ ಅನಾವರಣಗೊಳಿಸಿರೋದು ನಿಮಗೆಲ್ಲ ಗೊತ್ತೆ ಇದೆ. ಅದರಲ್ಲು ವಿಶ್ವಗುರು ಬಸವಣ್ಣನವರ ಭಾವಚಿತ್ರ ಎಲ್ಲರ ಗಮನ ಸೆಳೆಯುತ್ತಿದೆ. 

ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್ 

ವಿಜಯಪುರ (ಡಿ.22): ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ಹೊಸ ಭಾವಚಿತ್ರಗಳನ್ನ ಸಿಎಂ ಅನಾವರಣಗೊಳಿಸಿರೋದು ನಿಮಗೆಲ್ಲ ಗೊತ್ತೆ ಇದೆ. ಅದರಲ್ಲು ವಿಶ್ವಗುರು ಬಸವಣ್ಣನವರ ಭಾವಚಿತ್ರ ಎಲ್ಲರ ಗಮನ ಸೆಳೆಯುತ್ತಿದೆ. ಅಂದಹಾಗೆ ತುಂಬಾನೆ ಆಕರ್ಷಣೀಯವಾಗಿ ಬಸವಣ್ಣನವರ ಭಾವಚಿತ್ರವನ್ನ ಬಿಡಿಸಿದ್ದು ಯಾರು? ಎಲ್ಲಿ ಈ ಪೋಟೋ ರೆಡಿಯಾಗಿದೆ ಎನ್ನುವ ಕುತೂಹಲ ನಿಮಗು ಇರುತ್ತೆ, ಆ ಮಾಹಿತಿಯನ್ನ ನಾವಿಂದು ನಿಮಗೆ ನೀಡ್ತಿದ್ದೇವೆ. ಅಂದಹಾಗೆ ಈ ಭಾವಚಿತ್ರ ತಯಾರಿಸಿದ್ದು ಬಸವನಾಡು, ಗುಮ್ಮಟನಗರಿ ವಿಜಯಪುರದಲ್ಲಿ ಭಾವಚಿತ್ರ ತಯಾರಾಗಿದೆ. 67 ವರ್ಷದ ಕಲಾವಿದರೊಬ್ಬರು ಈ ಭಾವಚಿತ್ರ ಬಿಡಿಸಿ ಮನೆಮಾತಾಗಿದ್ದಾರೆ..

ಬಸವನಾಡಿಗು ಬಸವೇಶ್ವರ ಭಾವಚಿತ್ರಕ್ಕು ಅವಿನಾಭಾವ ಸಂಬಂಧ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮೊನ್ನೆಯಷ್ಟೆ ಅನಾವರಣಗೊಂಡ ವಿಶ್ವಗುರು, ಮಹಾ ಮಾನವತಾವಾದಿ ಬಸವೇಶ್ವರರ ಭಾವಚಿತ್ರಕ್ಕೂ ಗುಮ್ಮಟಗಳ ನಗರಿ,  ಬಸವನಾಡು ವಿಜಯಪುರ ಜಿಲ್ಲೆಗು ಅವಿನಾಭಾವ ಸಂಬಂಧವಿದೆ. ವಿಧಾನಸಭೆಯ ಚಳಿಗಾಲದ ಅಧಿವೇಶನದ ಮೊದಲನೆ ದಿನ ನಾಡದೊರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಗಜ್ಯೋತಿ ಬಸವಣ್ಣನವರು ಸೇರಿದಂತೆ ಏಳು ಮಹನೀಯರ ಭಾವಚಿತ್ರದ ಕಲಾಕೃತಿಗಳನ್ನು ಅನಾವರಣಗೊಳಿಸಿದ್ದಾರೆ. ಭಾವಚಿತ್ರದ ಹಿಂದಿನ ಕಲಾವಿದರು ಯಾರು ಅನ್ನೋದು ಬಹುತೇಕರಿಗೆ ಗೊತ್ತಿಲ್ಲ. 

ಬಲವಂತದ ಮದುವೆ ಒಲ್ಲೆನೆಂದು ಗೋಳಗುಮ್ಮಟದಿಂದ ಹಾರಿ ಪ್ರಾಣಬಿಟ್ಟ ಯುವತಿ

ವಿಜಯಪುರದ ಕಲಾವಿದ ಕಡೇಮನಿ ಕೈಚಳಕ: ಇವುಗಳ ಮಧ್ಯೆ ಈ ಏಳು ಕಲಾಕೃತಿಗಳ ಪೈಕಿ ವಿಶ್ವಗುರು ಬಸವಣ್ಣನವರು ನಿಂತ ಭಂಗಿಯ, ಸುಂದರವಾದ ಹಾಗೂ ಆಕರ್ಷಕ ಭಾವಚಿತ್ರವನ್ನು ರಚಿಸಿದವರು ವಿಜಯಪುರ ಜಿಲ್ಲೆಯ ಕುಮಟೆ ಗ್ರಾಮದ ಪೊಣ್ಣಪ್ಪ ಕಡೇಮನಿ ಎಂಬ ಹಿರಿಯ ಕಲಾವಿದರು.  ಈ ಕಲಾವಿದರ ಕೈಚಳಕದಲ್ಲಿ ಅರಳಿದ ಕಲಾಕೃತಿ ಈಗ ಬೆಳಗಾವಿ ಸುವರ್ಣ ವಿಧಾನಸೌಧದ ಪಾವಿತ್ರ್ಯತೆಯನ್ನ ಹೆಚ್ಚಿಸಿದೆ. ಮಹಾ ಮಾನವತಾವಾದಿಯ ಭಾವಚಿತ್ರ ರಾರಾಜಿಸುತ್ತಿರುವುದು ವಿಜಯಪುರ ಜಿಲ್ಲೆಯ ಜನರ ಹೆಮ್ಮೆಯಾಗಿದೆ‌.

ಸರಳ ವ್ಯಕ್ತಿತ್ವ, ಅಸಾಮಾನ್ಯ ಕಲಾಕಾರ: ಸರಳ ಸಜ್ಜನ ವ್ಯಕ್ತಿತ್ವದ ಕಲಾವಿದರಾದ ಪಿ.ಎಸ್.ಕಡೇಮನಿ ಅವರು ತಮ್ಮ ಜೀವನದಲ್ಲಿ ಶಿಸ್ತು, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ತಮ್ಮ ಬದುಕಿನುದ್ದಕ್ಕೂ ಬಸವಾದಿ ಶರಣರಂತೆ ನುಡಿದಂತೆ ನಡೆದಿದ್ದಾರೆ. ನಡೆದಂತೆಯೆ ನುಡಿಯುತ್ತ ಬಂದಿದ್ದಾರೆ ಎಂದರು ತಪ್ಪಲ್ಲ.

67ರ ಇಳಿವಯಸ್ಸಿನಲ್ಲೂ ಕುಂಚದಲ್ಲಿ ಚಮತ್ಕಾರ: ತಮ್ಮ 67ರ ಇಳಿ ವಯಸ್ಸಿನಲ್ಲಿಯೂ ಯುವಕರನ್ನು ನಾಚಿಸುವಂತೆ ಕ್ರೀಯಾಶೀಲರಾಗಿರುವ ಕಲಾವಿದರಾದ ಕಡೇಮನಿ ಅವರು ದಿನದ ಬಹುತೇಕ ಸಮಯವನ್ನು ಸಮರ್ಪಣಾ ಮನೋಭಾವದಿಂದ ಕಲಾಸೇವೆಗೆ ಮುಡುಪಾಗಿಟ್ಟಿರುವುದು ಅನುಕರಣೀಯ ಹಾಗೂ ಆದರ್ಶನಿಯ. ವಿಶೇಷ ಎಂದರೆ ರಾಜ್ಯದ ಶ್ರೇಷ್ಠ ಕಲಾವಿದರಲ್ಲಿ ಕಡೇಮನಿಯವರು ಒಬ್ಬರು ಅನ್ನೋದು.  

ರಾಜ್ಯಪ್ರಶಸ್ತಿ ಪುರಸ್ಕೃತರು ಕಲಾವಿದ ಕಡೇಮನಿ: ಭಾವಚಿತ್ರ ರಚನೆಯಲ್ಲಿ ವಿಶಿಷ್ಠವಾದ ಖ್ಯಾತಿ ಹೊಂದಿದ ಕಲಾವಿದರಾದ ಪಿ.ಎಸ್. ಕಡೇಮನಿ ಅವರು  ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತರು. ನಾಡಿನ ಅನೇಕ ಸಂಘ - ಸಂಸ್ಥೆಗಳ, ಮಠ - ಮಾನ್ಯಗಳ ಗೌರವಕ್ಕೆ ಪಾತ್ರರಾದವರು. ಜಗತ್ತಿನ ಪ್ರಪ್ರಥಮ ಸಂಸದೀಯ ಜನಕರಾದ ವಿಶ್ವಗುರು ಬಸವೇಶ್ವರರ ಭಾವಚಿತ್ರ ರಚನೆ ಮಾಡುವ ಸೌಭಾಗ್ಯ ಬಸವ ನಿಷ್ಠೆಯ, ಕಾಯಕ ನಿಷ್ಠೆಯ  ಇವರ ಪಾಲಿಗೆ ಬಂದದ್ದು ನಿಜಕ್ಕೂ ಒಂದು ಯೋಗಾಯೋಗವೇ ಸರಿ.

ಇವರು ರಚಿಸಿದ ಭಾವಚಿತ್ರ ಹೇಗಿದೆ: ಇವರು ಭಕ್ತಿ ಭಾವದಿಂದ ರಚಿಸಿದ 5x8 ಅಡಿ ಅಳತೆಯನ್ನ ಹೊಂದಿದೆ. ಬಸವಣ್ಣನವರು ನಿಂತಿರುವ ಭಂಗಿ ಇದೆ. ಬಲಗೈ ಆಶೀರ್ವಾದ ಮುದ್ರೆಯಲ್ಲಿದೆ. ಎಡಗೈಯಲ್ಲಿ ವಚನ‌ ಸಂಗ್ರಹವಿದೆ.  ಪೂರ್ಣ ಪ್ರಮಾಣದ ಶ್ರೀ ಬಸವೇಶ್ವರರ ಭಾವಚಿತ್ರ ಈಗ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಅನಾವರಣಗೊಂಡಿರೋದು ಈ ಭಾಗದ ಬಸವ ಭಕ್ತರಿಗೆ ಸಂತಸದ ಸಂಗತಿಯಾಗಿದೆ. ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಅನಾವರಣಗೊಂಡಿದ್ದು ಕನ್ನಡಿಗರಿಗೆ ಹಾಗೂ ಬಸವನಾಡಿನವರಿಗೆ ಅತ್ಯಂತ ಸಂತಸದ ವಿಷಯವಾಗಿದೆ.

ಅಕ್ಕಮಹಾದೇವಿ ವಿವಿ ಘಟಿಕೋತ್ಸವ: 4 ಚಿನ್ನದ ಪದಕ ಮುಡಿಗೇರಿಸಿಕೊಂಡ ಗರ್ಭಿಣಿ

ಕಡೇಮನಿಯವರ ಪ್ರತಿಕ್ರಿಯೆ ಹೀಗಿದೆ: ಈ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಮ್‌ಗೆ ಪ್ರತಿಕ್ರಿಯಿಸಿರುವ ಕಲಾವಿದ ಕಡೇಮನಿ ಅವರು, ಇದೊಂದು ಸೌಭಾಗ್ಯದ ಸಂಗತಿ‌ ಎಂದಿದ್ದಾರೆ. ನನಗೆ ಮೊದಲು ಲಲಿತಕಲಾ ಅಕಾಡೆಮಿಯವರು ಬಸವಣ್ಣನವರ ಭಾವಚಿತ್ರ ಬಿಡಿಸಲು ಹೇಳಿದ್ದರು. ಬಸವನಾಡಿನವರಿಗೆ ಸೌಭಾಗ್ಯ ಒಲಿದು ಬಂದಿದ್ದು ನಮ್ಮೆಲ್ಲರೆ ಹೆಮ್ಮೆ ಎಂದಿದ್ದಾರೆ‌. ಇದು ನನ್ನ ಹೆಮ್ಮೆ ಎಂದೆ ಚಿತ್ರವನ್ನು ಬಿಡಿಸಿದ್ದೆ. ಈ ಮೊದಲು ಸುವರ್ಣಸೌಧದಲ್ಲಿ ಹಾಕುತ್ತಾರೆ ಎಂಬುದು ನನಗೆ ಗೊತ್ತಿರಲಿಲ್ಲ. ಈಗ ನನಗೆ ತುಂಬಾ ಖುಷಿಯಾಗಿದೆ. ಇದು ಬಸವನಾಡಿನ ಎಲ್ಲ ಜನರಿಗೂ ಇದರ ಶ್ರೇಯಸ್ಸು ಸಲ್ಲಬೇಕು ಎಂದಿದ್ದಾರೆ‌‌.

click me!