ರಾಯಚೂರು: ಡಿವಿಆರ್ ಕ್ಲಬ್‌ಗೆ ನಿವೃತ್ತ ನ್ಯಾ. ಕಾಡ್ಲೂರ್ ಭೇಟಿ, ವಿವಿಧ ಸಂಘಟನೆಗಳಿಂದ ಪ್ರತಿಭಟನೆ

By Girish GoudarFirst Published Jun 26, 2022, 10:48 AM IST
Highlights

*   ರಾಯಚೂರು ನಗರದ ಯರಮರಸ್ ಬಳಿ ಇರುವ ಡಿವಿಆರ್ ಕ್ಲಬ್
*   ಹೈಕೋರ್ಟ್ ಆದೇಶದಂತೆ ಕ್ಲಬ್ ಆರಂಭ
*   ಕ್ಲಬ್ ಆರಂಭಿಸುವ ಮುನ್ನ ಪರಿಶೀಲನೆಗೆ ಕಲಬುರಗಿ ಹೈಕೋರ್ಟ್ ಸೂಚನೆ
 

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು

ರಾಯಚೂರು(ಜೂ.26):  ರಾಯಚೂರು ತಾಲೂಕಿನ ಯರಮರಸ್ ಗ್ರಾಮದ ಹೊರವಲಯದಲ್ಲಿ ಕಳೆದ 7-8 ವರ್ಷಗಳಿಂದ ಡಿವಿಆರ್ ರಿಕ್ರಿಯೇಷನ್ ಕ್ಲಬ್ ನಡೆಯುತ್ತಿದೆ. ಇದು ಹೆಸರಿಗೆ ಮಾತ್ರ ರಿಕ್ರಿಯೇಷನ್ ಕ್ಲಬ್..ಕ್ಲಬ್ ನಲ್ಲಿ ಪಾರ್ಟಿ ಮಾಡಲು ಬೇಕಾದ ಪಾರ್ಟಿ ಹಾಲ್, ಇಸ್ಪೀಟು ಆಡಲು ವ್ಯವಸ್ಥೆ, ಸೀಮಿಂಗ್ ಫುಲ್, ಟೆನಿಸ್ ಕೋರ್ಟ್, ಮಕ್ಕಳ ಆಟದ ವ್ಯವಸ್ಥೆ ಎಲ್ಲವೂ ಇದೆ. ಅಷ್ಟೇ ಅಲ್ಲದೆ ಊಟ ಮತ್ತು ಮದ್ಯದ ವ್ಯವಸ್ಥೆಯೂ ಡಿವಿಆರ್ ಕ್ಲಬ್ ನಲ್ಲಿ ಸಿಗಲಿದೆ. ಈ ಕ್ಲಬ್ ನಲ್ಲಿ ಯರಮರಸ್ ನ ಕೆಲ ಸ್ಥಳೀಯರಿಗೆ ದಿನವೂ ಕೆಲಸವೂ ನೀಡಿದ್ದಾರೆ. 

ಅನೈತಿಕ ತಾಣವಾದ ಡಿವಿಆರ್ ರಿಕ್ರಿಯೇಷನ್ ಕ್ಲಬ್: 

ಡಿವಿಆರ್ ರಿಕ್ರಿಯೇಷನ್ ಕ್ಲಬ್ ನಲ್ಲಿ ಹತ್ತಾರು ಕಾರ್ಯಕ್ರಮಗಳು ನಡೆಯಬೇಕು. ಆದ್ರೆ ರಿಕ್ರಿಯೇಷನ್ ಕ್ಲಬ್ ಇಸ್ಪೀಟು ಅಡ್ಡೆಯಾಗಿ ಪರಿವರ್ತನೆ ಆಗಿದೆ. ಸದಾಕಾಲವೂ ಕ್ಲಬ್ ನಲ್ಲಿ ನೂರಾರು ಜನರು ಇಸ್ಪೀಟು ಆಟವಾಡುತ್ತಾ ಇರುತ್ತಾರೆ. ಅಷ್ಟೇ ಅಲ್ಲದೆ ಆರಂಭದಲ್ಲಿ ಸ್ಥಳೀಯರು ಇಸ್ಪೀಟು ಆಟವಾಡಿ ಲಕ್ಷಾಂತರ ರೂಪಾಯಿ ಕಳೆದುಕೊಂಡು ಮನೆ- ಆಸ್ತಿ ಮಾರಾಟ ಮಾಡಿ ಹತ್ತಾರು ಕುಟುಂಬಗಳು ಬೀದಿಗೆ ಬಂದಿವೆ.

ಲಿಂಗಸುಗೂರು: ಮತ್ತೆ ಅಧಿಕಾರ ಹಿಡಿಯುವ ಯತ್ನ, ಲಾಡ್ಜ್‌ನಿಂದ ಗ್ರಾಪಂ ಮಾಜಿ ಅಧ್ಯಕ್ಷ ಕಿಡ್ನಾಪ್‌..!

ಡಿವಿಆರ್ ಕ್ಲಬ್ ಬಂದ್ ಮಾಡುವಂತೆ ಹೋರಾಟ: 

ಡಿವಿಆರ್ ರಿಕ್ರಿಯೇಷನ್ ಕ್ಲಬ್ ಆರಂಭಿಸಲು ಸರ್ಕಾರ ಅನುಮತಿ ‌ನೀಡಿದೆ. ಯರಮರಸ್ ‌ಸುತ್ತಮುತ್ತ ಹತ್ತಾರು ಕಂಪನಿಗಳು ಇರುವುದರಿಂದ ಉದ್ಯೋಗಿಗಳ ಮನರಂಜನೆಗೆ ಕ್ಲಬ್ ಸಹಾಯವಾಗಲಿ ಅಂತ ಅನುಮತಿ ‌ನೀಡಿದ್ರು. ಆದ್ರೆ ಕ್ಲಬ್ ನವರು ಕೇವಲ ಸದಸ್ಯರಿಗೆ ಮಾತ್ರ ಕ್ಲಬ್ ‌ನಲ್ಲಿ ಅವಕಾಶ ನೀಡುತ್ತಿದ್ದಾರೆ. ಇದು ಕೂಡ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಮತ್ತೊಂದು ಕಡೆ ನಿತ್ಯವೂ ಇಸ್ಟೀಟು ಆಡಲು ಮೂರು-ನಾಲ್ಕು ರಾಜ್ಯಗಳಿಂದ ಜನರು ಬಂದು ಲಕ್ಷಾಂತರ ರೂಪಾಯಿ ಸುರಿದು ಹೋಗುತ್ತಾರೆ. ಇಂತಹ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಯುವ ಕ್ಲಬ್ ಬಂದ್ ಮಾಡಿಸುವಂತೆ ಹೋರಾಟ ಶುರುವಾಗಿದೆ. 

ಡಿವಿಆರ್ ರಿಕ್ರಿಯೇಷನ್ ಕ್ಲಬ್ ಮುಂದೆ ದೊಡ್ಡ ಹೈಡ್ರಾಮಾ: 

ಕೋವಿಡ್ ವೇಳೆಯಲ್ಲಿ ‌ಬಂದ್ ಆಗಿದ್ದ ಡಿವಿಆರ್ ಕ್ಲಬ್ ಕೆಲ ದಿನಗಳ ಹಿಂದೆ ಆರಂಭವಾಗಿತ್ತು. ಆಗ ಕೆಲ ಸಂಘಟನೆಗಳ ಮುಖಂಡರು ಕ್ಲಬ್ ಬಂದ್ ಮಾಡಿಸುವಂತೆ ಕಲಬುರಗಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದರು. ಹೀಗಾಗಿ ಇಷ್ಟು ದಿನಗಳ ಕಾಲ ಕ್ಲಬ್ ಬಂದ್ ಆಗಿತ್ತು. ಕಲಬುರಗಿ ಹೈಕೋರ್ಟ್ ಕ್ಲಬ್ ಪರಿಶೀಲನೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಸತ್ಯನಾರಾಯಣ ಮತ್ತು ಅಧಿಕಾರಿಗಳ ನೇತೃತ್ವದಲ್ಲಿ ತನಿಖೆಗೆ ‌ಆದೇಶ ನೀಡಿತ್ತು. ಕೋರ್ಟ್ ಆದೇಶದಂತೆ ಡಿವಿಆರ್ ಕ್ಲಬ್ ನ ಪರಿಶೀಲನೆಗೆ ಅಧಿಕಾರಿಗಳು ಹಾಗೂ ನಿವೃತ್ತ ನ್ಯಾಯಮೂರ್ತಿ ಅವರು ಆಗಮಿಸಿ ಕ್ಲಬ್ ನ ಒಳಗಡೆ ಪರಿಶೀಲನೆ ನಡೆಸಿದ್ರು. ಈ ವೇಳೆ ಕ್ಲಬ್‌ ಹೊರಭಾಗದಲ್ಲಿ  ಒಂದು ತಂಡ ಡಿವಿಆರ್ ಕ್ಲಬ್ ಬಂದ್ ಮಾಡಬೇಕು ಎಂದು ಹೋರಾಟ ಮಾಡುತ್ತಿದ್ರೆ,  ಮತ್ತೊಂದು ತಂಡ ಕ್ಲಬ್ ಬಂದ್ ಮಾಡಬಾರದು ಅಂತ ಪ್ರತಿಭಟನೆ ನಡೆಸಿದ್ರು. ಇಡೀ ಕ್ಲಬ್ ಪರಿಶೀಲನೆ ನಡೆಸಿದ ನಿವೃತ್ತ ನ್ಯಾಯಮೂರ್ತಿ ಸತ್ಯನಾರಾಯಣ ಅವರು ತೆರಳಿದರು. ಆ ಬಳಿಕ ವಿವಿಧ ಸಂಘಟನೆಗಳ ಮುಖಂಡರು ರಾಯಚೂರು ಸಹಾಯಕ ಆಯುಕ್ತರಿಗೆ ಡಿವಿಆರ್ ಕ್ಲಬ್ ಆರಂಭಿಸಬಾರದು.ಡಿವಿಆರ್ ಕ್ಲಬ್ ಒಂದು ಅನೈತಿಕ ತಾಣವಾಗಿದೆ. ಈ ಕ್ಲಬ್ ನಲ್ಲಿ ಇಸ್ಟೀಟು ಆಟವಾಡಲು ಆಂಧ್ರ, ತೆಲಂಗಾಣ ಮತ್ತು ಮಹಾರಾಷ್ಟ್ರಗಳಿಂದ ಜನರು ಬರುತ್ತಾರೆ. ಈ ಕ್ಲಬ್ ನಿಂದಾಗಿ ಸ್ಥಳೀಯ ಯುವಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಕ್ಲಬ್ ಸುತ್ತಮುತ್ತ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಓಡಾಟ ಮಾಡುತ್ತಾರೆ. ಮುಖ್ಯರಸ್ಯೆಯಲ್ಲಿಯೇ ಕ್ಲಬ್ ಇರುವುದರಿಂದ ನೂರಾರು ಕಡೆಗಳಿಂದ ಜನರು ಆಗಮಿಸಿ ನಾನಾ ಅಕ್ರಮ ಚಟುವಟಿಕೆಗಳನ್ನು ಮಾಡುತ್ತಾರೆ. ಹೀಗಾಗಿ ಸರ್ಕಾರ  ಡಿವಿಆರ್ ಕ್ಲಬ್ ನಡೆಸಲು ನೀಡಿರುವ ಲೈಸನ್ಸ್ ಸಹ ರದ್ದುಪಡಿಸಿ ಕ್ಲಬ್ ಸಂಪೂರ್ಣವಾಗಿ ಬಂದ್ ಮಾಡಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು. ಇತ್ತ ಕ್ಲಬ್ ಆರಂಭಿಸಬೇಕೆಂದು ಕ್ಲಬ್ ಹೊರಭಾಗದಲ್ಲಿ ಕುಳಿತ ಮಹಿಳೆಯರು ಮೌನವಾಗಿ ಕ್ಲಬ್ ಗೇಟ್ ತೆಗೆಯುತ್ತಿದ್ದಂತೆ ಕ್ಲಬ್ ಒಳಗಡೆ ಹೋಗಿಬಿಟ್ಟರು.

ಡಿವಿಆರ್ ರಿಕ್ರಿಯೇಷನ್ ಕ್ಲಬ್ ನವರು ಹೇಳುವುದು ಏನು? 

ಡಿವಿಆರ್ ಕ್ಲಬ್ ನಲ್ಲಿ ಯಾವುದೇ ಅನೈತಿಕ ಚಟುವಟಿಕೆಗಳು ನಡೆದಿಲ್ಲ.ನಮ್ಮ ಕ್ಲಬ್ ನಲ್ಲಿ ನಿತ್ಯ 300-400 ಜನರಿಗೆ ಕೆಲಸ ನೀಡಿದ್ದೇವೆ. ‌ಕ್ಲಬ್ ನಲ್ಲಿ 300 ಸಿಸಿಟಿವಿ ಕ್ಯಾಮರಾಗಳು ಇವೆ‌. ಎಲ್ಲಾ ಕ್ಯಾಮರಾಗಳು ಲೈವ್ ರೆಕಾರ್ಡಿಂಗ್ ಇದೆ. 15 ದಿನಗಳಿಗೆ ಒಮ್ಮೆ ಕ್ಯಾಮರಾಗಳನ್ನು ಪೊಲೀಸರು ‌ಪರಿಶೀಲನೆ ಮಾಡಬಹುದು. ಅನೈತಿಕ ಚಟುವಟಿಕೆಗಳು ನಾವು ನಡೆಸಿದ್ರೆ ಅವರು ಯಾವಾಗ ಬೇಕಾದರೂ ಬಂದ್ ರೆಡ್ ಮಾಡಬಹುದು. ಹೈಕೋರ್ಟ್ ಆದೇಶದಂತೆ ‌ನಾವು ಕ್ಲಬ್ ಓಪನ್ ಮಾಡಿದ್ದೇವೆ. ನಮ್ಮ ಕ್ಲಬ್ ‌ನಲ್ಲಿ  ಟೇನಿಸ್, ಜೀಮ್ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ನಡೆಯತ್ತವೆ. ಕ್ಲಬ್ ‌ನಲ್ಲಿ ಹಿಂದೆ 2ಸಾವಿರ ಜನರು ಸದಸ್ಯರು ಇದ್ರೂ, ಆದ್ರೆ ಕೋವಿಡ್ ‌ಮತ್ತು ಇಂತಹ ‌ಗಲಾಟೆಗಳಿಂದ ಸದಸ್ಯರ ಸಂಖ್ಯೆ ಸ್ವಲ್ಪ ಇಳಿಕೆ ಆಗಿದೆ. ಕ್ಲಬ್ ‌ನಲ್ಲಿ ಸದಸ್ಯತ್ವ ಇಲ್ಲದವರು ಗೆಸ್ಟ್ ಹೆಸರಿನಲ್ಲಿ ಕ್ಲಬ್ ಒಳಗೆ ಹೋಗಲು ಅವಕಾಶವಿದೆ. ನಮಗೆ ಕ್ಲಬ್ ತೆರೆಯಲು ಕೋರ್ಟ್ ಆದೇಶ ನೀಡಿದೆ. ಆದ್ರೂ ಕೆಲ ಇಲಾಖೆಯವರು ನಮಗೆ ಕಿರಿಕಿರಿ ಮಾಡುತ್ತಿದ್ದಾರೆ. ನಮ್ಮಲ್ಲಿ ಯಾವುದೇ ಅನೈತಿಕ ಚಟುವಟಿಕೆ ನಡೆಯುತ್ತಿಲ್ಲ. ನಮ್ಮ ಕ್ಲಬ್ ನಲ್ಲಿ 33 ಎಲೆಯ ಇಸ್ಟೀಟು ಆಟ ನಡೆಯುತ್ತೆ, ಇಸ್ಪೀಟು ಆಟವಾಡಲು ಆಂಧ್ರ- ತೆಲಂಗಾಣದಿಂದ ಸದಸ್ಯರು ಬರುತ್ತಾರೆ ಎಂದು ಡಿವಿಆರ್ ಕ್ಲಬ್ ಎಂಡಿ ಮುರಳಿ ಮೋಹನ್ ರೆಡ್ಡಿ ತಿಳಿಸಿದರು.

ಕರ್ಕಶ ಶಬ್ದ ಮಾಡಿದ ವಾಹನ ಸವಾರರಿಗೆ ತಕ್ಕ ಶಾಸ್ತಿ: ಸೈಲೆನ್ಸರ್ ಕಥೆ ಮುಗಿಸಿದ ಪೊಲೀಸರು..!

ಡಿವಿಆರ್ ಕ್ಲಬ್ ನ ಸಿಬ್ಬಂದಿಗೆ ಊಟ ಮತ್ತು 200ರೂ‌. ಕೂಲಿ: 

ಡಿವಿಆರ್ ರಿಕ್ರಿಯೇಷನ್ ಕ್ಲಬ್ ನಲ್ಲಿ ಕೆಲಸ ಮಾಡಲು 300-400 ಜನ ಸಿಬ್ಬಂದಿ ಇದ್ದಾರೆ ಎಂದು ಡಿವಿಆರ್ ಕ್ಲಬ್ ನವರು ಹೇಳುತ್ತಾರೆ. ಆದ್ರೆ ಕ್ಲಬ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ದಿನದ ಊಟ ಮತ್ತು 200 ಕೂಲಿ ನೀಡಲಾಗುತ್ತಿದೆ. ಕಾರ್ಮಿಕ ಕಾಯ್ದೆ ಪ್ರಕಾರ 50ಕ್ಕೂ ಹೆಚ್ಚು ಸಿಬ್ಬಂದಿ ‌ಒಂದು ಕಡೆ ಕೆಲಸ ಮಾಡುತ್ತಿದ್ರೆ ಅವರಿಗೆ ಇಎಸ್ ಐ ಮತ್ತು ಪಿಎಫ್ ನೀಡಬೇಕು. ಜೊತೆಗೆ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬೇಕು. ಆದ್ರೆ ಈ ಕ್ಲಬ್ ನ ಮಾಲೀಕರು ಮಾತ್ರ ನಿತ್ಯ ದಿನಗೂಲಿ ಕೆಲಸಕ್ಕೆ ಬರುವರಿಗೆ ಊಟ ನೀಡಿ 200ರೂಪಾಯಿ ಕೈಗೆ ನೀಡಿ ಕಳುಹಿಸುತ್ತಿದ್ದಾರೆ. ಕಾರ್ಮಿಕ ‌ಕಾಯ್ದೆ ಉಲ್ಲಂಘನೆ ಆಗಿದ್ರೂ ಅಧಿಕಾರಿಗಳು ಮಾತ್ರ ಗಫ್ ಚುಫ್ ಆಗಿ ಕುಳಿತಿರುವುದು ಅನುಮಾನಕ್ಕೆ ಕಾರಣವಾಗಿದೆ.

ಸ್ಥಳೀಯ ಮಟ್ಟದ ಅಧಿಕಾರಿಗಳಿಂದಲ್ಲೂ ಕ್ಲಬ್ ಪರಿಶೀಲನೆ: 

ಡಿವಿಆರ್ ಕ್ಲಬ್ ಆರಂಭವಾಗುತ್ತಿದ್ದಂತೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜೊತೆಗೆ ರಾಯಚೂರು ಸಹಾಯಕ ಆಯುಕ್ತರಾದ ರಜನೀಕಾಂತ್ ಚವ್ಹಾಣ್, ರಾಯಚೂರು ತಹಸೀಲ್ದಾರ್, ಡಿವೈಎಸ್ ಪಿ ವೆಂಕಟೇಶ, ರಾಯಚೂರು ಗ್ರಾಮೀಣ ಸಿಪಿಐ ಮತ್ತು ರಾಯಚೂರು ‌ನಗರಸಭೆ ಪೌರಾಯುಕ್ತ ಗುರುಲಿಂಗಪ್ಪ ಸೇರಿದಂತೆ ಹತ್ತಾರು ಅಧಿಕಾರಿಗಳು ಪರಿಶೀಲನೆ ‌ನಡೆಸಿದ್ರು. 

ಒಟ್ಟಿನಲ್ಲಿ ಯರಮರಸ್ ಬಳಿ ಇರುವ ಡಿವಿಆರ್ ಕ್ಲಬ್ ವಿಚಾರವಾಗಿ ಪರ- ವಿರೋಧ ಚರ್ಚೆಗಳು ಜಿಲ್ಲೆಯಲ್ಲಿ ಶುರುವಾಗಿದೆ. ತನಿಖೆಗೆ ಆಗಮಿಸಿದ ತನಿಖಾ ‌ತಂಡ ಯಾವ ರೀತಿಯ ವರದಿ ನೀಡುತ್ತೆ ಎಂಬುವುದು ‌ಕಾದು ನೋಡಬೇಕಾಗಿದೆ.
 

click me!