Chamarajanagar News : 3 ವರ್ಷದಿಂದ ತಪ್ಪಿಸಿಕೊಂಡು ಪರೋಟ ಮಾರುತ್ತಿದ್ದ ಕೈದಿ ಅರೆಸ್ಟ್‌

By Kannadaprabha NewsFirst Published Dec 4, 2021, 6:39 AM IST
Highlights
  • ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆ ತಂದಿದ್ದ ವೇಳೆ  ಎಸ್ಕೇಪ್
  • ಶೌಚಾಲಯದಿಂದ ತಪ್ಪಿಸಿಕೊಂಡಿದ್ದ ಕೈದಿಯನ್ನು ಪೊಲೀಸರ ವಿಶೇಷ ತಂಡ ಬಂಧಿಸಿದೆ.

 ಚಾಮರಾಜನಗರ (ಡಿ.04): ನ್ಯಾಯಾಲಯಕ್ಕೆ (Court) ಹಾಜರುಪಡಿಸಲು ಕರೆ ತಂದಿದ್ದ ವೇಳೆ ಜಿಲ್ಲೆಯ ಕೆಎಸ್‌ಆರ್‌ಟಿಸಿ (KSRTC) ಬಸ್‌ ನಿಲ್ದಾಣದ ಸಾರ್ವಜನಿಕ ಶೌಚಾಲಯದಿಂದ(Toilet) ತಪ್ಪಿಸಿಕೊಂಡಿದ್ದ ಕೈದಿಯನ್ನು ಪೊಲೀಸರ (Police) ವಿಶೇಷ ತಂಡ ಬಂಧಿಸಿದೆ.  ಗಾಳಿಪುರ ಬಡಾವಣೆ ನಿವಾಸಿಯಾದ ರಫೀಕ್‌ ಬಂಧಿತ ಅಪರಾಧಿ. ಈತನ ವಿರುದ್ಧ ಮೈಸೂರು (Mysuru) ಮತ್ತು ಜಿಲ್ಲೆಯಲ್ಲಿ 9ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದು, ಮನೆ ಕಳ್ಳತನದ ಪ್ರಕರಣದಲ್ಲಿ ಕುಖ್ಯಾತಿ ಹೊಂದಿದ್ದ, ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ. ಈ ಹಿಂದೆಯೂ 2013ರಲ್ಲೂ ಈತ ನಂಜನಗೂಡು ಸಮೀಪ ಪೊಲೀಸರಿಂದ ತಪ್ಪಿಸಿಕೊಂಡು ಚಾಣಾಕ್ಷತನ ತೋರಿದ್ದ. 

ಮೂರು ವರ್ಷಗಳಾದರೂ ಪತ್ತೆಯಾಗದ ಈತನನ್ನು ಬಂಧಿಸಲು ಎಸ್ಪಿ (SP) ವಿಶೇಷ ತಂಡ ರಚಿಸಿದ್ದರು. ಒಂದು ತಿಂಗಳ ಕಾಲ ಸತತ ಕಾರ್ಯಾಚರಣೆ ನಡೆಸಿದ ಪೊಲೀಸರು (Police) ರಫೀಕ್‌ನನ್ನು ಹೆಡೆಮುರಿ ಕಟ್ಟಿದ್ದಾರೆ. ಬಳ್ಳಾರಿಯಲ್ಲಿ (Ballry) ಈತ ರಸ್ತೆ ಬದಿ ಪರೋಟ ಮಾರಿಕೊಂಡು ಜೀವನ ಸಾಗಿಸುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಬಲೆಗೆ ಬೀಳಿಸಿದ್ದು, ಕಳೆದ ಮೂರು ವರ್ಷಗಳಿಂದ ಈತ (Phone) ಬಳಸದಿದ್ದುದು ಪತ್ತೆ ಕಾರ್ಯಕ್ಕೆ ಹಿನ್ನೆಡೆ ತಂದಿತ್ತಾದರೂ ಕೊನೆಗೂ ರಫೀಕ್‌ನನ್ನು ಜೈಲಿಗಟ್ಟಿದ್ದಾರೆ.

ನ.30ರಂದು ಬಳ್ಳಾರಿಯಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ, ವಿಶೇಷ ತಂಡಕ್ಕೆ ಬಹುಮಾನ ಘೋಷಿಸಲಾಗಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್‌ ತಿಳಿಸಿದ್ದಾರೆ. ಎಎಸ್ಪಿ ಸುಂದರ್‌ರಾಜ್‌, ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಮಾರ್ಗದರ್ಶನದಲ್ಲಿ ಪಿಐ ಮಹೇಶ್‌, ಪೂರ್ವ ಠಾಣೆ ಪಿಐ ಆನಂದ್‌, ಡಿಎಸ್‌ಬಿ ವಿಭಾಗದ ಇನ್ಸ್‌ ಪೆಕ್ಟರ್‌ ಮಹದೇವಶೆಟ್ಟಿ,ಸಂತೇಮರಹಳ್ಳಿ ಪಿಎಸ್‌ಐ ತಾಜುದ್ದೀನ್‌ ಸಿಬ್ಬಂದಿ ಸೈಯದ್‌ ಅಸಾದುಲ್ಲಾ, ಮೋಹನ್‌ಕುಮಾರ್‌, ಸುರೇಶ್‌ ಎಚ್‌.ವಿ., ಜಡೇಸ್ವಾಮಿ, ಪ್ರಸಾದ್‌, ಶಿವಕುಮಾರ್‌ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

ನಕಲಿ ದಾಖಲೆಯಿಂದ ನೇಮಕ - ಅರೆಸ್ಟ್  : 

ನಕಲಿ ದಾಖಲೆಗಳನ್ನು(Duplicate Documents) ಸೃಷ್ಟಿಸಿ ಭಾರತೀಯ ಸೇನೆಗೆ(Indian Army) ನೇಮಕಾತಿ ಮಾಡಿಸಿದ ಆರೋಪದ ಮೇರೆಗೆ ಇಬ್ಬರು ಪೊಲೀಸರು ಸೇರಿ ಹತ್ತು ಆರೋಪಿಗಳನ್ನು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರ(Maharashtra), ಆಂಧ್ರಪ್ರದೇಶ(Andhra Pradesh),ಬೆಂಗಳೂರು ಮೂಲದ ಮನೋಜ್‌ ಅಲಿಯಾಸ್‌ ಮಾರೆಣ್ಣ ಕರ್ಚೇಡು, ಪರಶುರಾಮ ಕಿಳ್ಳಕ್ಯಾತರ, ವೆಂಕಟೇಶ, ಜಂಬಣ್ಣ ಬೆಗಲೂರು, ವೈಭವ ಸಾಂಬಾಜಿ ಮಕಾಳೆ, ನೇತಾಜಿ ರಾಮ ಸಾವಂತ್‌ ಅಲಿಯಾಸ್‌ ಸಾವಂತ್‌, ಮಂಜುನಾಥ ಗೋಡ್ಕೆ ಅಲಿಯಾಸ್‌ ಮನೋಜ್‌, ಅಜಿತ್‌ಕೊಂಡೆ ಕಲೇನಿ, ಬಳ್ಳಾರಿ ಮೂಲದ ಪೊಲೀಸರಾದ ಕೆ. ಅಂಕಲೇಶ್‌ ಮತ್ತು ರಾಮಾಂಜನೇಯ ಅವರನ್ನು ಬಂಧಿಸಲಾಗಿದೆ(Arrest).

ಈ ಪ್ರಕರಣದಲ್ಲಿ ಕೆಲ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಎರಡು ತಂಡಗಳನ್ನು ರಚಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ವಿಜಯನಗರ ಎಸ್ಪಿ ಡಾ. ಅರುಣ್‌ ಕೆ. ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರಕರಣದ ಹಿನ್ನೆಲೆ:

ಆಧಾರ್‌ ಕಾರ್ಡ್‌, ಜಾತಿ, ಆದಾಯ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣಪತ್ರ, ರೇಷನ್‌ ಕಾರ್ಡ್‌ ಸೇರಿದಂತೆ ಹಲವು ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಹಾರಾಷ್ಟ್ರ ಸೇರಿದಂತೆ ಬೇರೆ ಊರಿನ 6 ಅಭ್ಯರ್ಥಿಗಳು(Candidates) ಸ್ಥಳೀಯರು ಎನ್ನುವಂತೆ ದಾಖಲೆಗಳ ಫೋರ್ಜರಿ ಮಾಡಿ ಪೊಲೀಸ್‌(Police) ವೆರಿಫಿಕೇಶನ್‌ ಮಾಡಿಸಿ ಸೇನೆಗೆ ನೇಮಕಗೊಂಡಿದ್ದರು.

ಕರುಣಿ ಬಸವರಾಜ್‌ ವೀರಭದ್ರ, ಅಜಿತ್‌ ಕೊಂಡೆ ಕಲೇನಿ, ಚೌಹಾಣ್‌ ರೋಹಿತ್‌ ಮಹಾದೇವ, ಪರಾಸ್‌ ಅಸ್ಲಾಂ, ಗಣೇಶ ಮಹಾದೇವ ಮೊರೆ, ಆಕಾಶ್‌ ಕುಂಡಲಿಕ ಚೌಗಲೆ ಸೇನೆಗೆ ನೇಮಕಗೊಂಡಿದ್ದಾರೆ. ಇನ್ನೂ ದೇವಫೋಡ್‌ ಮಹತಾಬ್‌ ಕುರ್ಶೋದ್ದೀನ್‌, ಅಮುಲ್‌ ರಾಜೇಂದ್ರ ಘೋಡ್ಕೆ, ಚಿದಾನಂದ ಬಸವರಾಜ ತೇಲಿ, ಮಾಳಿ ರೋಹಿತ್‌ ಭೈರಪ್ಪ ಎಂಬವರು ಸೇನೆಗೆ ಆಯ್ಕೆಯಾಗಿದ್ದರೂ ಸರಿಯಾದ ದಾಖಲಾತಿಗಳನ್ನು ಸಲ್ಲಿಸದ್ದರಿಂದ ನೇಮಕಾತಿ(Recruitment) ರಿಜೆಕ್ಟ್ ಮಾಡಲಾಗಿದೆ.

ಪ್ರಕರಣ ಪತ್ತೆಯಾಗಿದ್ದು ಹೇಗೆ?

ಮಹಾರಾಷ್ಟ್ರ ಮೂಲದ ಅಜಿತ್‌ಕೊಂಡೆ ಕಲೇನಿ ಎಂಬವರ ದಾಖಲಾತಿ ಪರಿಶೀಲನೆ ವೇಳೆ ಸೇನಾಧಿಕಾರಿಗಳು ತಪ್ಪು ಮಾಹಿತಿ ಬಂದಿರುವುದು ಪತ್ತೆ ಹಚ್ಚಿದ್ದಾರೆ. ಈ ಬಗ್ಗೆ ಹಿರೇಹಡಗಲಿ ಠಾಣೆಗೆ ಮರು ಪರಿಶೀಲನೆಗೆ ಕಳುಹಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ಒಳಪಡಿಸಿದಾಗ ಇಡೀ ಪ್ರಕರಣ ಬಹಿರಂಗಗೊಂಡಿದೆ.

click me!