ಕೊರೋನಾ ಸಾವು: ಸ್ಮಶಾನದ ಬೀಗ ಒಡೆದು ಅಂತ್ಯಕ್ರಿಯೆ

By Kannadaprabha NewsFirst Published Apr 25, 2020, 7:23 AM IST
Highlights

ಕೊರೋನಾದಿಂದ ಮೃತಪಟ್ಟ ವೃದ್ಧೆಯ ಶವಸಂಸ್ಕಾರ ಸಿದ್ಧತೆ ನಡೆಸಿದ್ದು ರಾತ್ರಿ 11.30ರ ನಂತರ. ಉಪ್ಪಿನಂಗಡಿಯಿಂದ ಶವ ಸುಡುವವರನ್ನು ಕರೆಸಲಾಯಿತು. ಕೈಕುಂಜೆಯಲ್ಲಿ ಜನತೆ ವಿರೋಧ ವ್ಯಕ್ತಪಡಿಸಿ ಜಮಾಯಿಸಿದ್ದರು. ಆದರೂ ಹಠಬಿಡದ ಪೊಲೀಸರು ರುದ್ರಭೂಮಿಯ ಗೇಟಿನ ಬೀಗ ಒಡೆದು ಶವವನ್ನು ಒಳಕ್ಕೆ ಸಾಗಿಸಲು ಅವಕಾಶ ಮಾಡಿಕೊಟ್ಟರು.

ಮಂಗಳೂರು(ಏ.25): ಮಂಗಳೂರಿನ ಜಿಲ್ಲಾ ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿನಿಂದ ಮೃತರಾದ ಬಂಟ್ವಾಳದ ವೃದ್ಧೆಯ ಶವಸಂಸ್ಕಾರ ಮಾಡಲು ಜಿಲ್ಲಾಡಳಿತ ತಡಕಾಡುತ್ತಿದ್ದ ಸಮಯದಲ್ಲಿ ಶವದಹನ ಕೆಲಸವನ್ನು ದ.ಕ ಜಿಲ್ಲಾ ಪೊಲೀಸರೇ ನೆರವೇರಿಸಿದ ವಿದ್ಯಮಾನ ನಡೆದಿದೆ.

ಸ್ಥಳೀಯರ ವಿರೋಧದಿಂದ ಮಂಗಳೂರಿನ ಶವಾಗಾರಗಳಲ್ಲಿ ಶವದಹನಕ್ಕೆ ಅಸಾಧ್ಯವಾದಾಗ ಜಿಲ್ಲಾಡಳಿತ ರಾತ್ರಿ 11 ಗಂಟೆ ಸುಮಾರಿಗೆ ಮೊರೆ ಹೋದದ್ದು ದ.ಕ. ಪೊಲೀಸರನ್ನು. ಬಳಿಕ ಜಿಲ್ಲಾ ಎಸ್ಪಿ ನಿರ್ದೇಶನ ಮೇರೆಗೆ ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಪೊಲೀಸರು ಚಿತಾಗಾರವನ್ನು ಹುಡುಕುವಲ್ಲಿಂದ ತೊಡಗಿ ಅಂತ್ಯಸಂಸ್ಕಾರಕ್ಕೆ ಬೇಕಾಗುವ ಒಂದು ಕ್ವಿಂಟಾಲ್‌ ಸೌದೆ, 10 ಕೇಜಿ ತುಪ್ಪ, ಸೀಮೆಎಣ್ಣೆ ಮುಂತಾದ ಸಾಮಾಗ್ರಿಗಳನ್ನು ಸ್ವತಃ ಪೊಲೀಸರೇ ಸಂಗ್ರಹಿಸಿದ್ದರು. ಇಷ್ಟೆಲ್ಲ ಸಿದ್ಧತೆ ನಡೆಸಿದ್ದು ರಾತ್ರಿ 11.30ರ ನಂತರ. ಉಪ್ಪಿನಂಗಡಿಯಿಂದ ಶವ ಸುಡುವವರನ್ನು ಕರೆಸಲಾಯಿತು.

ಮಗನಿಂದ ಹಿಂಸೆ; ಮೊಮ್ಮಕ್ಕಳೊಂದಿಗೆ ರಾತ್ರಿಯಿಡೀ ಗುಡ್ಡದಲ್ಲಿ ತಂಗಿದ ಅಜ್ಜಿ

ಬಂಟ್ವಾಳದ ಎಲ್ಲ ಸ್ಮಶಾನಗಳನ್ನು ಹುಡುಕಾಡಿದಾಗಲೂ ಪೊಲೀಸರಿಗೆ ಕಂಡದ್ದು ಬೀಗಮುದ್ರೆ. ಕೊನೆಗೂ ದೃಢ ನಿರ್ಧಾರಕ್ಕೆ ಬಂದ ಪೊಲೀಸರು, ಪಾಳುಬಿದ್ದಿದ್ದ ಕೈಕುಂಜೆಯ ಸ್ಮಶಾನವನ್ನು ಆಯ್ಕೆ ಮಾಡಿ ಶವದಹನಕ್ಕೆ ಎಲ್ಲ ರೀತಿಯ ಸಿದ್ಧತೆಯನ್ನು ನಡೆಸಿದರು. ಅಷ್ಟರಲ್ಲಿ ಮಧ್ಯರಾತ್ರಿ ಕಳೆದಿತ್ತು.

ಬೀಗ ಒಡೆದು ಶವದಹನ: ಅಷ್ಟರಲ್ಲಿ ಕೈಕುಂಜೆಯಲ್ಲಿ ಜನತೆ ವಿರೋಧ ವ್ಯಕ್ತಪಡಿಸಿ ಜಮಾಯಿಸಿದ್ದರು. ಆದರೂ ಹಠಬಿಡದ ಪೊಲೀಸರು ರುದ್ರಭೂಮಿಯ ಗೇಟಿನ ಬೀಗ ಒಡೆದು ಶವವನ್ನು ಒಳಕ್ಕೆ ಸಾಗಿಸಲು ಅವಕಾಶ ಮಾಡಿಕೊಟ್ಟರು.

30 ವರ್ಷಗಳ ನಂತರ ಮರಳಿ ಬಂದ ಡಾಲ್ಫಿನ್, ಇದೆಕ್ಕೆಲ್ಲ ಕಾರಣ ಕೊರೋನಾ!

ತಡರಾತ್ರಿ 12.45ಕ್ಕೆ ಕಟ್ಟಿಗೆ ಜೋಡಿಸಿ ಮುಕ್ಕಾಲು ಗಂಟೆಯಲ್ಲಿ ಮುಗಿದ ಕೂಡಲೇ ಆರೋಗ್ಯ ಸಿಬ್ಬಂದಿ ವೈಜ್ಞಾನಿಕ ರೀತಿಯಲ್ಲಿ ಶವದಹನ ನೆರವೇರಿಸಿದರು. ಈ ಸಂದರ್ಭ ಗುಂಪು ಸೇರಿದ್ದ ಸ್ಥಳೀಯರನ್ನು ಪೊಲೀಸರು ಚದುರಿಸಿದರು. ಅಲ್ಲದೆ ಶವದಹನದಿಂದ ಯಾವುದೇ ರೋಗ ಹರಡುವುದಿಲ್ಲ ಎಂದು ತಿಳಿವಳಿಕೆ ನೀಡಿದರು. ಶವ ಸಂಪೂರ್ಣ ದಹನವಾಗುವ ವರೆಗೆ ಸುಮಾರು ಎರಡು ಗಂಟೆ ಕಾಲ ಪೊಲೀಸರು ಅಲ್ಲೇ ಇದ್ದು, ಬಳಿಕ ನಸುಕಿನ 2.30ರ ಸುಮಾರಿಗೆ ಅಲ್ಲಿಂದ ವಾಪಸಾದರು. ಇಡೀ ಶವ ದಹನದ ಖರ್ಚುವೆಚ್ಚವನ್ನು ಪೊಲೀಸರೇ ನೋಡಿಕೊಳ್ಳುವ ಮೂಲಕ ಮಾನವೀಯತೆಗೆ ಸಾಕ್ಷಿಯಾದರು.

ಲಾಕ್ ಡೌನ್ ಇನ್ನೊಂದು ಮುಖ; ಆಹಾರ ಸಿಗದೇ ಪ್ರಾಣಿಗಳ ಪರದಾಟ

ಈ ಸಂದರ್ಭ ಜಿಲ್ಲಾ ಎಸ್ಪಿ ಲಕ್ಷ್ಮಇ ಪ್ರಸಾದ್‌, ಜಿ.ಪಂ. ಸಿಇಒ ಡಾ.ಸೆಲ್ವಮಣಿ, ಮಂಗಳೂರು ಎಸಿ ಮದನಮೋಹನ ಹಾಜರಿದ್ದರು. ಪೊಲೀಸರ ಈ ಕಾರ್ಯ ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆಗೆ ಒಳಗಾಗಿದೆ.

click me!