ಪ್ಲಾಸ್ಟಿಕ್ ಚೀಲ ಮಾರಾಟ ಮಾಡಬೇಡಿ ಎನ್ನುತ್ತಲೇ ಬೀದಿಗೆ ಬಂದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

By Sathish Kumar KHFirst Published Jul 3, 2024, 1:03 PM IST
Highlights

ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಬಳಸಬೇಡಿ ಎಂದು ಜಾಗೃತಿ ಮೂಡಿಸಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಬೀದಿಗೆ ಬಂದಿದ್ದಾರೆ. 

ಬೆಂಗಳೂರು (ಜು.03): ಬೆಂಗಳೂರು ನಗರದಾದ್ಯಂತ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಬಟ್ಟೆ ಚೀಲ ಅಥವಾ ಪೇಪರ್ ಚೀಲಗಳನ್ನು ಮಾತ್ರ ಬಳಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಬೀದಿಗೆ ಬಂದು ನಾಗರೀಕರು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಅರಿವು ಮೂಡಿಸಿದರು.

ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನಾಚರಣೆಯ ಅಂಗವಾಗಿ ಬುಧವಾರ ಬಿಬಿಎಂಪಿ ಪೂರ್ವ ವಲಯ ಹೆಬ್ಬಾಳ ವಿಭಾಗದ ಮುನಿರೆಡ್ಡಿ ಪಾಳ್ಯ ವ್ಯಾಪ್ತಿಯಲ್ಲಿ ಪಾಸ್ಟಿಕ್ ನಿಷೇಧದ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಗರದಾದ್ಯಂತ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಬಟ್ಟೆ ಚೀಲ ಅಥವಾ ಪೇಪರ್ ಚೀಲಗಳನ್ನು ಮಾತ್ರ ಬಳಸಲು ನಾಗರೀಕರು ಹಾಗೂ ವ್ಯಾಪಾರಿಗಳಲ್ಲಿ ಹೆಚ್ಚಾಗಿ ಅರಿವು ಮೂಡಿಸಬೇಕು. ಬೀದಿ ಬದಿ ವ್ಯಾಪಾರಿಗಳು, ಅಂಗಡಿ-ಮುಂಗಟ್ಟುಗಳಲ್ಲಿ ಮಾರಾಟ ಮಾಡುವವರಿಗೆ ಯಾವ್ಯಾವ ಪ್ಲಾಸ್ಟಿಕ್ ನಿಷೇಧವಾಗಿದೆ, ಯಾವುದನ್ನು ಬಳಸಲು ಅನುಮತಿಯಿದೆ ಎಂಬುದರ ಬಿತ್ತಿಪತ್ರಗಳನ್ನು ನೀಡಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಬೆಂಗಳೂರು 43 ರಸ್ತೆಗಳಲ್ಲಿ ಬಿಬಿಎಂಪಿ ವೈಟ್ ಟಾಪಿಂಗ್ ಕಾಮಗಾರಿ ಆರಂಭ; ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ಅಂಗಡಿಗಳಿಗೆ ಭೇಟಿ ನೀಡಿ ಬಟ್ಟೆ ಬ್ಯಾಗ್, ಪೇಪರ್ ಸ್ಟ್ರಾ ವಿತರಣೆ: ಜಾಗೃತಿ ಜಾಥಾ ಸಮಯದಲ್ಲಿ ಬೀದಿ ಬದಿ ವ್ಯಾಪಾರಿಗಳು ಹಾಗೂ ಅಂಗಡಿಗಳ ಬಳಿ ತೆರಳಿ ಬಿತ್ತಿಪತ್ರಗಳನ್ನು ವಿತರಿಸುವ ಜೊತೆಗೆ ಬಟ್ಟೆ ಚೀಲಗಳನ್ನು ವಿತರಿಸಿ ಇನ್ನು ಮುಂದೆ ಪ್ಲಾಸ್ಟಿಕ್ ಚೀಲಗಳನ್ನು ಬಳಸದೆ ಇದೇ ರೀತಿಯ ಬಟ್ಟೆ ಚೀಲಗಳನ್ನು ಮಾತ್ರ ಬಳಸಬೇಕು. ಯಾವದೇ ಕಾರಣಕ್ಕೂ ಪ್ಲಾಸ್ಟಿಕ್ ಚೀಲಗಳನ್ನು ಬಳಸಬಾರದೆಂದು ಮನವಿ ಮಾಡಿದರು. ಎಳನೀರು ಮಾರಾಟ ಮಾಡುವವರಿಗೆ ಪೇಪರ್ ಸ್ಟ್ರಾ ವಿತರಣೆ ಮಾಡಿ ಪ್ಲಾಸ್ಟಿಕ್ ನಿಂದ ತಯಾರಿಸಿದ ಉತ್ಪನ್ನಗಳನ್ನು ಯಾವುದೇ ಕಾರಣಕ್ಕೂ ಬಳಸದಂತೆ ಮನವಿ ಮಾಡಿದರು. ಇದೇ ವೇಳೆ ಸಾರ್ವಜನಿಕರಿಗೆ ಮನೆಯಿಂದಲೇ ಕೈ ಚೀಲಗಳನ್ನು ತರಲು ಅಭ್ಯಾಸಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಸ್ಥಳಿಯವಾಗಿ ಲಭ್ಯವಿರುವ ಬಟ್ಟೆ ಚೀಲಗಳನ್ನು ಖರೀದಿಸಲು ಮನವಿ ಮಾಡಿದರು.

ಬೆಂಗಳೂರು ಜನರೇ ಹುಷಾರ್‌ !ಡೆಂಘೀಗೆ 27 ವರ್ಷದ ಯುವಕ ಬಲಿ, BBMP ಹೆಲ್ತ್ ಆಡಿಟ್‌ನಲ್ಲಿ ಬಯಲು

ಮೊದಲು ಎಚ್ಚರಿಕೆ ನಂತರ ದಂಡ: ನಿಷೇಧಿತ ಪ್ಲಾಸ್ಟಿಕ್ ಬಳಸುವವರಿಗೆ ಪ್ಲಾಸ್ಟಿಕ್ ಚೀಲ ಬಳಸುತ್ತಿದ್ದರೆ ಮೊದಲು ಎಚ್ಚರಿಕೆ ನೀಡುತ್ತೇವೆ. ಮತ್ತೆ ಪ್ಲಾಸ್ಟಿಕ್ ಬಳಸುವುದು ಕಂಡುಬಂದರೆ ದಂಡ ವಿಧಿಸಲಾಗುವುದು. ಒಮ್ಮೆ ಬಳಸುವ ಪ್ಲಾಸ್ಟಿಕ್ ಪರಿಸಕ್ಕೆ ಹಾನಿಕಾರಕವಾಗಿದ್ದು, ಅದನ್ನು ನಾವೆಲ್ಲರೂ ಸೇರಿ ನಿಷೇಧಿಸೋಣ ಎಂದು ಅರಿವು ಮೂಡಿಸಿದರು. ಈ ವೇಳೆ ವಲಯ ಆಯುಕ್ತರಾದ ಸ್ನೇಹಲ್, ವಲಯ ಜಂಟಿ ಆಯುಕ್ತರಾದ ಸರೋಜಾ, ಘನತ್ಯಾಜ್ಯ ವಿಭಾಗದ ಅಧೀಕ್ಷಕ ಅಭಿಯಂತರರಾದ ವಿಶ್ವನಾಥ್, ಆರೋಗ್ಯಾಧಿಕಾರಿಗಳು, ಮಾರ್ಷಲ್‌ಗಳು, ಸ್ಥಳೀಯ ಕ್ಷೇಮಾಭಿವೃದ್ದಿ ಸಂಘದ ಸದಸ್ಯರು/ಸ್ಥಳಿಯರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

click me!