Mysuru : ವೈದ್ಯಕೀಯ ಕ್ಷೇತ್ರ ವಿಸ್ತಾರವಾಗುತ್ತಿರುವುದರಿಂದ ಆಯಷ್ಯ ಹೆಚ್ಚಳ

Published : Oct 22, 2022, 04:57 AM IST
Mysuru : ವೈದ್ಯಕೀಯ ಕ್ಷೇತ್ರ ವಿಸ್ತಾರವಾಗುತ್ತಿರುವುದರಿಂದ ಆಯಷ್ಯ ಹೆಚ್ಚಳ

ಸಾರಾಂಶ

ಪ್ರಸ್ತುತ ವೈದ್ಯಕೀಯ ಕ್ಷೇತ್ರ ವಿಸ್ತಾರವಾಗುತ್ತಿರುವುದರಿಂದ ಮನುಷ್ಯನ ಆಯುಷ್ಯ ಹೆಚ್ಚಳವಾಗುತ್ತಿದೆ ಎಂದು ಖ್ಯಾತ ಜಾನಪದ ವಿದ್ವಾಂಸ ಡಾ.ಪಿ.ಕೆ. ರಾಜಶೇಖರ್‌ ಹೇಳಿದರು.

ಮೈಸೂರು(ಅ.22): ಪ್ರಸ್ತುತ ವೈದ್ಯಕೀಯ ಕ್ಷೇತ್ರ ವಿಸ್ತಾರವಾಗುತ್ತಿರುವುದರಿಂದ ಮನುಷ್ಯನ ಆಯುಷ್ಯ ಹೆಚ್ಚಳವಾಗುತ್ತಿದೆ ಎಂದು ಖ್ಯಾತ ಜಾನಪದ ವಿದ್ವಾಂಸ ಡಾ.ಪಿ.ಕೆ. ರಾಜಶೇಖರ್‌ ಹೇಳಿದರು.

ಮೈಸೂರು (Mysuru )  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಕಲಾಕೂಟ, ಪಿರಿಯಾಪಟ್ಟಣದ ಅಮೋಘವರ್ಷ ಅಮೃತವರ್ಷಿಣಿ ಸೇವಾ

ಪ್ರತಿಷ್ಠಾನವು ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಗ್ರಾಮಾಂತರ ಬಸ್‌ ನಿಲ್ದಾಣ ಬಳಿಯ ಜಾಯ್‌ ಅಲುಕಾಸ್‌ ಕಟ್ಟಡದಲ್ಲಿರುವ ಇಂದಿರಾ ಐವಿಎಫ್‌ (IVF) ಆಸ್ಪತ್ರೆಯ ಮುಖ್ಯಸ್ಥರಾದ ಡಾ.ದಿಲೀಪ್‌ ಎಚ್‌. ರಮೇಶ್‌ ಅವರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಚಿಕಿತ್ಸಾ ಸೌಲಭ್ಯಗಳಿಂದಾಗಿ ಮನುಷ್ಯನಿಗೆ ಅಮರತ್ವ ಸಿಕ್ಕಿಲ್ಲ. ಆದರೆ ಅಮರತ್ವದ ಕಡೆಗೆ ಸಾಗುತ್ತಿದ್ದಾನೆ ಅರ್ಥಾತ್‌ ಉತ್ತಮ ಚಿಕಿತ್ಸೆಯಿಂದಾಗಿ ಹೆಚ್ಚು ಕಾಲ ಬದುಕುತ್ತಿದ್ದಾನೆ ಎಂದರು.

ನಾವು ರೈತರು, ಯೋಧರು, ವೈದ್ಯರು ಹಾಗೂ ಉಪಾಧ್ಯಾಯರನ್ನು ಯಾವತ್ತೂ ಮರೆಯುವಂತಿಲ್ಲ. ವೈದ್ಯ ನಾರಾಯಣೋ ಹರಿ ಎಂದು ವೈದ್ಯರನ್ನು ದೇವರಸಮನಾಗಿ ಕಾಣುತ್ತೇವೆ. ಸಣ್ಣಪುಟ್ಟಸಮಸ್ಯೆಗಳಿಗೂ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುತ್ತೇವೆ. ಉತ್ತಮವಾಗಿ ಚಿಕಿತ್ಸೆ ನೀಡಿ, ಪ್ರಾಣ ಕಾಪಾಡುವ ವೈದ್ಯರ ಬಗ್ಗೆ ಸದಾ ಕೃತಜ್ಞತಾಭಾವ ಹೊಂದಿರುತ್ತೇವೆ ಎಂದು ಅವರು ಹೇಳಿದರು.

ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಡಾ.ದಿಲೀಪ್‌ ಎಚ್‌. ರಮೇಶ್‌, ಕೂಡು ಕುಟುಂಬ ವ್ಯವಸ್ಥೆ ಇದ್ದಲ್ಲಿ ಮಾನಸಿಕ ಚಿಂತೆಗಳು ದೂರವಾಗಿ, ಮಧುಮೇಹ, ರಕ್ತದೊತ್ತಡದಿಂದ ದೂರ ಇರಬಹುದು. ವಿಳಂಬವಾಗಿ ಮದುವೆ, ನಂತರ ಜೀವನದಲ್ಲಿ ಬದುಕು ಕಟ್ಟಿಕೊಳ್ಳಲು ಶ್ರಮಿಸುವುದು ಮತ್ತಿತರ ಕಾರಣಗಳಿಂದಾಗಿ ಸಂತಾನ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್‌ ಮಾತನಾಡಿ, ಸಂತಾನವೈಫಲ್ಯಕ್ಕೆ ಕೇವಲ ಹೆಣ್ಣು ಮಾತ್ರ ಕಾರಣವಲ್ಲ,. ಅದಕ್ಕೆ ಗಂಡು ಕೂಡ ಕಾರಣನಾಗುತ್ತಾನೆ. ಪತಿ, ಪತ್ನಿ ಇಬ್ಬರೂ ಸಕಾಲದಲ್ಲಿ ಪರೀಕ್ಷೆ ಮಾಡಿಸಿಕೊಂಡಲ್ಲಿ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದರು.

ಪಿರಿಯಾಪಟ್ಟಣ ತಾ. ಕಸಾಪ ಮಾಜಿ ಅಧ್ಯಕ್ಷರೂ ಆದ ಗೊರಳ್ಳಿ ಜಗದೀಶ್‌ ಮಾತನಾಡಿ, ಸಂತಾನ ಶಕ್ತಿ ಹರಣ ಚಿಕಿತ್ಸೆ ಆಗಿದ್ದ ನನ್ನ ಪತ್ನಿ ಶೋಭಾಗೆ ಇಂದಿರಾ ಐವಿಎಫ್‌ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ನೆರವೇರಿಸಿ, ಮತ್ತೆ ನಮಗೆ ಮಕ್ಕಳಾಗುವಂತೆ ಮಾಡಿದ್ದಾರೆ. ಆಮೂಲಕ ಕತ್ತಲಾಗಿದ್ದ ನಮ್ಮ ಬದುಕಿಗೆ ಬೆಳಕು ನೀಡಿದ್ದಾರೆ. ಅ.12 ರಂದು ನನ್ನ ಪತ್ನಿಗೆ ಗಂಡು ಮಗು ಜನನವಾಗಿದೆ. ನನಗೆ ನನ್ನ ಪುತ್ರ ಅಮೋಘವರ್ಷ ವಾಪಸ್‌ ಬಂದಿದ್ದಾನೆ. ಅಮೃತವರ್ಷಿಣಿಯನ್ನು ಕೊಟ್ಟುಬಿಡಿ. ನೆಮ್ಮ ದಿಯಿಂದ ಜೀವನ ಸಾಗಿಸುತ್ತೇವೆ ಎಂದು ಕಣ್ಣೀರು ತುಂಬಿಕೊಂಡರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್‌ ಅಭಿನಂದನಾ ಭಾಷಣ ಮಾಡಿದರು. ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್‌ ಆಶಯ ಭಾಷಣ ಮಾಡಿದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ರವಿ ಲಕ್ಷ್ಮಣ್‌ ಮುಖ್ಯ ಅತಿಥಿಗಳಾಗಿದ್ದರು.

ಪಿರಿಯಾಪಟ್ಟಣ ರೋಟರಿ ಐಕಾನ್ಸ್‌ ಅಧ್ಯಕ್ಷ ಕೆ. ರಮೇಶ್‌, ತಾ. ಕಸಾಪ ಅಧ್ಯಕ್ಷ ನವೀನ್‌ಕುಮಾರ್‌, ತಾ. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೆಕ್ಕರೆ ಸತೀಶ್‌ ಆರಾಧ್ಯ, ರಾಜ್ಯ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯ ಜಿ. ಬಾಲಕೃಷ್ಣಯ್ಯ ಉಪಸ್ಥಿತರಿದ್ದರು. ಕಂಪ್ಲಾಪುರ ಗೋಪಾಲ್‌ ಸ್ವಾಗತಿಸಿದರು. ಮಹದೇವ ನಿರೂಪಿಸಿದರು.

ಡಾ.ಸೌಮ್ಯಾ, ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಜಿ. ಪ್ರಕಾಶ್‌, ಕಾರ್ಯದರ್ಶಿ ಮ.ನ. ಲತಾ ಮೋಹನ್‌, ಮೈ.ನಾ. ಲೋಕೇಶ್‌, ಮೈಸೂರು ರಂಗನಾಥ್‌, ಎಂ.ಜಿ. ದೇವರಾಜ್‌, ಕುಮಾರ್‌, ಗೋವಿಂದೇಗೌಡ ಮೊದಲಾದವರು ಪಾಲ್ಗೊಂಡಿದ್ದರು.

PREV
Read more Articles on
click me!

Recommended Stories

State News Live: ದಾವಣಗೆರೆ ಗದ್ದಲಕ್ಕೆ ಮತ್ತೊಂದು ತಲೆದಂಡ; ಇಂದು ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ನಜೀರ್‌ ಅಹಮದ್‌ ರಾಜೀನಾಮೆ?
ಬಂಧನವಿಲ್ಲದೆ ರಕ್ತದ ಮಾದರಿ ಸಂಗ್ರಹ ಕಾನೂನು ಬಾಹಿರ: ರೇವ್ ಪಾರ್ಟಿ ಕೇಸ್‌ನಲ್ಲಿ ಹೈಕೋರ್ಟ್ ಮಹತ್ವದ ತೀರ್ಪು!