* ಬೆಂಜ್ ಕಾರಿನ ಅತಿವೇಗದಿಂದ ಅಪಘಾತ
* 1 ಬೈಕ್, ತಲಾ 2 ಕಾರು, ಆಟೋ ಜಖಂ
* 6 ಮಂದಿಗೆ ಗಾಯ, ಬೆಂಜ್ ಚಾಲಕನ ಸ್ಥಿತಿ ಗಂಭೀರ
ಬೆಂಗಳೂರು(ಡಿ.08): ಇಂದಿರಾನಗರದ 80 ಅಡಿ ರಸ್ತೆಯ ಎಸ್ಬಿಎಂ ಎಟಿಎಂ ಬಳಿ ಅತಿ ವೇಗವಾಗಿ ಬಂದ ಐಷಾರಾಮಿ ಬೆಂಜ್ ಕಾರು(Mercedes-Benz) ಚಾಲಕನ ನಿಯಂತ್ರಣ ತಪ್ಪಿ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಆಲ್ಟೋ ಕಾರು ಚಾಲಕ ಮೃತಪಟ್ಟು(Death) ಆರು ಮಂದಿ ಗಾಯಗೊಂಡಿರುವ ಘಟನೆ ಮಂಗಳವಾರ ಹಲಸೂರು ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಪಘಾತದಲ್ಲಿ(Accident) ಆಲ್ಟೋ ಕಾರು ಚಾಲಕ ಅಸ್ಸಾಂ ಮೂಲದ ಹರಿಮಹಂತ(36) ಮೃತಪಟ್ಟಿದ್ದಾರೆ. ಬೆಂಜ್ ಕಾರು ಚಾಲಕ ಉದ್ಯಮಿ ಸುವೀತ್ ಕಾರ್ಡಿಯೋ(43) ಗಂಭೀರವಾಗಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ವಿಫ್ಟ್ ಕಾರಿನ ಚಾಲಕ ಮಹೇಶ್, ಪ್ರಯಾಣಿಕರಾದ ವಿದ್ಯಾಶ್ರೀ ಮತ್ತು ನಿಂಗನಬಾದ ಶ್ರೀನಿವಾಸ್, ಆಟೋ ರಿಕ್ಷಾ ಚಾಲಕ ನಜೀಜ್, ಮತ್ತೊಂದು ಆಟೋ ರಿಕ್ಷಾ ಚಾಲಕ ಕೃಷ್ಣ, ಪಲ್ಸರ್ ಬೈಕ್ ಸವಾರ ಆನಂದ್ಗೆ ಸಣ್ಣಪುಟ್ಟ ಗಾಯಗಳಾಗಿ ಚಿಕಿತ್ಸೆ(Treatment) ಪಡೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸರಣಿ ಅಪಘಾತದಲ್ಲಿ ಬೆಂಜ್ ಕಾರು, ಪಲ್ಸರ್ ಬೈಕ್, ಆಲ್ಟೋ ಕಾರು, ಸ್ವಿಫ್ಟ್ ಕಾರು, ಎರಡು ಆಟೋ ಜಖಂಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚನ್ನಪಟ್ಟಣ: ಸರಣಿ ಅಪಘಾತ, ಮೂರು ಮಂದಿ ದುರ್ಮರಣ
ಬೆಂಜ್ ಕಾರು ಚಾಲಕನ ಎಡವಟ್ಟು:
ಮಧ್ಯಾಹ್ನ 2.35ರ ಸುಮಾರಿಗೆ ಆನಂದ್ಕುಮಾರ್ ಎಂಬುವವರು ಪಲ್ಸರ್ ಬೈಕ್ನಲ್ಲಿ ಬೈಯಪ್ಪನಹಳ್ಳಿ ಕಡೆಯಿಂದ ಇಂದಿರಾನಗರದ 80 ಅಡಿ ರಸ್ತೆಯ ಎಸ್ಬಿಐ ಎಟಿಎಂ ಎದುರು ಹೋಗುವಾಗ ಸುವೀತ್ ವೇಗವಾಗಿ ಬೆಂಜ್ ಕಾರು ಚಾಲನೆ ಮಾಡಿಕೊಂಡು ಬಂದು ಹಿಂದಿನಿಂದ ಪಲ್ಸರ್ ಬೈಕ್ಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಬೈಕ್ ಸಹಿತ ಆನಂದ್ ಕುಮಾರ್ ರಸ್ತೆ ವಿಭಜಕದ ಮೇಲೆ ಬಿದ್ದಿದ್ದಾರೆ. ಬಳಿಕ ಸುವೀತ್ ಬೆಂಜ್ ಕಾರನ್ನು ಏಕಾಏಕಿ ಎಡಕ್ಕೆ ತಿರುಗಿಸಿ ಅಡ್ಡಾದಿಡ್ಡಿ ಮುಂದೆ ಚಲಾಯಿಸಿದ್ದಾರೆ. ಹೀಗಾಗಿ ಅದೇ ರಸ್ತೆಯ ಲೋನೋ ಹೋಟೆಲ್ ಎದುರು ಹೋಗುತ್ತಿದ್ದ ಆಲ್ಟೋ ಕಾರ್ನ ಹಿಂಭಾಗಕ್ಕೆ ಬೆಂಜ್ ಕಾರು ಡಿಕ್ಕಿಯಾಗಿದೆ(Collision). ಇದರಿಂದ ಆಲ್ಟೋ ಕಾರು ಮುಂದೆ ಹೋಗುತ್ತಿದ್ದ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ. ಸ್ವಿಫ್ಟ್ ಕಾರು ಮುಂದೆ ಹೋಗುತ್ತಿದ್ದ ಟಾಟಾ ಏಸ್ ವಾಹನದ ಹಿಂಬದಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತವಾಗಿದೆ(Serial Accident).
ಬೆಂಜ್ ಕಾರು ಚಲಾಯಿಸುತ್ತಿದ್ದ ಸುವೀತ್ ಅಡ್ಡಾದಡ್ಡಿ ಕಾರು ಚಲಾಯಿಸಿದ ಪರಿಣಾಮ ಕಾರು ರಸ್ತೆಯ ಬಲಭಾಗಕ್ಕೆ ಪಲ್ಟಿಯಾಗಿ ಮುಂದೆ ಹೋಗುತ್ತಿದ್ದ ಎರಡು ಆಟೋ ರಿಕ್ಷಾಗಳಿಗೆ ಗುದ್ದಿದೆ. ಈ ಸರಣಿ ಅಪಘಾತದಲ್ಲಿ ಆಲ್ಟೋ ಕಾರು ಚಾಲಕ ಹರಿಮಹಂತ್ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಅತಿವೇಗ, ಅಜಾಗರೂಕತೆ ಚಾಲನೆ:
ಬೆಂಜ್ ಕಾರಿನ ಅತಿವೇಗ ಹಾಗೂ ಚಾಲಕನ ಅಜಾಗರೂಕತೆಯೇ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಹೀಗಾಗಿ ಬೆಂಜ್ ಕಾರು ಚಾಲನೆ ಮಾಡುತ್ತಿದ್ದ ಸುವೀತ್ ಕಾರ್ಡಿಯೋ ವಿರುದ್ಧ ಪ್ರಕರಣ(Case) ದಾಖಲಿಸಿದ್ದು, ತನಿಖೆ ಮುಂದುವರಿದಿದೆ ಎಂದು ಬೆಂಗಳೂರು(Bengaluru) ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.
ಸಿಸಿಟಿವಿ ಟಿವಿಯಲ್ಲಿ ಅಪಘಾತ ಸೆರೆ
ಸರಣಿ ಅಪಘಾತದ ದೃಶ್ಯಾವಳಿ ಸಿಸಿಟಿವಿ(CCTV) ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ(Social MediaP) ಹರಿದಾಡುತ್ತಿದೆ. ವೇಗವಾಗಿ ಬಂದಿರುವ ಬೇಂಜ್ ಕಾರು ಚಾಲಕನ ನಿಯಂತ್ರಣ ತಪ್ಪಿ ಕಾರು, ಬೈಕ್, ಆಟೋಗಳಿಗೆ ಗುದ್ದಿ ಪಲ್ಟಿಯಾಗಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಹೆಬ್ಬಾಳ ಫ್ಲೈ ಓವರ್ ಬಳಿ ಸರಣಿ ಅಪಘಾತ; ಫುಲ್ ಟ್ರಾಫಿಕ್ ಜಾಮ್!
ಟ್ರಾಫಿಕ್ ಜಾಮ್
ಸರಣಿ ಅಪಘಾತ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯ ಜನರು ಘಟನಾ ಸ್ಥಳದಲ್ಲಿ ಜಮಾಯಿಸಿದ್ದರು. ತಿಪ್ಪಸಂದ್ರ ರಸ್ತೆಯಲ್ಲಿ ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ತಿಪ್ಪಸಂದ್ರ, ಇಂದಿರಾನಗರ 80 ಅಡಿ ರಸ್ತೆಯ ಸೇರಿದಂತೆ ಹಲವು ರಸ್ತೆಗಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು. ಸ್ಥಳಕ್ಕೆ ದೌಡಾಯಿಸಿದ ಹಲಸೂರು ಸಂಚಾರ ಠಾಣೆ ಪೊಲೀಸರು(Police), ಕೂಡಲೇ ಟೋಯಿಂಗ್ ವಾಹನ ಕರೆಸಿ ಅಪಘಾತದಲ್ಲಿ ಜಖಂ ಆಗಿದ್ದ ಬೆಂಜ್ ಕಾರು, ಆಲ್ಟೋ ಕಾರು ಹಾಗೂ ದ್ವಿಚಕ್ರವಾಹನವನ್ನು ಟೋಯಿಂಗ್ ಮಾಡಿದರು. ಬಳಿಕ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಬೆಂಜ್ ಕಾರಲ್ಲಿ 11 ವರ್ಷದ ಮಗು?
ಉದ್ಯಮಿ ಸುವೀತ್ ಕಾರ್ಡಿಯೋ ಚಲಾಯಿಸುತ್ತಿದ್ದ ಬೆಂಜ್ ಕಾರಿನಲ್ಲಿ 11 ವರ್ಷದ ಮಗುವೊಂದು ಇತ್ತು. ಅಪಘಾತದಲ್ಲಿ ಸುವೀತ್ ಹಾಗೂ ಮಗುವಿಗೆ ಗಂಭೀರ ಪೆಟ್ಟು ಬಿದ್ದಿದೆ. ಗಾಯಾಳು ಮಗುವಿನ ಬಗ್ಗೆ ಸದ್ಯಕ್ಕೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.