ಕಲಬುರಗಿ: ಪ್ರವಾಸಕ್ಕೆ ತೆರಳಿದ್ದ ನರ್ಸಿಂಗ್‌ ವಿದ್ಯಾರ್ಥಿ ಸಾವು

Published : Dec 06, 2023, 01:50 PM IST
ಕಲಬುರಗಿ: ಪ್ರವಾಸಕ್ಕೆ ತೆರಳಿದ್ದ ನರ್ಸಿಂಗ್‌ ವಿದ್ಯಾರ್ಥಿ ಸಾವು

ಸಾರಾಂಶ

ಡಿ.3ರಂದು ಗೋಕರ್ಣದ ಸಮುದ್ರ ತೀರಕ್ಕೆ ಭೇಟಿ ನೀಡಿದ್ದರು. ಐವರಲ್ಲಿ ಮೊದಲು ಇಬ್ಬರು ಸಮುದ್ರಕ್ಕಿಳಿದು ಇನ್ನೊಬ್ಬನನ್ನು ಕರೆದಿದ್ದಾರೆ. ಈ ವೇಳೆ ಅಲೆಗಳು ಬಂದು ಆಕಾಶ ಹಾಗೂ ಅಭಿಷೇಕ್ ಇಬ್ಬರು ಯುವಕರು ನೀರು ಪಾಲಾದರೆ, ಇನ್ನೊಬ್ಬ ಯುವಕ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಕಲಬುರಗಿ(ಡಿ.06):  ಕಲಬುರಗಿಯ ನರ್ಸಿಂಗ್ ಕಾಲೇಜೊಂದರಲ್ಲಿ ಬಿಎಸ್‌ಸಿ ನರ್ಸಿಂಗ್ ಕೊನೆಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಮಗ ಓದು ಮುಗಿಸಿ ವೈದ್ಯನಾಗಿ ಮನೆಗೆ ಆಸರೆಯಾಗುವ ಕನಸು ಕಂಡಿದ್ದ. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಗೆಳೆಯರೊಂದಿಗೆ ಪ್ರವಾಸಕ್ಕೆಂದು ಹೋಗಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಸಮುದ್ರ ಪಾಲಾಗಿದ್ದಾನೆ.

ಮೃತ ಯುವಕ ಆಕಾಶ ಬಿರಾದಾರ (25) ಮೃತ ದುರ್ದೈವಿ. ಕೆಲ ದಿನಗಳ ಹಿಂದೆ ತನ್ನ ಗೆಳೆಯೊಬ್ಬನ ಮದುವೆ ಸಿದ್ಧತೆ ನಡೆದಿತ್ತು. ಮದುವೆಗೂ ಮುನ್ನ ಎಲ್ಲರೂ ರಾಜ್ಯ ಪ್ರವಾಸ ಮಾಡೋಣವೆಂದು ಐವರು ಗೆಳೆಯರು ಕೂಡಿಕೊಂಡು ಕಾರು ಬಾಡಿಗೆಗೆ ಪಡೆದು ಪ್ರವಾಸಿ ತಾಣಗಳನ್ನು ವೀಕ್ಷಿಸಲು ಹೋಗಿದ್ದರು.

ಬಿಜೆಪಿಯಿಂದ ಜಾತಿ, ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ: ಸಚಿವ ಪ್ರಿಯಾಂಕ್ ಖರ್ಗೆ

ಡಿ.3ರಂದು ಗೋಕರ್ಣದ ಸಮುದ್ರ ತೀರಕ್ಕೆ ಭೇಟಿ ನೀಡಿದ್ದಾರೆ. ಐವರಲ್ಲಿ ಮೊದಲು ಇಬ್ಬರು ಸಮುದ್ರಕ್ಕಿಳಿದು ಇನ್ನೊಬ್ಬನನ್ನು ಕರೆದಿದ್ದಾರೆ. ಈ ವೇಳೆ ಅಲೆಗಳು ಬಂದು ಆಕಾಶ ಹಾಗೂ ಅಭಿಷೇಕ್ ಇಬ್ಬರು ಯುವಕರು ನೀರು ಪಾಲಾದರೆ, ಇನ್ನೊಬ್ಬ ಯುವಕ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಕಣ್ಣೀರಲ್ಲಿ ಕೈತೊಳೆಯುತ್ತಿರುವ ಕುಟುಂಬಕ್ಕಿಗ ದಿಕ್ಕು ತೋಚದಂತಾಗಿದೆ:

ಸಮುದ್ರ ಪಾಲಾದ ಆಕಾಶ್‌ನನ್ನು ಸ್ಥಳೀಯ ಮೀನುಗಾರರು, ಕಡಲ ರಕ್ಷಣಾ ತಂಡದವರು ಉಳಿಸುವ ಪ್ರಯತ್ನ ಮಾಡಿದರಾದರೂ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಆಕಾಶ ಉಸಿರು ಚೆಲ್ಲಿದ್ದಾನೆ. ವಿಷಯ ತಿಳಿದ ಕುಟುಂಬಸ್ಥರಿಗೆ ಸಿಡಿಲು ಬಡಿದಂತಾಗಿತ್ತು. ನರ್ಸಿಂಗ್ ಮುಗಿಸಿ ವೈದ್ಯನಾಗಬೇಕೆಂದಿದ್ದ, ಹಳೆ ಮನೆ ಕೆಡವಿ ಹೊಸ ಮನೆ ಕಟ್ಟಿಸುತ್ತೇನೆಂದು ತಾಯಿಗೆ ಮಾತು ಕೊಟ್ಟಿದ್ದ. ಅಣ್ಣ ಇನ್ನೂ ಮುಂದೆ ನಮಗೆ ಕಷ್ಟಗಳು ಬರುವುದಿಲ್ಲ, ಒಳ್ಳೆಯ ಬದುಕು ಸಾಗಿಸೋಣವೆಂದು ಭರವಸೆ ಮೂಡಿಸಿದ್ದ. ಕೊನೆಗೆ ಎಲ್ಲರ ಆಸೆ, ನಿರೀಕ್ಷೆಗಳಿಗೆ ಉತ್ತರವಿಲ್ಲದಂತಾಗಿ ತನ್ನ ಕನಸುಗಳನ್ನು ಕೂಡ ಸಮುದ್ರ ಪಾಲು ಮಾಡಿಕೊಂಡು ಈಗ ಕುಟುಂಬಸ್ಥರೆಲ್ಲ ಕಣ್ಣಿರಲ್ಲಿ ಕೈ ತೊಳೆಯುವಂತೆ ಮಾಡಿದ್ದಾನೆ.

ನೌಕರರ ಪ್ರತಿಭಟನೆ ಎಫೆಕ್ಟ್‌: ಕಲಬುರಗಿಯ ಡಯಾಲಿಸಿಸ್‌ ಸೇವೆಯಲ್ಲಿ ತೀವ್ರ ವ್ಯತ್ಯಯ

ಮುಗಲ್ ಹರದು ಮ್ಯಾಲ್ ಬಿದ್ದಾದ ಯವ್ವೋ:

ಮೃತ ಯುವಕನ ತಾಯಿ ಕಸ್ತೂರಿಬಾಯಿ (52) ಇವರು ಕೂಡ ಅನಾರೋಗ್ಯದಿಂದ ಬಳಲುತ್ತಿದ್ದು ನಿತ್ಯ ಮಾತ್ರೆ ನುಂಗಿ ದಿನ ದೂಡುತ್ತಿದ್ದಾರೆ. ವೈದ್ಯನಾಗಿ ನನ್ನನ್ನು ಆರೋಗ್ಯವಾಗಿಡುತ್ತೇನೆಂದಿದ್ದ ಮಗ ಈಗ ಸಮುದ್ರ ಪಾಲಾದನಲ್ಲ. ಮೇಲಿನ ಮುಗಿಲು ಹರಿದು ಮೇಲೆ ಬಿದ್ದಂತಾಗಿದೆ ಎಂದು ಮೃತ ಯುವಕನ ತಾಯಿ ರೋಧಿಸುತ್ತಿರುವುದು ನೆರೆದಿದ್ದವರ ಕಣ್ಣಾಲಿ ತುಂಬುವಂತೆ ಮಾಡಿತ್ತು.

ನನ್ನ ಮಗ ಬಹಳ ಜಾಣ, ಬಿಎಸ್‌ಸಿ ನರ್ಸಿಂಗ್ ಓದುತ್ತಿದ್ದ. ಇನ್ನೇನು ಓದು ಮುಗಿಸಿ ಕೆಲಸ ಮಾಡಿ ಮನೆ ಕಟ್ಟಿಸುತ್ತೇನೆ, ನನ್ನನ್ನು ಸಂಪೂರ್ಣ ಗುಣಮುಖ ಮಾಡುತ್ತೇನೆ ಎಂದು ದೊಡ್ಡ ದೊಡ್ಡ ಕನಸುಗಳನ್ನು ಕಟ್ಟಿಕೊಂಡಿದ್ದ. ನಮ್ಮಂತ ಬಡವರಿಗೆ ಇಂತಹ ದೊಡ್ಡ ಕನಸುಗಳು ಕಾಣುವುದೇ ದೇವರಿಗೆ ಇಷ್ಟವಾಗಲಿಲ್ಲವೇನೋ. ನನ್ನ ಮಗ ಈಗ ಇಲ್ಲವಾಗಿ ನಮ್ಮ ಮನೋಬಲ ಕುಗ್ಗಿ ಹೋಗಿದೆ. ದೇವರಿಗೆ ಈಗ ಬಲು ಖುಷಿಯಾಗಿರಬೇಕು ಎಂದು ಮೃತ ಯುವಕನ ತಾಯಿ ಕಸ್ತೂರಿಬಾಯಿ ತಿಳಿಸಿದ್ದಾರೆ.  

PREV
Read more Articles on
click me!

Recommended Stories

ಈಗ ಮೆಟ್ರೋ ಪಾಸ್‌ ₹ 50 ಅಗ್ಗದ ದರದಲ್ಲಿ ಲಭ್ಯ
ಹೋಟೆಲ್‌ ತಿಂಡಿ ದರ ಏರಿಕೆಗೆ ಕಡಿವಾಣ ಹಾಕುವಂತೆ ಗ್ರಾಹಕರ ಒತ್ತಾಯ