ಕೊಪ್ಪಳದಲ್ಲಿ ಶುರುವಾಯ್ತಾ ಕೊರೋನಾ ಆತಂಕ ?

By Kannadaprabha NewsFirst Published Mar 8, 2020, 1:27 PM IST
Highlights

ಕೊಪ್ಪಳ ಜಿಲ್ಲೆಯಲ್ಲಿ ಇದೆಯಾ ಕೊರೋನಾ ಭಯ ಈ ಬಗ್ಗೆ ವೈದ್ಯಾಧಿಕಾರಿಗಳು ನೀಡಿರುವ ಸ್ಪಷ್ಟನೆ  ಏನು..? ಇಲ್ಲಿದೆ ಮಾಹಿತಿ 

ಕೊಪ್ಪಳ (ಮಾ.08): ಹೊಸಳ್ಳಿ ಗ್ರಾಮವಲ್ಲದೇ, ಜಿಲ್ಲೆಯಲ್ಲಿ ಯಾವುದೇ ಕರೋನಾ ವೈರಸ್ ಪ್ರಕರಣಗಳು ಇದುವರೆಗೂ ಪತ್ತೆಯಾಗಿರುವುದಿಲ್ಲ. ಜನರು ಆತಂಕ, ಭಯಪಡದೆ ನಿರ್ಭಯವಾಗಿ ಇರಬೇಕೆಂದು ತಾಲೂಕು ವೈದ್ಯಾಧಿಕಾರಿ ಡಾ. ರಾಮಾಂಜನೇಯ ಹೇಳಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಘಟಕ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಇಂದರಗಿ, ಗ್ರಾಮ ಪಂಚಾಯಿತಿ ಕಾರ್ಯಾಲಯ ಹೊಸಳ್ಳಿ ಆಶ್ರಯದಲ್ಲಿ ಹೊಸಳ್ಳಿ ಗ್ರಾಪಂ ಸಭಾಂಗಣದಲ್ಲಿ ಕರೋನಾ ವೈರಸ್ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹೊಸಳ್ಳಿ ಗ್ರಾಮಕ್ಕೆ ವಿದೇಶಿದಿಂದ ಬಂದ ಕುಟುಂಬದ ಸದಸ್ಯರಿಗೆ ಕರೋನಾ ವೈರಸ್ ಇರುವುದಿಲ್ಲ. ಈ ರೋಗವು ವಿದೇಶ ಮತ್ತು ಬೇರೆ ರಾಜ್ಯಗಳಿಂದ ಬರುವ ನಿರೀಕ್ಷೆ ಇರುವುದರಿಂದ, ಸೋಂಕಿತ ವ್ಯಕ್ತಿಯು ಕೆಮ್ಮಿದಾಗ, ಸೀನಿದಾಗ, ರೋಗಿಯ ಜೊತೆ ನಿಕಟ ಸಂಪರ್ಕವಿದ್ದಾಗ, ವ್ಯಕ್ತಿಯ ಜೊತೆ ಹಸ್ತಲಾಘವ ಮಾಡುವುದರಿಂದ, ಸೋಂಕಿತ ವ್ಯಕ್ತಿ ಬಳಸಿದ ವಸ್ತುಗಳನ್ನು ಬಳಸುವುದರಿಂದ, ಸುರಕ್ಷಿತವಲ್ಲದ ಕೈಗಳಿಂದ ಕಣ್ಣು, ಮೂಗು, ಬಾಯಿ ಮುಟ್ಟುವುದರಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಆದ್ದರಿಂದ ಜನರು ಜಾಗೃತಿ ವಹಿಸಬೇಕು. ಜ್ವರ, ನೆಗಡಿ, ತಲೆನೋವು, ಕೆಮ್ಮು, ಉಸಿರಾಟದಲ್ಲಿ ತೊಂದರೆ, ಭೇದಿಯಾಗುವುದು, ಕರೋನಾ ವೈರಸ್ ರೋಗದ ಲಕ್ಷಣಗಳಾಗಿದ್ದು, ಈ ಲಕ್ಷಣಗಳು ಕಾಣಿಸಿಕೊಂಡಲ್ಲಿ ರೋಗಿಯು ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಡಿಸಿಕೊಳ್ಳಬೇಕು ಎಂದು ಹೇಳಿದರು.

ಕೊರೋನಾ ಬೆನ್ನಲ್ಲೇ ಬೆಂಗಳೂರಿಗೆ ಕಾಲಿಟ್ಟ ವಿಚಿತ್ರ ರೋಗಗಳು...

ಸೋಂಕು ಪೀಡಿತರ ಸಂಪರ್ಕದಿಂದ ದೂರವಿರುವುದು, ಶಂಕಿತ ರೋಗಿಯು ಮನೆಯಲ್ಲಿಯೇ ಪ್ರತ್ಯೇಕವಾಗಿರುವುದು ಮತ್ತು ಟ್ರಿಪಲ್ ಲಿಯರ್ ಮಾಸ್ಕ್ ಬಳಸುವುದು, ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊ ಳ್ಳುವುದು, ವಿಶೇಷವಾಗಿ ಆಗಾಗ್ಗೆ ಸಾಬೂನ್ ನಿಂದ ಕೈತೊಳೆದುಕೊಳ್ಳುವುದು, ಕೆಮ್ಮುವಾಗ, ಸೀನುವಾಗ ಮಾಸ್ಕ್ ಅಥವಾ ಕೈವಸ್ತ್ರ ಉಪಯೋಗಿಸುವುದು, ಸಾರ್ವಜನಿಕ ಸ್ಥಳಗಳ ಲ್ಲಿ ಉಗುಳದಿರುವುದು, ಉಸಿರಾಟ ತೊಂದರೆ ಯಾದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯುವುದು, ಮಾಂಸ, ಮೊಟ್ಟೆ ಇತ್ಯಾದಿಗಳನ್ನು ಚೆನ್ನಾಗಿ ಬೇಯಿಸಿ ಉಪಯೋಗಿಸುವುದು, ಅಸುರಕ್ಷಿತ ಕಾಡುಪ್ರಾಣಿ ಅಥವಾ ಸಾಕು ಪ್ರಾಣಿಗಳನ್ನು ಮುಟ್ಟುವುದು ಇತ್ಯಾದಿ ಸುರಕ್ಷಿತ ಮುಂಜಾಗೃತಾ ಕ್ರಮಗಳನ್ನು ಜನರು ಅನುಸರಿಸಬೇಕು ಎಂದು ತಿಳಿಸಿದರು. 

ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ತಂಡಗಳನ್ನು ರಚಿಸಿಕೊಂಡು ವಾರ್ಡ್‌ಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಕೊರೋನಾ ವೈರಸ್ ಬಗ್ಗೆ ಕರಪತ್ರ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ. ಯಾರೂ ಭಯ, ಆತಂಕಪಡದೆ ಸಕರಾತ್ಮಕವಾಗಿ ಮಾಹಿತಿಗಳನ್ನು ಪಡೆದುಕೊಂಡು ಮುಂಜಾಗೃತಾ ಕ್ರಮಗಳನ್ನು ಅನುಸರಿಸಬೇಕು ಎಂದರು. 

click me!