
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಆಷಾಢ ಶುಕ್ರವಾರಗಳ ವಿಶೇಷ ಪೂಜೆ ಹಾಗೂ ದರ್ಶನಕ್ಕೆ ಜಿಲ್ಲಾಡಳಿತ ಮತ್ತು ಪ್ರಾಧಿಕಾರವು ಬರೋಬ್ಬರಿ 2,000 ರೂಪಾಯಿಗಳ ದುಬಾರಿ ಟಿಕೆಟ್ ದರ ನಿಗದಿಪಡಿಸಿರುವುದಕ್ಕೆ ಭಕ್ತ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಈ ವಿವಾದಾತ್ಮಕ ನಿರ್ಧಾರದ ಕುರಿತು ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಅಧಿಕಾರಿಗಳ ಏಕಪಕ್ಷೀಯ ಧೋರಣೆಯನ್ನು ಖಂಡಿಸಿದ್ದಾರೆ.
ಆಷಾಢ ಶುಕ್ರವಾರದ ಪ್ರಯುಕ್ತ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಿ ವಿಶೇಷ ದರ್ಶನಕ್ಕೆ ಇಷ್ಟೊಂದು ದುಬಾರಿ ದರದ ಅಂದರೆ 2 ಸಾವಿರ ರೂ.ಗಳ ಟಿಕೆಟ್ ನಿಗದಿಪಡಿಸುವ ಯಾವುದೇ ಅವಶ್ಯಕತೆ ಇರಲಿಲ್ಲ. ಇಷ್ಟು ದುಬಾರಿ ದರವನ್ನು ಅಧಿಕಾರಿಗಳು ಯಾವ ಆಧಾರದ ಮೇಲೆ ನಿರ್ಧಾರ ಮಾಡಿದ್ದಾರೋ ತಿಳಿಯದು. ನನಗಿರುವ ಮಾಹಿತಿಯಂತೆ, ಈ ಬಗ್ಗೆ ಯಾವುದೇ ಪೂರ್ವಭಾವಿ ಸಭೆಗಳನ್ನು ಸರಿಯಾಗಿ ನಡೆಸಿಲ್ಲ. ಏಕಾಏಕಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜನಸಾಮಾನ್ಯರ ಹಾಗೂ ಭಕ್ತಾದಿಗಳ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತೀವ್ರ ಬೇಸರ ವ್ಯಕ್ತಪಡಿಸಿದರು.
2,000 ರೂ.ಗಳ ಈ ವಿಶೇಷ ದರ್ಶನದ ಟಿಕೆಟ್ಗಳನ್ನು ಭಕ್ತರು ಆನ್ಲೈನ್ ಮೂಲಕ ಖರೀದಿಸಬೇಕೇ ಅಥವಾ ದೇವಸ್ಥಾನದ ಕೌಂಟರ್ನಲ್ಲೇ ನೇರವಾಗಿ ಪಡೆಯಬೇಕೇ ಎಂಬ ಬಗ್ಗೆ ಪ್ರಾಧಿಕಾರವಾಗಲಿ, ಅಧಿಕಾರಿಗಳಾಗಲಿ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ಗೊಂದಲಕಾರಿ ನಿಯಮಗಳ ಬಗ್ಗೆ ಕಿಡಿಕಾರಿದರು.
ಈ ಹಿಂದೆ ಇದ್ದ 300 ರೂಪಾಯಿ ಮುಖಬೆಲೆಯ ವಿಶೇಷ ದರ್ಶನದ ಟಿಕೆಟ್ಗಳನ್ನು ಈ ಬಾರಿ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಅದರ ಜಾಗದಲ್ಲಿ ಕೇವಲ 2,000 ರೂಪಾಯಿಗಳ ಪ್ರೀಮಿಯಂ ಟಿಕೆಟ್ ಪಡೆದವರಿಗೆ ಮಾತ್ರ ನೇರ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಆಷಾಢದ ದಿನಗಳಲ್ಲಿ ಸಾಮಾನ್ಯ ಭಕ್ತಾದಿಗಳಿಗೆ ಬೆಳಗ್ಗೆ 8 ಗಂಟೆಯಿಂದ ದರ್ಶನದ ವ್ಯವಸ್ಥೆ ಇರಲಿದೆ. ವಿಐಪಿ (VIP) ದರ್ಶನಕ್ಕೆ ಪ್ರತ್ಯೇಕವಾಗಿ ಬೆಳಗ್ಗೆ 5.30 ರಿಂದ 9.30 ರವರೆಗೆ ಮಾತ್ರ ಸಮಯ ನಿಗದಿಪಡಿಸಲಾಗಿದೆ. ಆಷಾಢದ ಪ್ರಮುಖ ದಿನಗಳಲ್ಲಿ ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಭಕ್ತರ ಅನುಕೂಲಕ್ಕಾಗಿ ಲಲಿತ ಮಹಲ್ ಮೈದಾನದಿಂದ ಪ್ರತಿ ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಕೆಎಸ್ಆರ್ಟಿಸಿ (KSRTC) ವತಿಯಿಂದ ಉಚಿತ ಶಟಲ್ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಜು.17ರಂದು ಮೊದಲ ಆಷಾಢ ಶುಕ್ರವಾರ, ಜು.24 ರಂದು 2ನೇ ಆಷಾಢ ಶುಕ್ರವಾರ, ಜು.31ರಂದು 3ನೇ ಆಷಾಢ ಶುಕ್ರವಾರ, ಆ.4ರಂದು ಅಮ್ಮನವರ ಜನ್ಮೋತ್ಸವ, ಆ.7 ರಂದು 4ನೇ ಆಷಾಢ ಶುಕ್ರವಾರ ನಡೆಯುತ್ತದೆ.
ತಾಯಿಯ ದರ್ಶನಕ್ಕೆ ಬರುವ ಶ್ರೀಮಂತರಿಗೆ ಮಾತ್ರ ಮಣೆ ಹಾಕಿ, ಬಡ ಹಾಗೂ ಮಧ್ಯಮ ವರ್ಗದ ಭಕ್ತರಿಗೆ ತಾರತಮ್ಯ ಎಸಗಲಾಗುತ್ತಿದೆ ಎಂಬ ಆಕ್ರೋಶದ ನಡುವೆ, ರಾಜವಂಶಸ್ಥರೇ ಈ ದರ ಏರಿಕೆಯ ವಿರುದ್ಧ ಧ್ವನಿ ಎತ್ತಿರುವುದು ಈಗ ಮೈಸೂರು ಜಿಲ್ಲಾಡಳಿತ ಉತ್ತರಿಸಬೇಕಾಗಿದೆ.