ಕೊರಗಜ್ಜನಿಗೆ ದೇವಾಲಯ ಕಟ್ಟಿಸಿ ದಿನನಿತ್ಯ ಪೂಜೆ ಸಲ್ಲಿಸುತ್ತಿರುವ ಮುಸ್ಲಿಂ ವ್ಯಕ್ತಿ!

By Kannadaprabha NewsFirst Published Apr 3, 2021, 3:19 PM IST
Highlights

ಕೊರಗಜ್ಜನಿಗೆ ದೇವಾಲಯ ಕಟ್ಟಿಸಿದ ಮುಸ್ಲಿಂ ವ್ಯಕ್ತಿ| 19 ವರ್ಷಗಳಿಂದ ನಿರಂತರ ಪೂಜೆ | ಕೆಲಸ ಹುಡುಕಾಟದಲ್ಲಿ ಕರ್ನಾಟಕಕ್ಕೆ ಬಂದಿದ್ದ ಮುಸ್ಲಿಂ ಕುಟುಂಬ | ಸೌಹಾರ್ದತೆಯ ಸಂದೇಶ ಸಾರುತ್ತಿರುವ 65 ವರ್ಷದ ಪಿ ಖಾಸಿಮ್ ಸಾಹಿಬ್ 

ಮಂಗಳೂರು(ಏ.03): ಕೇರಳ ಮೂಲದ 65 ವರ್ಷದ ಮುಸ್ಲಿಮ್ ವ್ಯಕ್ತಿಯೊಬ್ಬ ಸ್ವಾಮಿ ಕೊರಗಜ್ಜನಿಗೆ ದೇವಾಲಯ ಕಟ್ಟಿಸಿದ್ದಾರೆ. ಅವರು ಇಲ್ಲಿಯೇ ಕಳೆದ 19 ವರ್ಷಗಳಿಂದ ಪೂಜೆ ಮಾಡುತ್ತಿದ್ದು, ಸೌಹಾರ್ದತೆಯ ಸಂದೇಶ ಸಾರುತ್ತಿದ್ದಾರೆ.  

ಕೇರಳದ ಪಲಕಾಡ್ ಜಿಲ್ಲೆಯ ಪಿ ಖಾಸಿಮ್ ಸಾಹಿಬ್ 35 ವರ್ಷಗಳ ಹಿಂದೆ ತಮ್ಮ ಕುಟುಂಬದ ಜೊತೆಗೆ ಉದ್ಯೋಗಕ್ಕಾಗಿ ಕರ್ನಾಟಕಕ್ಕೆ ಬಂದು, ಮಂಗಳೂರಿನಿಂದ 40 ಕಿ.ಮೀ ದೂರದ ಮುಲ್ಕಿಯ ಕವತಾರು ಗ್ರಾಮದಲ್ಲಿ ನೆಲೆ ನಿಂತಿದ್ದರು. 

ಕೊರಗಜ್ಜನ ಹುಂಡಿಗೆ ಕಾಂಡೋಮ್, ಅಶ್ಲೀಲ ಬರಹ : ಓರ್ವ ಸಾವು- ಮತ್ತಿಬ್ಬರು ಶರಣು

ಖಾಸಿಮ್ ತಮ್ಮ ಹೆಂಡತಿ ಮತ್ತು ಐವರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಅವರ ಜೀವನ ಅಷ್ಟೇನೂ ಸುಖಕರವಾಗಿರಲಿಲ್ಲ. ಅಂಥ ಸಂದರ್ಭದಲ್ಲಿಯೂ ಖಾಸಿಮ್ ಕಾಲಿಗೆ ಗಾಯವಾಗಿ ತೊಂದರೆಗೊಳಗಾಗಿದ್ದಾರೆ. ಆಗ ಖಾಸಿಮ್ ಗ್ರಾಮದ ಪಾತ್ರಿ ಒಬ್ಬರನ್ನು ಭೇಟಿಯಾಗುತ್ತಾರೆ. ಸ್ನೇಹತರೊಬ್ಬರ ಹತ್ತಿರ ತಮ್ಮ ಸಮಸ್ಯೆ ಹೇಳಿಕೊಂಡಾಗ, ಅವರು ಕೊರಗಜ್ಜನಿಗೆ ದೇವಾಲಯ ಕಟ್ಟುವಂತೆ ಸಲಹೆ ಕೊಡುತ್ತಾರೆ. ಹಾಗಾಗಿ ಅವರ ಸಲಹೆಯಂತೆ ಖಾಸಿಮ್ ಚಿಕ್ಕದೊಂದು ಜಾಗದಲ್ಲಿ ದೇವಾಲಯವನ್ನು ಕಟ್ಟುತ್ತಾರೆ.

ಪ್ರತಿದಿನ ಕೊರಗಜ್ಜನ ಈ ದೇವಾಲಯಕ್ಕೆ ಸುಮಾರು 50 ಜನ ಪೂಜೆ ಸಲ್ಲಿಸುತ್ತಾರೆ. ಇಲ್ಲಿ ಕೊರಗಜ್ಜನ ಮೂರ್ತಿ ಜೊತೆಗೆ ಕೊರಗತ್ತಿ ಮೂರ್ತಿ ಕೂಡ ಇದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಇಲ್ಲಿ ಕೋಲ ಉತ್ಸವ ಕೂಡ ನಡೆಯುತ್ತದೆ. ಈ ಗ್ರಾಮದಲ್ಲಿ ಸುಮಾರೊ 1,500 ಜನಸಂಖ್ಯೆ ಇದ್ದು ಎಲ್ಲ ಧರ್ಮದ ಎಲ್ಲ ಜಾತಿಯ ಜನರು ಕೂಡ ಇಲ್ಲಿ ಪೂಜೆ ಸಲ್ಲಿಸುತ್ತಾರೆ.

ಪವಾಡ ಪುರುಷ ಕೊರಗಜ್ಜನ ಹುಂಡಿಯಲ್ಲಿ ಕಾಂಡೋಮ್

ಇತ್ತಿಚಿಗೆ ಮಂಗಳೂರಿನಲ್ಲಿ ಕೊರಗಜ್ಜನ ದೇವಾಲಯದ ಕಾಣಿಕೆ ಹುಂಡಿಗೆ ಕಾಂಡೋಮ್, ಅಶ್ಲೀಲ ಬರಹದ ಚೀಟಿ ಹಾಕಿ, ದುಷ್ಕರ್ಮಿಗಳು ಅಪಚಾರ ಎಸೆಗಿದ್ದರು. ಈ ಕೃತ್ಯದ ಬಳಿಕ ಅಪಚಾರ ಎಸಗಿದವರು ಹಲವು ಸಂಕಷ್ಟಕ್ಕೆ ಒಳಗಾಗಿದ್ದರು. ಅದರಲ್ಲಿ ಓರ್ವ ಆರೋಪಿ ಕೆಲವು ದಿನಗಳ ಹಿಂದೆ ಹುಚ್ಚು ಹಿಡಿದು, ಗೋಡೆಗೆ ತಲೆ ಗುದ್ದಿ ಕೊನೆಯುಸಿರು ಎಳೆದಿದ್ದಾನೆ ಎನ್ನಲಾಗಿದೆ. ಇದರಿಂದ ಭಯಗೊಂಡ ಇನ್ನಿಬ್ಬರು ಆರೋಪಿಗಳು ಕೊರಗಜ್ಜನ ಕೋಲಾದಲ್ಲಿ ದೈವಕ್ಕೆ ಶರಣಾಗಿ ತಪ್ಪೊಪ್ಪಿಕೊಂಡಿದ್ದರು. ಆಗ, ಇವರಿಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿದ್ದು, ಕೊರಗಜ್ಜನಿಗೆ ಅಪಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

"

ಕೊರಗಜ್ಜ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜನಪ್ರಿಯ ದೈವ. ಬೆಲೆ ಬಾಳುವ ವಸ್ತು ಕಳೆದು ಹೋದರೆ, ಆರೋಗ್ಯ ಸಮಸ್ಯೆ ಬಂದರೆ, ಮೊದಲು ಹರಕೆ ಹೊತ್ತು ಕೊಳ್ಳುವುದು ಕೊರಗಜ್ಜನಿಗೆ. ಹಲವೆಡೆ ಹರಕೆ ಈಡೇರಿದ್ದೂ ಇದೆ. ಕೊರಗಜ್ಜನ ಮೂಲಸ್ಥಾನ ಮಂಗಳೂರು ಸಮೀಪದ ಕುತ್ತಾರು.

ಅನಾಥ ಮಗು ಕೊರಗ ತನಿಯನನ್ನು ಒಬ್ಬ ಸೇಂದಿ ಮಾರುವ ಹೆಂಗಸು ಸಾಕುತ್ತಾಳೆ. ಈತ ಮುಂದೆ ತನ್ನ ಅಸಾಮಾನ್ಯ ಕೆಲಸಗಳಿಂದ ಪ್ರಸಿದ್ಧನಾಗುತ್ತಾನೆ. ಹಣ್ಣು ಕೊಯ್ಯಲು ಹೋದವ ಅಲ್ಲಿಂದ ಮಾಯವಾಗುತ್ತಾನೆ ಎಂಬ ವಿವರ ತುಳುನಾಡಿನ ಜನಪದೀಯ ಹಾಡು ಪಾಡ್ದನದಲ್ಲಿ ಬರುತ್ತದೆ. ಈತ ಮುಂದೆ ತನ್ನ ನೆಲದ ಜನರನ್ನು ಕಾಯುವ ಭರವಸೆ ನೀಡಿದ. ಅದಕ್ಕೆ ಪ್ರತಿಯಾಗಿ ಇಲ್ಲಿನ ಜನರೂ ಏಳು  ಕಲ್ಲುಗಳಲ್ಲಿ ಕೊರಗಜ್ಜನನ್ನು ಪೂಜಿಸತೊಡಗಿದರು ಎನ್ನಲಾಗಿದೆ. 

ಈ ದೈವನಿಗೆ ಅವಮಾನಿಸಿದವರು ಇದುವರೆಗೂ ಒಂದಲ್ಲೊಂದು ಸಂಕಷ್ಟದಲ್ಲಿ ಸಿಕ್ಕಿ ಹಾಕಿಕೊಂಡಿದ್ದಕ್ಕೆ ಹಲವು ಪುರಾವೆಗಳಿವೆ. ಆದರೂ, ಕೆಲವು ಸಮಾಜ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರು ಹಾಗೂ ಕೋಮು ಸೌಹಾರ್ದ ಹಾಳುಗೆಡವಲು ಕೊರಗಜ್ಜನಿಗೆ ಅಪಚಾರ ಎಸಗುತ್ತಲೇ ಇರುತ್ತಾರೆ. ಅನುಭವಿಸ ಬಾರದ್ದನ್ನು ಅನುಭವಿಸುತ್ತಾರೆ. ಒಟ್ಟಿನಲ್ಲಿ ಆ ಆಧುನಿಕ ಯುಗದಲ್ಲಿಯೂ ಈ ಕೊರಗಜ್ಜ ತನ್ನ ಮಹಿಮೆ ತೋರುವುದು, ವಿಜ್ಞಾನಕ್ಕೂ ಒಂದು ಸವಾಲಾಗಿ ಪರಿಣಮಿಸದೆ. 

click me!