ಸಂಸದ ರಮೇಶ್ ಜಿಗಜಿಣಗಿ ಆರೋಗ್ಯದಲ್ಲಿ ಏರುಪೇರು; ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲು

By Sathish Kumar KHFirst Published Jan 28, 2024, 6:44 PM IST
Highlights

ದಿಢೀರ್ ತೀವ್ರ ಉಸಿರಾಟದ ತೊಂದರೆಯಿಂದ ಅಸ್ವಸ್ಥಗೊಂಡ ವಿಜಯಪುರ ಸಂಸದ ರಮೇಶ್‌ ಜಿಗಜಿಣಗಿ ಅವರನ್ನ ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಬಾಗಲಕೋಟೆ  (ಜ.28): ದಿಢೀರ್ ತೀವ್ರ ಉಸಿರಾಟದ ತೊಂದರೆಯಿಂದ ಅಸ್ವಸ್ಥಗೊಂಡ ವಿಜಯಪುರ ಸಂಸದ ರಮೇಶ್‌ ಜಿಗಜಿಣಗಿ ಅವರನ್ನ ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಇವತ್ತು ಬೆಳಗಾವಿ ಮೂಲಕ ದೆಹಲಿಗೆ ತೆರಳಬೇಕಿತ್ತು. ಆದ್ರೆ ಬಾಗಲಕೋಟೆ ಮೂಲಕ ಬೆಳಗಾವಿಗೆ ತೆರಳಬೇಕಾದ ಸಂದರ್ಭದಲ್ಲಿ ದಿಢೀರನೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣ ಸಂಸದ ರಮೇಶ್ ಜಿಗಜಿಣಗಿ ಅವರನ್ನು ಸ್ಥಳೀಯ ಕುಮಾರೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗಿದೆ. ಕಳೆದೊಂದು ವಾರದಿಂದ ಸಂಸದರಿಗೆ ನ್ಯುಮೋನಿಯಾ ಸಮಸ್ಯೆ ಕಾಡುತ್ತಿತ್ತಂತೆ. ಹೀಗಾಗಿ ದೆಹಲಿಗೆ ತೆರಳಬೇಡಿ ಎಂದು ಕುಟುಂಬಸ್ಥರು ಸಲಹೆ ನೀಡಿದ್ದರು. ಆದ್ದರಿಂದ ಲೋಕಸಭಾ ಚುನಾವಣೆಯ ಕಾರ್ಯ ನಿಮಿತ್ತ ದೆಹಲಿಗೆ ಹೋಗಬೇಕಿದ್ದರೋ ಆ ಪ್ರವಾಸವನ್ನು ಕೂಡ ರದ್ದುಗೊಳಿಸಿ ಮನೆಯಲ್ಲಿದ್ದರು. 

ಹಿಂದೂಗಳನ್ನು ಹತ್ತಿಕ್ಕಲು ರಾಷ್ಟ್ರ ಧ್ವಜಾರೋಹಣದ ನಿಯಮ ಉಲ್ಲಂಘಿಸಿದ ಜಿಲ್ಲಾಡಳಿತ: ಆರ್. ಅಶೋಕ್ ಕಿಡಿ

ಆದರೆ, ಜಿಗಜಿಣಗಿ ಅವರು ತುರ್ತು ಕಾರ್ಯದ ನಿಮಿತ್ತ ಬೆಳಗಾವಿಗೆ ತೆರಳಬೇಕಾದ ಸಮಯದಲ್ಲಿ ಬಾಗಲಕೋಟೆ ಸಮೀಪ ಉಸಿರಾಟದ ಸಮಸ್ಯೆ ಉಲ್ಭಣಿಸಿ ಸಮಸ್ಯೆ ಉಂಟಾಗಿದೆ. ಸದ್ಯ ಕುಮಾರೇಶ್ವರ ಆಸ್ಪತ್ರೆಯಲ್ಲಿ ವೈದ್ಯರಾದ ಸಮೀರ್ ಕುಲಕರ್ಣಿ ಹಾಗೂ ಸುಭಾಷ್ ಪಾಟೀಲ ಅವರು ಸಂಸದ ರಮೇಶ್ ಜಿಗಜಿಣಗಿ ಅವರಿಗೆ ಚಿಕಿತ್ಸೆ ನೀಡಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಅಲ್ಲದೇ ಸಂಸದರು ಇನ್ನೆರಡು ದಿನಗಳು ಆಸ್ಪತ್ರೆಯಲ್ಲಿಯೇ ಉಳಿದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಎರಡು ದಿನಗಳವರೆಗೆ ಆರೋಗ್ಯದ ಮೇಲೆ ನಿಗಾ ವಹಿಸಲಾಗುತ್ತಿದ್ದು, ಚೇತರಿಕೆಯಾದ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದ ಬಗ್ಗೆ ಮಾಜಿ ಶಾಸಕ ವೀರಣ್ಣ ಚರಂತಿಮಠ‌ ಹೇಳಿದ್ದಾರೆ.

ಸಂಸದ ರಮೇಶ್ ಜಿಗಜಿಣಗಿ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಬಾಗಲಕೋಟೆ ಸಂಸದ ಗದ್ದಿಗೌಡರ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ನಂತರ ಹೊರಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಮೇಶ್ ಜಿಗಜಿಣಗಿ ಅವರು ಆರೋಗ್ಯವಾಗಿದ್ದಾರೆ. ನಾನು ಕೂಡ ಅವರೊಂದಿಗೆ 10 ನಿಮಿಷ ಮಾತನಾಡಿದ್ದೇನೆ. ನಾವಿಬ್ಬರೂ ಜೊತೆಗೂಡಿ ದೆಹಲಿಗೆ ಹೋಗೋಣ ಅಂತಾ ಮಾತನಾಡಿಕೊಂಡಿದ್ದೆವು. ಆದರೆ, ಅವರಿಗೆ ಹೀಗೆ ಅನಾರೋಗ್ಯ ಕಾಣಿಸಿಕೊಂಡಿದೆ ಎಂದರು.

ಸಶಸ್ತ್ರ ಮೀಸಲು ಪೊಲೀಸ್ ಪರೀಕ್ಷೆಯಲ್ಲೂ ಅಕ್ರಮ? ಪರೀಕ್ಷೆ ಬರೆದು 1 ಗಂಟೆ ತಡವಾಗಿ ಹೊರಬಂದ ಅಭ್ಯರ್ಥಿಗಳು!

ಅವರಿಗೆ ನ್ಯುಮೋನಿಯಾ ಇದ್ದಿದ್ದು ಮೊದಲೇ ಗೊತ್ತಿತ್ತು. ಆದ್ದರಿಂದ ವೈದ್ಯರು ಪರೀಕ್ಷೆಗಾಗಿ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳದೇ ನೇರವಾಗಿ ಚಿಕತ್ಸೆಯನ್ನು ಆರಂಭಿಸಿದ್ದಾರೆ. ಈಗ ಮತ್ತೊಮ್ಮೆ ಎಲ್ಲ ಪರೀಕ್ಷೆಯನ್ನು ಮಾಡಲಾಗಿದೆ. ಇನ್ನು ವಿಜಯಪುರ ಕ್ಷೇತ್ರದ ಜನತೆಯಾಗಲೀ, ಅವರ ಅಭಿಮಾನಿಗಳಾಗಲೀ ಯಾರೂ ಗಾಬರೀಯಾಗುವಂತ ಸನ್ನಿವೇಶ ಇಲ್ಲ. ನಾಳೆ ಅಥವಾ ನಾಡಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡ್ತೀವಿ ಅಂತಾ ವೈದ್ಯರು ತಿಳಿಸಿದ್ದಾರೆ ಎಂದು ಪಿ.ಸಿ. ಗದ್ದಿಗೌಡರ ಅವರು ತಿಳಿಸಿದರು.

click me!