
ಮಂಗಳೂರು: ನವಮಂಗಳೂರು ಬಂದರಿಗೆ ಪ್ರಸ್ತುತ ಕ್ರೂಸ್ ಋತುವಿನ ಮೂರನೇ ವಿಲಾಸಿ ಹಡಗು ‘ಎಂಎಸ್ ಸಿರೆನಾ’ ಭಾನುವಾರ ಆಗಮಿಸಿದ್ದು, ಜಿಲ್ಲೆಯ ಪ್ರವಾಸೋದ್ಯಮವನ್ನು ಉತ್ತೇಜಿಸುವಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.
ಕೇರಳದ ಕೊಚ್ಚಿಯಿಂದ ಬೆಳಗ್ಗೆ 9 ಗಂಟೆಗೆ ಮಂಗಳೂರು ಬಂದರು ತಲುಪಿದ ಈ ಹಡಗಿನಲ್ಲಿ 619 ಪ್ರಯಾಣಿಕರು ಮತ್ತು 390 ಸಿಬ್ಬಂದಿ ಆಗಮಿಸಿದ್ದರು. ಮಾರ್ಷಲ್ ದ್ವೀಪಗಳ ಧ್ವಜದಡಿ ನೌಕಾಯಾನ ಮಾಡುವ ಈ ನಾರ್ವೇಜಿಯನ್ ಕ್ರೂಸ್, ಕೊಲಂಬೊ- ಕೊಚ್ಚಿ- ಮಂಗಳೂರು- ಗೋವಾ- ಮುಂಬೈನ್ನು ಒಳಗೊಂಡ ಅಂತಾರಾಷ್ಟ್ರೀಯ ಪ್ರಯಾಣದ ಭಾಗವಾಗಿ ಮಂಗಳೂರಿಗೆ ಬಂದಿತ್ತು.
ಕ್ರೂಸ್ ಟರ್ಮಿನಲ್ನಲ್ಲಿ ಪ್ರವಾಸಿಗರಿಗೆ ಕರಾವಳಿ ಕರ್ನಾಟಕದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.
ಈ ಪ್ರವಾಸಿಗರು ನಗರದ ಗೋಕರ್ಣನಾಥೇಶ್ವರ ದೇವಸ್ಥಾನ, ಐತಿಹಾಸಿಕ ಸೈಂಟ್ ಅಲೋಶಿಯಸ್ ಚಾಪೆಲ್, ಸಾವಿರ ಕಂಬದ ಬಸದಿ, ಸ್ಥಳೀಯ ಮಾರುಕಟ್ಟೆಗಳು ಸೇರಿದಂತೆ ಮಂಗಳೂರು ಸುತ್ತಮುತ್ತಲಿನ ಹಲವು ಪ್ರಮುಖ ಪ್ರವಾಸಿ ತಾಣಗಳನ್ನು ಸಂದರ್ಶಿಸಿದರು.
ಇದನ್ನೂ ಓದಿ: Karnataka Budget: ಕುಕ್ಕೆ, ಕೊಲ್ಲೂರು ಕ್ಷೇತ್ರಗಳ ಅಭಿವೃದ್ಧಿಗೆ 'ಪ್ರಾಧಿಕಾರ' ರಚನೆ; ವೈಷ್ಣೋದೇವಿ ಯಾತ್ರಾರ್ಥಿಗಳಿಗೆ ₹5,000 ಸಹಾಯಧನ!
ಮಂಗಳೂರಿನ ಸ್ಮರಣೀಯ ಅನುಭವಗಳೊಂದಿಗೆ ಪ್ರವಾಸಿಗರು ತಮ್ಮ ಮುಂದಿನ ತಾಣವಾದ ಮೊರ್ಮುಗಾವೊ ಬಂದರಿಗೆ ಸಂಜೆ ವೇಳೆಗೆ ಹೊರಟರು.
ಮಂಗಳೂರಿಗೆ ಅಂತಾರಾಷ್ಟ್ರೀಯ ವಿಲಾಸಿ ಹಡಗುಗಳ ಆಗಮನ ಸಂಖ್ಯೆ ಏರಿಕೆಯಾಗುತ್ತಿದ್ದು, ಭಾರತದ ಪಶ್ಚಿಮ ಕರಾವಳಿಯಲ್ಲಿ ಕ್ರೂಸ್ ಪ್ರವಾಸಿ ತಾಣವಾಗಿ ಮಂಗಳೂರು ಹೊರಹೊಮ್ಮುತ್ತಿದೆ. ಇಲ್ಲಿನ ಪ್ರವಾಸೋದ್ಯಮ ಸಾಮರ್ಥ್ಯವನ್ನು ಹೆಚ್ಚಿಸಲು ನವ ಮಂಗಳೂರು ಬಂದರು ಪ್ರಾಧಿಕಾರವು ವಿಶ್ವ ದರ್ಜೆಯ ಮೂಲಸೌಕರ್ಯ ಒದಗಿಸಲು ಬದ್ಧವಾಗಿದೆ ಎಂದು ಎನ್ಎಂಪಿಎ ತಿಳಿಸಿದೆ.
ಇದನ್ನೂ ಓದಿ: ಪಾಂಡೇಶ್ವರ ಲೆವೆಲ್ ಕ್ರಾಸಿಂಗ್ ಟ್ರಾಫಿಕ್ ದಟ್ಟಣೆ ಶಮನಕ್ಕೆ ದಕ್ಷಿಣ ರೈಲ್ವೆ ಮಹತ್ವದ ಹೆಜ್ಜೆ, ಚತುಷ್ಪಥ ರಸ್ತೆ!