ವಿಜಯಪುರ: ಏಷ್ಯಾದ ಅತ್ಯಂತ ಉದ್ದದ ಜಲ ಸೇತುವೆಗೆ ವಿಧ್ಯುಕ್ತ ಚಾಲನೆ

Kannadaprabha News   | Asianet News
Published : Apr 25, 2020, 11:23 AM ISTUpdated : Apr 25, 2020, 01:35 PM IST
ವಿಜಯಪುರ: ಏಷ್ಯಾದ ಅತ್ಯಂತ ಉದ್ದದ ಜಲ ಸೇತುವೆಗೆ ವಿಧ್ಯುಕ್ತ ಚಾಲನೆ

ಸಾರಾಂಶ

14.73 ಕಿಮೀ ಉದ್ದ, ತಳಮಟ್ಟದಿಂದ 30 ಮೀ. ಎತ್ತರ| 208.26 ಕೋಟಿ ವೆಚ್ಚದಲ್ಲಿ ಜಲ​ಸೇ​ತುವೆ ನಿರ್ಮಾಣ|29 ಗ್ರಾಮಗಳ 63,190 ಎಕರೆಗೆ ನೀರಾವರಿ ಸೌಲಭ್ಯ| ವಿಜಯಪುರ ತಾಲೂಕಿನ ಬುರಾಣಪುರ ಬಳಿ ಶಾಸೊತ್ರೕಕ್ತವಾಗಿ ಗಂಗಾಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿದ ಶಾಸಕ ಎಂ. ಬಿ. ಪಾಟೀ​ಲ| 

ವಿಜಯಪುರ(ಏ.25): ಮುಳವಾಡ ಏತ ನೀರಾವರಿ ಯೋಜನೆ ವ್ಯಾಪ್ತಿಯ ತಿಡಗುಂದಿ ಶಾಖಾ ಕಾಲುವೆ ಯೋಜನೆಯಡಿ 208.26 ಕೋಟಿ ವೆಚ್ಚದಲ್ಲಿ ಏಷ್ಯಾದಲ್ಲಿಯೇ ಅತ್ಯಂತ ಉದ್ದವಾದ (14.73 ಕಿಮೀ) ಜಲಸೇತುವೆ (ಅಕ್ವಾಡೆಕ್ಟ್)ಯಲ್ಲಿ ನೀರು ಹರಿಯುವ ಕಾರ್ಯಕ್ಕೆ ಮಾಜಿ ಜಲ ಸಂಪನ್ಮೂಲ ಸಚಿವ, ಶಾಸಕ ಎಂ.ಬಿ. ಪಾಟೀಲ ಶುಕ್ರವಾರ ವಿಧ್ಯುಕ್ತವಾಗಿ ಚಾಲನೆ ನೀಡಿದ್ದಾರೆ.

ವಿಜಯಪುರ ತಾಲೂಕಿನ ಬುರಾಣಪುರ ಬಳಿ ಶಾಸೊತ್ರೕಕ್ತವಾಗಿ ಗಂಗಾಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿದ ಶಾಸಕ ಪಾಟೀ​ಲ, ದೂರದಿಂದ ಹರಿದು ಬಂದ ಕೃಷ್ಣೆಗೆ ಭಕ್ತಿಯಿಂದ ನಮನ ಸಲ್ಲಿಸಿದರು.
ತಮ್ಮ ಭಾಗಕ್ಕೆ ಕೃಷ್ಣೆ ಹರಿದು ಬರುವ ಕ್ಷಣವನ್ನು ಕಣ್ತುಂಬಿಕೊಳ್ಳಲು ಆಗಮಿಸಿದ ಅನೇಕ ರೈತರು ಸಾಮಾಜಿಕ ಅಂತರ ಕಾಯ್ದುಕೊಂಡು ಈ ಅಮೂಲ್ಯ ಕ್ಷಣವನ್ನು ವೀಕ್ಷಿಸಿದರು.

ಪೊಲೀಸರ ಒಳ್ಳೆ ಕೆಲಸ ನೋಡಿ , ಹಸುಗಳ ಹೊಟ್ಟೆ ತುಂಬಿಸಿದ ಕಲ್ಲಂಗಡಿ

ಶಾಸಕ ಎಂ.ಬಿ. ಪಾಟೀಲ ಬಾಗಿನ ಅರ್ಪಿಸುತ್ತಿದ್ದಂತೆಯೇ ಕೃಷ್ಣಾ ಮಾತೆಗೆ ಜಯವಾಗಲಿ ಎಂಬ ಉದ್ಘೋಷ ಜೋರಾಗಿ ಮೊಳಗಿತು. ಸಾಮಾಜಿಕ ಅಂತರ ಪಾಲನೆಗಾಗಿ ಬಾಕ್ಸ್‌ ರಚನೆ ಮಾಡಲಾಗಿತ್ತು. ನಿರ್ದಿಷ್ಟಬಾಕ್ಸ್‌ನಲ್ಲಿ ನಿಂತು ರೈತರು ಈ ಕ್ಷಣವನ್ನು ಆನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಂ.ಬಿ. ಪಾಟೀಲ, ಯೋಜನೆಯ ತಾಂತ್ರಿಕ ವಿವರಣೆ ನೀಡಿ, ಮುಳವಾಡ 3ನೇ ಹಂತದ ಯೋಜನೆಯ ತಿಡಗುಂದಿ ಶಾಖಾ ಕಾಲುವೆ 70.75 ಕಿಮೀ (ಮದಭಾವಿ ಗ್ರಾಮದ ಬಳಿ ಆಪಟೇಕ್‌ ಹೊಂದಿದ) 64 ಕಿಮೀ ಉದ್ದದ ಈ ಕಾಲುವೆ 14.229 ಕ್ಯುಸೆಕ್ಸ್‌ ನೀರನ್ನು ಹರಿಸುವ ಸಾಮರ್ಥ್ಯವನ್ನು ಹಾಗೂ 36 ವಿತರಣಾ ಕಾಲುವೆಗಳನ್ನು ಹೊಂದಿದೆ. ಈ ಕಾಲುವೆಯಿಂದ ವಿಜಯಪುರ, ಇಂಡಿ ತಾಲೂಕಿನ 29 ಗ್ರಾಮಗಳ ಸುಮಾರು 63,190 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ. ಈ ಭಾಗದ 25ಕ್ಕೂ ಹೆಚ್ಚು ಕೆರೆಗಳು ಭರ್ತಿಯಾಗಲಿವೆ ಎಂದರು.

280.26 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಜಲಸೇತುವೆ 14.73 ಕಿಮೀ ಉದ್ದವಿದ್ದು, ಜಮೀನು ತಳಮಟ್ಟದಿಂದ 30 ಮೀ. ಎತ್ತರವಿದೆ. ಈ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಇದರಿಂದ ನನಗೆ ತುಂಬಾ ಖುಷಿಯಾಗಿದೆ ಎಂದರು.

ಬಹುದಿನಗಳ ರೈತರ ಕನಸು ನನಸು: ಏಷ್ಯಾದಲ್ಲಿಯೇ ಅತ್ಯಂತ ಉದ್ದದ ಜಲಸೇತುವೆ ಲೋಕಾರ್ಪಣೆ

ಇಂಡಿಗೆ ವರದಾನ:

ಈ ಯೋಜನೆಯಿಂದ ಇಂಡಿ ತಾಲೂಕಿಗೂ ದೊಡ್ಡ ವರದಾನವಾಗಲಿದೆ. ತಡವಲಗಾ ಗ್ರಾಮದಿಂದ ಇಂಡಿ ರೈಲ್ವೆ ನಿಲ್ದಾಣದವರೆಗಿನ ಪ್ರದೇಶವು ಕೃಷ್ಣಾ ಮೇಲ್ದಂಡೆ ಯೋಜನೆಯ ಯಾವುದೇ ಯೋಜನೆಯ ನೀರಾವರಿ ಯೋಜನೆಗೆ ಒಳಪಟ್ಟಿರಲಿಲ್ಲ. ಇಂಡಿ ತಾಲೂಕು ತೀವ್ರ ಬರಗಾಲದಿಂದ ತತ್ತರಿಸುತ್ತಿದ್ದು, ಈ ನೀರಾವರಿ ವಂಚಿತ ಸುಮಾರು 4,177 ಹೆಕ್ಟೇರ್‌ ಪ್ರದೇಶ ತಿಡಗುಂದಿ ಶಾಖಾ ಕಾಲುವೆಯ ಕಿಮೀ 56ರ ನಂತರದ ಅಚ್ಚುಕಟ್ಟು ಪ್ರದೇಶದಲ್ಲಿ ಪೈಪ್‌ಲೈನ್‌ ಜಾಲವನ್ನು ಅಳವಡಿಸಿಕೊಂಡು ನೀರಾವರಿಗೆ ಒಳಪಡಿಸಲು ಯೋಜಿಸಲಾಗಿದೆ ಎಂದರು.

ಈ ಯೋಜನೆ ಮೂಲಕ ಇಂಡಿ ತಾಲೂಕಿನ 14500 ಹೆಕ್ಟೇರ್‌ ಪ್ರದೇಶ ಅಂದರೆ ರಾಜನಾಳ, ಅಥರ್ಗಾ, ಮಿಂಚನಾಳ, ಲಿಂಗದಳ್ಳಿ, ಗಣವಲಗ, ನಿಂಬಾಳ ಬಿ.ಕೆ., ತೆನಿಹಳ್ಳಿ, ಬೋಳೆಗಾಂವ, ಹಂಜಗಿ, ರೂಗಿ, ಇಂಡಿ, ಚಿಕ್ಕಬೇವೂರ, ಚವಡಿಹಾಳ, ಬಬಲಾದ, ಚೋರಗಿ ಗ್ರಾಮಗಳು ಅಚ್ಚುಕಟ್ಟು ಪ್ರದೇಶಕ್ಕೊಳ​ಪಡಲಿವೆ ಎಂದರು.

ತಿಡಗುಂದಿ ಶಾಖಾ ಕಾಲುವೆ ಕಿಮೀ 56ರವರೆಗೆ ಸುಮಾರು 15,249 ಹೆಕ್ಟೇರ್‌ ಕ್ಷೇತ್ರವು ನೀರಾವರಿಗೊಳಪಡಲಿದ್ದು, ಅದರಲ್ಲಿ ಇಂಡಿ ಮತಕ್ಷೇತ್ರದ ವ್ಯಾಪ್ತಿಯ 2800 ಹೆಕ್ಟೇರ್‌ ಕ್ಷೇತ್ರವೂ ನೀರಾವರಿಗೊಳಪಡುತ್ತದೆ. ತಿಡಗುಂದಿ ಶಾಖಾ ಕಾಲುವೆ ಕಿಮೀ 56 ರನಂತರ ಪೈಪ್‌ ವಿತರಣಾ ಜಾಲವನ್ನು ಅಳವಡಿಸಿಕೊಳ್ಳಬೇಕಿದೆ. ಇಂಡಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ 15 ಹಳ್ಳಿಗಳಿಗೆ ಸುಮಾರು 14500 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಅಂದಾಜು ಪತ್ರಿಕೆ ಈಗಾಗಲೇ ತಯಾರಿಸಲಾಗಿದೆ.

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರು ತಮ್ಮ ಪತ್ರದಲ್ಲಿ ನೀರಾವರಿಗೊಳಪಡಿಸುವ ಕುರಿತಂತೆ 31 ಹಳ್ಳಿಗಳ ಹೆಸರುಗಳ ಪಟ್ಟಿಸಲ್ಲಿಸಿದ್ದರು. ಈ ಪೈಕಿ ತಿಡಗುಂದಿ ಯೋಜನೆಯ 12 ಹಳ್ಳಿಗಳು ಈಗಾಗಲೇ ಸೌಲಭ್ಯ ಒದಗಿಸಲಾಗುತ್ತಿದೆ. ಇನ್ನುಳಿದ 19 ಹಳ್ಳಿಗಳಾದ ನಿಂಬಾಳ ಕೆ.ಡಿ., ಹಳಗುಣಕಿ, ಹೊರ್ತಿ ಇತ್ಯಾದಿಗಳು ಪ್ರಸ್ತಾಪಿತ ಹೊರ್ತಿ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಯಿಂದ ನೀರಾವರಿ ಸೌಲಭ್ಯವನ್ನು ಕಲ್ಪಿಸಲು ಯೋಜಿಸಲಾಗಿದೆ ಎಂದರು.

ವಿಜಯಪುರ ನಗರದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ನಾಗಠಾಣ ಶಾಸಕ ದೇವಾನಂದ ಚವ್ಹಾಣ, ಮಾಜಿ ಶಾಸಕರಾದ ರಾಜು ಆಲಗೂರ, ವಿಠಲ ಕಟಕದೊಂಡ, ಡಾ. ಮಹಾಂತೇಶ ಬಿರಾದಾರ ಮುಂತಾದವರು ಇದ್ದರು.
 

PREV
click me!

Recommended Stories

ನಾಳೆ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ: ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿ?
ಮಕ್ಕಳಿಗಾಗಿ ಕೊನೆಗೂ ಒಂದಾದ್ರು ಲೀಲಾ-ಮಂಜು; ಚಿನ್ನೀ, ಬಂಗಾರಿ ಫ್ಲೇವರ್ ಬಿಟ್ಟುಕೊಟ್ಟ ಸಂತೋಷ್!