ಬೆಳಗಾವಿ: ಬಿಮ್ಸ್‌ಗೆ ಸುಧಾಕರ, ಅಶೋಕ್‌ ದಿಢೀರ್‌ ಭೇಟಿ

By Kannadaprabha NewsFirst Published Dec 27, 2022, 1:30 PM IST
Highlights

ನಾನು, ಸುಧಾಕರ ಕಳೆದ ಮೂರ್ನಾಲ್ಕು ದಿನಗಳಿಂದ ಸಭೆ ಮಾಡುತ್ತಿದ್ದೇವೆ. ಚೀನಾದಲ್ಲಿ ಬಂದಿರುವ ಕೋವಿಡ್‌ ಆತಂಕ ಕರ್ನಾಟಕಕ್ಕೆ ಬರಬಾರದು. ಆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮಗಳನ್ನು ನಾವು ಕೈಗೊಳ್ಳುತ್ತಿದ್ದೇವೆ. ಹಲವು ಕಮೆಂಟ್ಸ್‌ಗಳು ಬಂದಿವೆ. ಪಾಲಕರಿಗೆ ಮಕ್ಕಳ ಬಗ್ಗೆ ಚಿಂತೆ ಇದೆ ಎಂದ ಸಚಿವ ಅಶೋಕ

ಬೆಳಗಾವಿ(ಡಿ.27): ಜನರ ಪ್ರಾಣ ರಕ್ಷಣೆ ಮಾಡುವುದು ನಮ್ಮ ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು. ಬೆಳಗಾವಿ ಮೆಡಿಕಲ್‌ ವೈದ್ಯಕೀಯ ಕಾಲೇಜಿಗೆ ಸೋಮವಾರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ಜೊತೆಗೆ ಅವರು ದಿಢೀರನೇ ಭೇಟಿ ನೀಡಿದರು. ಈ ವೇಳೆ ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು, ಸುಧಾಕರ ಕಳೆದ ಮೂರ್ನಾಲ್ಕು ದಿನಗಳಿಂದ ಸಭೆ ಮಾಡುತ್ತಿದ್ದೇವೆ. ಚೀನಾದಲ್ಲಿ ಬಂದಿರುವ ಕೋವಿಡ್‌ ಆತಂಕ ಕರ್ನಾಟಕಕ್ಕೆ ಬರಬಾರದು. ಆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮಗಳನ್ನು ನಾವು ಕೈಗೊಳ್ಳುತ್ತಿದ್ದೇವೆ. ಹಲವು ಕಮೆಂಟ್ಸ್‌ಗಳು ಬಂದಿವೆ. ಪಾಲಕರಿಗೆ ಮಕ್ಕಳ ಬಗ್ಗೆ ಚಿಂತೆ ಇದೆ ಎಂದರು.

ಜನರು ಆತಂಕದಲ್ಲಿದ್ದು ಸರ್ಕಾರ ತಯಾರಿ ಮಾಡಿದೆ ಎನ್ನುವುದು ಜನರಿಗೆ ಗೊತ್ತಾಗಬೇಕಿದೆ. ಆಕ್ಸಿಜನ್‌ ಸಿಕ್ಕಿಲ್ಲ ಎಂದು ಲಕ್ಷಾಂತರ ಜನ ತೀರಿ ಹೋಗಿದ್ದು ನೋಡಿದ್ದೇವೆ. ಆಕ್ಸಿಜನ್‌ ಕೊರತೆ ಎಲ್ಲಿಯೂ ಬರಬಾರದು ಎನ್ನುವುದು ಸಚಿವ ಸುಧಾಕರ ಅವರ ಉದ್ದೇಶವಾಗಿದೆ. ಆ್ಯಂಬುಲೆನ್ಸ್‌, ಔಷಧ ಕೊರತೆ ಈ ಬಾರಿ ಬರಲೇಬಾರದು. ಹೀಗಾಗಿ ನಾವಿಬ್ಬರು ಸಚಿವರು ಅಭಿಯಾನ ಮಾಡುತ್ತಿದ್ದೇವೆ. ಜನರು ಆತಂಕ ಪಡಬಾರದು. ಕ್ಷಣ ಮಾತ್ರದಲ್ಲಿ ನೀವು ಆಸ್ಪತ್ರೆ ಸೇರುವ ಹಾಗೇ ಮಾಡುತ್ತೇವೆ. ಕ್ಷಣ ಮಾತ್ರದಲ್ಲಿ ನಿಮಗೆ ಮೆಡಿಸಿನ್‌ (ಔಷಧ) ಸಿಗುವ ಹಾಗೆ ಮಾಡುತ್ತೇವೆ. ಯಾವುದೇ ಔಷಧ ಸಿಗಲೇ ಇಲ್ಲ ಎಂಬ ಸ್ಥಿತಿ ಬರಬಾರದು ಎಂದು ಹೇಳಿದರು.

ಕರ್ನಾಟಕದಲ್ಲಿ 3.9 ಕೋಟಿ ಮಂದಿ 3ನೇ ಡೋಸ್‌ ಪಡೆದಿಲ್ಲ..!

ಆಸ್ಪತ್ರೆ ಸಿದ್ಧತೆ ಪರಿಶೀಲಿಸುತ್ತಿದ್ದೇವೆ:

ಮಂಗಳವಾರ ಆಸ್ಪತ್ರೆಗಳಲ್ಲಿ ಬೆಡ್‌, ಆಕ್ಸಿಜನ್‌, ಔಷಧಗಳು ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಇದೆಯೋ ಇಲ್ಲವೋ ಎಂಬವುದನ್ನು ಮಾಕ್‌ ಡ್ರೈವ್‌ ಕೂಡ ಮಾಡುತ್ತಿದ್ದೇವೆ. ವಿಪತ್ತು ನಿರ್ವಹಣಾ ಅಡಿ ಜಿಲ್ಲಾಡಳಿತಕ್ಕೆ ಏನೆಲ್ಲ ಸಹಾಯ ಕೊಡಬೇಕೋ ಕೊಡುತ್ತೇವೆ. ಕರ್ನಾಟಕ ಜನ ನೆಮ್ಮದಿಯಿಂದ ಇರಬೇಕು. ಆ ನಿಟ್ಟಿನಲ್ಲಿ ನಾವು ತಯಾರಿ ಮಾಡುತ್ತಿದ್ದೇವೆ ಎಂದರು.

ಆರೋಗ್ಯ ಸಚಿವ ಡಿ.ಸುಧಾಕರ ಮಾತನಾಡಿ, ಆಸ್ಪತ್ರೆಯಲ್ಲಿ ಯಾವ ರೀತಿ ಸಿದ್ಧತೆ ಇದೆ ಎನ್ನುವುದನ್ನು ಯಾರಿಗೂ ತಿಳಿಸದೇ ಬಿಮ್ಸ್‌ಗೆ ಭೇಟಿ ನೀಡಿದ್ದೇವೆ. ಎಲ್ಲ ವ್ಯವಸ್ಥೆ ಪರಿಶೀಲಿಸಿದ್ದೇವೆ. ಈಗಾಗಲೇ ಆಕ್ಸಿಜನ್‌ ಪ್ಲಾಂಟ್‌ ಕೂಡ ಐದು ಅಳವಡಿಸಿದ್ದೇವೆ. ಇವು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಪರಿಶೀಲಿಸಿದ್ದೇವೆ. ನಾಳೆ ಮಾಕ್‌ ಡ್ರೈವ್‌ ಇದೆ. ಎಲ್ಲ ಜಿಲ್ಲಾ, ತಾಲೂಕು ಆಸ್ಪತ್ರೆಯಲ್ಲಿ ಐಸಿಯು, ಎನ್‌ಐಸಿಯು ಎಲ್ಲ ವಿಭಾಗಗಳ ಕಾರ್ಯನಿರ್ವಹಣೆ ಹೇಗಿದೆ. ಆಕ್ಸಿಜನ್‌ ಪ್ಲಾಂಟ್‌ ಕೆಲಸ ಮಾಡುತ್ತಿವೆಯೇ ಎಂಬುದರ ಕುರಿತು ಸರ್ವ ಸಿದ್ಧತೆ ಬಗ್ಗೆ ಮಾಕ್‌ ಡ್ರೈವ್‌ ಮಾಡುತ್ತಿದ್ದೇವೆ ಎಂದರು.

ಕೊರೋನಾ ಭೀತಿ: ಕರ್ನಾಟಕದಲ್ಲಿ ಆರ್ಥಿಕತೆಗೆ ಸಮಸ್ಯೆ ಆಗದಂತೆ ಕೋವಿಡ್‌ ನಿರ್ಬಂಧ

ಚೀನಾ ರೀತಿಯಲ್ಲಿ ಆಗುವುದಿಲ್ಲ. ಒಂದು ವೇಳೆ ಚೀನಾ ರೀತಿಯಲ್ಲಿ ಏನೇ ಸಂದಿಗ್ಧ ಸ್ಥಿತಿ ನಿರ್ಮಾಣವಾದರೆ, ಜನರ ಜೀವ ಉಳಿಸಲು ಆದ್ಯತೆ ನೀಡಲಾಗುವುದು. ಹಿಂದೆ ಬಿಮ್ಸ್‌ ಸಮಸ್ಯೆಯನ್ನ ನಾವು ನೋಡಿದ್ದೆವು. ಕಳೆದ ಒಂದೂವರೆ ವರ್ಷದಲ್ಲಿ ಯಾವ ರೀತಿ ಅಭಿವೃದ್ಧಿ ಆಗಿದೆ. ಇಡೀ ದೇಶದಲ್ಲಿ 112ರ ಸ್ಥಾನದಲ್ಲಿತ್ತು. ಇಂದು ಬಿಮ್ಸ್‌ ಆಸ್ಪತ್ರೆ ಹನ್ನೆರಡನೇ ಸ್ಥಾನಕ್ಕೆ ಬಂದಿದೆ. ಇದಕ್ಕೆ ಹೊಂದಿಕೊಂಡ ಆಸ್ಪತ್ರೆ ಈ ಭಾಗದ ಜನರಿಗೆ ಸಂಜೀವಿನಿ ಆಗಿದೆ. ನಮ್ಮ ಸಚಿವರು ತೀರ್ಮಾನ ಕೈಗೊಂಡು ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಗರ್ಭಿಣಿ, ಮಕ್ಕಳು, ವಯೋವೃದ್ಧರು, ಆರೋಗ್ಯ ಸಮಸ್ಯೆ ಇರೋರು ಜನಜಂಗುಳಿ ಸ್ಥಳಗಳಲ್ಲಿ ಹೋಗಬಾರದು ಎಂದು ಮನವಿ ಮಾಡಿದರು.

ಕೋವಿಡ್‌ ತಡೆಗೆ ಕಟ್ಟುನಿಟ್ಟಿನ ನಿರ್ಬಂಧ ಇಲ್ಲ: ಸಚಿವ ಆರ್‌.ಅಶೋಕ

ಬೆಳಗಾವಿ: ಕೊರೋನಾ ಸೋಂಕಿನ ಕುರಿತು ಯಾರಿಗೂ ಭಯಬೇಡ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಸದ್ಯಕ್ಕೆ ಯಾವುದಕ್ಕೆ ಕಟ್ಟುನಿಟ್ಟಿನ ನಿರ್ಬಂಧ ಇಲ್ಲ ಎಂದು ಸಚಿವ ಆರ್‌. ಅಶೋಕ ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕೋವಿಡ್‌ ಹಿನ್ನೆಲೆಯಲ್ಲಿ ನಾನು ಮತ್ತು ಸಚಿವ ಸುಧಾಕರ ಸಭೆ ಮಾಡುತ್ತಿದ್ದೇವೆ. ಕೋವಿಡ್‌ ತಡೆಗೆ ಮುಖ್ಯವಾಗಿ ಜನರ ಸಹಕಾರ ನೀಡಬೇಕಿದೆ. ಮಾಸ್ಕ್‌, ಸ್ಯಾನಿಟೈಸರ್‌ ಮೂಲಕ ತಡೆಯಬಹುದು. ಹೊಸ ವರ್ಷಕ್ಕೆ ಮಾರ್ಗಸೂಚಿಗಳನ್ನು ಮಾಡಲಾಗುವುದು ಎಂದರು.

click me!