ಪ್ರಧಾನಿ ಮೋದಿ ಸಂಕಲ್ಪದಂತೆ ಪ್ರಾಣಿಗಳ ರಕ್ಷಣೆ: ಸಚಿವ ಪ್ರಭು ಚವ್ಹಾಣ್‌

By Kannadaprabha NewsFirst Published Feb 1, 2023, 10:00 PM IST
Highlights

ಬೀದರ್‌ ಜಿಲ್ಲೆಯಲ್ಲಿ ಈ ಹಿಂದೆ 15 ಸಂಚಾರಿ ಪಶು ಚಿಕಿತ್ಸಾ ವಾಹನಗಳನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು, ಅವುಗಳ ಯಶಸ್ಸನ್ನು ಮನಗಂಡು ಕೇಂದ್ರ ಸರ್ಕಾರ 275 ಸಂಚಾರಿ ಚಿಕಿತ್ಸಾ ವಾಹನಗಳಿಗೆ ಮಂಜೂರಾತಿ ನೀಡಿದೆ ಎಂದ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್‌ 

ಬೀದರ್‌(ಫೆ.01):  ಪ್ರಾಣಿಗಳ ರಕ್ಷಣೆಯು ಪ್ರಧಾನಿ ಮೋದಿ ಅವರ ಸಂಕಲ್ಪವಾಗಿದ್ದು, ಅವರ ಕನಸಿನ ಕೂಸಾಗಿ 68 ಸಂಚಾರಿ ಪಶು ಚಿಕಿತ್ಸಾ ವಾಹನಗಳು ಲೋಕಾರ್ಪಣೆಗೊಂಡಿವೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ಹೇಳಿದರು. ಅವರು ಮಂಗಳವಾರ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರದಡಿಯಲ್ಲಿ ನಗರದ ನೆಹರು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂಚಾರಿ ಪಶು ಚಿಕಿತ್ಸಾ ವಾಹನಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಈ ಹಿಂದೆ 15 ಸಂಚಾರಿ ಪಶು ಚಿಕಿತ್ಸಾ ವಾಹನಗಳನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು, ಅವುಗಳ ಯಶಸ್ಸನ್ನು ಮನಗಂಡು ಕೇಂದ್ರ ಸರ್ಕಾರ 275 ಸಂಚಾರಿ ಚಿಕಿತ್ಸಾ ವಾಹನಗಳಿಗೆ ಮಂಜೂರಾತಿ ನೀಡಿದೆ ಎಂದರು.

2500 ಗೋಹತ್ಯೆ ಪ್ರಕರಣ ದಾಖಲು:

ರೈತರ 1962 ಸಂಖ್ಯೆಗೆ ಅಥವಾ 8277100200 ಕರೆ ಮಾಡುವ ಮೂಲಕ ಸಂಚಾರಿ ಪಶು ಚಿಕಿತ್ಸಾ ವಾಹನಗಳ ಉಪಯೋಗ ಪಡೆಯಬಹುದು. ಈ ಯೋಜನೆಯ ನಿರ್ವಹಣೆಗೆ ಕೇಂದ್ರ ಶೇ. 60, ರಾಜ್ಯ ಶೇ. 40ರಷ್ಟುಹಣ ವಿನಿಯೋಗ ಮಾಡಲಿದೆ ಎಂದು ಮಾಹಿತಿ ನೀಡಿದರು. ದೇಶದಲ್ಲಿ ಮೊದಲ ಬಾರಿಗೆ ಪ್ರಾಣಿ ಸಹಾಯವಾಣಿ ಕೇಂದ್ರ ಕರ್ನಾಟಕದಲ್ಲಿ ಆರಂಭಿಸಿದ್ದೇವೆ. ಕರ್ನಾಟಕ ಪ್ರಾಣಿ ರಕ್ಷಣಾ ಮಂಡಳಿ ಹಾಗೂ ಗೋ ಹತ್ಯೆ ನಿಷೇದ ಕಾಯ್ದೆಯ ಮೂಲಕ ರಾಜ್ಯದಲ್ಲಿ ಪ್ರಾಣಿಗಳ ರಕ್ಷಣೆ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಗೋಹತ್ಯೆ ಕಾಯ್ದೆಯಡಿ 2500 ಕೇಸು ದಾಖಲಾಗಿವೆ ಎಂದು ತಿಳಿಸಿದರು.

BIDAR: ಭಾಲ್ಕಿ ಕ್ಷೇತ್ರ ಅಭಿವೃದ್ಧಿಗೆ 24 ಕೋಟಿ: ಶಾಸಕ ಈಶ್ವರ ಖಂಡ್ರೆ

ರಾಜ್ಯದಲ್ಲಿ ಇತ್ತೀಚಿಗೆ ಚರ್ಮಗಂಟು ರೋಗಕ್ಕೆ ಬಾಧಿತವಾದ ಜಾನುವಾರುಗಳಿಗೆ ಈಗಾಗಲೇ ಲಸಿಕೆ ನೀಡಲಾಗಿದೆ ಹಾಗೂ ಈ ರೋಗದಿಂದ ಮೃತಪಟ್ಟರೈತರಿಗೆ ಸಾಹಯ ಧನ ಹಾಗೂ ಇಲಾಖೆಗೆ ಬೇಕಾಗುವ ಎಲ್ಲಾ ರೀತಿಯ ಸಹಕಾರವನ್ನು ಸಿಎಂ ನೀಡುತ್ತಿದ್ದಾರೆ. ಕರ್ನಾಟಕದಲ್ಲಿ ಈಗಾಗಲೇ ಸುಮಾರು 25 ಜಿಲ್ಲೆಗಳಲ್ಲಿ ಗೋಶಾಲೆಗಳನ್ನು ಆರಂಭಿಸಿದ್ದು, ಮುಂದೆ ಎಲ್ಲ ಜಿಲ್ಲೆಗಳಲ್ಲಿ ಆರಂಭಿಸಲಾಗುವುದು, ಎಲ್ಲಾ ಗೋಶಾಲೆಗಳನ್ನು ಸ್ವಾವಲಂಬಿ ಮಾಡುವ ಗುರಿ ಹೊಂದಲಾಗಿದೆ ಎಂದರು.

ಬೀದರ್‌ ಶಾಸಕ ರಹೀಮ್‌ ಖಾನ್‌ ಮಾತನಾಡಿ, ಇಂದು ಚಾಲನೆಗೊಂಡ ಸಂಚಾರಿ ಪಶು ಚಿಕಿತ್ಸಾ ಘಟಕಗಳು ನಿರಂತವಾಗಿ ಸೇವೆ ಸಲ್ಲಿಸಲಿ ಎಂದು ಶುಭ ಹಾರೈಸಿದ ಅವರು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

Bidar: ಸಿ.ಟಿ.ರವಿಗೆ ಜೆಡಿಎಸ್ ಟಿಕೆಟ್ ಆಫರ್ ಕೊಟ್ಟ ಬಂಡೆಪ್ಪ ಖಾಶೆಂಪೂರ್

ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ಗೋವುಗಳ ರಕ್ಷಣೆಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದ ಪುಣ್ಯಕೋಟಿ ಯೋಜನೆಯಡಿ ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸುಮಾರು 3.1ಲಕ್ಷ ರು. ಅನುದಾನದಲ್ಲಿ 31 ಹಸುಗಳನ್ನು ದತ್ತು ತೆಗೆದುಕೊಂಡಿದ್ದೇವೆ ಎಂದು ಹೇಳಿದ ಅವರು ರಾಜ್ಯದಲ್ಲಿ ಗೋವುಗಳ ರಕ್ಷಣೆಗೆ ಪ್ರಭು ಚವ್ಹಾಣ್‌ ಅವರು ಶ್ರಮಿಸುತ್ತಿದ್ದು, ಮುಂದೆಯೂ ಹೀಗೆ ಶ್ರಮಿಸಲಿ ಎಂದು ಹೇಳಿದರು.

ಈ ಸಂಧರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯರುಗಳಾದ ರಘುನಾಥರಾವ ಮಲ್ಕಾಪೂರೆ, ಅರವಿಂದಕುಮಾರ ಅರಳಿ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ನಿರ್ದೇಶಕ ಡಾ. ಮಂಜುನಾಥ ಪಾಳೆಗಾರ, ರಾಯಚೂರ ರಾಜ್ಯವಲಯ ಜಂಟಿ ನಿರ್ದೇಶಕ ಡಾ. ಕೃಷ್ಣಮೂರ್ತಿ, ಪಶು ವೈದ್ಯಕೀಯ ವಿವಿ ಕುಲಪತಿ ಪ್ರೊ. ಕೆ.ಸಿ ವೀರಣ್ಣ, ಎಸ್‌ಪಿ ಡೆಕ್ಕ ಕಿಶೋರ ಬಾಬು, ಇಲಾಖೆ ಉಪನಿರ್ದೇಶಕ ಡಾ. ನರಸಪ್ಪ ಮತ್ತಿತರರು ಇದ್ದರು.

click me!