ಜಾನುವಾರು ಆರೋಗ್ಯಕ್ಕೆ ಸದ್ಯದಲ್ಲೇ ಆಂಬುಲೆನ್ಸ್ ಸೇವೆ: ಸಚಿವ ಪ್ರಭು ಚವ್ಹಾಣ

By Kannadaprabha NewsFirst Published Nov 21, 2020, 11:38 AM IST
Highlights

ಗದಗ ಪಶು ಮಹಾವಿದ್ಯಾಲಯಕ್ಕೆ ಭೇಟಿ ನೀಡಿದ ಪಶು ಸಚಿವ ಪ್ರಭು ಚವ್ಹಾಣ| ಪಶುಸಂಗೋಪನೆ ಇಲಾಖೆಯ ಎಲ್ಲ ಕಚೇರಿಗಳನ್ನು ಆಡಳಿತ ಮತ್ತು ಸುಗಮವಾಗಿ ಕಾರ್ಯ ನಿರ್ವಹಿಸಲು ಬೆಂಗಳೂರಿನಲ್ಲಿ ಪಶುಪಾಲನಾ ಭವನ ನಿರ್ಮಾಣ| 

ಗದಗ(ನ.21): ಜಾನುವಾರುಗಳ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಪಶುಸಂಗೋಪನೆ ಇಲಾಖೆಯಿಂದ ಸದ್ಯದಲ್ಲೇ ಆಂಬುಲೆನ್ಸ್‌ ಲೋಕಾರ್ಪಣೆಗೊಳಿಸಲು ಸಿದ್ಧತೆ ನಡೆಸಲಾಗಿದೆ ಎಂದು ಪಶು ಸಂಗೋಪನಾ ಹಾಗೂ ವಕ್ಫ್‌ ಸಚಿವ ಪ್ರಭು ಚವ್ಹಾಣ ಹೇಳಿದ್ದಾರೆ. 

ಅವರು ಶುಕ್ರವಾರ ಗದಗ ಪಶುವೈದ್ಯಕೀಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ, ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ತುರ್ತು ಸಮಯದಲ್ಲಿ ಈ ಅಂಬುಲೆನ್ಸ್‌ಗಳು ಕಾರ್ಯನಿರ್ವಹಣೆ ಮಾಡುತ್ತಿದ್ದು. ಈ ಮೂಲಕ ರೈತರ ಮನೆ ಬಾಗಿಲಿಗೆ ಪಶು ಆಸ್ಪತ್ರೆ ಬರಲಿದೆ. ಇದರಿಂದ ಪಶು ಸಂಗೋಪನೆ ಮಾಡುವವರಿಗೆ ಬಹಳ ಅನುಕೂಲವಾಗಲಿದೆ. ಅತ್ಯಾಧ್ಯುನಿಕ, ಸುಸಜ್ಜಿತವಾದ ಈ ವಾಹನದಲ್ಲಿ ಶತತ್ರ ಚಿಕಿತ್ಸಾ ಘಟಕ, ಪ್ರಯೋಗ ಶಾಲೆ, ಸ್ಕ್ಯಾ‌ನಿಂಗ್‌,ತುರ್ತು ಚಿಕಿತ್ಸಾ ಘಟಕ, ಔಷಧಿ ಹಾಗೂ ಚಿಕಿತ್ಸಾ ಸಲಕರಣೆಗಳು ಇರಲಿವೆ.

ಪಶುಪಾಲಕರು ಮತ್ತು ಜಾನುವಾರು ಸಾಕಣೆಯಲ್ಲಿ ತೊಡಗಿಸಿಕೊಂಡವರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಪಶುವೈದ್ಯ ಸೇವೆಯನ್ನು ನಿಗದಿತ ಕಾಲ ಮೀತಿಯಲ್ಲಿ ಕೈಗೊಳ್ಳಲು ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಪಶುಸಂಗೋಪನೆ ಇಲಾಖೆಯಿಂದ ವಾರ್‌ ರೂಮ್‌ ಮಾಡಲು ತಯಾರಿ ನಡೆಸಲಾಗುತ್ತಿದೆ. ಈ ಸೌಲಭ್ಯ ದಿನದ 24 ಗಂಟೆ ಲಭ್ಯವಾಗಲಿದ್ದು, ಟೋಲ್‌ ಫ್ರಿ ನಂಬರ್‌ ವ್ಯವಸ್ಥೆ ಸಹ ಮಾಡಲಾಗುತ್ತದೆ. ಕರೆ ಮಾಡಿದ 4 ಗಂಟೆಯಲ್ಲಿ ಸೇವೆ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ. ಕರೆ ಮಾಡಿದ ಮೊಬೈಲ್‌ ನಂಬರ್‌ಗೆ ಎಸ್‌ಎಂಎಸ್‌ ಮೂಲಕ ಮಾಹಿತಿ ಒದಗಿಸಲಾಗುತ್ತದೆ. ಸೇವೆ ಮತ್ತು ಕರೆಗಳ ಎಲ್ಲ ಮಾಹಿತಿ ಸಚಿವರು ಮತ್ತು ಇಲಾಖೆಯ ಕಾರ್ಯದರ್ಶಿ ಗಮನಕ್ಕೆ ತರುವ ವ್ಯವಸ್ಥೆ ಇದೆ. ವಾರ್‌ ರೂಮ್‌ ಮೂಲಕ ರೈತರಿಗೆ, ಪಶುಪಾಲಕರಿಗೆ, ಕೋಳಿ, ಕುರಿ, ಹಂದಿ ಸಾಕಾಣಿಕೆದಾರರಿಗೆ ಆರೋಗ್ಯ ಸಂಬಂಧಿ ವಿಷಯ, ಆಪ್ತಸಮಾಲೋಚನೆ ಮತ್ತು ಸಲಹೆ ಪಡೆದುಕೊಳ್ಳಬಹುದಾಗಿದೆ. ತಜ್ಞರ ಸಲಹೆಗಳಿಂದ ರೈತರಿಗೆ ಆಗುವ ಆರ್ಥಕ ನಷ್ಟ ತಪ್ಪಿಸಬಹುದಾಗಿದೆ ಎಂದ ಅವರು, ಇದರಿಂದ ಪಶುಪಾಲನಾ ಚಟುವಟಿಕೆಗಳು ಮತ್ತಷ್ಟು ವ್ಯವಸ್ಥಿತವಾಗಿ ನಡೆಯುವ ವಿಶ್ವಾಸ ವ್ಯಕ್ತಪಡಿಸಿದರು.

ಬೀಗ ಹಾಕಿದ ಮನೆಯೊಳಗಿತ್ತು ಮಹಿಳೆಯ ಹೆಣ, ಪೊಲೀಸ್ ಸ್ಟೇಷನ್‌ಗೆ ಕರೆದೊಯ್ದಿತ್ತು ಶ್ವಾನ..!

ಪರಿಸರ ದಿನಾಚರಣೆಯ ಅಂಗವಾಗಿ 4214 ಪಶುವೈದ್ಯ ಸಂಸ್ಥೆಗಳಲ್ಲಿ ಮತ್ತು ಫಾರಂಗಳಲ್ಲಿ 30,915 ಗಿಡಗಳನ್ನು ಏಕ ಕಾಲಕ್ಕೆ ನೆಡಲಾಗಿದೆ. ಇನ್ನು ಬೇರೆ ಬೇರೆ ಸ್ಥಳಗಳಲ್ಲಿದ್ದ ಪಶುಸಂಗೋಪನೆ ಇಲಾಖೆಯ ಎಲ್ಲ ಕಚೇರಿಗಳನ್ನು ಆಡಳಿತ ಮತ್ತು ಸುಗಮವಾಗಿ ಕಾರ್ಯ ನಿರ್ವಹಿಸಲು ಬೆಂಗಳೂರಿನಲ್ಲಿ ಪಶುಪಾಲನಾ ಭವನ ನಿರ್ಮಾಣ ಮಾಡಲಾಗಿದೆ.ಇದರಲ್ಲಿ ಪಶುವೈದ್ಯ ಪರಿಷತ್ತು, ರೋಗ ಅಧ್ಯಯನ ವಿಭಾಗ, ಐಎಎಚ್‌ವಿಬಿ ಎಲ್ಲವು ಒಂದೇ ಪ್ರದೇಶದಲ್ಲಿ ಬರುವುದರಿಂದ ರೈತರಿಗೆ ಅನುಕೂಲವಾಗಿದೆ ಎಂದರು.

ಪಶು ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಜಿ ಮತ್ತು ಪಿಎಚ್‌ಡಿ ಆದ ವೈದ್ಯಾಧಿಕಾರಿಗಳಿಗೆ ಹೆಚ್ಚುವರಿ ಜವಾಬ್ದಾರಿ ವಹಿಸಿ ವಿಶೇಷ ಭತ್ಯೆ ನೀಡಲಾಗುತ್ತಿದೆ. ಶಿರಾ ತಾಲೂಕಿನ ಚೀಲನಹಳ್ಳಿಯ 20 ಎಕರೆ ಜಾಗೆಯಲ್ಲಿ ನಬಾರ್ಡ್‌ ಮೂಲಕ .44.63 ಕೋಟಿ ವೆಚ್ಚದಲ್ಲಿ ವಧಾಗಾರ (ಕುರಿ ಮತ್ತು ಮೇಕೆ ಮಾಂಸ ಸಂಸ್ಕರಣಾ ಘಟಕ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಪ್ರಾಣಿ ಹಿಂಸೆ ತಡೆಯುವ ಕಾನೂನುಗಳನ್ನು ಬಿಗಿಗೊಳಿಸಲು ಕ್ರಮವಹಿಸಿ, ರಾಜ್ಯದಲ್ಲಿ ಮೊಟ್ಟಮೊದಲ ಬಾರಿ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯನ್ನು ಸ್ಥಾಪನೆ ಮಾಡಲಾಗಿದೆ. ಆರ್‌ಐಡಿಎಫ್‌ ಯೋಜನೆ ಅಡಿಯಲ್ಲಿ ಹಲವಾರು ಆಸ್ಪತ್ರೆಗಳಿಗೆ ಕಟ್ಟಡ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ಬೀದರ್‌ ಪಶು ವಿವಿ ಸಿಬ್ಬಂದಿಯ ಒಂದು ದಿನದ ವೇತನ ಸಿಎಂ ಪರಿಹಾರ ನಿಧಿಗೆ 1ದಿನದ ಸಂಬಳ 23,46,340 ಪರಿಹಾರ ನಿಧಿಗೆ ನೀಡಲಾಗಿದೆ. ಕೋವಿಡ್‌-19 ಸಂಕಷ್ಟದ ಸಮಯದಲ್ಲಿ ಪಶುಸಂಗೋಪನೆಯ (ಆರ್‌ಟಿಪಿಸಿಆರ್‌) ಉಪಕರಣಗಳು ಕೋವಿಡ್‌ ಪತ್ತೆಗೆ ಹಸ್ತಾಂತರ ಮಾಡಲಾಗಿದ್ದು, ಹೆಬ್ಬಾಳ ಪಶುವೈದ್ಯಕೀಯ ಕಾಲೇಜಿನಲ್ಲಿ ಲಭ್ಯವಿದ್ದ 2 ಆರ್‌ಟಿಪಿಸಿಆರ್‌ ಉಪಕರಣವನ್ನು ಆರೋಗ್ಯ ಇಲಾಖೆಗೆ ಹಸ್ತಾಂತರ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
 

click me!