ಕಲಬುರಗಿ ಉಸ್ತುವಾರಿ ಸಚಿವರ ಅದೇ ರಾಗ ಅದೇ ಹಾಡು: ಕೆಡಿಪಿ ಸಭೆಗೆ 4 ಗಂಟೆ ತಡವಾಗಿ ಬಂದ ನಿರಾಣಿ..!

By Kannadaprabha NewsFirst Published Aug 28, 2022, 9:38 PM IST
Highlights

3 ಗಂಟೆ ಕೆಡಿಪಿ ಸಭೆಗೆ 4 ಗಂಟೆ ಕಾಯ್ದ ಜಿಲ್ಲಾಡಳಿತದ ಎಲ್ಲಾ ಅಧಿಕಾರಿಗಳು- ವಿಳಂಬವಾಗಿ ಸಭೆ ಆರಂಭ

ಕಲಬುರಗಿ(ಆ.28):  ಕಲಬುರಗಿಯಲ್ಲಿ ಅಪರೂಪ ಎಂಬಂತೆ ಕೆಡಿಪಿ ಸಬೆ ನಡೆಯಿತು. ಸಭೆ ನಿಗದಿಯಾಗಿದ್ದು ಬೆಳಗಿನ 10.30 ಗಂಟೆಗೆ. ಆದರೆ ಸಚಿವ ಮುರುಗೇಶ ನಿರಾಣಿ ಅವರು ಸಭೆಗೆ ಬಂದಾಗ ಮಧ್ಯಾಹ್ನದ 2 ಗಂಟೆ!. ಬೆಂಗಳೂರಿನಿಂದಲೇ ವಿಮಾನ ಹಾರೋದು ವಿಳಂಬವಾಯ್ತು ಎಂದು ಹೇಳುತ್ತ ಶುರುವಾದ ಸಭೆಯಲ್ಲಿ ಮತ್ತದೇ ಹಳೆಯ ಸಂಗತಿಗಳದ್ದೇ ಚರ್ಚೆ. ಎಸ್ಸೆಸ್ಸೆಲ್ಸಿ ಫಲಿತಾಂಶ ವಿಚಾರ, ಇಸ್ರೇಲ್‌ ಮಾದರಿ ಕೃಷಿ. ಕಳೆದ ಹಲವು ಕೆಡಿಪಿ ಸಭೆಗಳಲ್ಲಿ ಇವೇ ಸಂಗತಿಗಳು ಚರ್ಚೆಯಾಗಿ ಚರ್ವಿತ ಚರ್ವಣ ಎಂಬಂತಾಗಿದ್ದು ಈ ಸಭೆಯಲ್ಲಿಯೂ ಅವೇ ಚರ್ಚೆಗೆ ಬಂದು ಸಿಂಹಪಾಲು ಸಮಯ ಕಬಳಿಸಿದವು.

ಇದಲ್ಲದೆ 3 ಗಂಟೆ ನಡೆದ ಕೆಡಿಪಿ ಸಭೆಗೆಗಾಗಿ ಜಿಲ್ಲಾಡಳಿತದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಬರೋಬ್ಬರಿ 4 ಗಂಟೆಗಳ ಕಾಯುವಂತಾಯ್ತು. ವಿವಿ ಕ್ಯಾಂಪಸ್‌ನ ರಾಧಾಕೃಷ್ಣ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳು ಸಚಿವರ ಬರುವಿಕೆಗಾಗಿ ಕಾದು ಸುಸ್ತಾಗಿದ್ದರು.

PSI SCAM: ಒಂದುವರೆ ತಿಂಗ್ಳಿಂದ ಸಿಐಡಿಯನ್ನೇ ಆಟ ಆಡಿಸಿ ಬಲೆಗೆ ಬಿದ್ದ ಫಸ್ಟ್ ರ‍್ಯಾಂಕ್ ರಚನಾ!

ಸಚಿವರ ಬರುವಿಕೆ ಮಧ್ಯಾಹ್ನ ಭೋಜನ ಹೊತ್ತಿಗೂ ಆಗದೆ ಹೋದಾಗ ಎಲ್ಲರು ಸುಸ್ತಾಗಿದ್ದನ್ನ ಕಂಡ ಎಡಿಸಿ ಭೀಮಾಶಂಕರ ತೆಗ್ಗೆಳ್ಳಿಯವರು ಊಟಕ್ಕೆ ಹೋಗಿ ಬನ್ನಿರೆಂದು ಸೇರಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಭೋಜನದ ನಂತರ ಸಭೆ ನಡೆಯಿತಾದರೂ ಸಭೆಯಲ್ಲಿ ಹೆಚ್ಚಿನ ಜನ ನಿದ್ರೆಗೇ ಜಾರಿದ್ದು ಕಂಡು ಬಂತು.

ಬೆಳೆಹಾನಿ ನೋಟ:

ಕೃಷಿ ಇಲಾಖೆಯ ಚರ್ಚೆ ವೇಳೆಯಲ್ಲಿ ಜಿಲ್ಲೆಯಲ್ಲಿ ಜುಲೈ, ಆಗಸ್ಟ್‌ ಮಾಹೆಯಲ್ಲಿ ಸುರಿದ ಮಳೆಯಿಂದಾಗಿ ಅತಿವೃಷ್ಟಿಯಿಂದ ಬಿತ್ತನೆಯಾದ 7.75 ಲಕ್ಷ ಹೆಕ್ಟೇರ್‌ ಪೈಕಿ 1.11 ಲಕ್ಷ ಹೆಕ್ಟೇರ್‌ ಪ್ರದೇಶ ಬೆಳೆ ಹಾನಿಯಾಗಿದೆ. ಇದರಲ್ಲಿ 5 ಲಕ್ಷ ಹೆಕ್ಟೇರ್‌ ತೊಗರಿ ಬೆಳೆ ಸೇರಿದೆ. ಬೆಳೆ ಹಾನಿಗೆ ಸಲ್ಲಿಸಲಾದ 40 ಸಾವಿರ ದೂರುಗಳ ಪೈಕಿ 22 ಸಾವಿರ ಹೊಲಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸಿದೆ. ಉಳಿದವುಗಳ ಜಂಟಿ ಸರ್ವೆ ನಡೆಯುತ್ತಿದ್ದು, ಮುಗಿದ ಕೂಡಲೆ ಪರಿಹಾರ ವಿತರಣೆ ಮಾಡಲಾಗುತ್ತದೆ ಎಂದು ಕೃಷಿ ಉಪನಿರ್ದೇಶಕಿ ಸಚಿವರಿಗೆ ಮಾಹಿತಿ ನೀಡಿದರು.

ಎಂಎಲ್‌ಸಿ ಸುನೀಲ್‌ ವಲ್ಯಾಪುರೆ ಕೃಷಿ ಇಲಾಖೆಯಿಂದ ರೈತರಿಗೆ ಕಳೆದ ಮಾಚ್‌ರ್‍ ಮಾಹೆಯಿಂದ ಕೃಷಿ ಪರಿಕರ ನೀಡಿಲ್ಲ. ತೋಟಗಾರಿಕೆ ಅಧಿಕಾರಿಗಳು ಕ್ಷೇತ್ರಕ್ಕೆ ಹೋಗುತ್ತಿಲ್ಲವೆಂಬ ದೂರಿಗೆ ಸ್ಪಂದಿಸಿದ ನಿರಾಣಿ ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು ಕ್ಷೇತ್ರಕ್ಕೆ ಕಡ್ಡಾಯವಾಗಿ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಬೇಕು. ಮುಂದಿನ 15 ದಿನದಲ್ಲಿ ಕೃಷಿ ಇಲಾಖೆಯ ವಿವಿಧ ಯಂತ್ರೋಪಕರಣ, ಪರಿಕರಗಳನ್ನು ರೈತ ಫಲಾನುಭವಿಗಳಿಗೆ ವಿತರಿಸಬೇಕು ಎಂದು ಕೃಷಿ ಉಪನಿರ್ದೇಶಕಿಗೆ ಸೂಚಿಸಿದರು.

ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿ, ಸೇಡಂ ಪಟ್ಟಣದಲ್ಲಿ ಕಳೆದ 5 ವರ್ಷದಿಂದ ಪುರಸಭೆ ಮಳಿಗೆ ಕಟ್ಟಡ ನಡೆಯುತ್ತಿದೆ, ಆದರೆ ಯಾವಾಗ ಪೂರ್ಣವಾಗುತ್ತದೆ ಎಂದು ಕೆಆರ್‌ಐಡಿಎಲ್‌ ಕಾರ್ಯನಿರ್ವಾಹಕ ಅಭಿಯಂತ ಅನೀಲಕುಮಾರ ಗೋಖಲೆ ಅವರನ್ನು ಪ್ರಶ್ನಿಸಿ ಕೂಡಲೆ ಇದನ್ನು ಮುಗಿಸಬೇಕು. ಇದಲ್ಲದೆ ಸೇಡಂ ಕ್ಷೇತ್ರದಲ್ಲಿ ಏಳೆಂಟು ವರ್ಷದಿಂದ ಕಾಮಗಾರಿ ನಡೆಯುತ್ತಿದೆ. ಕೂಡಲೆ ಇವುಕೆಲ್ಲ ಮುಕ್ತಿ ನೀಡಿ ಎಂದರು.

ಗೋವು ದತ್ತು ಪಡೆಯಲು ಸಚಿವ ಮನವಿ:

ಪಶು ಸಂಗೊಪನೆ ಇಲಾಖೆಯ ಪುಣ್ಯಕೋಟಿ ಯೋಜನೆಯಡಿ ಗೋವನ್ನು ದತ್ತು ಪಡೆಯುವ ಅಭಿಯಾನ ಹಮ್ಮಿಕೊಂಡಿದ್ದು, ಸಾರ್ವಜನಿಕರು, ಉದ್ಯಮಿಗಳು ವಾರ್ಷಿಕ 11 ಸಾವಿರ ರು. ಪಾವತಿಸಿ ದತ್ತು ಪಡೆಯಬೇಕು ಎಂದು ಸಚಿವ ಡಾ.ಮುರುಗೇಶ ನಿರಾಣಿ ಅವರು ಮನವಿ ಮಾಡಿ ಸ್ವತ ಜಿಲ್ಲೆಯ 5 ಗೋವುಗಳನ್ನು ದತ್ತು ಪಡೆಯುವುದಾಗಿ ಘೋಷಿಸಿದರು. ಇದೇ ರೀತಿಯಲ್ಲಿ ಶಾಸಕ ಸುಭಾಷÜ ಗುತ್ತೇದಾರ ಮತ್ತು ಬಿ.ಜಿ.ಪಾಟೀಲ ತಲಾ 11, ಕೆ.ಕೆ.ಆರ್‌.ಡಿ.ಬಿ. ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಶಾಸಕರಾದ ಡಾ.ಅವಿನಾಶ ಜಾಧವ, ಶಶೀಲ ನಮೋಶಿ ತಲಾ 5 ಗೋವು ದತ್ತು ಪಡೆಯುವುದಾಗಿ ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಪ್ರಗತಿ ಪರಿಶೀಲನೆ ವೇಳೆಯಲ್ಲಿ ಸೂರತ್‌-ಚೆನ್ನೈ ಆರ್ಥಿಕ ಕಾರಿಡಾರ್‌ ಯೋಜನೆಗೆ ಪಕ್ಕದ ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿ ಭೂಮಿ ಭೂಸ್ವಾಧೀನಕ್ಕೆ ಅಲ್ಲಿನ ರೈತರಿಗೆ ಹೆಚ್ಚಿನ ಪರಿಹಾರ ನೀಡಲಾಗಿದೆ ಎಂಬುದು ನಮ್ಮ ರೈತರ ಗೋಳಾಗಿದೆ. ಹೀಗಾಗಿ ಇದನ್ನು ಸರಿಪಡಿಸಬೇಕು ಎಂದು ಕೆ.ಕೆ.ಆರ್‌.ಡಿ.ಬಿ. ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಸಚಿವರ ಗಮನ ಸೆಳೆದಾಗ, ಇದಕ್ಕೆ ಸಬ್‌ ರಿಜಿಸ್ಟ್ರಾರ್‌ ಕಚೇರಿಯಿಂದ ಮೌಲ್ಯ ದರ ಪರಿಷ್ಕರಣೆ ಮಾಡಿ ರೈತರಿಗೆ ನ್ಯಾಯ ಒದಗಿಸಬೇಕು. ಈ ನಿಟ್ಟಿನಲ್ಲಿ ಪಕ್ಕದ ರಾಜ್ಯದಲ್ಲಿ ರೈತರಿಗೆ ಪ್ರತಿ ಎಕರೆಗೆ ಎಷ್ಟುಪರಿಹಾರ ನಿಡಲಾಗಿದೆ ಎಂಬುದನ್ನು ಪರಿಶೀಲಿಸುವಂತೆ ಎನ್‌.ಎಚ್‌.ಎ.ಐ. ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.

ಮಲಗಿದ್ದ ಮಹಿಳೆ ಮೇಲೆರಿ ಹೆಡೆ ಎತ್ತಿದ ನಾಗರ: ಮಲ್ಲಯ್ಯ ಮಲ್ಲಯ್ಯ ಎಂದು ಜಪಿಸಿದ ಮಹಿಳೆಗೆ ಸರ್ಪ ಮಾಡಿದ್ದೇನು?

ಸಭೆಯಲ್ಲಿ ಶಾಸಕರಾದ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಧರ್ಮಣ್ಣ ದೊಡ್ಡಮನಿ, ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಲ್ಮಾ ಕೆ. ಫಾಹಿಮ್‌, ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್‌, ಎಸ್‌.ಪಿ.ಇಶಾ ಪಂತ್‌, ಡಿ.ಸಿ.ಪಿ.ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್‌ ಸಿ.ಇ.ಓ ಡಾ.ಗಿರೀಶ್‌ ಡಿ. ಬದೋಲೆ, ಮಹಾನಗರ ಪಾಲಿಕೆ ಅಯುಕ್ತ ಭುವನೇಶ ಪಾಟೀಲ ದೇವಿದಾಸ್‌, ಸಹಾಯಕ ಆಯುಕ್ತೆ ಮೋನಾ ರೋಟ್‌ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

1) ಎಸ್‌.ಎಸ್‌.ಎಲ್‌.ಸಿ. ಫಲಿತಾಂಶ ಶೇ.100 ಪಡೆಯುವುದರ ಜೊತೆಗೆ ರಾಜ್ಯದ ಅಗ್ರ 10 ಜಿಲ್ಲೆಯಲ್ಲಿ ಕಲಬುರಗಿ ತರುವುದು ನಮ್ಮ ಗುರಿ ಎಂದ ಸಚಿವ ನಿರಾಣಿ
2) ಈ ನಿಟ್ಟಿನಲ್ಲಿ ಫಲಿತಾಂಶ ಸುಧಾರಣಾ ಕ್ರಮ ಕೈಗೊಳ್ಳುವಂತೆ ಡಿ.ಡಿ.ಪಿ.ಐ. ಸಕ್ರೆಪ್ಪಗೌಡ ಬಿರಾದಾರ ಅವರಿಗೆ ಸೂಚನೆ, ಎಸ್‌ಡಿಎಂಸಿ ಸಭೆ ವರದಿಗೆ ಸೂಚನೆ
3) ಎಂಎಲ್‌ಸಿ ಶಶಿಲ್‌ ನಮೋಶಿ ಮಾತಾಡಿ ಜಿಲ್ಲಾ ಉಸ್ತುವಾರಿ ಸಚಿವರ ಕಾಳಜಿಗೆ ಶ್ಲಾಘನೆ, ಸವಾಲಾಗಿ ಸ್ವೀಕರಿಸಲು ಶಿಕ್ಷಣ ಇಲಾಖೆಗೆ ಕೋರಿಕೆ
4) ನೀರಾವರಿ ಇಲ್ಲದ 1000-2000 ಎಕರೆ ಪ್ರದೇಶದಲ್ಲಿ ಸರ್ಕಾರದಿಂದಲೆ ನೀರಾವರಿ, ಇಸ್ರೇಲ್‌ ಮಾದರಿ ಕೃಷಿ ನೀತಿ ಜಾರಿಗೆ ಇಸ್ರೆಲ್‌ ಕಾನ್ಸುಲೇಟ್‌ ಜನರಲ್‌ ಆಸಕ್ತಿ
5) ಅತಿವೃಷ್ಠಿಯಿಂದ ನಷ್ಟವಾದ ಬೆಳೆಗಳ ಸರ್ವೇ ಕಾರ್ಯ ಮುಗಿದ ಕೂಡಲೆ ಪರಿಹಾರ ವಿತರಣೆ
6) ಈ ಭಾಗದ ಜ್ವಲಂತ ಸಮಸ್ಯೆಗಳ ಪರಿಹಾರ ಕಲ್ಪಿಸುವುದಾಗಿ ಈಗಾಗಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆಂದು ನಿರಾಣಿ ಭರವಸೆ
 

click me!