Chikkaballapur: ಅಮೃತ ಕಾಲದಲ್ಲಿ ಸರ್ವಸ್ಪರ್ಶಿ ಬಜೆಟ್‌: ಸಚಿವ ಸುಧಾಕರ್‌

By Kannadaprabha NewsFirst Published Feb 2, 2023, 11:56 AM IST
Highlights

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬುಧವಾರ ಮಂಡಿಸಿದ 2023- 2024ರ ಆಯವ್ಯಯ ಅಮೃತ ಕಾಲದಲ್ಲಿ ಸರ್ವಸ್ಪರ್ಶಿ ಬಜೆಟ್‌ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು. 

ಚಿಕ್ಕಬಳ್ಳಾಪುರ (ಫೆ.02): ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬುಧವಾರ ಮಂಡಿಸಿದ 2023- 2024ರ ಆಯವ್ಯಯ ಅಮೃತ ಕಾಲದಲ್ಲಿ ಸರ್ವಸ್ಪರ್ಶಿ ಬಜೆಟ್‌ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು. 

ನಗರದಲ್ಲಿ ಬುಧವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಗದ ಜನರ ಬಗ್ಗೆ ಕಾಳಜಿ ವಹಿಸಿದ್ದಾರೆ. ಮಧ್ಯಮ ವರ್ಗದ ಜನರಿಗೆ 5 ಲಕ್ಷ ಇದ್ದ ತೆರಿಗೆ ಪಾವತಿಯನ್ನು 7 ಲಕ್ಷಕ್ಕೆ ಹೆಚ್ಚಿಸಲಾಗಿದೆ. ರಾಜ್ಯದ ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿರುವ ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ನೀಡುವ ಮೂಲಕ ಮಧ್ಯಮ ಕರ್ನಾಟಕದ ಪ್ರತಿಷ್ಠಿತ ಕಾಮಗಾರಿಗೆ ನೀಡಿದ ಕೊಡುಗೆ ಎಂದರು.

ಇನ್‌ಸ್ಪೆಕ್ಟರ್‌ ಪ್ರವೀಣ್‌ ವಿರುದ್ಧ ತನಿಖೆಗೆ ಹೈಕೋರ್ಟ್‌ ಆದೇಶ

ನರ್ಸಿಂಗ್‌ ಕಾಲೇಜುಗಳ ಆರಂಭ: ವೈದ್ಯಕೀಯ ಜಗತ್ತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿರುವ ಕೇಂದ್ರ ಸರ್ಕಾರ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸುಮಾರು 154ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳಲ್ಲಿ ನರ್ಸಿಂಗ್‌ ಕಾಲೇಜು ಆರಂಭಿಸುತ್ತಿದೆ. ಇದು ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಬೃಹತ್‌ ಕೊಡುಗೆಯಾಗಿದೆ. ಜೊತೆಗೆ ಆರೋಗ್ಯ ಕ್ಷೇತ್ರಕ್ಕೆ ಕಳೆದ ಸಾಲಿಗಿಂತ ಪ್ರಸ್ತುತ ಸಾಲಿನಲ್ಲಿ ಹೆಚ್ಚಿನ ಅನುದಾನ ನೀಡಲಾಗಿದೆ. ಆರೋಗ್ಯ, ಶಿಕ್ಷಣ ಸೇರಿದಂತೆ ರೈತರಿಗೆ ಉತ್ತಮ ಕಾರ್ಯಕ್ರಮ ನೀಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸುವುದಾಗಿ ಸಚಿವರು ಹೇಳಿದರು.

ಪ್ರಸ್ತುತ ಆಯವ್ಯಯದ ಬಗ್ಗೆ ಕಾಂಗ್ರೆಸ್‌ ವ್ಯಂಗ್ಯವಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಕಾಂಗ್ರೆಸ್‌ಗೆ ವ್ಯಂಗ್ಯ ಬಿಟ್ಟು ಮತ್ತೆನು ಗೊತ್ತಿದೆ. ಯುಪಿಎ ಕಾಲದಲ್ಲಿ ಹರಾಜು ಮಾಡದೆ ಕೇವಲ ಕರೆ ಮಾಡಿ ಕಲ್ಲಿದ್ದಲು ಗುತ್ತಿಗೆ ನೀಡಲಾಗುತ್ತಿತ್ತು. ಯಾರಿಗೆ ಹಣ, ಪ್ರಭಾವ ಬೀರುವ ಶಕ್ತಿ ಇತ್ತೋ ಅವರಿಗೆ ಮಣೆ ಹಾಕಲಾಗುತ್ತಿತ್ತು. ಆದರೆ ಈಗ ಹಾಗಿಲ್ಲ ಎಲ್ಲವೂ ಪಾರದರ್ಶಕವಾಗಿ ನಡೆಯುತ್ತಿದೆ ಎಂದರು.

ಡಾ.ಸುಧಾಕರ್‌ ಏಳಿಗೆ ಸಹಿಸದೇ ಇಲ್ಲಸಲ್ಲದ ಟೀಕೆ: ಸಚಿವ ಡಾ.ಕೆ.ಸುಧಾಕರ್‌ ರವರ ರಾಜಕೀಯ ಏಳಿಗೆ ಹಾಗೂ ಕ್ಷೇತ್ರದ ಅಭಿವೃದ್ದಿ ಸಹಿದೇ ಕಾಂಗ್ರೆಸ್‌ ನಾಯಕರು ಇತ್ತೀಚೆಗೆ ಅವರ ವಿರುದ್ದ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆಂದು ಬಿಜೆಪಿ ಪಕ್ಷದ ದಲಿತ ಮುಖಂಡರು ತಮ್ಮ ಕಿಡಿಕಾರಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿಕ್ಕಬಳ್ಳಾಪುರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಕದಸಂಸ ರಾಜ್ಯ ಸಂಚಾಲಕ ಬಾಲಕುಂಟಹಳ್ಳಿ ಗಂಗಾಧರ್‌, ಪಿಕಾರ್ಡ್‌ ಬ್ಯಾಂಕ್‌ ಉಪಾಧ್ಯಕ್ಷ ತಿರುಮಳಪ್ಪ, ವಕೀಲ ದೇವದಾಸ್‌, ರಾಜಣ್ಣ, ನಾಗೇಶ್‌, ನರಸಿಂಹಪ್ಪ, ವೆಂಕಟೇಶ್‌ ಮತ್ತಿತರರು ಕ್ಷೇತ್ರದಲ್ಲಿ ದಲಿತರ ಉದ್ದಾರ ಕಾಂಗ್ರೆಸ್‌ನಿಂದ ಆಗಿಲ್ಲ ಎಂದರು.

ರಾಜಕೀಯವಾಗಿ ಎದುರಿಸಲಿ: ಡಾ.ಸುಧಾಕರ್‌ ಅವರನ್ನು ರಾಜಕೀಯವಾಗಿ ಎದುರಿಸಲಾಗದೇ ಅಭಿವೃದ್ದಿ ಬಗ್ಗೆ ಮಾತನಾಡದೇ ಇತ್ತೀಚೆಗೆ ಕಾಂಗ್ರೆಸ್‌ ಮುಖಂಡರು ಅವರ ವಿರುದ್ದ ಕ್ಷೇತ್ರದಲ್ಲಿ ದಲಿತ ವಿರೋಧಿ ಸುಧಾಕರ್‌ ಅಂತ ಅಪಪ್ರಚಾರದಲ್ಲಿ ತೊಡಗಿರುವುದು ಸರಿಯಲ್ಲ. ರಾಜಕೀಯವಾಗಿ ಅವರನ್ನು ಎದುರಿಸಲಿ. ಅಭಿವೃದ್ದಿ ಬಗ್ಗೆ ಚರ್ಚೆಗೆ ಬರಲಿ. ಆದರೆ ವೈಯಕ್ತಿಕವಾಗಿ ನಿಂದನೆ ಮಾಡಿದರೆ ನಾವು ಸುಮ್ಮನೆ ಇರಲ್ಲ. ನಾವು ಕೂಡ ಅವರಂತೆ ಮಾತನಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಿಡಿ ಪ್ರಕರಣ ಬಗ್ಗೆ ಸಿಎಂ ಜತೆ ಚರ್ಚಿಸುವೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಸಚಿವರ ಬಳಿ ಇದ್ದು ಎಲ್ಲಾ ಅಧಿಕಾರ ಅನುಭವಿಸಿದವರು ಈಗ ಅವರ ವಿರುದ್ದ ಮಾತನಾಡುತ್ತಿದ್ದಾರೆ. ಕ್ಷೇತ್ರದ ಜನತೆ ಇದಕ್ಕೆ ಸೊಪ್ಪು ಹಾಕಲ್ಲ. ಕ್ಷೇತ್ರದ ಅಭಿವೃದ್ದಿ ಯಾರಿಂದ ಆಗಿದೆ ಎನ್ನುವುದು ಕ್ಷೇತ್ರದ ಪ್ರತಿಯೊಬ್ಬರಿಗೂ ಅರಿವು ಆಗಿದೆ. ಅಲ್ಲದೇ ಸುಧಾಕರ್‌ ದಲಿತ ಮುಖಂಡರಿಗೆ ಅನೇಕ ಅವಕಾಶಗಳನ್ನು ರಾಜಕಿಯವಾಗಿ ನೀಡಿದ್ದಾರೆ. ಕಾಂಗ್ರೆಸ್‌ ನಾಯಕರು ಕೇವಲ ದಲಿತ ಮುಖಂಡರನ್ನು ಹಾಗೂ ದಲಿತರನ್ನು ಓಟ್‌ ಬ್ಯಾಂಕ್‌ ಮಾಡಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಬಡವರಿಗೆ ಸೈಟು ನೀಡುವುದನ್ನು ಸಹಿಸದೇ ಸುಧಾಕರ್‌ ವಿರುದ್ದ ಈ ರೀತಿ ಮಾತನಾಡುವುದು ಅವರಿಗೆ ಶೋಭ ತರುವುದಿಲ್ಲ ಎಂದರು.

click me!