
ಮಂಗಳೂರು, (ಅ.21): ಕಾಂಗ್ರೆಸ್ (Congress) ಮುಖಂಡ ಐವಾನ್ ಡಿಸೋಜಾ (Ivan D'Souza) ವಿರುದ್ದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಲ್ಲಿ (Mangaluru) ಇಂದು (ಅ.21) ಮಾತನಾಡಿದ ಸ್ವಾಮೀಜಿಗಳು, ಮಾಜಿ ಎಂಎಲ್ಸಿ ಒಬ್ಬರು ಭಜರಂಗ ದಳದ ಬಗ್ಗೆ ಮಾತನಾಡಿದ್ದಾರೆ. ಆದರೆ, ಅವರು ಈಗಾಗಲೇ ಸರಿದು ಹೋಗಿದ್ದಾರೆ ಎಂದು ಮಾರ್ಮಿಕವಾಗಿ ಐವನ್ ಡಿಸೋಜಾ ವಿರುದ್ಧ ಕಿಡಿಕಾರಿದರು.
ಮತಾಂತರ ಕ್ರೌರ್ಯಕ್ಕಿಂತ ಹೀನ ಕೃತ್ಯ: ಪ್ರಮೋದ್ ಮುತಾಲಿಕ್
ಮಾಜಿ ಎಂಎಲ್ಸಿ ಅವರು 'ಐ' ಹೋಗಿ 'ವನ್' ಆಗಿದ್ದಾರೆ. ಇನ್ನು ವನ್ ಕೂಡ ಹೋಗಿ ಯಾರೂ ಅವರನ್ನು ನೋಡದಂತಹ ಪರಿಸ್ಥಿತಿ ಬರಬಹುದು ಎಂದು ನೇರವಾಗಿ ಹೆಸರು ಪ್ರಸ್ತಾಪಿಸದೆ ಐವನ್ ಡಿಸೋಜಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಎಂಎಲ್ಸಿ ಅವರು ಈ ಬಗ್ಗೆ ಗಮನಿಸಲಿ. ಅವರು ಇರುವ ಪಕ್ಷ ಮುಳುಗುತ್ತಿದೆ. ಅದರ ಜೊತೆಗೆ ಅವರೂ ಕೂಡ ಮುಳುಗುತ್ತಿದ್ದಾರೆ. ಅವರು ಯಾರನ್ನು ಮದುವೆ ಆಗಿದ್ದಾರೆ? ಯಾರ ಜೊತೆಗೆ ಸಂಸಾರ ಮಾಡುತ್ತಿದ್ದಾರೆ ಎನ್ನುವುದನ್ನು ಅವರು ಗಮನಿಸಲಿ. ಕೇಸರಿ ಬಗ್ಗೆ ಮಾತಾಡಿದವರೇ ಕೇಸರಿ ಹೆಣ್ಣನ್ನು ಮದುವೆ ಆಗಿದ್ದಾರೆ. ಮತಾಂತರ ಆಗಿರುವುದು ಅಲ್ಲೇ. ಅವರು ಮುಂದೆ ಮಾತಾಡುವಾಗ ಎಚ್ಚರಿಕೆಯಿಂದ ಇರಲಿ ಕೇಸರಿಯನ್ನು ಕೆಣಕೋ ಅಗತ್ಯವಿಲ್ಲ ಎಂದು ಟಾಂಗ್ ಕೊಟ್ಟರು.
ಕೇಸರಿ ವಿರುದ್ದ ಆಕ್ಷೇಪಕಾರಿ ಹೇಳಿಕೆ ನೀಡಿದ ಹಿನ್ನೆಲೆ, ಕಾಂಗ್ರೆಸ್ ಮುಖಂಡ ಐವಾನ್ ಡಿಸೋಜಾ ಅವರ ಮಂಗಳೂರಿನ ನಿವಾಸಕ್ಕೆ ಬಜರಂಗದಳ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು.