Mandya Rain Effect 90ಕ್ಕೂ ಹೆಚ್ಚು ತೆಂಗಿನಮರ ನೆಲಸಮ, ಕಣ್ಣೀರಿಟ್ಟ ವೃದ್ಧೆ

By Suvarna NewsFirst Published May 10, 2022, 11:41 AM IST
Highlights
  • ಬಿರುಗಾಳಿ ಸಹಿತ ಭಾರೀ ಮಳೆ.
  • ನೆಲಕ್ಕುರುಳಿದ 90ಕ್ಕೂ ಹೆಚ್ಚು ತೆಂಗಿನ ಮರಗಳು.
  • ಮಕ್ಕಳಂತೆ ಸಾಕಿದ್ದ ಮರಗಳನ್ನ ಕಳೆದುಕೊಂಡ ರೈತ ಮಹಿಳೆ.
  • ಪರಿಹಾರ ಕೊಡಿಸುವ ಭರವಸೆ ನೀಡಿ, ಸಚಿವರ ಸಾಂತ್ವನ.

ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್ 

ಮಂಡ್ಯ (ಮೇ.10): ಕಳೆದ 15 ದಿನಗಳಿಂದ ರಾಜ್ಯದಲ್ಲಿ ಬಿಟ್ಟು ಬಿಡದೆ ಮಳೆ (Rain) ಸುರಿಯುತ್ತಿದೆ. ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆ ಮಂಡ್ಯ (Mandya) ಜಿಲ್ಲೆಯ ಹಲವೆಡೆ ಹಾನಿ ಮಾಡಿದೆ.‌ ಬಿರುಗಾಳಿಯ ರಭಸಕ್ಕೆ ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ಬಿದ್ದುಹೋಗಿವೆ.‌ ಭಾರೀ ಮಳೆಗೆ ಮನೆ ಗೋಡೆ, ಮೇಲ್ಛಾವಣಿ ಕುಸಿದಿವೆ. ಕೆಆರ್ ಪೇಟೆ ತಾಲೂಕಿನ ಅಂಚನಹಳ್ಳಿ ಗ್ರಾಮದಲ್ಲಿ ಧಾರಾಕಾರ ಮಳೆಗೆ 90ಕ್ಕೂ ಹೆಚ್ಚು ತೆಂಗಿನ ಮರಗಳು (coconut trees) ನೆಲಕ್ಕುರುಳಿದ್ದು, ಮಕ್ಕಳಂತೆ‌ ಸಾಕಿದ್ದ ಮರಗಳನ್ನು ಕಳೆದುಕೊಂಡ ವೃದ್ಧೆ ಕಣ್ಣೀರಾಗಿದ್ದಾಳೆ.

ಭವಿಷ್ಯದ ಕನಸು ಕಟ್ಟಿ, ಪೋಷಿಸಿದ್ದ ಮರಗಳು ಮಣ್ಣು ಪಾಲು: ಮಂಡ್ಯ ಜಿಲ್ಲೆ ಕೆಆರ್ ತಾಲೂಕು ಅಂಚನಹಳ್ಳಿ ಗ್ರಾಮದ ವೃದ್ಧೆ ಈರಾಜಮ್ಮ ತಮ್ಮ ಮುಂದಿನ ಪೀಳಿಗೆ ಚೆನ್ನಾಗಿರಲಿ ಎಂದು ತನ್ನ  ಎರಡೂವರೆ ಎಕರೆ ಜಮೀನಿನಲ್ಲಿ 100ಕ್ಕೂ ಹೆಚ್ಚು ತೆಂಗಿನ ಸಸಿಗಳನ್ನು ನೆಟ್ಟಿದ್ದರು. 15ವರ್ಷಗಳ ಹಿಂದೆ ನೆಡಲಾಗಿದ್ದ  ಸಸಿಗಳ ಜೊತೆಗೆ ಈರಾಜಮ್ಮ ತಾಯಿ ಮಕ್ಕಳ ಬಾಂಧವ್ಯ ಹೊಂದಿದ್ದರು. ಪ್ರತಿ ಸಸಿಯನ್ನು ಸಾಕಿ ಸಲುಹುತ್ತಾ, ನೀರುಣಿಸುತ್ತಾ ಇಂದು ತಲೆ ಎತ್ತಿ ನೋಡುವಂತೆ ಮರಗಳಾಗಿ ಬೆಳೆಸಿದ್ದ ವೃದ್ಧ ಮಕ್ಕಳು ಮೊಮ್ಮಕ್ಕಳಿಗೆ ಈ ಮರಗಳು ನೆರವಾಗುತ್ತವೆ ಅಂತಲೇ ತಿಳಿದಿದ್ದಳು.

VOCAL FOR LOCAL ಪ್ರತೀ ಜಿಲ್ಲೆಯಲ್ಲೂ ಉದ್ಯೋಗ ಮೇಳಕ್ಕೆ ಮುಂದಾದ ರಾಜ್ಯ ಸರಕಾರ

ಆದ್ರೆ ಪ್ರಕೃತಿಯ ಲೆಕ್ಕಾಚಾರವೇ ಬೇರಾಗಿತ್ತು. ತಲೆಎತ್ತಿ ಬೆಳೆದಿದ್ದ ತೆಂಗಿನ ಮರಗಳು ವರುಣನ ಆರ್ಭಟಕ್ಕೆ ನೆಲಕಚ್ಚಿವೆ. ಮಕ್ಕಳಂತೆ ಸಾಕಿದ್ದ ಮರಗಳನ್ನ ಕಳೆದುಕೊಂಡ ಅಜ್ಜಿಯ ದುಃಖ ಮುಗಿಲು ಮುಟ್ಟಿದೆ. ಬಾಯಿ ಬಾಯಿ ಬಡಿದುಕೊಂಡು ಕಣ್ಣೀರು ಹಾಕುತ್ತಿರುವ ವೃದ್ಧ ಈರಾಜಮ್ಮ ದಿಕ್ಕು ತೋಚದಂತಾಗಿದ್ದಾರೆ.

ಮಳೆ ಹಾನಿ ಪ್ರದೇಶಕ್ಕೆ ಸಚಿವ ನಾರಾಯಣಗೌಡ ಭೇಟಿ, ಪರಿಹಾರದ ಭರವಸೆ: 
ಬಿರುಗಾಳಿ ಸಹಿತ ಮಳೆಗೆ ತೆಂಗಿನ ಮರಗಳು ನೆಲಕ್ಕುರುಳಿದ್ದ ಅಂಚನಹಳ್ಳಿ ಗ್ರಾಮಕ್ಕೆ ಸಚಿವ ನಾರಾಯಣಗೌಡ ಭೇಟಿ ನೀಡಿದ್ರು. ಸಚಿವರ ಬಳಿ ಪರಿಸ್ಥಿತಿ ವಿವರಿಸಿದ ವೃದ್ಧೆ ಈರಾಜಮ್ಮ, ಸಚಿವರ ಕೈ ಹಿಡಿದು ಗೋಳಾಡಿದರು. ಬಳಿಕ ಈರಾಜಮ್ಮಗೆ ಸಾಂತ್ವನ ಹೇಳಿದ ಸಚಿವ ನಾರಾಯಣ ಗೌಡ ಸ್ಥಳದಲ್ಲೇ ವೈಯಕ್ತಿಕ ಪರಿಹಾರ ವಿತರಿಸಿದರು.  ಸಿಎಂ ಜೊತೆ ಚರ್ಚಿಸಿ, ಸರ್ಕಾರದಿಂದ ಹೆಚ್ಚಿನ ಪರಿಹಾರ ಕೊಡಿಸುವ ಭರವಸೆ ನೀಡಿ ಅಧಿಕಾರಿಗಳಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ರು.

BMRCL Recruitment 2022: ಫೈರ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ

ಬಿರುಗಾಳಿ ರಭಸಕ್ಕೆ ರಸ್ತೆಗೆ ಬಾಗಿದ ವಿದ್ಯುತ್ ಕಂಬ: ಗಾಳಿ ಬೀಸಿದ ರಭಸಕ್ಕೆ ಮಂಡ್ಯ ನಾಗಮಂಗಲ ರಸ್ತೆಯ ಬಿಳಿದೇಗಲು ಬಳಿ ವಿದ್ಯುತ್ ಕಂಬ ರಸ್ತೆಗೆ ವಾಲಿಕೊಂಡಿದೆ. ಯಾವ ಸಮಯದಲ್ಲಿ ಬೀಳುವುದೋ ಎಂಬ ಭಯದಿಂದ ಈ ಮಾರ್ಗದಲ್ಲಿ ಸಂಚರಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ವಿದ್ಯುತ್ ಕಂಬ ಬಾಗಿ ನಿಂತಿರುವ ವಿಷಯವನ್ನು ಕೆಇಬಿ ಅಧಿಕಾರಿಗಳಿಗೆ ತಿಳಿಸಿದ್ದರೂ ಸ್ಥಳಕ್ಕೆ ಆಗಮಿಸಿ ಕಂಬವನ್ನು ಸರಿಪಡಿಸಿಲ್ಲ ಎಂಬುದು ಸ್ಥಳೀಯರ ಆಕ್ರೋಶವಾಗಿದೆ. ಈ ರಸ್ತೆಯಲ್ಲಿ ನಿತ್ಯ ನೂರಾರು ಜನರು, ವಾಹನಗಳು ಎಡಬಿಡದೆ ಸಂಚರಿಸುತ್ತವೆ. ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಓಡಾಡುವುದರಿಂದ ತಕ್ಷಣ ವಿದ್ಯುತ್ ಕಂಬ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.

click me!