
ಮಂಡ್ಯ/ ಶ್ರೀರಂಗಪಟ್ಟಣ: ಭಿಕ್ಷಾಟನೆ ನಡೆಸಿ ಲಕ್ಷ, ಲಕ್ಷ ಹಣ ಸಂಗ್ರಹಿಸಿದ್ದ ಭಿಕ್ಷುಕಿ ಸಾವಿತ್ರಿ ಅನಾರೋಗ್ಯದ ಹಿನ್ನೆಲೆ ಬುಧವಾರ ಮಧ್ಯಾಹ್ನ ಪಟ್ಟಣದಲ್ಲಿ ನಿಧನರಾದರು. ಸಾವಿತ್ರಿ ಅವರ ಅನಾರೋಗ್ಯದ ಹಿನ್ನೆಲೆ ಅನಾಥವಾಗಿದ್ದ ಅವರನ್ನು ಸ್ಥಳೀಯರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗಿದೆ ಮೃತರಾಗಿದ್ದಾರೆ.
ವೇದ ಬ್ರಹ್ಮ ಡಾ ಭಾನುಪ್ರಕಾಶ್ ಶರ್ಮಾ, ಸಮಾಜ ಸೇವಕಿ ಸರಸ್ವತಿ, ಅಭಿಷೇಕ್ ಸೇರಿ ಸ್ಥಳೀಯರು ಮೃತರ ಅಂತ್ಯಕ್ರಿಯೆಯನ್ನು ಬ್ರಾಹ್ಮಣ ಸಂಪ್ರದಾಯದಂತೆ ಪಟ್ಟಣದ ಶಂಭುಲಿಂಗಯ್ಯನ ಕಟ್ಟೆ ಸ್ಮಶಾನದಲ್ಲಿ ನೆರವೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಇತ್ತೀಚೆಗೆ ಭಿಕ್ಷುಕಿ ಸಾವಿತ್ರಿ ಅವರ ಮನೆಯಲ್ಲಿ ಕಸದ ರಾಶಿ ಜೊತೆ ನೋಟು, ಚಿಲ್ಲರೆ ಹಣ ಸೇರಿದಂತೆ ಸುಮಾರು ಲಕ್ಷಾಂತರ ರು. ಹಣ ಹಾಗೂ ಒಂದು ಅಮೆರಿಕನ್ ಡಾಲರ್ ಸಹ ದೊರೆತಿತ್ತು. ಸಾವಿತ್ರಿ ಅವರ ತಾಯಿ ಇತ್ತೀಚೆಗೆ ಮೃತರಾಗಿದ್ದು, ಸ್ಥಳೀಯರೇ ಅವರ ಅಂತ್ಯ ಸಂಸ್ಕಾರವನ್ನು ಸಹ ನೆರವೇರಿಸಿದ್ದರು.
ತಾಯಿ ಹಾಗೂ ಮಗಳು ಸಾವಿತ್ರಿ ವೃದ್ದ್ಯಾಪ್ಯ ವೇತನ ಪಡೆಯುವ ಜೊತೆಗೆ ಶ್ರೀರಂಗಪಟ್ಟಣದ ಶ್ರೀರಂಗನಾಥದೇವಾಲಯ, ಸ್ನಾನಘಟ್ಟ, ಗಂಗಾಧರೇಶ್ವರ ಸ್ವಾಮಿ ದೇವಾಲಯದ ಬಳಿ ಭಿಕ್ಷೆ ಬೇಡಿಕೊಂಡು ಈ ಹಣವನ್ನು ಸಂಗ್ರಹಿಸಿದ್ದರು.
ಇದನ್ನೂ ಓದಿ: ನನಗೆ ಜೀಪ್ ಬೇಕು ಅಂಕಲ್, ವಿಶೇಷ ಚೇತನ ಬಾಲಕನ ಮನವಿಗೆ ತಕ್ಷಣ ಸ್ಪಂದಿಸಿದ ಹೆಚ್ಡಿ ಕುಮಾರಸ್ವಾಮಿ