ಸೀಲ್‌ಡೌನ್‌ ಆದ ಮನೆಯಲ್ಲಿ ಇದೆಂತಾ ಕೆಲಸಕ್ಕಿಳಿದ ಕೆಲಸದವ!

By Kannadaprabha NewsFirst Published Sep 1, 2020, 1:51 PM IST
Highlights

ಕೊರೋನಾದಿಂದ ಸೀಲ್ ಡೌನ್ ಆಗಿದ್ದ ಮನೆಯಲ್ಲಿ ಅವರ ಮನೆಯ ಕೆಲಸಕ್ಕೆ ಇದ್ದ ವ್ಯಕ್ತಿಯೇ ನೀಚ ಕೆಲಸ ಮಾಡಿದ್ದಾರೆ. ಸದ್ಯ ಆತನನ್ನು ಬಂಧಿಸಲಾಗಿದೆ.

 ಹಾಸನ (ಸೆ.01): ಆತ ಮನೆ ಕೆಲಸ ಮಾಡಿಕೊಂಡಿದ್ದ. ಆದರೆ, ಕೊರೋನಾದಿಂದಾಗಿ ಆ ಮನೆ ಸೀಲ್‌ಡೌನ್‌ ಆಗಿತ್ತು. ಹಾಗಾಗಿ ಮನೆ ಸದಸ್ಯರೆಲ್ಲ ಮನೆ ತೊರೆದು ಬೇರೆಡೆ ಇದ್ದರು. ಇದೇ ಒಳ್ಳೆ ಸಮಯ ಎಂದುಕೊಂಡ ಮನೆ ಕೆಲಸದವ ಅದೇ ಮನೆಗೆ ಕನ್ನ ಹಾಕಿ ಬರೋಬ್ಬರಿ ಅರ್ಧ ಕೆಜಿ ಚಿನ್ನ, ಎರಡೂ ಮುಕ್ಕಾಲು ಕೆಜಿ ಬೆಳ್ಳಿ ಹಾಗೂ 60 ಸಾವಿರ ರು. ನಗದನ್ನು ದೋಚಿದ್ದ. ಆದರೆ ಕೆಲವೇ ದಿನಗಳಲ್ಲಿ ಕಳ್ಳ ಸಿಕ್ಕಿಬಿದ್ದಿದ್ದಾನೆ.

ಈ ಕುರಿತು ಸೋಮವಾರ ಜಿಲ್ಲಾ ಪೊಲಿಸ್‌ ವರಿಷ್ಠಾ​ಕಾರಿ ಕಛೇರಿಯಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಎಸ್ಪಿ ಶ್ರೀನಿವಾಸಗೌಡ, 2020 ರ ಆಗಸ್ಟ್‌ 24ರಂದು ಅರಕಲಗೂಡು ತಾಲೂಕು ಕೊಣನೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಹಾನಗಲ್‌ ಗ್ರಾಮದ ನಿವಾಸಿ ಕುಶಕುಮಾರ್‌ ಎಂಬುವರ ಮನೆಯಲ್ಲೆ ಲಕ್ಷಾಂತರ ರು. ಕಳ್ಳತನವಾಗಿತ್ತು. ಈತನ ತಮ್ಮನಾದ ಲವಕುಮಾರ್‌ ಕೊರೋನಾದಿಂದ ಮೃತಪಟ್ಟಹಿನ್ನೆಲೆಯಲ್ಲಿ ಮನೆಯನ್ನು ಸೀಲ್‌ಡೌನ್‌ ಮಾಡಲಾಗಿತ್ತು. ಮನೆಯಲ್ಲಿದವರೆಲ್ಲ ಇವರ ಅಜ್ಜಿ ಮನೆಯಾದ ನಾಗೇಂದ್ರ ಮನೆಯಲ್ಲಿ ವಾಸವಾಗಿದ್ದರು. ಮನೆಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಎಚ್‌.ಆರ್‌.ವೆಂಕಟೇಶ್‌ ಎಂಬುವನು ಸಮಯ ನೋಡಿಕೊಂಡು ಮನೆಗಳ್ಳತನ ಮಾಡಿ ಚಿನ್ನಾಭರಣ, ಬೆಳ್ಳಿ ಪದಾರ್ಥ ಹಾಗೂ ನಗದನ್ನು ದೋಚಿದ್ದಾನೆ ಎಂದರು.

ಮಾಂಸಕ್ಕಾಗಿ ನೂರಾರು ನಾಯಿಗಳ ಸಾಮೂಹಿಕ ಮಾರಣಹೋಮ

ಬಾಗಿಲನ್ನು ಒಡೆದು ಒಳ ನುಗ್ಗಿ ಬೀರುವಿನಲ್ಲಿದ್ದ 11,60,000 ರು. ಬೆಳೆ ಬಾಳುವ 533 ಗ್ರಾಂ ಚಿನ್ನದ ಒಡವೆ ಮತ್ತು 99 ಸಾವಿರ ಬೆಲೆ ಬಾಳುವ 2,750 ಕೆಜಿ ಬೆಳ್ಳಿ ಸಾಮಾನುಗಳು ಹಾಗೂ 60 ಸಾವಿರ ನಗದನ್ನು ಕಳ್ಳರು ದೋಚಿ ಪರಾರಿಯಾಗಿದ್ದರು. ಕಳ್ಳತನವಾದ ಬಗ್ಗೆ ಮನೆಯ ಮಾಲೀಕರಾದ ಕುಶಕುಮಾರ್‌ ಕೊಣನೂರು ಪೊಲೀಸ್‌ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಳವು ಮಾಡಿದ ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಲಾಗಿತ್ತು.

ಹೆಚ್ಚುವರಿ ಪೊಲೀಸ್‌ ಅ​ೕಕ್ಷಕಿ ನಂದಿನಿ ಮೇಲುಸ್ತುವಾರಿಯಲ್ಲಿ ಮತ್ತು ಹೊಳೆನರಸೀಪುರ, ಉಪ ವಿಭಾಗದ ಅ​ಧೀಕ್ಷಕ ಲಕ್ಷ್ಮೇಗೌಡರ ಉಸ್ತುವಾರಿಯಲ್ಲಿ ಅರಕಲಗೂಡು ವೃತ್ತದ ಎಂ.ಕೆ.ದೀಪಕ್‌ ಮತ್ತು ಕೊಣನೂರು ಪೊಲೀಸ್‌ ಠಾಣೆ ಎಸ್‌ಐ ಸಾಗರ್‌ ನೇತೃತ್ವದಲ್ಲಿ ಸಿಬ್ಬಂದಿಯನ್ನು ಒಳಗೊಂಡಂತೆ ವಿಶೇಷ ತಂಡವನ್ನು ರಚಿಸಿ ಆರೋಪಿ ಸೆರೆಗೆ ಬಲೆ ಬೀಸಿದರು.

ಮಾಹಿತಿ ಸಂಗ್ರಹಿಸಿ ಖಚಿತ ಮಾಹಿತಿಯ ಮೇರೆಗೆ ಆರೋಪಿಯನ್ನು ಭಾನುವಾರ ಸಂಜೆ ವೇಳೆ ಬಸವಾಪಟ್ಟಣದ ಬಸ್‌ ನಿಲ್ದಾಣದಲ್ಲಿ ಅನುಮಾನಸ್ಪದವಾಗಿ ನಿಂತಿದ್ದವನನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಯಿತು. ಕಳ್ಳತನ ಮಾಡಿದ್ದ ಆರೋಪಿ ಅರಕಲಗೂಡು ತಾಲ್ಲೂಕು, ದೊಡ್ಡಮಗ್ಗೆ ಹೋಬಳಿಯ ಹಾನಗಲ್‌ ಗ್ರಾಮದ ವ್ಯವಸಾಯ ಮತ್ತು ಕೂಲಿ ಕೆಲಸ ಮಾಡುವ ವೆಂಕಟೇಶ(39) ಎಂದು ತಿಳಿದು ಬಂದಿದೆ.

ಅಹಿತಕರ ಘಟನೆ ನಡೆದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ

ಆರೋಪಿ ನೀಡಿದ ಸುಳಿವಿನ ಮೇರೆಗೆ 410 ಗ್ರಾಂ ತೂಕದ ಚಿನ್ನದ ಆಭರಣಗಳು ಮತ್ತು ಸುಮಾರು 2,750 ಗ್ರಾಂ ತೂಕದ ಬೆಳ್ಳಿ ಪದಾರ್ಥಗಳನ್ನು ಹಾಗೂ 20000 ರು. ನಗದು ಹಣವನ್ನು ಆರೋಪಿಯಿಂದ ಅಮಾನತ್ತು ಪಡಿಸಿಕೊಂಡಿದ್ದಾರೆ. ಇವುಗಳ ಮೌಲ್ಯದ ನಗದು ಸೇರಿದಂತೆ ಸುಮಾರು 20 ಲಕ್ಷ ರು. ಗಳಾಗಿರುತ್ತದೆ ಎಂದು ಹೇಳಿದರು.

ಆರೋಪಿತ ಪತ್ತೆಗೆ ಶ್ರಮವಹಿಸಿದ ಅರಕಲಗೂಡು ವೃತ್ತದ ಸಿಪಿಐ ರವರಾದ ಎಂ.ಕೆ. ದೀಪಕ್‌ ಪಿ.ಎಸ್‌.ಐ. ಎಸ್‌.ಎಲ್‌, ಸಾಗರ್‌, ಸಿಬ್ಬಂದಿಗಳಾದ ರಾಜಶೆಟ್ಟಿ, ಪ್ರಕಾಶ, ಶಿವಕುಮಾರ, ನಂದೀಶ, ಮಹೇಶ, ಶ್ರೀನಿವಾಸ,ಪುರುಷೋತ್ತಮ, ಸುರೇಶ್‌, ಸಣ್ಣೇಗೌಡ, ಜಿಲ್ಲಾ ಪೊಲೀಸ್‌ ಕಛೇರಿಯ ತಾಂತ್ರಿಕ ವಿಭಾಗದ ಪೀರ್‌ ಖಾನ್‌ ಜೀಪಿನ ಚಾಲಕರಾದ ಜಗನ್ನಾಥ್‌, ಮತ್ತು ಹೇಮಚಂದ್ರ ಇವರುಗಳ ಕಾರ್ಯವನ್ನು ಮೆಚ್ಚಿ ಬಹುಮಾನ ಘೋಷಣೆ ಮಾಡಲಾಯಿತು

click me!