Monkey fever: ಕೆಎಫ್‌ಡಿ ಸೋಂಕಿತ ವ್ಯಕ್ತಿ ಆಸ್ಪತ್ರೆಗೆ ದಾಖಲು: ಮಲೆನಾಡಲ್ಲಿ ಆತಂಕ

By Kannadaprabha NewsFirst Published Feb 3, 2023, 7:16 AM IST
Highlights

ಬೇಸಿಗೆ ಆರಂಭದ ಬೆನ್ನಲ್ಲೇ ಹೊಸನಗರ ತಾಲೂಕಿನಲ್ಲಿ ಮಂಗನ ಕಾಯಿಲೆ ಜ್ವರದ ಲಕ್ಷಣಗಳು ಕಂಡುಬಂದಿವೆ. ಈ ವರ್ಷವೂ ಮಂಗನ ಕಾಯಿಲೆ ಭೀತಿ ಮಲೆನಾಡಿನ ಹಳ್ಳಿಗರಿಗೆ ಎದುರಾಗಿದೆ. ಹೊಸನಗರ ತಾಲೂಕಿನ ಗರ್ತಿಕೆರೆಯಲ್ಲಿ ವ್ಯಕ್ತಿಯೊಬ್ಬರಿಗೆ ಮಂಗನ ಕಾಯಿಲೆಯಲ್ಲಿ ಕಾಣುವ ಲಕ್ಷಣಗಳು ಕಂಡುಬಂದಿದೆ. ಆದರೆ, ಆರ್‌ಟಿಪಿಸಿಆರ್‌ ಟೆಸ್ಟ್‌ನಲ್ಲಿ ಫಲಿತಾಂಶ ನೆಗೆಟಿವ್‌ ಬಂದಿದೆ.

ಶಿವಮೊಗ್ಗ (ಫೆ.3) : ಬೇಸಿಗೆ ಆರಂಭದ ಬೆನ್ನಲ್ಲೇ ಹೊಸನಗರ ತಾಲೂಕಿನಲ್ಲಿ ಮಂಗನ ಕಾಯಿಲೆ ಜ್ವರದ ಲಕ್ಷಣಗಳು ಕಂಡುಬಂದಿವೆ. ಈ ವರ್ಷವೂ ಮಂಗನ ಕಾಯಿಲೆ ಭೀತಿ ಮಲೆನಾಡಿನ ಹಳ್ಳಿಗರಿಗೆ ಎದುರಾಗಿದೆ.

ಜಿಲ್ಲೆಯ ಹೊಸನಗರ ತಾಲೂಕಿನ ಗರ್ತಿಕೆರೆಯಲ್ಲಿ ವ್ಯಕ್ತಿಯೊಬ್ಬರಿಗೆ ಮಂಗನ ಕಾಯಿಲೆಯಲ್ಲಿ ಕಾಣುವ ಲಕ್ಷಣಗಳು ಕಂಡುಬಂದಿದೆ. ಆದರೆ, ಆರ್‌ಟಿಪಿಸಿಆರ್‌ ಟೆಸ್ಟ್‌ನಲ್ಲಿ ಫಲಿತಾಂಶ ನೆಗೆಟಿವ್‌ ಬಂದಿದೆ. ಇನ್ನೊಂದು ಪರೀಕ್ಷೆಯಲ್ಲಿ ಸಸ್ಪೆಕ್ಟೆಡ್‌ ಎಂದು ಬಂದಿದೆ. ಸದ್ಯ ಆ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸುಧಾರಣೆ ಹಂತದಲ್ಲಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆ ನಿರಂತರ ನಿಗಾವಹಿಸಿದೆ. ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದರೆ ಮಾತ್ರವಷ್ಟೆಮಂಗನಕಾಯಿಲೆ ಸೋಂಕಿನ ಪ್ರಕರಣ ಎಂದು ಪರಿಗಣಿಸಲಾಗುತ್ತದೆ. ಸದ್ಯ ಈ ವ್ಯಕ್ತಿ ವಾಸವಿರುವ ಗ್ರಾಮ, ಸುತ್ತಲಿನ ಗ್ರಾಮದಲ್ಲಿ ಮಂಗಗಳು ಮೃತಪಟ್ಟಪ್ರಕರಣ ವರದಿ ಆಗಿಲ್ಲ. ಈ ವ್ಯಕ್ತಿಯಲ್ಲಿ ಜ್ವರದ ಲಕ್ಷಣಗಳು ಕಂಡುಬಂದಿರುವುದು ಸಹಜವಾಗಿ ಆತಂಕ ಹೆಚ್ಚಿಸಿದೆ.

 

ಮಲೆನಾಡಲ್ಲಿ ಮತ್ತೆ ಮಂಗನಕಾಯಿಲೆ ಪತ್ತೆ: ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್

1500 ಮಂದಿಗೆ ಪರೀಕ್ಷೆ:

ಕಳೆದ ಡಿಸೆಂಬರ್‌ನಿಂದ ಜನವರಿವರೆಗೆ 1500 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಯಾವುದೇ ಸೋಂಕಿತ ಪ್ರಕರಣ ಕಂಡುಬಂದಿಲ್ಲ ಎಂದು ಡಿಎಚ್‌ಒ ತಿಳಿಸಿದ್ದಾರೆ. ಆದರೆ, ಇನ್ನೂ ಮುಂದಿನ ಆರು ವಾರಗಳ ಕಾಲ, ಮಂಗನ ಕಾಯಿಲೆ ಮತ್ತು ರೋಗ ಲಕ್ಷಣ ಹಾಗೂ ಜ್ವರದಿಂದ ಬಳಲುವವರು ಬಗ್ಗೆ ಹೆಚ್ಚಿನ ಗಮನವಹಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಜೊತೆಯಲ್ಲಿ ಈ ಹಿಂದೆ ಸೋಂಕು ಕಂಡುಬಂದ ಪ್ರದೇಶಗಳಲ್ಲಿ ಹೆಚ್ಚಿನ ಜಾಗೃತಿ ವಹಿಸಲು ಮುಂದಾಗಿದೆ. ಸಾಮಾನ್ಯವಾಗಿ ಡಿಸೆಂಬರ್‌ನಲ್ಲಿ ಕಾಣಿಸಿಕೊಳ್ಳುವ ಮಂಗನ ಕಾಯಿಲೆ ಸೋಂಕು ಜನವರಿಯಲ್ಲಿಯೂ ಈ ಸಲ ಕಾಣಿಸಿಲ್ಲ. ಜನವರಿ ಹಾಗೂ ಫೆಬ್ರವರಿ ಸೋಂಕಿನ ಲಕ್ಷಣ ಹೆಚ್ಚು ಕಂಡುಬರುವ ಸಮಯವಾಗಿದೆ. ಮಾಚ್‌ರ್‍ ಹೊತ್ತಿಗೆ ತೀವ್ರಗೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ, ಈ ಆರು ವಾರಗಳ ಹೆಚ್ಚಿನ ನಿಗಾವಹಿಸಲು ಆರೋಗ್ಯ ಇಲಾಖೆ ಮುಂದಾಗಿದ್ದು, ವರ್ಷದ ಕೆಎಫ್‌ಡಿ ಆತಂಕದಿಂದ ಮುಕ್ತವಾಗಲು ಸಮರ ಸಿದ್ಧತೆ ನಡೆಸಿದೆ.

24 ಗಂಟೆಯಲ್ಲಿ ಟೆಸ್ಟ್‌ ರಿಪೋರ್ಟ್:

ಸದ್ಯ ಸಾಗರ ಹಾಗೂ ಶಿವಮೊಗ್ಗ ಎರಡು ಕಡೆಗಳಲ್ಲಿಯು ಸರ್ಕಾರಿ ಲ್ಯಾಬ್‌ಗಳಿದ್ದು, ಕೇವಲ 24 ಗಂಟೆಗಳಲ್ಲಿ ಸೋಂಕು ಪತ್ತೆ ಪರೀಕ್ಷೆಯ ಫಲಿತಾಂಶ ಸಿಗಲಿದೆ. ಒಂದು ಜಿಲ್ಲೆಯಲ್ಲಿ ಎರಡು ಕಡೆ ಸರ್ಕಾರಿ ಲ್ಯಾಬ್‌ಗಳಿರುವುದು ಶಿವಮೊಗ್ಗದಲ್ಲಿ ಮಾತ್ರ ಎಂಬುದು ವಿಶೇಷ. ಮೇಲಾಗಿ ಸಾಗರ ಹೊಸನಗರ ಮತ್ತು ತೀರ್ಥಹಳ್ಳಿಯಲ್ಲಿ ಆರೊಗ್ಯ ಸಿಬ್ಬಂದಿಯನ್ನು ಅಲರ್ಚ್‌ ಮಾಡಲಾಗಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಲಾಗುತ್ತಿದೆ. ತಳಮಟ್ಟದ ಸಿಬ್ಬಂದಿಗಳಿಂದ ವಿವರಗಳನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪಡೆದುಕೊಳ್ಳುತ್ತಿದ್ದು, ಖಾಸಗಿ ಆಸ್ಪತ್ರೆಗಳಿಂದಲೂ ಮಾಹಿತಿ ಕಲೆಹಾಕಲಾಗುತ್ತಿದೆ ಎಂಬುದು ಆರೋಗ್ಯ ಇಲಾಖೆ ಅಧಿಕಾರಿಗಳ ಮಾಹಿತಿ.

ಮಂಗನ ಕಾಯಿಲೆ ಲಸಿಕೆ ಉತ್ಪಾದನೆ ಸ್ಥಗಿತ, ಆತಂಕ

ಬೂಸ್ಟರ್‌ ಡೋಸ್‌ ಲಭ್ಯವಾಗುತ್ತಲೇ ವಿತರಣೆಗೆ ಆರೊಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ ಎಂದಿರುವ ಆರೋಗ್ಯಾಧಿಕಾರಿ ಸಾಗರ ಮತ್ತು ಶಿವಮೊಗ್ಗ ಮತ್ತು ತೀರ್ಥಹಳ್ಳಿ ಆಸ್ಪತ್ರೆಗಳಲ್ಲಿ ವೈರಲ್‌ ಫೀವರ್‌ಗಳಿಗೆ ಸಂಬಂಧಿಸಿದಂತೆ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಜ್ವರ ಬಂದು 24 ಗಂಟೆಯಲ್ಲಿ ಕಡಿಮೆ ಆಗದಿದ್ದರೆ ಅಂಥವರು ವೈದ್ಯರ ಬಳಿ ತಕ್ಷಣವೇ ಚಿಕಿತ್ಸೆ ಪಡೆಯಬೇಕು. ಜ್ವರ ಬಂದ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಪಡೆದರೆ ಸೋಂಕಿನ ಆತಂಕ ಕಡಿಮೆ ಮಾಡಬಹುದು. ಜ್ವರದ ಲಕ್ಷಣಗಳು ಕಂಡುಬಂದಾಗ ನಿರ್ಲಕ್ಷ ್ಯ ವಹಿಸದೇ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ನೀಡಿದರೇ, ಆರೋಗ್ಯ ಇಲಾಖೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ

- ಡಾ.ರಾಜೇಶ್‌ ಸುರಗಿಹಳ್ಳಿ, ಜಿಲ್ಲಾ ಆರೋಗ್ಯಾಧಿಕಾರಿ, ಶಿವ​ಮೊ​ಗ್ಗ

click me!