ವರಿಷ್ಠರು ನನಗೆ ಯಾವುದೇ ಸಚಿವ ಸ್ಥಾನ ನೀಡಿದರೂ ನಿಭಾಯಿಸಲು ಸಿದ್ಧ

By Kannadaprabha NewsFirst Published Aug 3, 2021, 4:04 PM IST
Highlights
  •  ನನಗೆ ಯಾವುದೇ ಸಚಿವ ಸ್ಥಾನ ನೀಡಿದರೂ ನಿಭಾಯಿಸಲು ಸಿದ್ಧ
  • ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿಕೆ
  • ಸಂಪುಟ ಸ್ಥಾನಾಕಾಂಕ್ಷಿಯಾಗಿರುವ ಮಹೇಶ್ ಕುಮಟಳ್ಳೀ

 ಅಥಣಿ (ಆ.03):  ನೂತನ ಮುಖ್ಯಮಂತ್ರಿ ಮತ್ತು ಪಕ್ಷದ ಹಿರಿಯರು, ಕೇಂದ್ರದ ವರಿಷ್ಠರು ನನಗೆ ಯಾವುದೇ ಸಚಿವ ಸ್ಥಾನ ನೀಡಿದರೂ ನಿಭಾಯಿಸಲು ಸಿದ್ಧ ಎಂದು ಅಥಣಿ ಶಾಸಕ ಮಹೇಶ ಕುಮಟಳ್ಳಿ ಹೇಳಿದರು.

ತಾಲೂಕಿನ ಕೃಷ್ಣಾ ನದಿ ಪ್ರವಾಹ ಪೀಡಿತ ಗ್ರಾಮಗಳಿಗೆ ಸೋಮವಾರ ಭೇಟಿ ನೀಡಿ ನೆರೆ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿ, ಕಾಳಜಿ ಕೇಂದ್ರಗಳಲ್ಲಿನ ಸೌಲಭ್ಯ ಪರಿಶೀಲಿಸಿ ನಂತರ ನದಿ ಇಂಗಳಗಾಂವ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಸದ್ಯದಲ್ಲಿ ಸಚಿವ ಸಂಪುಟ ರಚನೆ ಆಗುವುದರಿಂದ ನನಗೆ ಯಾವುದೇ ಸ್ಥಾನಮಾನ ನೀಡಿದರೂ ನಿರ್ವಹಿಸಲು ಸಿದ್ಧನಿದ್ದೇನೆ. ರಾಜ್ಯ ಹಾಗೂ ರಾಷ್ಟ್ರೀಯ ವರಿಷ್ಠರು ನನಗೆ ಯಾವುದೇ ಸಚಿವ ಸ್ಥಾನ ನೀಡಿದರೂ ನಿಭಾಯಿಸುತ್ತೇನೆ. ಆದರೆ, ಸಚಿವ ಸ್ಥಾನಕ್ಕೆ ಯಾರ ಮುಂದೆಯೂ ಲಾಬಿ ಮಾಡಿಲ್ಲ. ನನಗೆ ಸಚಿವ ಸ್ಥಾನಕ್ಕಿಂತಲೂ ಅಥಣಿ ಅಭಿವೃದ್ಧಿ ಹೆಚ್ಚಾಗಿದೆ. ಸದ್ಯ ಅಥಣಿ ತಾಲೂಕಿನಲ್ಲಿ ಕೃಷ್ಣಾ ನದಿ ಪ್ರವಾಹದಿಂದಾಗಿ ಸಾಕಷ್ಟುಹಾನಿ ಸಂಭವಿಸಿದೆ. ಇದರಿಂದಾಗಿ ಶಾಶ್ವತ ಪರಿಹಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ತಾಲೂಕಿನ ಹಲವಾರು ಯೋಜನೆ ಬಗ್ಗೆ ಹಾಗೂ ನೆರೆ ಬಾಧಿತ ಗ್ರಾಮಗಳಿಗೆ ಶಾಶ್ವತವಾಗಿ ಪರಿಹಾರ ಕೇಳಿದ್ದೇನೆ. ಆದಷ್ಟುಬೇಗ ಅಥಣಿಗೆ ಬರುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಕೃಷ್ಣಾ ನದಿಯ ಸಂತ್ರಸ್ತರು ಯಾವುದೇ ಕಾರಣಕ್ಕೂ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ, ನಿಮ್ಮ ನೆರವಿಗೆ ಸರ್ಕಾರ ಬದ್ಧವಾಗಿದೆ. ನದಿಯ ರಭಸಕ್ಕೆ ಹಾಳಾದ ರಸ್ತೆ, ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌, ಮನೆ ಸೇರಿದಂತೆ ಎಲ್ಲವುಗಳನ್ನು ಸರಿಪಡಿಸಿ ಕೊಡಲಾಗುವುದು. ನಾನು ನಿಮ್ಮ ಕುಟುಂಬದ ಸದಸ್ಯನಾಗಿ ಕಷ್ಟದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಆತ್ಮಸ್ಥೈರ್ಯ ತುಂಬಿದರು.

ಹೈ ಕಮಾಂಡ್‌ಗೂ ಅಚ್ಚರಿಯಾಗುವಂಥ ಬೇಡಿಕೆ ಇಟ್ಟ ಸಿಎಂ ಬೊಮ್ಮಾಯಿ; ಲೆಕ್ಕಾಚಾರವೇ ಉಲ್ಟಾ..!

ಮತಕ್ಷೇತ್ರದ ಅಭಿವೃದ್ಧಿಯೊಂದೇ ನನ್ನ ಕನಸಾಗಿದೆ. ಈಗಾಗಲೇ ಅನೇಕ ಯೋಜನೆಗಳನ್ನು ಅಥಣಿ ಮತಕ್ಷೇತ್ರಕ್ಕೆ ತಂದು ಅಭಿವೃದ್ಧಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರವಾಹಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುವ ಜವಾಬ್ದಾರಿ ನಮ್ಮದಾಗಿದೆ. ಪ್ರವಾಹ ಬಂದ ದಿನವೇ ಎಲ್ಲ ಕಾಳಜಿ ಕೇಂದ್ರಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದೇನೆ. ಅಗತ್ಯ ಇರುವ ಸೌಲಭ್ಯ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ ಕ್ಷೇತ್ರದಿಂದ ಕೆಲಸದ ನಿಮಿತ್ತ ತೆರಳಿದ್ದೆ ಮತ್ತೆ ನಿಮ್ಮ ಸೇವೆಗಾಗಿ ಬಂದಿದ್ದೇನೆ. ಅಧಿಕಾರಿಗಳು ಮಳೆ ಚಳಿಯನ್ನದೆ ನಿರಂತರವಾಗಿ ಸೌಲಭ್ಯ ಕಲ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಅಥಣಿ ತಹಸೀಲ್ದಾರ್‌ ದುಂಡಪ್ಪ ಕೋಮಾರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶೇಖರ ಕರಿಬಸಪ್ಪನವರ, ಪಿಎಸ್‌ಐ ಕುಮಾರ ಹಾಡಕಾರ, ಲೋಕೋಪಯೋಗಿ ಇಲಾಖೆಯ ಗೌಡಪ್ಪ ಗುಳಪ್ಪನವರ, ಎ.ಜಿ. ಮುಲ್ಲಾ, ಮಲ್ಲಿಕಾರ್ಜುನ ಮಗದುಮ್ಮ, ಈರಣ್ಣ ವಾಲಿ, ಗ್ರೇಡ್‌ 2 ತಹಸೀಲ್ದಾರ್‌ ಮಹಾದೇವ ಬಿರಾದಾರ, ಕಂದಾಯ ವೃತ್ತ ನಿರೀಕ್ಷಕ ಶಿವಾನಂದ ಮೆಣಸಂಗಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. ಶೇಗುಣಸಿ, ದರೂರ, ಸಂಕರಟ್ಟಿ, ಖವಟಕೊಪ್ಪ, ನದಿ ಇಂಗಳಗಾಂವ, ತೀರ್ಥ, ಸಪ್ತ ಸಾಗರ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿದರು.

click me!