ಹಾಸನ (ಆ.03): ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾಸನ ಜಿಲ್ಲೆಯ ಬಗ್ಗೆ ದ್ವೇಷದ ರಾಜಕಾರಣ ಮಾಡದೆ ಅಭಿವೃದ್ಧಿಗೆ ಅನುದಾನ ನೀಡಿದಲ್ಲಿ ನಾವೂ ಸಹಕಾರ ನೀಡುತ್ತೇವೆ ಎಂದು ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು ಬೆಂಗಳೂರಿನ ಪದ್ಮನಾಭ ನಗರದಲ್ಲಿರುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ನಿವಾಸಕ್ಕೆ ಸಿಎಂ ಭೇಟಿ ನೀಡಿದ್ದ ಸಂದರ್ಭದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದ್ದೇವೆ. ರಾಜ್ಯದ ಮುಖ್ಯಮಂತ್ರಿಗಳು ನಮ್ಮ ಮನೆಗೆ ಬಂದಾಗ ಗೌರವ ಕೊಡಬೇಕು. ಮಳೆ ಹೆಚ್ಚಾಗಿ ರಾಜ್ಯದ ಹಲವು ಭಾಗಗಳಲ್ಲಿ ಪ್ರವಾಹ ಉಂಟಾಗಿದೆ. ಶಿರಾಡಿ ಘಾಟ್ ರಸ್ತೆ ಬಂದ್ ಆಗಿದ್ದು ಮನೆಗಳು ಕುಸಿದಿವೆ.
ದೇವೇಗೌಡ್ರನ್ನ ಭೇಟಿಯಾಗಲು ಸಿಎಂಗೆ ಹೈಕಮಾಂಡ್ ಹೇಳಿತ್ತಾ? ಹೊಸ ಬಾಂಬ್ ಸಿಡಿಸಿದ ಬಿಜೆಪಿ ನಾಯಕ
ಹಾಸನ ಮಾತ್ರವಲ್ಲ ಇಡೀ ರಾಜ್ಯದ ಜನರ ನೆರವಿಗೆ ಧಾವಿಸಿ ಎಂದು ಮುಖ್ಯಮಮತ್ರಿಗಳಿಗೆ ಮನವಿ ಮಾಡಿದ್ದೇವೆ. ನಾವೇನು ಮುಖ್ಯಮಂತ್ರಿಗಳ ಬಳಿ ಬೇರೆ ಅರ್ಜಿ ಇಟ್ಟುಕೊಂಡು ಹೋಗಿರಲಿಲ್ಲ ಎಂದರು.
ಒಳ್ಳೆ ಕೆಲಸ ಮಾಡಿ ರಾಜಕೀಯ ದ್ವೇಷ ಮಾಡಬೇಡಿ. ಸಂಪೂರ್ಣ ಸಹಕಾರ ಕೊಡುತ್ತೇವೆ ಎಂದು ಹೇಳಿದ್ದೇವೆ ಅಷ್ಟೆ. ಯಡಿಯೂರಪ್ಪ ಅವರು ತಮ್ಮ ಅಧಿಕಾರವಧಿಯಲ್ಲಿ ನಮ್ಮ ಜಿಲ್ಲೆಗೆ ಏನು ಮಾಡಲೇ ಇಲ್ಲ. ದೇವೇಗೌಡರು ಏನು ಹೇಳುತ್ತಾರೋ ಅದನ್ನು ಪಾಲಿಸುತ್ತೇನೆ.
ಬೊಮ್ಮಾಯಿ ಅವರು ಉತ್ಸಾಹಿಗಳಾಗಿದ್ದು ನನ್ನ ಜೊತೆ ಆತ್ಮೀಯವಾಗಿದ್ದಾರೆ. ಒಳ್ಳೆಯ ಕೆಲಸ ಮಾಡು, ಯುವಕ ಇದ್ದೀಯ ಸಣ್ಣ ಪುಟ್ಟ ಕೆಲಸ ಇದ್ದರೆ ಮಾಡಿಕೊಡು ಎಂದು ದೇವೆಗೌಡರು ಹೇಳಿದ್ದಾರೆ ಎಂದು ರೇವಣ್ಣ ಹೇಳಿದರು.